Advertisement

ಮೋದಿಗೆ ಪತ್ರ ಬರೆದಿದ್ದ ಆಯೋಗ

10:26 AM Mar 20, 2017 | Team Udayavani |

ಹೊಸದಿಲ್ಲಿ: ಮತ ದೃಢೀಕರಣ ಯಂತ್ರಗಳ (ವಿವಿಪ್ಯಾಟ್‌) ಖರೀದಿಗೆ ಹಣ ಬಿಡುಗಡೆ ಮಾಡಿ ಎಂದು ಕೋರಿ ಪ್ರಧಾನಿ ಮೋದಿ ಅವರಿಗೆ 4 ತಿಂಗಳ ಹಿಂದೆಯೇ ಚುನಾವಣಾ ಆಯೋಗವು ಪತ್ರ ಬರೆದಿತ್ತು ಎಂಬ ಅಂಶ ಬಹಿರಂಗವಾಗಿದೆ. ಪಂಚರಾಜ್ಯಗಳ ಚುನಾವಣೆ ವೇಳೆ ವಿದ್ಯುನ್ಮಾನ ಮತಯಂತ್ರಗಳನ್ನು ತಿರುಚಲಾಗಿದೆ ಎಂದು ಬಿಎಸ್ಪಿ, ಆಪ್‌ ಮತ್ತಿತರ ಪಕ್ಷಗಳು ಆರೋಪಿಸಿರುವ ಬೆನ್ನಲ್ಲೇ ಈ ವಿಚಾರ ಹೊರಬಂದಿದೆ. 2019ರ ಲೋಕಸಭೆ ಚುನಾವಣೆ ವೇಳೆ ಎಲ್ಲ ಮತಗಟ್ಟೆಗಳಲ್ಲೂ ಮತ ದೃಢೀಕರಣ ಯಂತ್ರ ಇರಬೇಕು. ಹಾಗಾಗಿ, 16 ಲಕ್ಷ ಯಂತ್ರಗಳ ಖರೀದಿಗೆ 3,100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸಿ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್‌ ಜೈದಿ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. 2014ರ ಜೂನ್‌ನಿಂದ ಈವರೆಗೆ ಈ ಕುರಿತು 10 ಬಾರಿ ಸರಕಾರವನ್ನು ಜ್ಞಾಪಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಪ್ರಧಾನಿಗೇ ನೇರ ಪತ್ರ ಬರೆದಿದ್ದರು.

Advertisement

ಮತ ಹಾಕಿದ ಕೂಡಲೇ ಪಕ್ಕದಲ್ಲೇ ಇರುವ ವಿವಿಪ್ಯಾಟ್‌ ಯಂತ್ರದಲ್ಲಿ ನೀವು ಯಾರಿಗೆ ಮತ ಹಾಕಿದ್ದೀರಿ ಎಂಬ ಮುದ್ರಿತ ಪ್ರತಿ ಹೊರಬರುತ್ತದೆ. ಇದು ನಿಮ್ಮ ಮತವನ್ನು ದೃಢೀಕರಿಸುತ್ತದೆ. ಮತದಾನದ ವೇಳೆ ಅಕ್ರಮ ನಡೆಯಬಾರದೆಂಬ ಉದ್ದೇಶದಿಂದ ಈ ಯಂತ್ರವನ್ನು ಎಲ್ಲ ಮತಗಟ್ಟೆಗಳಲ್ಲೂ ಹಂತ ಹಂತವಾಗಿ ಅಳವಡಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಆದರೆ, ಯಂತ್ರಗಳ ಪೂರೈಕೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ 2019ರ ಚುನಾವಣೆಗೆ ಇದರ ಸಂಪೂರ್ಣ ಬಳಕೆಯ ಗುರಿ ಮುಟ್ಟಲಾಗದೇ ನ್ಯಾಯಾಂಗ ನಿಂದನೆ ಎದುರಿಸಬೇಕಾದೀತು ಎಂಬ ಭೀತಿಯನ್ನು ಜೈದಿ ಅವರು ಪತ್ರದಲ್ಲಿ ತೋಡಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next