Advertisement

ಕಾಸು ನಿರ್ವಹಣೆಗೆ ಇತಿಮಿತಿ ಸೂತ್ರ

08:20 AM Feb 17, 2018 | |

“”ರಾಜ್ಯದ ಬೊಕ್ಕಸದಲ್ಲಿರುವುದು ಜನತೆಯ ತೆರಿಗೆ ದುಡ್ಡು. ನಾನು ಅದನ್ನು ನಿರ್ವಹಿಸುವ ಟ್ರಸ್ಟಿ ಮಾತ್ರ” ಹೀಗೆ ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಸಾಮಾನ್ಯರ ಹೃದಯಕ್ಕೆ ಹತ್ತಿರವಾಗಲು ಯತ್ನಿಸಿದ್ದಾರೆ. ಹದಿಮೂರನೇ ಬಜೆಟ್‌ನಲ್ಲಿ ಇತಿಮಿತಿಯಲ್ಲೇ ಲೆಕ್ಕಾಚಾರದ ಕಸರತ್ತು ಮಾಡಿದ್ದಾರೆ.

Advertisement

2,09,181 ಕೋಟಿ ರೂ. ಬಜೆಟ್‌ ಮಂಡಿಸಿರುವ ಅವರು, ಸ್ವಂತ ತೆರಿಗೆ ರಾಜಸ್ವ 1,03,444 ಕೋಟಿ ರೂ. ಅಂದಾಜಿಸಿದ್ದು, ತೆರಿಗೆಯೇತರ ಬಾಬಿ¤ನಿಂದ 8,163 ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆ ಹೊಂದಿದ್ದಾರೆ. ಕೇಂದ್ರ ತೆರಿಗೆಯ ಪಾಲಿನ ರೂಪದಲ್ಲಿ 36,215 ರೂ. ಹಾಗೂ ಕೇಂದ್ರ ಸರಕಾರದ ಸಹಾಯಾನುದಾನ ರೂಪದಲ್ಲಿ 14,942 ಕೋಟಿ ರೂ. ನಿರೀಕ್ಷಿಸಿದ್ದಾರೆ.

ಬಜೆಟ್‌ ಗಾತ್ರಕ್ಕೆ ತಕ್ಕಂತೆ 42 ಸಾವಿರ ಕೋಟಿ ರೂ.ವರೆಗೆ ಸಾಲ ಪಡೆಯುವ ಅವಕಾಶ ಇದ್ದರೂ 39,328 ಕೋಟಿ ರೂ. ಸಾಲ ಮಾಡುವ ಪ್ರಸ್ತಾವ ಮಾಡಿರುವ ಅವರು, ವಿತ್ತೀಯ ಶಿಸ್ತು ದಾಟಿಲ್ಲ ಎಂಬುದನ್ನೂ ಉಲ್ಲೇಖೀಸಿದ್ದಾರೆ.

2018-19ನೇ ಸಾಲಿನಲ್ಲಿ ಒಟ್ಟು ಜಮೆಗಳ ಅಂದಾಜು 2,02,297 ಕೋಟಿ ರೂ.ಗಳು. ಆ ಪೈಕಿ 1,62,765 ಕೋಟಿ ರೂ. ರಾಜಸ್ವ ಜಮೆ, 39,328 ಕೋಟಿ ರೂ. ಸಾಲ ಸೇರಿ 39,532 ಕೋಟಿ ರೂ. ಬಂಡವಾಳ ಜಮೆ. 1,62,637 ಕೋಟಿ ರೂ.ಗಳ ರಾಜಸ್ವ ವೆಚ್ಚ 35,458 ಕೋಟಿ ರೂ., ಸಾಲದ ಮರುಪಾವತಿ 11,086 ಕೋಟಿ ರೂ. ವೆಚ್ಚ ಒಳಗೊಂಡು ಒಟ್ಟು 2,09,181 ಕೋಟಿ ರೂ. ಎಂದು ತಿಳಿಸಲಾಗಿದೆ.

 ಒಟ್ಟು ವೆಚ್ಚದಲ್ಲಿ 28,001 ಕೋಟಿ ರೂ. ಪರಿಶಿಷ್ಟ ಜಾತಿ ಉಪ ಯೋಜನೆ/ಗಿರಿಜನ ಉಪ ಯೋಜನೆಯಡಿ ಒದಗಿಸಲಾಗಿ ರುವುದೆಂದೂ ಸ್ಪಷ್ಟಪಡಿಸಿದ್ದಾರೆ. ರಾಜಸ್ವ ಹೆಚ್ಚುವರಿ 127 ಕೋಟಿ ರೂ. ಎಂದು ಅಂದಾಜು ಮಾಡಲಾಗಿದ್ದು, ವಿತ್ತೀಯ ಕೊರತೆ 35,127 ಕೋಟಿ ರೂ.ಗಳಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಅದು ರಾಜ್ಯದ ಆಂತರಿಕ ಉತ್ಪನ್ನದ ಶೇ.2.49 ರಷ್ಟಾಗಿರುತ್ತದೆ. 2018-19ರ ಕೊನೆಯಲ್ಲಿ 2,86,790 ಕೋಟಿ ರೂ.ಗಳ ಒಟ್ಟು ಹೊಣೆಗಾರಿಕೆಗಳು ರಾಜ್ಯದ ಆಂತರಿಕ ಉತ್ಪನ್ನದ ಶೇ.20.36 ರಷ್ಟಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಇದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದಡಿ 2018-19ನೇ ವರ್ಷಕ್ಕೆ ನಿಗದಿಪಡಿಸಿರುವ ಶೇ.25ರ ಮಿತಿಯೊಳಗಿರುತ್ತದೆ ಎಂದು ಸಮರ್ಥಿಸಿ ಕೊಂಡಿದ್ದಾರೆ.

Advertisement

ಇಳಿಕೆ-ರಿಯಾಯಿತಿ: ದೂರದ ಮತ್ತು ಸಂಪರ್ಕ ರಹಿತ ಸ್ಥಳಗಳಿಗೆ ಸಂಪರ್ಕವನ್ನು ಕಲ್ಪಿಸುವ ಮುಖ್ಯ ಪಾತ್ರ ವಹಿಸುವ ಲಘು ವಿಮಾನಗಳಿಗೆ ಪ್ರೋತ್ಸಾಹ ನೀಡುವ ಕೇಂದ್ರ ಸರಕಾರದ ಉಡಾನ್‌ ಯೋಜನೆಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಇವುಗಳಿಗೆ  ಮಾರಾಟವಾಗುವಂತಹ ವೈಮಾನಿಕ ಇಂಧನದ ಮೇಲಿನ ಮಾರಾಟ ತೆರಿಗೆಯನ್ನು ಶೇ. 28ರಿಂದ ಶೇ.5ಕ್ಕೆ ಇಳಿಸುವುದಾಗಿ ಬಜೆಟ್‌ನಲ್ಲಿ  ಪ್ರಸ್ತಾವಿಸಲಾಗಿದೆ. ಜಿಎಸ್‌ಟಿ ಹಿನ್ನೆಲೆಯಲ್ಲಿ ಆಯ್ದು ವ್ಯವಹಾರಗಳಲ್ಲಿ ತೊಡಗಿಸಿಕೊಂಡವರಿಗೆ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಮಾಡುವ ಬಗ್ಗೆಯೂ ಬಜೆಟ್‌ನಲ್ಲಿ  ಪ್ರಸ್ತಾವಿಸಲಾಗಿದೆ.

ಹೆಚ್ಚು ತೆರಿಗೆ ಸಂಗ್ರಹ ಗುರಿ 
2018-19ನೇ ಸಾಲಿನಲ್ಲಿ 1,03,444 ಕೋಟಿ ರೂ. ತೆರಿಗೆ ರಾಜಸ್ವದ ಪೈಕಿ ವಾಣಿಜ್ಯ ತೆರಿಗೆಗಳ  ಇಲಾಖೆಯಿಂದ 65,800 ಕೋಟಿ ರೂ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ 10,400 ಕೋಟಿ ರೂ., ಅಬಕಾರಿ ವಲಯದಿಂದ 18,750 ಕೋಟಿ ರೂ., ಸಾರಿಗೆಯಿಂದ 6,600 ಕೋಟಿ ರೂ. ನಿರೀಕ್ಷಿಸಲಾಗಿದೆ. 2 ರಿಂದ 18 ಹಾಗೂ ಅದಕ್ಕಿಂತ ಮೇಲ್ಪಟ್ಟ ಸ್ಲಾéಬ್‌ಗಳ ಮದ್ಯದ ಮೇಲೆ ಶೇ. 8ರಷ್ಟು ತೆರಿಗೆ ಹೆಚ್ಚಳ ಪ್ರಸ್ತಾವಿಸಿದ್ದು, ಈ ಮೂಲಕ ಕಳೆದ ವರ್ಷಕ್ಕಿಂತ 1150 ಕೋಟಿ ರೂ. ಹೆಚ್ಚು ಸಂಗ್ರಹ ನಿರೀಕ್ಷಿಸಲಾಗಿದೆ.

ಸಂಪನ್ಮೂಲ ಸೃಷ್ಟಿಗೆ ಒತ್ತು
2018-19ನೇ ಸಾಲಿನ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವ 2017-18 ನೇ ಸಾಲಿನ ಪರಿಷ್ಕೃತ ಅಂದಾಜು ಮೀರಿ ಶೇ.12.78 ರ ಹೆಚ್ಚಳದೊಂದಿಗೆ 1,03,444 ಕೋಟಿ ರೂ. ಗಳಾಗುತ್ತದೆ ಎಂದು ತಿಳಿಸಲಾಗಿದೆ. ರಾಜ್ಯದ ಒಡೆತನದ ವಿವಿಧ ಮಂಡಗಳಿಗಳು, ನಿಗಮಗಳು ಮತ್ತು ಸ್ಥಳೀಯ ಸಂಸ್ಥೆಗಳ ಆಂತರಿಕ ಸಂಪನ್ಮೂಲ ಸೃಜನೆ ಮೂಲಕ ಹಾಗೂ ತಮ್ಮ ಹಣಕಾಸು ಸಾಮರ್ಥ್ಯ ಮತ್ತು ಸ್ವಂತ ರಾಜಸ್ವಗಳ ಆಧಾರದ ಮೇಲೆ ಮಾಡಿದ ಸಾಲಗಳ ಮೂಲಕ 16,760 ಕೋಟಿ ರೂ.ಗಳನ್ನು ಕ್ರೋಡೀಕರಿಸಲಾಗುವುದು ಎಂದು ತಿಳಿಸಲಾಗಿದೆ.

ಹೊಸತೇನಿದೆ?
ಬಜೆಟ್‌ನಲ್ಲಿ 28,002 ಕೋಟಿ ರೂ. ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡದ ಅಭಿವೃದ್ಧಿಗೆ ಮೀಸಲಿಡಲಾಗಿದೆ.
ಜಲಸಂಪನ್ಮೂಲ ಇಲಾಖೆಗೆ 15,998 ಕೋಟಿ ರೂ, ಸಣ್ಣ  ನೀರಾವರಿ ಇಲಾಖೆಗೆ 2,114 ಕೋಟಿ ರೂ. ಪರಿಸರ ಮತ್ತು 
ಅರಣ್ಯ ಇಲಾಖೆಗೆ 1,949 ಕೋ. ರೂ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ 22,350 ಕೋಟಿ ರೂ., ಉನ್ನತ ಶಿಕ್ಷಣಕ್ಕೆ 4,514 ಕೋಟಿ ರೂ. ಮೀಸಲಿಡಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 6,645 ಕೋಟಿ ರೂ., ವೈದ್ಯ ಶಿಕ್ಷಣ ಇಲಾಖೆಗೆ 2,177ಕೋಟಿ ರೂ.
ಸಮಾಜ ಕಲ್ಯಾಣ ಇಲಾಖೆಗೆ 6,528 ಕೋಟಿ ರೂ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 3,172 ಕೋಟಿ ರೂ.  ಅಲ್ಪಸಂಖ್ಯಾಕರ ಇಲಾಖೆಗೆ 2,281 ಕೋಟಿ ರೂ. ಒದಗಿಸಲಾಗಿದೆ. 
ಕೃಷಿ ಇಲಾಖೆಗೆ 5,849 ಕೋಟಿ ರೂ., ತೋಟಗಾರಿಕೆ ಇಲಾಖೆಗೆ 995 ಕೋಟಿ ರೂ., ಪಶು ಸಂಗೋಪನೆ ಇಲಾಖೆಗೆ 2,337 ಕೋಟಿ ರೂ., ರೇಷ್ಮೆ ಇಲಾಖೆಗೆ 252 ಕೋಟಿ ರೂ.,  ಸಹಕಾರ ಇಲಾಖೆಗೆ 5,837 ಕೋಟಿ ರೂ. ಬಜೆಟ್‌ನಲ್ಲಿ ಒದಗಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 5,371 ಕೋಟಿ ರೂ. ಮೀಸಲಿಗೆ ನಿರ್ಧಾರ

Advertisement

Udayavani is now on Telegram. Click here to join our channel and stay updated with the latest news.

Next