Advertisement

ಇಂದಿಗೂ ಸಾವಿನ ರಹಸ್ಯ ನಿಗೂಢ! ರಾಜೀವ್ ದೀಕ್ಷಿತ್ ಎಂಬ ಸ್ವದೇಶಿ ಆಂದೋಲನದ ಹರಿಕಾರ…

12:35 PM Nov 30, 2022 | Team Udayavani |

ಕಂಪ್ಯೂಟರ್‌ ಇಂಜನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ, ಮನಸ್ಸು ಮಾಡಿದ್ದರೆ ವಿದೇಶಗಳಲ್ಲಿ ವೈಭವದ ಐಷಾರಾಮಿ ಜೀವನ ನಡೆಸಬಹುದಾಗಿದ್ದ ಒಬ್ಬ ಯುವಕ ಈ ದೇಶದ ದುರ್ಘ‌ಟನೆಯೊಂದರ ಸಂತ್ರಸ್ತರಿಗಾಗಿ ತನ್ನ ಸುಖ, ಸಂತೋಷ ಎಲ್ಲಾ ತ್ಯಾಗ ಮಾಡುತ್ತಾರೆ. ಸಂತ್ರಸ್ತರಿಗೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ ಒಂದು ಅಂದೋಲನವನ್ನೇ ಆರಂಭಿಸಿ ತಮ್ಮ ಜೀವನವನ್ನೇ ಅದಕ್ಕಾಗಿ ಮೀಸಲಿಡುತ್ತಾರೆ. ಭಾರತ ಎಂದೆಂದಿಗೂ ಎದೆಯುಬ್ಬಿಸಿ, ತಲೆಎತ್ತಿ ಹೆಮ್ಮೆಯಿಂದ ಕೂಗಿ ಹೇಳಿಕೊಳ್ಳಬಹುದಾದ ಆ ಅದಮ್ಯ ಚೇತನವೇ ದೇಶಭಕ್ತ ರಾಜೀವ್‌ ದೀಕ್ಷಿತ್‌, ಅವರು ಪ್ರಾರಂಭಿಸಿದ ಆಂದೋಲನವೇ “ಆಜಾದಿ ಬಚಾವೋ’ ಆಂದೋಲನ.

Advertisement

ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಯೂನಿಯನ್‌ ಕಾರ್ಬೈಡ್‌ ಕಾರ್ಖಾನೆಯಿಂದ ಮೀಥೈಲ್‌ ಐಸೋಸಯನೈಡ್‌ ರಾಸಾಯನಿಕ ಸೋರಿಕೆಯಾಗಿ ನೂರಾರ ಜನ ಪ್ರಾಣತೆತ್ತಿದ್ದರು. ಈ ದುರಂತದಿಂದ  ಸಾವಿರಾರು ಜನ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿದ್ದವು. ಇಂದಿಗೂ ಲಕ್ಷಾಂತರ ಜನ ಹಲವು ಕಾಯಿಲೆಗಳಿಂದ ನರಳುತ್ತಿದ್ದಾರೆ. ವರುಷಗಟ್ಟಲೆ ಈ ಸಂತ್ರಸ್ತರಿಗೆ ಅನ್ಯಾಯವಾಗುತ್ತಿರುವುದನ್ನು ನೋಡುತ್ತಲೇ ಬಂದಿದ್ದ ರಾಜೀವ್‌ ಸಿಟ್ಟಿಗೆದ್ದು ಇವರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡಲೆಂದೇ 1992ರಲ್ಲಿ ಡಾ.ಬನ್ವಾರಿಲಾಲ್‌ ಶರ್ಮಾ ಮತ್ತು  ಪ್ರೊ. ಧರ್ಮಪಾಲ್‌ ಮಾರ್ಗದರ್ಶನದಲ್ಲಿ ಆಜಾದಿ ಬಚಾವೋ ಆಂದೋಲನ ಪ್ರಾರಂಭಿಸಿದರು. ಈ ಆಂದೋಲನದ ಮೂಲಕ ಯೂನಿಯನ್‌ ಕಾರ್ಬೈಡ್‌ ಕಂಪನಿಯನ್ನು ಭಾರತದಿಂದ ಒಧ್ದೋಡಿಸಲಾಯಿತು.

ರಾಜೀವ್‌ ದೀಕ್ಷಿತರ ಈ ಆಂದೋಲನದ ಪರಿಣಾಮವಾಗಿ ಮಾರಿಷಸ್‌ ಮೂಲಕ  ಭಾರತಕ್ಕೆ ಸರಕು ಸಾಗಿಸಿ ಸಾವಿರಾರು ಕೋಟಿ ತೆರಿಗೆ ವಂಚಿಸುತ್ತಿದ್ದ ಅಮೆರಿಕನ್‌ ಕಂಪನಿಗಳಿಂದ ತೆರಿಗೆ ಹಣವನ್ನು ಜಪ್ತಿ ಮಾಡಲಾಯಿತು. ಗುಜರಾತಿನ ಬಂದರಿನಲ್ಲಿ ಉಪ್ಪು ತಯಾರಿಸುವ ನೆಪದಲ್ಲಿ ಬಂದು ಪಕ್ಕದ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡುವ ಹುನ್ನಾರ ನಡೆಸಿದ್ದ ಕಾರ್ಗಿಲ್‌ ಎಂಬ ಕಂಪನಿಯನ್ನು ಮುಚ್ಚಿಸಲಾಯಿತು. ಅಮೆರಿಕದ ಇನ್ನೊಂದು ಕಂಪನಿ ವಿಲ್ಸನ್‌ ಕೆಡಿಯಾ ರೈತರಿಂದ ಸಾವಿರಾರು ಎಕರೆ ಬೆಲೆಬಾಳುವ ಕೃಷಿಭೂಮಿ ಕಿತ್ತುಕೊಂಡು ಹೆಂಡದ ಕಾರ್ಖಾನೆ ಸ್ಥಾಪಿಸಲು ನಡೆಸಿದ್ದ ಹುನ್ನಾರವನ್ನು ಹತ್ತಿಕ್ಕಲಾಯಿತು.

ಈ ಆಂದೋಲನ ಪ್ರಾರಂಭವಾಗುವ ವೇಳೆಗೆ ನರಸಿಂಹರಾವ್‌ ಸರ್ಕಾರ ಮುಕ್ತ ವ್ಯಾಪಾರ ನೀತಿಗೆ ಸಹಿ ಹಾಕಿತು. ಜಾಗತೀಕರಣ, ಖಾಸಗೀಕರಣ, ಉದಾರೀಕರಣದ ನೆಪದಲ್ಲಿ ಗ್ಯಾಟ್‌,  ಡಂಕಲ್‌, ಡಬ್ಲ್ಯುಟಿಓ ಒಪ್ಪಂದಗಳ ಕಪಿಮುಷ್ಠಿಗೆ ಸಿಲುಕಿ ಭಾರತವೂ ನರಳುವಂತಾಯಿತು. ಬಹುರಾಷ್ಟ್ರೀಯ ಬೀಜ ಕಂಪನಿಗಳು ನಮ್ಮ ರೈತರನ್ನು ಮೋಸ ಮಾಡಲು ಸಾಲುಗಟ್ಟಿ ನಿಂತವು. ಆ ಕಾಲಕ್ಕೇ 4500ಕ್ಕೂ ಹೆಚ್ಚು ವಿದೇಶಿ ಕಂಪನಿಗಳು ಭಾರತದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಿದವು. ಇದರಿಂದ ಭಾರತದ ಗುಡಿ ಕೈಗಾರಿಕೆ ಹಾಗೂ ಸಣ್ಣ ಪುಟ್ಟ ಕೈಗಾರಿಕೆಗಳು ಹೇಳ ಹೆಸರಿಲ್ಲದಂತೆ ಛಿದ್ರವಾದವು. ಇವುಗಳನ್ನೇ ನಂಬಿದ್ದ ಲಕ್ಷಾಂತರ ಜನರು ತಮ್ಮ ಕೌಶಲಗಳಿಗೆ ಬೆಲೆಯಿಲ್ಲದೆ ಪರದಾಡುವಂತಾಯಿತು. ಡೆನ್ಮಾರ್ಕಿನ ಹಂದಿಗಳ ಸಗಣಿಯನ್ನೂ ಅಮದು ಮಾಡಿಕೊಳ್ಳುವ ಮಟ್ಟಕ್ಕೆ ನಮ್ಮ ರಾಜಕೀಯದವರು ಬೌದ್ಧಿಕ ದೀವಾಳಿ ಎದ್ದಿದ್ದರು. ಸ್ವತಂತ್ರ ಭಾರತದ ಈ ಹೀನಾಯ ಸ್ಥಿತಿಯನ್ನು ಸಮಸ್ತ ಭಾರತೀಯರ ಮುಂದೆ ಕಂತೆ ಕಂತೆ ದಾಖಲೆಗಳ ಮೂಲಕ ತೆರೆದಿಟ್ಟವರೇ ರಾಜೀವ್‌ ದೀಕ್ಷಿತ್‌!

ಕೇವಲ ವ್ಯವಸ್ಥೆ ಹಾಗೂ ಸರ್ಕಾರಗಳನ್ನೇ ದೂಷಿಸಿ ಪ್ರಯೋಜನವಿಲ್ಲ ಎಂದು ಅರಿತ ರಾಜೀವ್‌ ಬಹುರಾಷ್ಟ್ರೀಯ ಕಂಪನಿಗಳ ಪ್ರಭಾವ ಕುಗ್ಗಿಸಬೇಕೆಂದರೆ ಸ್ವದೇಶೀ ಜೀವನ ಶೈಲಿಯ ಪುನರ್‌ ಪ್ರತಿಷ್ಠಾಪನೆ ಆಗಬೇಕು ಎಂಬುದನ್ನು ಮನಗಂಡರು. ಗಾಂಧೀಜಿ, ಸ್ವಾಮಿ ವಿವೇಕಾನಂದ, ಬಾಲಗಂಗಾಧರ ತಿಲಕರು ಈ ಹಿಂದೆ ಸ್ವದೇಶೀ ಚಿಂತನೆಯ ವಿಶ್ವರೂಪವನ್ನು ಇಡೀ ಜಗತ್ತಿಗೇ ತೋರಿಸಿಕೊಟ್ಟಿದ್ದರು. ಅದನ್ನು ಮರೆತು ಬಹುರಾಷ್ಟ್ರೀಯ ಕಂಪನಿಗಳ ತೆಕ್ಕೆಯಲ್ಲಿ ಮಲಗಿದ ಭಾರತವನ್ನು ಮತ್ತೆ ಸ್ವದೇಶೀ ಆಂದೋಲನದ ಮೂಲಕ ಎಚ್ಚರಿಸುವ ಪ್ರಯತ್ನ ಮಾಡಿದರು. “ಸ್ವದೇಶಿ ಎನ್ನುವುದು ಕೇವಲ ಕಲ್ಪನೆಯಲ್ಲ, ಅದು ಪ್ರಕೃತಿ ದತ್ತವಾದದ್ದು. ಅದೊಂದು ಜೀವನ ಶೈಲಿ, ಸ್ವದೇಶಿ ಇಲ್ಲದೆ ಭಾರತೀಯತೆಯೇ ಇಲ್ಲ, ಸ್ವಾತಂತ್ರ್ಯದ ನಿಜವಾದ ಅರ್ಥ ಸಿಗುವುದೇ ಸ್ವದೇಶಿ ಚಿಂತನೆ ಮತ್ತು ಅದರ ಪರಿಣಾಮಕಾರಿ ಅನುಷ್ಠಾನದಿಂದ. ನಮ್ಮ ಸ್ವದೇಶೀ ಪರಿಸರದಲ್ಲಿ ಉತ್ಪಾದನೆಯಾಗುವ ವಸ್ತುಗಳಲ್ಲಿ ಈ ನೆಲದ ಸಂಸ್ಕೃತಿ ಹಾಗೂ ಪರಂಪರೆಯ ಸೊಗಡಿದೆ. ಹಾಗಾಗಿ ಸ್ವದೇಶಿ ವಸ್ತುಗಳನ್ನೇ ಉತ್ಪಾದಿಸಬೇಕು ಮತ್ತು ದಿನಬಳಕೆಯಲ್ಲಿ ಅವನ್ನೇ ಉಪಯೋಗಿಸಬೇಕು, ಬಹುರಾಷ್ಟ್ರೀಯ ಉತ್ಪನ್ನಗಳನ್ನು ಧಿಕ್ಕರಿಸಿ ತಿರಸ್ಕರಿಸಬೇಕು” ಎಂದು ರಾಜೀವ್‌ ದೇಶಾದ್ಯಂತ ತಮ್ಮ ಆಂದೋಲನದ ಮೂಲಕ ಕರೆ ನೀಡಿದ್ದರು.

Advertisement

ಹಾಗೆಂದು ರಾಜೀವ್‌ ದೀಕ್ಷಿತ್‌ ಆಧುನಿಕತೆಯ, ಕೈಗಾರಿಕೀಕರಣದ ಅಥವಾ ಅಭಿವೃದ್ಧಿಯ ವಿರೋಧಿಯಾಗಿದ್ದರು ಎಂದಲ್ಲ. ಅವರು ನಮ್ಮ ಪಾರಂಪರಿಕ ದೇಶೀ ಜ್ಞಾನ ಹಾಗೂ ಕೃಷಿ ಜ್ಞಾನದ ಸಂರಕ್ಷಣೆಯ ಬಗ್ಗೆ ತೀವ್ರ ಕಳಕಳಿ ಹೊಂದಿದ್ದರು.  ಸಾಬೂನು, ಉಪ್ಪಿನಕಾಯಿ, ಟೊಮೊಟೋ ಗೊಜ್ಜು, ಗೊಜ್ಜವಲಕ್ಕಿ, ಹಲ್ಲುಜ್ಜುವ ಪೇಸ್ಟ್‌, ಹಾಲು, ಸಣ್ಣ ಪುಟ್ಟ ಔಷಧಗಳು, ಚಾಕಲೇಟ್‌, ಬಿಸ್ಕತ್ತು, ಚಟ್ನಿ, ಕಾಫಿ, ಜಾಮು, ಆಲೂಗಡ್ಡೆ ಚಿಪ್ಸು, ಆಟದ ಸಾಮಾನುಗಳು. ಸಣ್ಣ ಪುಟ್ಟ ಒಳ ಉಡುಪುಗಳು, ಇವನ್ನು ತಯಾರಿಸಲೂ ನಮಗೆ ಯೋಗ್ಯತೆ ಇಲ್ಲವಾ? ನಮ್ಮದೇ ಬಂಡವಾಳದಿಂದ ಯಾವುದೇ ತಾಂತ್ರಿಕತೆ ಇಲ್ಲದೆ ನಮ್ಮದೇ ಸಂಪನ್ಮೂಲ ಬಳಸಿ ಫ್ರಾಂಚೈಸಿ ಅಥವಾ ಉಪಗುತ್ತಿಗೆಯ ಆಧಾರದ ಮೇಲೆ ಇಲ್ಲಿ ಬಂದು ದೋಚುವ ಬಹುರಾಷ್ಟ್ರೀಯ ಕಂಪನಿಗಳಿಗೆ ನಾವೇಕೆ ಮಣೆ ಹಾಕಬೇಕು ಎಂದು ಅವರು ಪ್ರಶ್ನಿಸುತ್ತಿದ್ದರು.

ರಾಜೀವ್‌ ದೀಕ್ಷಿತ್‌ ಗತಿಸಿ ಇಂದಿಗೆ 12 ವರ್ಷಗಳಾದವು. ವಿಪರ್ಯಾಸವೆಂದರೆ ರಾಜೀವ್‌ ತಾವು ಹುಟ್ಟಿದ ದಿನವೇ ( 30-11-1967) ಛತ್ತೀಸ್‌ಘಡದ ಬಿಲಾಯ್‌ನಲ್ಲಿ ತಮ್ಮ 43ನೇ ವಯಸ್ಸಿನಲ್ಲಿ ವಿಧಿವಶರಾದರು(30-11-2010). ಬಹು ರಾಷ್ಟ್ರೀಯ ಕಂಪನಿಗಳ ಹಾಗೂ ಅಂದಿನ ಯುಪಿಎ ಸರ್ಕಾರದ ಪಾಲಿಗೆ ಸಿಂಹಸ್ವಪ್ನವಾಗಿದ್ದ ರಾಜೀವ್‌ ದೀಕ್ಷಿತ್‌ ಸಾವು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಆ ಸತ್ಯಗಳು ಅವರೊಂದಿಗೇ ಇತಿಹಾಸ ಸೇರಿಬಿಟ್ಟವು.

ನಾವೂ ಸಹ ಅವರೊಂದಿಗೆ ಸ್ವದೇಶಿ ಸಂಸ್ಕೃತಿ ಮತ್ತು ಚಿಂತನೆಗೆ ತಿಲಾಂಜಲಿ ಇತ್ತಿದ್ದೇವೆ.  ಚೀನಾದೊಂದಿಗಿನ ಡೊಕ್ಲಾಮ್‌ ಸಂಘರ್ಷದ ನಂತರವೂ ನಾವು ನಿರಾಳವಾಗಿ, ಯಾವುದೇ ಮುಜಗರ, ನಾಚಿಕೆ ಇಲ್ಲದೆ ಚೀನಾ ವಸ್ತುಗಳನ್ನೇ  ಕೊಳ್ಳುವುದನ್ನು ಮುಂದುವರೆಸಿದ್ದೇವೆ. ಚಪ್ಪಲಿಯಿಂದ ಹಿಡಿದು, ಧರಿಸುವ ಬಟ್ಟೆ, ಕೈ ಗಡಿಯಾರ, ಮೊಬೈಲ್‌, ಕಣ್ಣಿಗೆ ಹಾಕುವ ಕನ್ನಡದವರೆಗೆ ಎಲ್ಲಾ ನಮಗೆ ವಿದೇಶಿ ವಸ್ತುಗಳೇ ಬೇಕು. ನಾವು ತಿನ್ನಲು ವಿದೇಶಿ ಪಿಜ್ಜಾ, ಬರ್ಗರ್ ಬೇಕು, ಕುಡಿಯಲು ಕೋಕೋ ಕೋಲಾ ಬೇಕು. ಮನರಂಜನೆಗೆ ವಿ-ಚಾನಲ್‌, ಎಂ-ಚಾನಲ್‌ಗ‌ಳೇ ಬೇಕು, ಮೋಜು ಮಸ್ತಿಗೆ ಪಾಶ್ಚಾತ್ಯ Raap, ರಾಕ್‌ ಸಂಗೀತ ಬೇಕು, ರಾಜೀವ್‌ರಂತಹ ದೇಶಭಕ್ತರ ಸೊಲ್ಲೂ  ಎತ್ತದ ಮೆಕಾಲೆ ಸಿದ್ಧಾಂತಗಳ ಪ್ರಣೀತ ಶಿಕ್ಷಣವೇ ಬೇಕು, ಎಂಎನ್‌ಸಿಗಳಲ್ಲೇ ಉದ್ಯೋಗ ಬೇಕು, ಅವಕಾಶ ಸಿಕ್ಕಿದರೆ ಹೊರದೇಶಕ್ಕೆ ಹಾರಬೇಕು. ಇದು ಸಾಲದೆಂಬಂತೆ ನಮ್ಮ ಪರಂಪರೆಯನ್ನೇ ಜರಿಯುವ ಪರಕೀಯ ಪ್ರೇತಗಳನ್ನೂ ಕೆಲವರು ಆಹ್ವಾನಿಸಿಕೊಳ್ಳುತ್ತಾರೆ. ಇದು ನಮ್ಮ ಮನಸ್ಥಿತಿ. ಮೇಕ್‌ ಇನ್‌ ಇಂಡಿಯಾ, ನೋಟ್ಯಂತರ, ಜಿಎಸ್‌ಟಿ, ಚೀನಾ ಮೇಲೆ ವಹಿವಾಟು ನಿರ್ಬಂಧ ಹೇರುವ ಮೂಲಕ ಮೋದಿ ಸರ್ಕಾರ ರಾಜೀವ್‌ ದೀಕ್ಷಿತ್‌ ಅವರ ಹಲವು ಚಿಂತನೆಗಳನ್ನು ಅನುಷ್ಠಾನಕ್ಕೆ ತರುವ ಸಾರ್ಥಕ ಪ್ರಯತ್ನ ಮಾಡಿದೆ.

ತುರುವೇಕೆರೆ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next