Advertisement

ಮನುಷ್ಯ ಸಾಗಿ ಬಂದ ಹಾದಿ ಮರೆಯಬಾರದು

09:56 AM Mar 10, 2020 | Lakshmi GovindaRaj |

ಬೆಂಗಳೂರು: ಮನುಷ್ಯ ಎಷ್ಟೇ ಪ್ರಗತಿ ಸಾಧಿಸಿದರೂ ತಾನು ನಡೆದು ಬಂದ ಹಾದಿಯನ್ನು ಮರೆಯಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್‌ ಭಾಗವತ್‌ ಸಲಹೆ ನೀಡಿದ್ದಾರೆ.

Advertisement

ಬೆಂಗಳೂರು ಹೊರವಲಯದ ಜನಸೇವಾ ವಿದ್ಯಾಕೇಂದ್ರದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘವು ಇಷ್ಟೆಲ್ಲ ಬೆಳೆದು, ಕೆಲವೊಂದು ಬದಲಾವಣೆಗಳಾಗಿದ್ದರೂ, ಸ್ವಯಂಸೇವಕರ ಕೆಲಸ ಕೊಂಚವೂ ಬದಲಾಗಿಲ್ಲ. ಸ್ವಯಂಸೇವಕರು ಇಂದಿಗೂ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರಾಣಿ, ಪಕ್ಷಿಗಳು ನೈಸರ್ಗಿಕವಾಗಿ ಲಭ್ಯವಿರುವುದರಲ್ಲೇ ಜೀವನ ಸಾಗಿಸುತ್ತವೆ. ಆದರೆ, ಮನುಷ್ಯ ಹಾಗಲ್ಲ, ನೈಸರ್ಗಿಕವಾಗಿ ಸಿಗುವ ವಸ್ತುಗಳ ಜತೆಗೆ ಇನ್ನೂ ಹೆಚ್ಚೆಚ್ಚು ಬೇಕು ಎನ್ನುವ ಪ್ರವೃತ್ತಿ ಹೊಂದಿರುತ್ತಾನೆಂದು ವಿಷಾದಿಸಿದರು.

ಜಗತ್ತಿನಲ್ಲಿ ನಾವು ಮುಂದೆ ಸಾಗಬೇಕಾದರೆ ಸಾಧನೆ ಇರಬೇಕು. ಲೋಕಕಲ್ಯಾಣಕ್ಕಾಗಿ ನಮ್ಮಲ್ಲಿ ಸುವಿಧ ಬೇಕು. ಸಾಧನೆ ಮತ್ತು ಸುವಿಧ ಇದ್ದರೆ ಜಗತ್ತು ಚೆನ್ನಾಗಿರುತ್ತದೆ. ಹೀಗಾಗಿ, ಶಿಕ್ಷಣವು ಸಂಸ್ಕಾರದ ಭಾಗವಾಗಿರಬೇಕು ಮತ್ತು ನಮ್ಮ ಕಾರ್ಯಪರತೆಯು ಉತ್ಕೃಷ್ಟವಾಗಿದ್ದಾಗ ಫ‌ಲ ಲಭಿಸುತ್ತದೆ. ಅದರಿಂದ ಸದಾ ಸಂತೋಷವೂ ಸಿಗುತ್ತದೆ ಎಂದು ಹೇಳಿದರು.

ಶಾಲೆಗಳ ಅವಶ್ಯಕತೆ ಹೆಚ್ಚು: ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದ ಮಧುಸೂಧನ್‌ ಸಾಯಿ ಜೀ ಮಾತನಾಡಿ, ಸಮಾಜದಲ್ಲಿ ದೇವಾಲಯಕ್ಕಿಂತಲೂ ಶಾಲೆಗಳ ಅವಶ್ಯಕತೆ ಹೆಚ್ಚಿದೆ. ಶಾಲೆಯಲ್ಲಿ ಮನುಷ್ಯರನ್ನು ದೇವರನ್ನಾಗಿ ಪರಿವರ್ತಿಸುವ ಶಕ್ತಿ ಇದೆ. ನಮ್ಮ ದೇಶದಲ್ಲಿ ಆಧ್ಯಾತ್ಮಿಕ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಸೇವೆ ಭಾರತೀಯ ಸಂಸ್ಕೃತಿಯ ಸಾರ ಮತ್ತು ಆಧಾರ. ಇದನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ಜೋಡಿಸ ಬೇಕು ಎಂದು ಹೇಳಿದರು.

Advertisement

ದೇವಸ್ಥಾನ, ಪ್ರಾರ್ಥನಾ ಮಂದರಿಗಳು ಇಲ್ಲದಿದ್ದರೂ ಸಮಾಜ ನಡೆಯುತ್ತದೆ. ಆದರೆ, ಶಿಕ್ಷಣ ಹಾಗೂ ಆರೋಗ್ಯ ಕೇಂದ್ರ ಇರಬೇಕು. ಪ್ರತಿ ಗ್ರಾಮದಲ್ಲೂ ಆಧ್ಯಾತ್ಮಿಕ ಶಿಕ್ಷಣ ನೀಡುವ ಸಂಸ್ಥೆ ಬೆಳೆಯಬೇಕು ಎಂದರು. ಜನಸೇವಾ ವಿದ್ಯಾಕೇಂದ್ರದ ಅಧ್ಯಕ್ಷ ಕೆ.ಜಿ.ಸುಬ್ಬರಾಮ ಶೆಟ್ಟಿ, ಉಪಾಧ್ಯಕ್ಷ ಬಿ.ಎ. ಶ್ರೀನಿವಾಸ ಗುಪ್ತ, ಜನಸೇವಾ ವಿಶ್ವಸ್ಥ ಮಂಡಳಿ ನಿರ್ವಾಹಕ ವಿಶ್ವಸ್ಥ ವೈ.ಕೆ.ರಾಘವೇಂದ್ರ ರಾವ್‌ ವೇದಿಕೆಯ ಮೇಲಿದ್ದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಚಿವರಾದ ಆರ್‌.ಅಶೋಕ್‌, ವಿ.ಸೋಮಣ್ಣ, ಬೈರತಿ ಬಸವರಾಜ, ಎಸ್‌.ಟಿ.ಸೋಮಶೇಖರ್‌, ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ, ಆರೆಸ್ಸೆಸ್‌ ಪ್ರಮುಖ ರಾದ ಕಲಡ್ಕ ಪ್ರಭಾಕರ್‌ ಭಟ್‌ ಮತ್ತು ಮುಕುಂದ್‌ ಮೊದಲಾದವವರು ಕಾರ್ಯಕ್ರಮದಲ್ಲಿದ್ದರು.

ಕಥೆಯೊಂದಿಗೆ ವಿವರಣೆ: ರಾಜ್ಯವೊಂದರಲ್ಲಿ ರಾಜನಿಗೆ ಪ್ರಿಯವಾದ ಮಂತ್ರಿ ಇದ್ದ. ಆ ಮಂತ್ರಿ ಪ್ರತಿದಿನ ರಾತ್ರಿ ಅರಣ್ಯಕ್ಕೆ ನಿಗೂಢವಾಗಿ ಹೋಗುತ್ತಾನೆಂದು ಇತರರು ರಾಜನ ಬಳಿ ದೂರು ಹೇಳಿದರು. ರಾಜ ಪರೀಕ್ಷಿಸಿದಾಗ ಮಂತ್ರಿಯು ಅರಣ್ಯದಲ್ಲಿಟ್ಟಿದ್ದ ಖಜಾನೆಯೊಂದನ್ನು ನೋಡಲು ಹೋಗುತ್ತಿರುವುದು ತಿಳಿದು ಬಂತು. ಖಜಾನೆ ತೆರೆದು ನೋಡಿದಾಗ ಅದರಲ್ಲಿ ಹರಿದ ಹಳೆಯ ಬಟ್ಟೆ ಇತ್ತು.

ತಾನು ಈ ಊರಿಗೆ ಬಂದಾಗ ಹರಿದ ಬಟ್ಟೆ ಉಟ್ಟಿದ್ದೆ. ಈಗ ಮಂತ್ರಿಯಾಗಿದ್ದರೂ ಪ್ರತಿದಿನ ಕೆಲಸ ಮುಗಿದ ನಂತರ ಆ ಬಟ್ಟೆಯನ್ನು ನೋಡಿ ನನ್ನ ಮೂಲವನ್ನು ನೆನಪಿಸಿಕೊಳ್ಳುತ್ತೇನೆ ಎಂದು ಮಂತ್ರಿ ಹೇಳಿದ. ಶಾಲೆಗಳ ಪಠ್ಯದಲ್ಲೂ ಇದನ್ನು ಹಿಂದೆ ಹೇಳಿಕೊಡುತ್ತಿದ್ದರು. ನಾವು ಸಾಗಿ ಬಂದ ಹಾದಿ ಮರೆಯಬಾರದು ಎನ್ನುವುದು ಇದರ ತಾತ್ಪರ್ಯ ಎಂದು ಡಾ.ಮೋಹನ್‌ ಭಾಗವತ್‌ ಹೇಳಿದರು.

140 ಕೊಠಡಿಗಳ ಸಮುಚ್ಚಯ: ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾಕೇಂದ್ರದ ನೂತನ ವಸತಿ ಕಟ್ಟಡ ಸಮುಚ್ಚಯವು ಸುಮಾರು 140 ಕೊಠಡಿಗಳನ್ನು ಹೊಂದಿದೆ. ಇಲ್ಲಿ ಎಲ್ಲ ರೀತಿಯ ಶಿಕ್ಷಣದ ವ್ಯವಸ್ಥೆಯಿದೆ. 600ರಿಂದ ಒಂದು ಸಾವಿರ ವಿದ್ಯಾರ್ಥಿಗಳಿಗೆ ವಸತಿ ಸಹಿತವಾದ ಶಿಕ್ಷಣ ಒದಗಿಸಲು ಹೊಸ ಕಟ್ಟಡಗಳು ಸಹಕಾರಿಯಾಗಲಿವೆ. ಇಲ್ಲಿ ಸಂಶೋಧನಾ ಕೇಂದ್ರವನ್ನು ತೆರೆಯಲಾಗಿದೆ. ಮುಂದೆ ಶಿಕ್ಷಕರ ತರಬೇತಿ ಕೇಂದ್ರ ತೆರೆಯುವ ಯೋಚನೆಯೂ ಇದೆ ಎಂದು ಆರೆಸ್ಸೆನ ಹಿರಿಯರಾದ ನಾ.ತಿಪ್ಪೇಸ್ವಾಮಿಯವರು ವಿವರ ನೀಡಿದರು.

ಮಾನಸಿಕವಾಗಿ ಅಲೌಕಿಕವಾಗಿರುವವನು ಲೌಕಿಕ ಜೀವನದಲ್ಲಿ ಉತ್ಸಾಹ ದಿಂದಿ ರುತ್ತಾನೆ. ಅಂತಹ ವ್ಯಕ್ತಿ ಸಂಪೂರ್ಣವಾಗಿ ಲೌಕಿಕ ವ್ಯಕ್ತಿಯಾಗಿಯೇ ಕಾಣಿಸುತ್ತಾನೆ. ಆದರೆ, ಆತ ಯಾವಾಗ ಬೇಕಾದರೂ ವಿರಾಗಿಯಾಗಿ ಎಲ್ಲವನ್ನೂ ತೊರೆಯಲು ಸಿದ್ಧನಿರುತ್ತಾನೆ. ಈ ರೀತಿ ಬದುಕಿದರೆ ಜೀವನ ಸಂತಸವಾಗಿರುತ್ತದೆ.
-ಡಾ.ಮೋಹನ್‌ ಭಾಗವತ್‌, ಆರೆಸ್ಸೆಸ್‌ ಸರಸಂಘಚಾಲಕರು

Advertisement

Udayavani is now on Telegram. Click here to join our channel and stay updated with the latest news.

Next