Advertisement

ಡಾ|ಎಸ್‌.ಎಲ್‌. ಭೈರಪ್ಪ  ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ

09:29 AM Nov 04, 2018 | |

ಮಂಗಳೂರು: ಸಾಹಿತಿಗಳು ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗದೆ ಸಮಗ್ರ ಭಾರತಕ್ಕೆ ತಮ್ಮನ್ನು ತೆರೆದುಕೊಳ್ಳಬೇಕು ಮತ್ತು  ಇಡೀ ಭಾರತವನ್ನು ನೋಡುವ, ಅನುಭವಿಸುವ ಪ್ರಯತ್ನ , ಪ್ರೀತಿ ಇರಬೇಕು. ನನ್ನ ಸಾಹಿತ್ಯದ ಪರಂಪರೆ ಭಾರತೀಯ ಪರಂಪರೆ ಮತ್ತು ಭಾರತೀಯ ಮನಸ್ಸುಗಳನ್ನು ವ್ಯಕ್ತಪಡಿಸುತ್ತದೆ ಎಂದು ಸರಸ್ವತಿ ಸಮ್ಮಾನ್‌ ಪುರಸ್ಕೃತ ಪದ್ಮಶ್ರೀ ಡಾ| ಎಸ್‌.ಎಲ್‌. ಭೈರಪ್ಪ ಅವರು ಹೇಳಿದರು. 

Advertisement

ಮಂಗಳೂರು ಲಿಟರರಿ ಫೌಂಡೇಶನ್‌ ಆಶ್ರಯದಲ್ಲಿ  ನಗರದ ಡಾ| ಟಿ.ಎಂ.ಎ ಪೈ ಇಂಟರ್ನ್ಯಾಷನಲ್  ಕನ್ವೆನ್ಶನ್‌ ಸೆಂಟರ್‌ನಲ್ಲಿ ಆಯೋಜಿಸಿರುವ  2 ದಿನಗಳ  “ಮಂಗಳೂರು ಲಿಟ್‌ ಫೆಸ್ಟ್‌’ ನಲ್ಲಿ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಾಗಿ ಘೋಷಿಸಿರುವ  ಜೀವಮಾನ ಸಾಧನಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ  ಎಸ್‌.ಎಲ್‌. ಭೈರಪ್ಪ ಅವರು ನಾನು ದೇಶದೊಳಗೆ ಆನೇಕ ಭಾಗಗಳಲ್ಲಿ ಸುತ್ತಾಡಿ ಕಂಡುಕೊಂಡ ಅನುಭವದ ಪ್ರಕಾರ  ಇಡೀ ಭಾರತದ ಎಲ್ಲ ಪ್ರದೇಶಗಳು, ಹಳ್ಳಿಗಳ ಜೀವನ ರೀತಿಯಲ್ಲಿ ಬಹಳ ವ್ಯತ್ಯಾಸಗಳಿಲ್ಲ. ಹೆಚ್ಚಿನ ವಿಷಯಗಳಲ್ಲಿ ಸಾಮ್ಯತೆ ಇದೆ. ನನ್ನ ಬರವಣಿಗೆಯಲ್ಲಿ ಇಡೀ ಭಾರತ ಒಳಗೊಂಡಿದೆ.  ಕೆಲವು ಕಾದಂಬರಿಗಳಲ್ಲಿ ಎದ್ದು ಕಾಣುತ್ತದೆ. ಇನ್ನು ಕೆಲವು ಕಾದಂಬರಿಗಳಲ್ಲಿ ಸೂಕ್ಷ್ಮವಾಗಿ ಇದೆ. ಇಡೀ ಭಾರತ ಒಂದು ಎಂಬುದು ನನ್ನ ಅಂತಃಕರಣದಲ್ಲಿ ಇದೆ. ಇದರಿಂದಲೇ ಎಲ್ಲ  ಭಾಷೆಗಳವರು ನನ್ನ ಕಾದಂಬರಿಗಳನ್ನು ಒಪ್ಪಿಕೊಂಡಿದ್ದಾರೆ ಎಂದರು.

ನನ್ನ ಬರವಣಿಗೆಗೆ ತೂಕ ತಂದುಕೊಟ್ಟದ್ದು, ಸವಾಲುಗಳನ್ನು ಎದುರಿಸುವ ಗಟ್ಟಿತನ ತಂದು ಕೊಟ್ಟದ್ದು ತಣ್ತೀಶಾಸ್ತ್ರ. ಇದು ನನ್ನನ್ನು ಮಟ್ಟ ಹಾಕುವ ಪ್ರಯತ್ನವನ್ನು  ಎದುರಿಸಲು ಸಹಕಾರಿಯಾಯಿತು. ಜನರನ್ನು ಆಕರ್ಷಿಸ ಬೇಕು ಎಂದು ನಾನು ಬರೆಯುವುದಿಲ್ಲ. ರಸಧ್ವನಿಯ ಔಚಿತ್ಯ ನನ್ನ ಸಾಹಿತ್ಯ ಎಂದರು.  ನಿಟ್ಟೆ ಎಜುಕೇಶನ್‌ ಟ್ರಸ್ಟಿನ ಅಧ್ಯಕ್ಷ  ಎನ್‌. ವಿನಯ ಹೆಗ್ಡೆ ಅವರು ಎಸ್‌.ಎಲ್‌. ಭೈರಪ್ಪ ಅವರಿಗೆ  ಜೀವಮಾನ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು. ಲೇಖಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಎಸ್‌.ಎಲ್‌.ಭೈರಪ್ಪ ಅವರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು. 

“ಈಗ ಮಿ ಟೂ ಎಂದು ಹೇಳಬಹುದು’
ನಾನು ಒಮ್ಮೆ ಹಿಮಾಲಯದಲ್ಲಿ ಸಾಗುತ್ತಿದ್ದಾಗ ಐವರು ಯುವಕರ ತಂಡ ಕತ್ತಿ ಝಳಪಿಸುತ್ತಾ ಓಡಿ ಬರುತ್ತಿತ್ತು. ಅವರಲ್ಲೊಬ್ಬ ಹುಡುಗಿಯನ್ನು ಹೊತ್ತುಕೊಂಡಿದ್ದ. ಅವರ ಹಿಂದೆ ಇನ್ನೊಂದು ತಂಡವೂ ಕತ್ತಿ ಹಿಡಿದು ಓಡಿ ಬರುತ್ತಿತ್ತು. ನಾನು ಬದಿಗೆ ನಿಂತೆ. ಅವರು ಮುಂದಕ್ಕೆ ಸಾಗಿದರು. ಇನ್ನೇನು ಹೊಡೆದಾಟ ನಡೆದು ಅನಾಹುತವಾಗುತ್ತೆ ಎಂದು ಭಾವಿಸಿ ನನ್ನ ಸಾಮಗ್ರಿಗಳನ್ನು ಹೊತ್ತುಕೊಂಡಿದ್ದವನಲ್ಲಿ ಇದೇನು ಎಂದು ಕೇಳಿದೆ. ಇದು ನಮ್ಮ ಊರಲ್ಲಿ  ಮದುವೆ ಸಂದರ್ಭ ನಡೆಯುವ ಸಂಪ್ರದಾಯ. ಎರಡು ತಂಡಗಳು ಅಣಕು ಹೊಡೆದಾಟ ನಡೆಸುತ್ತವೆ. ಹುಡುಗಿ ಕಡೆಯವರು ಸೋತಂತೆ ನಟಿಸುತ್ತಾರೆ ಎಂದು ವಿವರಿಸಿದ. ಬಹುಶಃಈಗ ಈ ಪದ್ಧತಿ ಇದೆಯೋ ಗೊತ್ತಿಲ್ಲ. ಇದ್ದರೂ ಈಗಿನ ಯುವಕರಿಗೆ ಹುಡುಗಿಯನ್ನು  ಹೊತ್ತುಕೊಂಡು ಓಡುವಷ್ಟು ಸಾಮರ್ಥ್ಯವೂ ಇರಲಿಕ್ಕಿಲ್ಲ. ಒಂದೊಮ್ಮೆ ಹೊತ್ತು  ಓಡಿದರೂ ಎಲ್ಲಿಯಾದರೂ ಮನಸ್ತಾಪ ಉಂಟಾದರೆ ಮಿ ಟೂ ಎಂದು ದೂರು ಸಲ್ಲಿಸಬಹುದು ಎಂದು  ಎಸ್‌.ಎಲ್‌.ಭೈರಪ್ಪ ಹಾಸ್ಯ ಚಟಾಕಿ ಹಾರಿಸಿದರು.

ಇಂದಿನ ಕಾರ್ಯಕ್ರಮ
ಬೆಳಗ್ಗೆ 10 ಗಂಟೆಗೆ ಆರಂಭವಾಗಲಿವೆ.  ಓವರ್‌ ರೀಚಿಂಗ್‌ ರೆಗ್ಯುಲೇಶನ್ಸ್‌ ಆ್ಯಂಡ್‌ ರಿಲೆಂಟ್‌ಲೆಸ್‌ ಫೈತ್‌- ಟ್ರೆಡೀಶನ್ಸ್‌, ಕೋರ್ಟ್ಸ್ ಆ್ಯಂಡ್‌ ಕಾನ್‌ಸ್ಟಿಟ್ಯೂಶನ್‌; ಇಂಡಿಯಾ ಇನ್‌ ಸಿನೆಮಾ, ವುಮನ್‌ ಆ್ಯಂಡ್‌ ರಿಲೀಜನ್‌: ಫ್ರಮ್ ಟ್ರಿಪಲ್‌ ತಲಾಕ್‌ ಟು ಶಬರಿಮಲ, ಎಂಜಿನಿಯರ್‌ಡ್‌ ವಾಯಲೆನ್ಸ್‌ ಇನ್‌ ಕೇರಳ ಆ್ಯಂಡ್‌ ಕಾಶ್ಮೀರ್‌, ರೀಜನಲ್‌ ಆರ್ಟ್‌
ಕಲ್ಚರ್‌ ಆ್ಯಂಡ್‌ ಲಿಟರೇಚರ್‌, ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ ಎಂಬ ವಿಚಾರಗೋಷ್ಠಿಗಳು, ಕವಿಗೋಷ್ಠಿ, ವಾಟ್‌ ಈಸ್‌ ಹಿಂದೂಯಿಸಂ ಮತ್ತು ಕಶೀರ ಕೃತಿಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

Advertisement

ದ. ಕ.ದ ಜನ ಶ್ರಮಜೀವಿಗಳು, ಪ್ರಾಮಾಣಿಕರು
ದಕ್ಷಿಣ ಕನ್ನಡ ಜಿಲ್ಲೆೆಯ ಜನರು  ಶಿಸ್ತು, ಪ್ರಾಮಾಣಿಕತೆ ಮತ್ತು ಪರಿಶ್ರಮದಿಂದ ಜೀವನದಲ್ಲಿ ಉನ್ನತಿಯನ್ನು ಸಾಧಿಸಿದವರು. ಇಂದು ದೇಶ ವಿದೇಶಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ವ್ಯಾಪಿಸಿಕೊಂಡಿದ್ದಾರೆ. ಜಿಲ್ಲೆ  ಶಿಕ್ಷಣ ಕ್ಷೇತ್ರದಲ್ಲಿ  ತನ್ನದೇ ಆದ ಸ್ಥಾನವನ್ನು ಹೊಂದಿದೆ. ದಕ್ಷಿಣ  ಕನ್ನಡ ಜಿಲ್ಲೆಯ ಉತ್ಸಾಹ, ಸ್ಫೂರ್ತಿ, ಜೀವನ ತತ್ವವನ್ನು  ಡಾ| ಶಿವರಾಮ ಕಾರಂತರು ತಮ್ಮ ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಡಾ ಎಸ್‌.ಎಲ್‌.ಭೈರಪ್ಪ  ಅವರು ಶ್ಲಾಘಿಸಿದರು.

ಪ್ರಶಸ್ತಿ ಮೊತ್ತ  ಕಲ್ಲಡ್ಕ ಶಾಲೆಗೆ 
ನಾನು ಶುಕ್ರವಾರ ಬರುವಾಗ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ಅಲ್ಲಿ ನಡೆಯುತ್ತಿರುವ  ಚಟುವಟಿಕೆಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಅಲ್ಲಿನ ಶಾಲೆಯ ಮಕ್ಕಳಿಗೆ ಬಿಸಿಯೂಟಕ್ಕೆ ಮುಜರಾಯಿ ಇಲಾಖೆಯಿಂದ ನೀಡುತ್ತಿದ್ದ  ಅನುದಾನವನ್ನು  ನಿಲ್ಲಿಸಿರುವ ವಿಚಾರ ಮನಸ್ಸಿಗೆ ತುಂಬಾ ನೋವುಂಟು ಮಾಡಿತು. ನಾನು ಚೆಕ್‌ ಬುಕ್‌ ತಂದಿರಲಿಲ್ಲ. ಪ್ರಶಸ್ತಿ ಮೊತ್ತದ ಚೆಕ್‌ನ್ನು  ಆ ಶಾಲೆಗೆ ನೀಡುತ್ತಿದ್ದೇನೆ. ಇದರಲ್ಲಿ ಎಷ್ಟು ಮೊತ್ತ ಇದೆ ಎಂದೂ ನಾನು ನೋಡಿಲ್ಲ  ಎಂದು ಡಾ| ಎಸ್‌.ಎಲ್‌.ಭೈರಪ್ಪ  ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next