Advertisement

ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಜೀವನ ಮುಡಿಪು

08:15 AM Feb 28, 2018 | Team Udayavani |

ದಾವಣಗೆರೆ: ತಮ್ಮ ಮುಂದಿನ ಜೀವನ ಅನ್ನದಾತರ ಕಲ್ಯಾಣ, ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಮುಡಿಪು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಘೋಷಿಸಿದ್ದಾರೆ. ನಗರದ ಸರ್ಕಾರಿ ಹೈಸ್ಕೂಲ್‌ ಮೈದಾನದಲ್ಲಿ ತಮ್ಮ 75ನೇ 
ಜನ್ಮದಿನದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಅನ್ನದಾತರ ಬೃಹತ್‌ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ನೇಗಿಲು ಹಾಗೂ “ರೈತ ಬಂಧು ನಾಯಕ’ ಬಿರುದು ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕದ ಜನ ನನಗೆ ನಾಯಕತ್ವ, ಅಧಿಕಾರ ಎಲ್ಲವನ್ನೂ ಕೊಟ್ಟಿದ್ದಾರೆ. ನನ್ನ ಮುಂದಿನ ಜೀವನವನ್ನು ರಾಜ್ಯದ 6.5 ಕೋಟಿ ಜನರ ಕಲ್ಯಾಣಕ್ಕೆ ಹಾಗೂ ರೈತರ ಕಣ್ಣೀರು ಒರೆಸಿ, ನೆಮ್ಮದಿಯ ಜೀವನ ನೀಡುವುದಕ್ಕಾಗಿ ಮೀಸಲಿಡುವೆ ಎಂದರು.

Advertisement

ಕಳೆದ 5 ವರ್ಷದಲ್ಲಿ ರಾಜ್ಯದಲ್ಲಿ 3,751 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ದೌರ್ಜನ್ಯ ಹೆಚ್ಚುತ್ತಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಸಿದ್ದರಾಮಯ್ಯ ಸರ್ಕಾರ ರೈತರ ಬಗ್ಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಟ್ಟಿಗೆ ಕರ್ನಾಟಕದ ಜನರ ಆಶೀರ್ವಾದದಿಂದ ಮುಂದಿನ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬಂದು ಸ್ವತ್ಛ, ಪ್ರಾಮಾಣಿಕ, ದಕ್ಷ ಆಡಳಿತ ನೀಡುವುದೇ ತಮ್ಮ ಗುರಿ
ಎಂದು ಭರವಸೆ ನೀಡಿದರು. ರೈತರು ಸರಣಿ ಆತ್ಮಹತ್ಯೆಗೆ ಒಳಗಾಗಿದ್ದು ಸಾಕಷ್ಟು ನೋವಿನ ವಿಚಾರ. ತಾವು ಅಧಿಕಾರಕ್ಕೆ ಬಂದಲ್ಲಿ ರೈತರು ಯಾವ ಕಾರಣಕ್ಕೂ ಆತ್ಮಹತ್ಯೆ ಹಾದಿ ತುಳಿಯದಂತಹ ವಾತಾವರಣ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ರೈತಾಪಿ ವರ್ಗದ ಅನುಕೂಲಕ್ಕೆ ಸಾಕಷ್ಟು ವಿಶೇಷ ಯೋಜನೆ, ಕಾರ್ಯಕ್ರಮ ಜಾರಿಗೆ ತಂದಿದೆ. ಪ್ರಧಾನಿಯವರು ರೈತಾಪಿ ವರ್ಗದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ರೈತರು ಖರ್ಚು ಮಾಡಿದ ಒಂದೂವರೆ ಪಟ್ಟು ಪರಿಹಾರ, ಶೈತ್ಯಾಗಾರ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಮೋದಿಯವರ ರೈತರ ಪರ ಕಾಳಜಿ ಅಪಾರ ಎಂದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಕಬ್ಬಿನ ಬಾಕಿ ಹಣ ಪಾವತಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ. ಸದಾನಂದಗೌಡ, ರಮೇಶ್‌ ಜಿಗಜಿಣಗಿ, ಪ್ರತಿಪಕ್ಷ ನಾಯಕರಾದ ಜಗದೀಶ ಶೆಟ್ಟರ್‌, ಕೆ.ಎಸ್‌. ಈಶ್ವರಪ್ಪ, ಸಂಸದರಾದ ಜಿ.ಎಂ. ಸಿದ್ದೇಶ್ವರ್‌, ಬಿ. ಶ್ರೀರಾಮುಲು, ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಷಿ, ರಾಜ್ಯ ಉಸ್ತುವಾರಿ ಮುರುಳೀಧರರಾವ್‌, ಶಾಸಕರಾದ ಅರವಿಂದ ಲಿಂಬಾವಳಿ, ಸಿ.ಟಿ. ರವಿ, ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಜಿ. ಕರುಣಾಕರೆಡ್ಡಿ, ಎಸ್‌.ಎ. ರವೀಂದ್ರನಾಥ್‌, ಗೋವಿಂದ ಕಾರಜೋಳ, ಸಿ.ಎಂ. 
ಉದಾಸಿ ಇತರರಿದ್ದರು. 

Advertisement

ಕನ್ನಡದಲ್ಲಿ ಮೋಡಿ 
ದಾವಣಗೆರೆ: ಬಿ.ಎಸ್‌. ಯಡಿಯೂರಪ್ಪನವರ 75ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಅನ್ನದಾತರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಕನ್ನಡ ಮಾತನಾಡುವ ಮೂಲಕ ಮೋಡಿ ಮಾಡಿದರು.

“ಸಮರೋಪಾದಿಯಲ್ಲಿ ಸೇರಿರುವ ಕರ್ನಾಟಕದ ಅನ್ನದಾತ ಮಹಾಜನರೇ ನಿಮಗೆ ನನ್ನ ನಮಸ್ಕಾರ. ಸಂತ ಬಸವೇಶ್ವರ, ಕನಕದಾಸರು, ಮಾದಾರ ಚನ್ನಯ್ಯನವರಿಗೆ ಪ್ರಣಾಮಗಳು. ಒನಕೆ ಓಬವ್ವ, ಮದಕರಿ ನಾಯಕ, ರೈತ ನಾಯಕ ಶಾಂತವೇರಿ ಗೋಪಾಲಗೌಡ ಮುಂತಾದ ನಾಯಕರ ಕುಟುಂಬದವರಿಗೆ ನನ್ನ ನಮಸ್ಕಾರಗಳು..’ ಎಂದು ಕನ್ನಡದಲ್ಲೇ ಮೋದಿ ಭಾಷಣ ಪ್ರಾರಂಭಿಸುತ್ತಿದ್ದಂತೆ ಜನರ ಹರ್ಷೋದ್ಘಾರಗೈದರು. ಭಾಷಣದ ಕೊನೆಯಲ್ಲೂ ಈ ಬಾರಿ ಬಿಜೆಪಿ ಸರ್ಕಾರ ಎಂದ ಮೋದಿ ಬನ್ನಿ ಬಿಜೆಪಿ ಗೆಲ್ಲಿಸಿ… ಎಂದು ಘೋಷಣೆ ಮೊಳಗಿಸಿದರು. ಮೋದಿ ಬನ್ನಿ, ಬನ್ನಿ ಎಂದಾಗ ಜನರು ಬಿಜೆಪಿ ಗೆಲ್ಲಿಸಿ ಎಂದು ಸಾಥ್‌ ನೀಡಿದರು.
ಸಮಸ್ತ ಕನ್ನಡಿಗರಿಗೆ ಅನಂತ.. ಅನಂತ.. ನಮಸ್ಕಾರಗಳು.. ಎಂದು ಭಾಷಣ ಮುಗಿಸಿದರು.

ಮಹದಾಯಿ ಪ್ರಸ್ತಾಪಿಸಲಿಲ್ಲ
ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಮಹದಾಯಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಮಾವೇಶದಲ್ಲಿ
ಯಡಿಯೂರಪ್ಪ ಹೇಳಿದರೂ ಪ್ರಧಾನಿ ಮೋದಿ ಮಹದಾಯಿ ಬಗ್ಗೆ ಅಪ್ಪಿತಪ್ಪಿಯೂ ಪ್ರಸ್ತಾಪ ಮಾಡಲೇ ಇಲ್ಲ. ಸಾಲ ಮನ್ನಾದ ಬಗ್ಗೆ ಚಕಾರವೂ ಎತ್ತಲಿಲ್ಲ. ಸಮಾವೇಶದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ  ಜಿಎಂಐಟಿ ಹೆಲಿಪ್ಯಾಡ್‌ನಿಂದ ಸರ್ಕಾರಿ  ಸ್ಕೂಲ್‌ ಮೈದಾನಕ್ಕೆ ಬರುವ ದಾರಿ ಮಧ್ಯದಲ್ಲಿ ಪೂಜಾ ಇಂಟರ್‌ ನ್ಯಾಷನಲ್‌ ಹೋಟೆಲ್‌ ಬಳಿ ಒಬ್ಬರು ಮಹದಾಯಿ ಸಂಬಂಧ ಕರಪತ್ರ
ಎಸೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನ
ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿ ಮಹದಾಯಿ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನೀರಾವರಿಗೆ 1 ಲಕ್ಷ ಕೋಟಿ ಮೀಸಲಿರಿಸಿ, ರಾಜ್ಯದ ಎಲ್ಲ ಕೆರೆ ಭರ್ತಿಗೊಳಿಸಿ, ರೈತಾಪಿ ವರ್ಗಕ್ಕೆ ಎಲ್ಲ ಬಗೆಯ ಅನುಕೂಲ ಮಾಡಿಕೊಡಲಾಗುವುದು ಎಂದು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next