Advertisement

ಅಂತಾರಾಷ್ಟ್ರೀಯ ಶಕ್ತಿಗಳಿಂದ ಜೀವ ಬೆದರಿಕೆ!

11:35 AM Oct 28, 2018 | Team Udayavani |

ರಾಮನಗರ: “ನನಗೆ ಕೆಲವು ಅಂತಾರಾಷ್ಟ್ರೀಯ ದುಷ್ಟಶಕ್ತಿಗಳಿಂದ ಜೀವ ಬೆದರಿಕೆ ಇದೆ. ಹೀಗಾಗಿ 14 ವರ್ಷಗಳಿಂದ ನನ್ನ ಸ್ವಯಂ ರಕ್ಷಣೆಗೆ ಭದ್ರತಾ ಏಜೆನ್ಸಿಗಳ ಮೂಲಕ ಸಿಬ್ಬಂದಿ ನೇಮಿಸಿಕೊಂಡಿದ್ದೇನೆ. ಹಾಗೇ ನನ್ನ ಬಳಿ ಕಾನೂನಿಗೆ ವಿರುದ್ಧವಾದ ಯಾವುದೇ ಶಸ್ತ್ರಾಸ್ತ್ರಗಳಿಲ್ಲ’ ಎಂದು ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಸ್ಪಷ್ಟಪಡಿಸಿದರು.

Advertisement

ಬಿಡದಿ ಬಳಿಯ ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಸಭೆ, ಸಮಾರಂಭದಲ್ಲಿ ಭಾಗವಹಿಸಲು ಹೋದಾಗ ನನ್ನ ಭದ್ರತಾ ಸಿಬ್ಬಂದಿ ಆಯುಧ ಇರಿಸಿಕೊಂಡಿರುವುದನ್ನು ಸಾರ್ವಜನಿಕರು ನೋಡಿದ್ದಾರೆ. ಆಯುಧ ಪೂಜೆ ದಿನದಂದು ನಮ್ಮ ಮೈಸೂರಿನ ಮನೆಯಲ್ಲಿ ಅದೇ ಶಸ್ತ್ರಾಸ್ತ್ರಗಳಿಗೆ ಪೂಜೆ ಮಾಡಲಾಗಿದೆ.

ಅಂದು, ಅಲ್ಲಿ ಪೂಜೆಗೆ ಇರಿಸಿದ್ದು ಸಿಂಗಲ್‌ ಬ್ಯಾರಲ್‌ ಗನ್ನುಗಳನ್ನು ಮಾತ್ರ. ಆದರೆ, ಅಲ್ಲಿ ಎಕೆ47, ಎಸ್‌.ಎಲ್‌. ರೈಫ‌ಲ್‌ಗ‌ಳು, ಲಾಂಗು, ಡ್ಯಾಗರ್‌ ಎಲ್ಲಾ ಇದ್ದವು ಎಂದು ಎರಡು ಮಾಧ್ಯಮಗಳಲ್ಲಿ ಬಿಂಬಿಸಲಾಗಿದೆ. ನನ್ನ ತಾಯಿ ಬಳಸುತ್ತಿದ್ದ ವಾಕಿಂಗ್‌ ಸ್ಟಿಕ್‌ ಅನ್ನು, ಅವರ ನೆನಪಿಗಾಗಿ ನನ್ನ ಬಳಿ ಇರಿಸಿಕೊಂಡಿದ್ದು, ಆಯುಧ ಪೂಜೆ ದಿನ ಅದನ್ನೂ ಇರಿಸಿ ಪೂಜೆ ಮಾಡಲಾಗಿದೆ. ಆದರೆ, ಮಾಧ್ಯಮಗಳು ಅದನ್ನೇ ಲಾಂಗು ಎಂದು ಬಿಂಬಿಸಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

“ನಾನು ನನ್ನ ರಕ್ಷಣೆಗೆ ಬಳಸುತ್ತಿದ್ದ ಆಯುಧಗಳನ್ನು ಹಿಂದೂ ಧರ್ಮದ ಪದ್ಧತಿ ಪ್ರಕಾರ ಪೂಜೆ ಮಾಡಿದ್ದೇನೆ. ಅರಮನೆಯಲ್ಲಿ ರಾಜ ಮನೆತನದವರು, ಕೇಂದ್ರ ಗೃಹ ಸಚಿವ ರಾಜನಾಥಸಿಂಗ್‌, ಪ್ರಧಾನಿ ನರೇಂದ್ರ ಮೋದಿ ಅವರೂ ಆಯುಧಗಳಿಗೆ ಪೂಜೆ ಮಾಡಿದ್ದಾರೆ. ಆದರೆ ನಾನು ಮಾಡಿದ ಪೂಜೆಯನ್ನು ಮಾತ್ರ ಇಷ್ಟೊಂದು ವೈಭವೀಕರಿಸಿದ್ದು ಏಕೆ?’ ಎಂದು ರೈ ಪ್ರಶ್ನಿಸಿದರು.

ಮಾನನಷ್ಟ ಮೊಕದ್ದಮೆ: ನಮ್ಮ ಮನೆಯಲ್ಲಿ ಆಯುಧ ಪೂಜೆ ಮಾಡಿದಾಗ ನನ್ನ ಆಪ್ತರ ಪೈಕಿ ಕೆಲವೇ ಕೆಲವರು ಸ್ಥಳದಲ್ಲಿದ್ದರು. ಅವರ ಪೈಕಿಯೇ ಯಾರೋ ಒಬ್ಬರು ಪೂಜೆಯ ದೃಶ್ಯ ಚಿತ್ರೀಕರಿಸಿದ್ದಾರೆ. ಅದನ್ನು ಸದುದ್ದೇಶದಿಂದ ವಾಟ್ಸ್‌ಆ್ಯಪ್‌ ಮೂಲಕ ಕೆಲವರಿಗೆ ಶೇರ್‌ ಮಾಡಿದ್ದಾರೆ. ಅದು ವೈರಲ್‌ ಆಗಿದೆ.

Advertisement

ಆದರೆ, ಇದಕ್ಕೆ ಸಂಬಂಧಿಸಿದಂತೆ ನನ್ನಿಂದ ಸ್ಪಷ್ಟೀಕರಣ ಪಡೆಯದೆಯೇ ಎರಡು ಮಾಧ್ಯಮಗಳು, “ಆಯುಧ ಪೂಜೆ’ ವಿಡಿಯೋ ಬಿತ್ತರಿಸಿ ದೊಡ್ಡ ವಿವಾದ ಸೃಷ್ಟಿಸಿವೆ. ಆ ಎರಡೂ ಮಾಧ್ಯಗಳ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ’ ಎಂದು ಮುತ್ತಪ್ಪ ರೈ ತಿಳಿಸಿದರು.
 
ಆಯುಧ ಪ್ರದರ್ಶಿಸಿ ಹೆದರಿಸುವ ಅಗತ್ಯವಿಲ್ಲ: ಕಳೆದ 10 ವರ್ಷಗಳಿಂದ ಜಯ ಕರ್ನಾಟಕ ಸಂಘಟನೆ ಮೂಲಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ರಾಜ್ಯದ 30 ಜಿಲ್ಲೆಯಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಮಂದಿ ಸಂಘಟನೆ ಸದಸ್ಯರಾಗಿದ್ದಾರೆ.

ರೈತಪರ ಹೋರಾಟ, ಆರೋಗ್ಯ ಶಿಬಿರಗಳು, ಕ್ರೀಡಾ ಚಟುವಟಿಕೆಗಳು, ಶಾಶ್ವತ ನೀರಾವರಿ ಹೋರಾಟ, ಏಕರೂಪ ಸಮಾನ ಶಿಕ್ಷಣಕ್ಕಾಗಿ ಹೋರಾಟ, ಬರಗಾಲ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆ, ಸ್ವತ್ಛತಾ ಆಂದೋಲನ ಸೇರಿ ಅನೇಕ ಸಮಾಜಮುಖೀ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವ ನನಗೆ ಆಯುಧಗಳನ್ನು ಪ್ರದರ್ಶಿಸಿ ಯಾರನ್ನೋ ಹೆದರಿಸುವ ಅವಶ್ಯಕತೆ ಇಲ್ಲ ಎಂದು ರೈ ತಿಳಿಸಿದರು.
 
ಕಾನೂನನ್ನು ಗೌರವಿಸಿದ್ದೇನೆ: ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿಯನ್ನು ನೋಡಿದ ಬೆಂಗಳೂರು ಪೊಲೀಸರು, 24 ಗಂಟೆಯೊಳಗೆ ಆಯುಧಗಳ ಪರವಾನಗಿ ಹಾಜರುಪಡಿಸುವಂತೆ ನೋಟಿಸ್‌ ನೀಡಿದ್ದರು. ಕಾನೂನನ್ನು ಗೌರವಿಸುವ ನಾನು, ಸೂಚಿತ ಅವಧಿಯೊಳಗೆ ಏಜೆನ್ಸಿಗಳ ಮಾಲೀಕರೊಂದಿಗೆ ಮತ್ತು ಪೂಜೆಗೆ ಇರಿಸಿದ್ದ ಶಸ್ತ್ರಸ್ತ್ರಗಳೊಂದಿಗೆ ಪೊಲೀಸ್‌ ಠಾಣೆಗೆ ತೆರಳಿದ್ದೆ. ಅಂದು ಭಾನುವಾರವಾಗಿದ್ದ ಕಾರಣ ಏಜೆನ್ಸಿಯವರು ಆಯುಧಗಳ ದಾಖಲೆ ಹಾಜರುಪಡಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಆಯುಧಗಳನ್ನು ವಶಕ್ಕೆ ಪಡೆದು, ದಾಖಲೆಗಳನ್ನು ನೀಡಿ ಆಯುಧಗಳನ್ನು ಪಡೆಯುವಂತೆ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಪುತ್ತೂರು ಮಹಾಲಿಂಗೇಶ್ವರ ದೇವಾಲಯಕ್ಕೆ 1.90 ಕೋಟಿ ರೂ. ವೆಚ್ಚದ ಬ್ರಹ್ಮ ರಥ, ಕೋಟೇಶ್ವರ ದೇವಾಲಯಕ್ಕೆ 80 ಲಕ್ಷ ರೂ ವೆಚ್ಚದ ಬ್ರಹ್ಮ ರಥ ಕೊಡುಗೆ ನೀಡಿದ್ದು, ಇದೀಗ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ 2.50 ಕೋಟಿ ರೂ. ವೆಚ್ಚದ ಬ್ರಹ್ಮ ರಥ ನೀಡಲು ಸಿದ್ಧತೆ ನಡೆಸಿದ್ದೇನೆ. ಲೋಕ ಕಲ್ಯಾಣಕ್ಕಾಗಿ ಈ ಕೆಲಸ ಮಾಡುತ್ತಿದ್ದೇನೆ.
-ಮುತ್ತಪ್ಪ ರೈ, ಜಯ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next