Advertisement

UV Fusion: ಅನುಕ್ತ ಭಾವನೆಗಳಿಗೆ ಸ್ಪಂದಿಸುವುದೇ ಜೀವನ

02:30 PM Sep 07, 2024 | Team Udayavani |

ಮನುಷ್ಯಜೀವಿ ಅನಾದಿ ಕಾಲದಿಂದಲೂ ಸ್ನೇಹಜೀವಿ. ಹುಟ್ಟಿದಾಗಿಂದ ಮೋಕ್ಷದ ತನಕ ಕೂಡ ಹಲವಾರು ತರಹದ ಸ್ನೇಹ ಸಂಬಂಧಗಳ ಬೆಸುಗೆಯಲ್ಲಿ ಆತ ಜೋಡಣೆಯಾಗಿ ಬದುಕಿರುತ್ತಾನೆ. ಜತೆ ಜತೆಗೆ ತನಗರಿವಿಲ್ಲದಂತೆಯೇ ಹಲವಾರು ಭಾವನಾತ್ಮಕ ಸಂಕೋಲೆಗಳಲ್ಲಿ ಬಂಧಿಯಾಗಿರುತ್ತಾನೆ. ಪುರಾತನ ಭಾರತೀಯ ಸಂಪ್ರದಾಯದಲ್ಲಿ ಅವಿಭಕ್ತ ಕುಂಟುಂಬವು ಒಂದು ಮಮತೆಯ ಶಕ್ತಿಯಾಗಿತ್ತು ಮತ್ತು ವಿವಿಧ ಭಾವನೆಗಳಿಗೆ ವಿವಿಧ ರೀತಿಯಲ್ಲಿ ಸ್ಪಂದಿಸಿ ಪರಿಹಾರ ನೀಡುತ್ತಿತ್ತು.

Advertisement

ಹಿರಿಯ ಜೀವಿಗಳ ಜೀವನ ಮೌಲ್ಯದ ಮಾರ್ಗದರ್ಶನಗಳು, ತಂದೆಯವರಿಂದ ಕಲಿಯುತ್ತಿದ್ದ ವ್ಯಾಪಾರ ವಹಿವಾಟುಗಳ ಉಪಯುಕ್ತ ಮಾಹಿತಿಗಳು, ತಾಯಿಯಿಂದ ಕಲಿಯುತ್ತಿದ್ದ ಕರುಣೆ, ಪ್ರೀತಿ, ವಾತ್ಸಲ್ಯ ಮತ್ತು ಸಹೋದರ ಸಹೋದರಿಯರಿಂದ ಪಡೆಯುತ್ತಿದ್ದ ಸ್ನೇಹ ಸಹಕಾರ ಇವೆಲ್ಲದರ ಸಮಾನ ಪ್ರಮಾಣದ ಹೂರಣದಲ್ಲಿ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಬಹಳ ಅರ್ಥಪೂರ್ಣವಾಗಿ ವಿಕಸಿತಗೊಳಿಸಿಕೊಳ್ಳುತಿದ್ದ.

ಆದರೆ ಕಾಲ ಬದಲಾದಂತೆ ಆಧುನಿಕ ಯುಗದಲ್ಲಿ ಅವಿಭಕ್ತ ಕುಟುಂಬಗಳ ವೈಶಿಷ್ಟತೆಯ ವೈಭವ ನಶಿಸಿಹೋಗಿ ವಿಭಕ್ತ ಕುಟುಂಬವಾಗಿ ಮನುಷ್ಯ ಒಬ್ಬಂಟಿಯಾಗಿ ಭಾವನೆಗಳೇ ಸಿಗದೇ ನಿರ್ಗತಿಕನಾಗಿ ಬಿಟ್ಟಿದ್ದಾನೆ. ನಗರೀಕರಣದ ವ್ಯಾಮೋಹಕ್ಕೆ ಜೋತು ಬಿದ್ದು ಯಾಂತ್ರಿಕ ಬದುಕಿಗೆ ಬಲಿಯಾಗುತ್ತಿದ್ದಾನೆ. ತಂತ್ರಜ್ಞಾನದಲ್ಲೇ ಮುಳುಗಿ ಎದ್ದು ತನ್ನವರ ನಿರಂತರ ಹುಡುಕಾಟದಲ್ಲಿ ಹಲವಾರು ಬಾರಿ ಭಾವನಾತ್ಮಕವಾಗಿ ನೋವನ್ನು ಅನುಭವಿಸುತ್ತಿರುತ್ತಾನೆ.

ಹೇಗೆ ಚಿಕ್ಕ ಚಿಕ್ಕ ವಿಷಯಗಳು ಅದರಲ್ಲಿ ಬರುವ ವ್ಯಕ್ತಿಗಳು ಖುಷಿ ಕೊಡುತ್ತಾರೋ ಹಾಗೆಯೇ ನೋವನ್ನು ಕೂಡ ಕೆಲವೊಂದು ವಿಷಯಗಳು ವ್ಯಕ್ತಿಗಳು ಕೊಟ್ಟು ಹೋಗಿರುತ್ತಾರೆ. ಇಂತಹ ಸಂಧರ್ಭದಲ್ಲಿ ಮನುಷ್ಯ ಹಲವಾರು ದಾರಿಗಳಲ್ಲಿ ಸುಪ್ತ ಭಾವನೆಗಳನ್ನು ಹುಡುಕುವ ಪ್ರಯತ್ನ ಮಾಡುತ್ತಾನೆ. ಹಲವಾರು ಬಾರಿ ಸೋತರೂ ಕೊನೆಗೆ ಆತನ ಭಾವನೆಗಳಿಗೆ ಸ್ಪಂದಿಸುವ ಕೆಲವೊಂದು ಜೀವಗಳು ದೊರಕುತ್ತದೆ.ಅಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ.

ಭಾವನೆಗಳಿಗೆ ಸ್ಪಂದಿಸಿ ಪರಿಹಾರ ನೀಡುತ್ತಾರೆ. ಭಾವನಾತ್ಮಕವಾಗಿ ನೊಂದು ಬೆಂದ ವ್ಯಕ್ತಿ ಈ ನಿಷ್ಕಲ್ಮಶ ವ್ಯಕ್ತಿತ್ವದಲ್ಲಿ ಬೆರೆತು ವಿಕಸಿತಗೊಳ್ಳುತ್ತಾನೆ. ಇಂತಹ ಅನುಕ್ತ ಭಾವನೆಗಳಿಗೆ ಸ್ಪಂದಿಸುವ ಮನಸ್ಸುಗಳು ಇವಾಗಲೂ ನಮ್ಮೊಂದಿಗೆ ಇವೆ ಆದರೆ ನಾವು ಸರಿಯಾಗಿ ಹುಡುಕಬೇಕಷ್ಟೆ. ಈ ಹಲವಾರು ರೀತಿಯ ಅನುಕ್ತ ಭಾವನೆಗಳ ಸಮ್ಮಿಶ್ರಣದ ಬಣ್ಣದಾಯಕ ಬದುಕು ನಮ್ಮದಾಗಲಿ.  ಪ್ರಸಾದ್‌ ಆಚಾರ್ಯ ಕುಂದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next