Advertisement

ಲಾತೂರಲ್ಲಿ ಲಿಂಗಾಯತರ ಶಕ್ತಿ ಪ್ರದರ್ಶನ

11:41 AM Sep 04, 2017 | Team Udayavani |

ಲಾತೂರ (ಮಹಾರಾಷ್ಟ್ರ): ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟ ಇದೀಗ ಹೊರ ರಾಜ್ಯಕ್ಕೂ ವ್ಯಾಪಿಸಿದೆ. ರವಿವಾರ ಮಹಾರಾಷ್ಟ್ರದ ಜಿಲ್ಲಾ ಕೇಂದ್ರ ಲಾತೂರಲ್ಲಿ ಲಿಂಗಾಯತ ಧರ್ಮ ಮಹಾ ಮೋರ್ಚಾ ಮೂಲಕ ಬಸವ ಅನುಯಾಯಿಗಳ ಶಕ್ತಿ ಪ್ರದರ್ಶನ ನಡೆಯಿತು.

Advertisement

ಲಿಂಗಾಯತ ಸಮನ್ವಯ ಸಮಿತಿಯಿಂದ ಅಹ್ಮದಪುರದ ರಾಷ್ಟ್ರೀಯ ಸಂತ ಡಾ| ಶಿವಲಿಂಗ ಶಿವಾಚಾರ್ಯರು ಮತ್ತು ಕೂಡಲಸಂಗಮದ ಶ್ರೀ ಮಾತೆ ಮಹಾದೇವಿ ನೇತೃತ್ವದಲ್ಲಿ ಬೃಹತ್‌ ಪಥ ಸಂಚಲನ ನಡೆಯಿತು. ಲಿಂಗಾಯತ
ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹಾಕಲಾಯಿತು. 

ಜಿಲ್ಲಾ ಕ್ರೀಡಾಂಗಣದಿಂದ ಹೊರಟ ರ್ಯಾಲಿ ಶಿವಾಜಿ ವೃತ್ತ, ಪಾಚನಂಬರ್‌ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರು
ತಲುಪಿ ಮುಕ್ತಾಯಗೊಂಡಿತು. ಬಳಿಕ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರಧಾನಮಂತ್ರಿ ಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ರ್ಯಾಲಿಗೂ ಮುನ್ನ ನೆಹರು ಕ್ರೀಡಾಂಗಣದಲ್ಲಿ ಬಹಿರಂಗ ಸಮಾವೇಶ ಜರುಗಿತು. ವಿವಿಧೆಡೆಯ ಮಠಾಧಿಧೀಶರು, ಗಣ್ಯರು ಪಾಲ್ಗೊಂಡಿದ್ದ ಸಮಾವೇಶಕ್ಕೆ ಮಹಾರಾಷ್ಟ್ರ, ಕರ್ನಾಟಕ ಹಾಗೂ ತೆಲಂಗಾಣದ ಸುಮಾರು ಎಂಭತ್ತು ಸಾವಿರಕ್ಕೂ ಅಧಿಕ ಬಸವ ಅನುಯಾಯಿಗಳು ಸಾಕ್ಷಿಯಾದರು.

ಸ್ವಾತಂತ್ರ್ಯಾ ಪೂರ್ವದಿಂದಲೂ ಜನಗಣತಿ ವರದಿಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಎಂದು ಉಲ್ಲೇಖೀಸಿದ್ದು
ಕಂಡುಬಂದಿದೆ. ಲಿಂಗಾಯತ ಅವೈದಿಕ ಧರ್ಮವಾಗಿದ್ದು, ಇದರ ಆಚರಣೆ, ಪದ್ಧತಿ, ತಾತ್ವಿಕ ಸಿದ್ಧಾಂತ, ಪರಂಪರೆ
ಹಿಂದೂ ಧರ್ಮಕ್ಕಿಂತ ಭಿನ್ನವಾಗಿದೆ. ಹೀಗಾಗಿ ಲಿಂಗಾಯತ ಒಂದು ಸ್ವತಂತ್ರ ಧರ್ಮ ಎಂಬುದು ಸಿದ್ಧವಾಗುತ್ತದೆ
ಎಂದು ಮನವಿಯಲ್ಲಿ ತಿಳಿಸಲಾಗಿದೆ.

Advertisement

ಸ್ವತಂತ್ರ ಭಾರತದಲ್ಲಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಕಲ್ಪಿಸದೇ ಇರುವುದರಿಂದ ಸಮಾಜಕ್ಕೆ
ಸಾಕಷ್ಟು ಅನ್ಯಾಯವಾಗಿದೆ. ದಶಕಗಳ ಬೇಡಿಕೆಯಾಗಿರುವ ಲಿಂಗಾಯತಕ್ಕೆ ಸಂವಿಧಾನಿಕ ಮಾನ್ಯತೆ ನೀಡಿ, ಅಲ್ಪಸಂಖ್ಯಾತರ ಧಾರ್ಮಿಕ ಪ್ರವರ್ಗದಲ್ಲಿ ಸೇರಿಸುವ ಮೂಲಕ ಲಿಂಗಾಯತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮಹಾತ್ಮ ಬಸವೇಶ್ವರ ಆರ್ಥಿಕ ವಿಕಾಸ ಮಹಾಮಂಡಳ ಸ್ಥಾಪಿಸಬೇಕು. 2021ರ ರಾಷ್ಟ್ರೀಯ ಜನಗಣತಿಯ ಪತ್ರದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಕಾಲಂ ನಮೂದಿಸಬೇಕು. ಕನ್ನಡದಲ್ಲಿರುವ ಬಸವಾದಿ ಶರಣರ ವಚನ ಸಾಹಿತ್ಯವನ್ನು ಮರಾಠಿ ಭಾಷೆಗೆ ತರ್ಜುಮೆ ಮಾಡಬೇಕು. ಈ ಕಾರ್ಯ ಸ್ಥಳೀಯ ಸರ್ಕಾರದಿಂದಲೇ ಆಗಬೇಕು ಎಂದು ಒತ್ತಾಯಿಸಲಾಗಿದೆ. 

ಮಹಾ ಮೋರ್ಚಾದಲ್ಲಿ ಕರ್ನಾಟಕದ ಸಚಿವರಾದ ಎಂ.ಬಿ ಪಾಟೀಲ, ವಿನಯ ಕುಲಕರ್ಣಿ, ಬೆಳಗಾವಿಯ ಡಾ|ಸಿದ್ಧಲಿಂಗ ಮಹಾಸ್ವಾಮಿಗಳು, ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಭಾಲ್ಕಿಯ ಡಾ| ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶ್ರೀ ಶಿವಾನಂದ ಸ್ವಾಮೀಜಿ, ಬೀದರನ ಅಕ್ಕ ಅನ್ನಪೂರ್ಣ ತಾಯಿ, ಅಕ್ಕ ಗಂಗಾಂಬಿಕೆ, ದೆಹಲಿಯ ಶ್ರೀ ಚನ್ನಬಸವಾನಂದ ಸ್ವಾಮೀಜಿ, ಶ್ರೀ ಗುರುಬಸವ ದೇವರು, ಶ್ರೀ ಕೊರಣೇಶ್ವರ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಸಮಿತಿ ಪ್ರಮುಖರಾದ ಮಾಧವರಾವ್‌ ಪಾಟೀಲ, ಅವಿನಾಶ ಭೋಸಿಕರ್‌, ರವಿಶಂಕರ ಕೊರೆ, ಲಲಿತಾ ಪಾಂಡರೆ,
ರಾಜೇಶ ವಿಭೂತಿ ಮತ್ತು ಡಾ| ರಾಜಶೇಖರ ಸೋಲಾಪುರೆ ಮತ್ತಿತರರು ಭಾಗವಹಿಸಿದ್ದರು.

ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next