Advertisement

ದುಂಬಿಯ ಬದುಕು ಎಲ್ಲರಿಗೂ ಮಾದರಿ

12:30 AM Mar 09, 2019 | |

ದುಂಬಿಯನ್ನು ನಾವು ಅಷ್ಟೊಂದು ಸೂಕ್ಷ್ಮವಾಗಿ ಪರಿಶೀಲಿಸುವುದೇ ಇಲ್ಲ. ನೋಡಿದರೂ ಅದರ ಚಂದವನ್ನು ನೋಡಿ ಆ ಕ್ಷಣ ಆನಂದಪಟ್ಟುಕೊಂಡು ಅಲ್ಲಿಗೆ ಸುಮ್ಮನಾಗುತ್ತೇವೆ. ಆದರೆ ಆ ದುಂಬಿ ಮಕರಂದವನ್ನು ಹೀರುವಲ್ಲಿನ ತಾಳ್ಮೆ, ಉತ್ಸಾಹ, ಹೂವಿಗೆ ನೋವಾಗದಂತೆ ಸಾರವನ್ನು ಸೆಳೆದುಕೊಳ್ಳುವ ಬಗೆ ಇದೆ… ಎಲ್ಲವನ್ನೂ ಸೂಕ್ಷ್ಮವಾಗಿ ನೋಡಿದಾಗ ನಿಜವಾಗಿಯೂ ನಮಗೆ ದುಂಬಿ ಬದುಕಿಗೆ ಮಾದರಿ ಎಂಬ ಸತ್ಯ ಗೊತ್ತಾಗುತ್ತದೆ.

Advertisement

ಶ್ರೀಮದ್ಭಾಗವತದಲ್ಲಿ ಹೇಳಿದ ಇಪ್ಪತ್ತನಾಲ್ಕು ಗುರುಗಳಲ್ಲಿ ಹನ್ನೊಂದನೆಯ ಗುರು ಪತಂಗ. ಇದನ್ನು ದೀಪದ ಹುಳು ಎಂತಲೂ ಕರೆಯಲಾಗುತ್ತದೆ. ಈ ದೀಪದ ಹುಳುವನ್ನು ಸೂಕ್ಷ್ಮವಾಗಿ ಗಮನಿಸಿ.  ಇದರಿಂದಲೂ ನಾವು ಕಲಿಯಬೇಕಾದ ಪಾಠವಿದೆ ಎನ್ನುತ್ತದೆ ಶ್ರೀಮದ್ಭಾಗವತ. ಬದುಕಿನ ಹಾದಿಯನ್ನು ಸರಳವಾಗಿ ಅರ್ಥೈಸುತ್ತಲೇ ಶ್ರೀಮದ್ಭಾಗವತದಲ್ಲಿ ಅನೇಕ ಸಂಗತಿಗಳು ಹೇಳಲ್ಪಟ್ಟಿವೆ ಮತ್ತು ಅವು ಮಾರ್ಗದರ್ಶಕವೂ ಆಗಿವೆ. ಬೇರೆಯವರ ತಪ್ಪುಗಳನ್ನು ನೋಡಿ ಮತ್ತೆ ಆ ತಪ್ಪುಗಳನ್ನು ಮಾಡದವನೇ ಜಾಣನಂತೆ.  ಇಲ್ಲಿ ಪತಂಗವು ಮಾಡುವ ತಪ್ಪುಗಳು ನಮ್ಮ ಜೀವನಕ್ಕೆ ಹೇಗೆ ಮಾದರಿಯಾಗುತ್ತವೆ ಗೊತ್ತೇ?

ಪತಂಗ ಅಥವಾ ದೀಪದ ಹುಳವು ಬೆಂಕಿಯಿಂದ ಆಕರ್ಷಿತವಾಗಿ ಬೆಂಕಿಯ ಸುತ್ತ ಹಾರುತ್ತ ಹಾರುತ್ತ ಬೆಂಕಿಯನ್ನು ಹಿಡಿಯಲು ಹೋಗಿ ಆ ಬೆಂಕಿಯಿಂದಲೇ ಸಾವನ್ನಪ್ಪುತ್ತದೆ. ಅಂತೆಯೇ, ಅಜಿತೇಂದ್ರಿಯ ವ್ಯಕ್ತಿಯು ದೇವ ಮಾಯಾರೂಪೀ ಸ್ತ್ರೀಯರನ್ನು ನೋಡಿ, ಅವಳ ಮೋಹದಲ್ಲಿ ಮೋಸಹೋಗಿ ಅಂಧಕಾರಮಯ ನರಕದಲ್ಲಿ ಬೀಳುತ್ತಾನೆ. ಅಜಿತೇಂದ್ರಿಯ ಎಂದರೆ, ಇಂದ್ರಿಯಗಳ ಗುಲಾಮ ಅಥವಾ ಇಂದ್ರಿಯಗಳನ್ನು ನಿಯಂತ್ರಿಸಲಾಗದವನು ಎಂದರ್ಥ. ಕಾಮಿನಿ, ಕಾಂಚನ, ಆಭೂಷಣ, ವಸ್ತ್ರ ಮೊದಲಾದವು ಮಯಾ ನಿರ್ಮಿತವಾಗಿವೆ. ಮೂಢಬುದ್ಧಿಯ ಮಾನವನು ಉಪಭೋಗ ಬುದ್ಧಿಯಿಂದ ಅವುಗಳಲ್ಲಿ ಆಸಕ್ತನಾಗಿ ತನ್ನ ವಿವೇಕವನ್ನು ಕಳೆದುಕೊಳ್ಳುತ್ತಾನೆ. ದೀಪದ ಹುಳುವಿನಂತೆ ಸ್ವತಃ ಅವುಗಳಲ್ಲಿ ಬಿದ್ದು ತನ್ನನಾಶವನ್ನು ಮಾಡಿಕೊಳ್ಳುತ್ತಾನೆ.

ಇದು ತುಂಬ ಸುಂದರವಾದ ಪಾಠ. ನಮ್ಮ ಮನಸ್ಸೂ ಕೂಡ ಪತಂಗದಂತೆ ಕುರುಡು ಮೋಹದಿಂದ ಬಂಧಿಸಲ್ಪಟ್ಟಿರುತ್ತದೆ. ಪತಂಗಕ್ಕೆ ಬೆಂಕಿಯ ಸೌಂದರ್ಯವಷ್ಟೇ ಗೊತ್ತು. ಆದರೆ ಅದು ಸುಟ್ಟುಬಿಡುತ್ತದೆಂಬುದು ಗೊತ್ತಿಲ್ಲ. ಇದು ಒಂದು ಬಗೆಯ ಮೋಹದಿಂದ ಉಂಟಾಗುವ ಕುರುಡುತನ. ನಾವೂ ಕೂಡ ಇಂಥದ್ದೇ ಮೋಹದಲ್ಲಿ ಗೊತ್ತಿದ್ದೂ ಗೊತ್ತಿದ್ದೂ ಸಿಲುಕಿ ಬಿಡುತ್ತೇವೆ. ಒಂದು ಕ್ಷಣದ ಮೋಹಕ್ಕೆ ಕುರುಡರಾಗಿ ಪತಂಗದಂತೆ ನರಕ ಯಾತನೆಗೆ ಸಿಲುಕಿಕೊಂಡರೆ ಜೀವನವು ದುಃಸ್ಥಿತಿಯನ್ನು ತಲುಪುತ್ತದೆ. ಇವೆಲ್ಲಕ್ಕೂ ಕಾರಣ ಇಂದ್ರಿಯಗಳೇ ಆಗಿವೆ. ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡವನು ಪತಂಗದಂತೆ ಬೆಂಕಿಗೆ ಆಹುತಿಯಾಗಲಾರ. ಆತನಿಗೆ ಇಂದ್ರಿಯಗಳು ಏನನ್ನು ಬಯಸುತ್ತಿವೆ ಮತ್ತು ಅವನ್ನು ಈಡೇರಿಸಲು ಮುಂದಾದರೆ ಭವಿಷ್ಯದಲ್ಲಿ ಏನಾಗಬಹುದು? ಎಂಬುದರ ಅರಿವಿರುತ್ತದೆ. ಹಾಗಾಗಿ ಇಂದ್ರಿಯಗಳನ್ನು ಗೆಲ್ಲುವುದು ಬಹುಮುಖ್ಯ.

ಪ್ರಪಂಚದಲ್ಲಿ ನಮ್ಮ ಇಂದ್ರಿಯಗಳನ್ನು ತುಂಬಾ ಸುಲಭವಾಗಿ ತಮ್ಮತ್ತ ಆಕರ್ಷಿಸುವ ಸಂಗತಿಗಳು ಬಹಳಷ್ಟಿವೆ. ಆದರೆ, ನಾವು ಅಂಥ ಆಕರ್ಷಣೆಗಳತ್ತ ಚಿತ್ತವಿರಿಸದೆ ಇ¨ªಾಗ ಸುಖವೆಂಬ ಭ್ರಮೆಯ ಬೆಂಕಿಯಲ್ಲಿ ಬಿದ್ದು ಮುಂದೆ ಪಶ್ಚಾತ್ತಾಪ ಪಡುವ ಪರಿಸ್ಥಿತಿ ನಿರ್ಮಾಣವಾಗಲಾರದು. ಹಾಗಾಗಿ, ಭೋಗಲಾಲಸೆಗಳಿಂದ ದೂರವಿರಬೇಕು. ಆಸೆಗಳಿಗೆ ಕಡಿವಾಣವಿರಬೇಕು. ಉಪಭೋಗವನ್ನು ಬಯಸುವ ಮನಸ್ಸಿಗೆ ಸರಿತಪ್ಪುಗಳನ್ನು ಪರಿಶೀಲಿಸುವ ವ್ಯವಧಾನವಾಗಲೀ, ವಿವೇಕವಾಗಲೀ ಇರುವುದಿಲ್ಲ. ಹಾಗಾಗಿ, ಪತಂಗದಂತೆ ಬಾಹ್ಯ ಅಂದವನ್ನಷ್ಟೇ ದುರ್ಬಲ ಮನಸ್ಸು ಗುರುತಿಸುತ್ತದೆ ಮತ್ತು ಅಜ್ಞಾನದಿಂದಾಗಿ ಸುಲಭವಾಗಿ ಮೋಹಕ್ಕೆ ಸಿಲುಕಿ, ಅಧರ್ಮದ ನಡೆಗೆ ಮುಂದಾಗುತ್ತದೆ. ಇದನ್ನು ಮೂಢಬುದ್ಧಿ ಎಂದು ಹೇಳಲಾಗಿದೆ. ನಮ್ಮ ಮನಸ್ಸು ಯಾವತ್ತಿಗೂ ಬೆಂಕಿಯ ಚಂದಕ್ಕೆ ಸೋತು ಸಾಯುವ ಪತಂಗದಂತೆ ಆಗಬಾರದು.

Advertisement

ದುಂಬಿಯಂತೆ ಚಲಿಸುತ್ತಲೇ ಇರಬೇಕು
ಮುನಿಯಾದವನು ಹೇಗೆ ಬದುಕಬೇಕು? ಎಂದು ಕಲಿಸಿಕೊಡುವ ಶ್ರೀಮಧಾºಗವತವು ಇದಕ್ಕೆ ಗುರುವಾಗಿ ಭ್ರಮರ ಅಥವಾ ದುಂಬಿ ಉದಾಹರಣೆಯನ್ನು ಹೇಳುತ್ತದೆ. ದುಂಬಿಯೊಂದು ಹೂವಿಂದ ಹೂವಿಗೆ ಹಾರುತ್ತ ಪರಾಗವನ್ನು ಗ್ರಹಿಸುವಂತೆ ಮುನಿಯಾದವನು ಮನೆಮನೆಯನ್ನು ಸುತ್ತಿ, ಅನೇಕ ಮನೆಗಳಿಂದ ಸ್ವಲ್ಪ ಸ್ವಲ್ಪವೇ ಅನ್ನವನ್ನು ಬೇಡಿ ಉಣ್ಣಬೇಕು. ಅದರಿಂದ ಶರೀರ ನಿರ್ವಾಹವೂ ನಡೆದು, ಯಾರಿಗೂ ಕೊಡಲು ಕಷ್ಟವಾಗುವುದಿಲ್ಲ. ಈ ಪ್ರಕಾರ ಮಧುಕರೀ ವೃತ್ತಿಯನ್ನು ಆಶ್ರಯಿಸಬೇಕು ಎಂದು ಶ್ರೀಮದ್ಭಾಗವತದಲ್ಲಿ ಹೇಳಲ್ಪಟ್ಟಿದೆ. ಇದು ಮುನಿಗಳಿಗೆ ಅನ್ವಯಿಸುವಂತೆ ಹೇಳಲ್ಪಟ್ಟಿದ್ದರೂ, ಎಲ್ಲ ಮನುಕುಲಕ್ಕೆ ಆದರ್ಶಪ್ರಾಯವಾದ ಸಂಗತಿಯೇ ಆಗಿದೆ. ದುಂಬಿ ಪರಾಗವನ್ನು ಗ್ರಹಿಸುವಂತೆ ನಾವು ನಮ್ಮ ಆಹಾರವನ್ನು ಸೇವಿಸಬೇಕು’ ಎಂದರ್ಥ ಬದು, ಈ ಮಾತಿನ ಅರ್ಥ. 

ಇದರ ಒಳಾರ್ಥ ಗಾಢವಾದುದು. ನಾವು ದುಂಬಿಯಂತೆ ಚಲಿಸುತ್ತಲೇ ಇರಬೇಕು. ಪ್ರಪಂಚದ ಎÇÉಾ ಮೂಲೆಯನ್ನೂ ಸುತ್ತಬೇಕು. ಎÇÉಾ ಕಡೆಗಳಿಂದಲೂ ಬೇಕಾದುದನ್ನು ಮಾತ್ರ ಹುಡುಕಿ ಗ್ರಹಿಸಬೇಕು ಮತ್ತು ಸ್ವೀಕರಿಸಬೇಕು. ಜೀವನ ಎಂಬುದೇ ಒಂದು ಚಲನೆ. ಈ ಚಲನೆಯಲ್ಲಿ ಮನುಷ್ಯ ಪರಾವಲಂಬಿ. ಹಾಗಾಗಿ, ಆತನು ದೀನನಾಗಿರಬೇಕು ಮತ್ತು ಎಲ್ಲರಲ್ಲಿಯೂ ಒಂದಾಗಿರಬೇಕು. ಬದುಕು ಯಾವತ್ತೂ ಚಲನೆಯಲ್ಲಿರಬೇಕು, ಉತ್ಸಾಹದಿಂದ ಇರಬೇಕು, ಸಣ್ಣಸಣ್ಣ ಸಂಗತಿಗಳÇÉೇ ಸುಖವನ್ನು ಕಾಣಬೇಕು, ಆಹಾರವು ಹಸಿವನ್ನು ನೀಗಿಸಿ, ದೇಹಕ್ಕೆ ಶಕ್ತಿಯನ್ನು ನೀಡಬೇಕೇ ಹೊರತು ಆ ಆಹಾರವೇ ಜಡಣ್ತೀವನ್ನು ತರುವಂತಿರಬಾರದು. ಹೀಗೆ ಹಲವಾರು ಗೂಡಾರ್ಥಗಳು ಈ ದುಂಬಿಯ ದೃಷ್ಟಾಂತದಲ್ಲಿ ಅಡಕವಾಗಿವೆ.

ದುಂಬಿಯು ಹೇಗೆ ಹೂವನ್ನು ಹುಡುಕಿಕೊಂಡು ಹೋಗಿ, ಆ ಹೂವುಗಳಿಂದ ಸಾರ-ರಸವನ್ನು ಗ್ರಹಿಸುವುದೋ ಅಂತೆಯೇ ಮನುಷ್ಯನು ಎಲ್ಲ ಹಿರಿಯ-ಕಿರಿಯ ಶಾಸ್ತ್ರಗಳಿಂದ ಸಾರವಾದ ಮಾತನ್ನು ತೆಗೆದುಕೊಳ್ಳಬೇಕು ಎನ್ನುತ್ತದೆ ಶ್ರೀàಮದ್ಭಾಗವತ. ಜೀವನವೇ ಒಂದು ಕಲಿಕೆಯಾಗಿದ್ದರೂ ಜೀವನಕ್ಕೂ ಒಂದು ಕಲಿಕೆ ಇರಲೇಬೇಕು. ಆಗ ಮಾತ್ರ ಅದು ಸನ್ಮಾರ್ಗದ ಹಾದಿಯಲ್ಲಿ ಸಾಗುತ್ತದೆ. ಅಂತಹ ಸುಗಮವಾದ ಜೀವನಕ್ಕೆ ನಾವು ಕೇಳುವ, ಓದುವ, ನೋಡುವ ಶಾಸ್ತ್ರಗಳಲ್ಲಿ ಸೂತ್ರಗಳು ಅಡಕವಾಗಿವೆ. ಅಂತಹ ಸೂತ್ರಗಳನ್ನು ಸರಳವಾಗಿ ಗ್ರಹಿಸಿಕೊಂಡು ರೂಢಿಸಿಕೊಳ್ಳಬೇಕು. ಇದೂ ಒಂದು ಬಗೆಯ ಜೀವನ ಕೌಶಲ. ಜಗತ್ತಿನಲ್ಲಿ ಹಿರಿಯರಿಂದಲೂ ಕಿರಿಯರಿಂದಲೂ, ಕಲಿಯಬೇಕಾದವುಗಳು ಸಾಕಷ್ಟಿವೆ. ಅವುಗಳಲ್ಲಿ ನಮಗೆ ಅಗತ್ಯವಾದುದನ್ನು ಕುಶಲಮತಿಯಿಂದ ತಿಳಿದುಕೊಂಡು, ಯಾವುದೇ ವಾದ-ವಿವಾದಕ್ಕೆ ಹೋಗದೆ ದೂರವೇ ಉಳಿಯಬೇಕು ಎನ್ನಲಾಗಿದೆ.

ದುಂಬಿಯನ್ನು ನಾವು ಅಷ್ಟೊಂದು ಸೂಕ್ಷ್ಮವಾಗಿ ಪರಿಶೀಲಿಸುವುದೇ ಇಲ್ಲ. ನೋಡಿದರೂ ಅದರ ಚಂದವನ್ನು ನೋಡಿ ಆ ಕ್ಷಣ ಆನಂದಪಟ್ಟುಕೊಂಡು ಅಲ್ಲಿಗೆ ಸುಮ್ಮನಾಗುತ್ತೇವೆ. ಆದರೆ ಆ ದುಂಬಿ ಮಕರಂದವನ್ನು ಹೀರುವಲ್ಲಿನ ತಾಳ್ಮೆ, ಉತ್ಸಾಹ, ಹೂವಿಗೆ ನೋವಾಗದಂತೆ ಸಾರವನ್ನು ಸೆಳೆದುಕೊಳ್ಳುವ ಬಗೆ ಎಲ್ಲವನ್ನೂ ಸೂಕ್ಷ್ಮವಾಗಿ ನೋಡಿದಾಗ ನಿಜವಾಗಿಯೂ ನಮಗೆ ದುಂಬಿ ಬದುಕಿಗೆ ಮಾದರಿ ಎಂಬ ಸತ್ಯ ಗೊತ್ತಾಗುತ್ತದೆ. ನಾವು ಕೂಡ ಈ ಸಮಾಜದಲ್ಲಿ ಸುವಿಚಾರಗಳನ್ನು ಸ್ವೀಕರಿಸುವ, ಪರರಿಗೆ ನೋವಾಗದಂತೆ ನಡೆದುಕೊಳ್ಳುವ, ಜೀವನೋತ್ಸಾಹವನ್ನು ಕಳೆದುಕೊಳ್ಳದೇ ಯಾವಾಗಳೂ ಹುಮ್ಮಸ್ಸಿನಿಂದ ಇರಲು ಈ ದುಂಬಿಯ ಬದುಕು ಮಾದರಿ!

..ಮುಂದುವರಿಯುವುದು.

ವಿಷ್ಣು ಭಟ್‌ ಹೊಸಮನೆ

Advertisement

Udayavani is now on Telegram. Click here to join our channel and stay updated with the latest news.

Next