Advertisement

ವಿದ್ಯಾರ್ಥಿಗಳೇ ಕೋವಿಡ್‌ ಸುರಕ್ಷಾ ರಾಯಭಾರಿಗಳಾಗಲಿ

11:48 PM Dec 25, 2020 | mahesh |

ಜನವರಿ 1 ಕ್ಕೆ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಗತಿಗಳು ಪುನರಾರಂಭಗೊಳ್ಳಲಿವೆ. 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ 2.0 ಹೊಸ ರೂಪದಲ್ಲಿ ಆರಂಭವಾಗುತ್ತಿದೆ. ಪೋಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಈ ಸಂದರ್ಭದಲ್ಲಿ ಆತಂಕ ಬೇಡ ಎನ್ನುವ ಆಶಯದಿಂದ ಈ ಲೇಖನ.

Advertisement

2020 ಅಸ್ತಂಗತವಾಗುತ್ತಿದೆ. 2019 ರ ಕೊನೆಯಲ್ಲಿ ಚೀನದಲ್ಲಿ ಉದಯಿಸಿದ ಕೋವಿಡ್‌ ವೈರಸ್‌ ಶಾಲಾ ಶಿಕ್ಷಣದ ವೇಳಾಪಟ್ಟಿಯನ್ನು ಅಸ್ತವ್ಯಸ್ತಗೊಳಿಸಿದೆ. ಲಾಕ್‌ ಡೌನ್‌, ಕರ್ಫ್ಯೂ, ವೈರಸ್‌ ಭಯ ಮುಂತಾದ ಸಾಮಾ ಜಿಕ, ರಾಜಕೀಯ ಕಾರಣಗಳಿಂದಾಗಿ ನಿರಂತರವಾಗಿ ಶಾಲೆಗಳು ಸ್ಥಗಿತಗೊಂಡಿವೆ. ಈಗ ಕ್ರಮೇಣ ಜನ ಜೀವನ ಸಾಧಾರಣ ಸ್ಥಿತಿಗೆ ಮರಳುತ್ತಿರುವಾಗ ರೂಪಾಂತರಗೊಂಡ ವೈರಸ್‌ನ ಭಯ ವ್ಯಾಪಿಸುತ್ತಿದೆ. ಇದೀಗ 2021 ರ ಮೊದಲ ದಿನದಿಂದಲೇ ಶಾಲಾ ಪುನರಾರಂಭಕ್ಕೆ ಮುಹೂರ್ತ ನಿಗದಿಯಾಗಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಎಸೆಸೆಲ್ಸಿ ಪರೀಕ್ಷೆಗಳನ್ನು ಜುಲೈ ತಿಂಗಳಿನಲ್ಲಿ ಯಶಸ್ವಿಯಾಗಿ ನಡೆಸಿ ಅತೀ ಶೀಘ್ರದಲ್ಲಿ ಫ‌ಲಿತಾಂಶಗಳನ್ನು ಪ್ರಕಟಿ ಸುವ ಮೂಲಕ ಜನಸಾಮಾನ್ಯರಿಂದ ಭೇಷ್‌ ಎನ್ನಿಸಿ ಕೊಂಡಿದೆ. 2020 ರ ಬ್ಯಾಚ್‌ನ ಹತ್ತನೇ ತರಗತಿ ವಿದ್ಯಾರ್ಥಿಗಳು “ಕೋವಿಡ್‌ ಪಾಸ್‌’ ಎಂದು ವ್ಯಂಗವಾಗಿ ಹೇಳಿಸಿಕೊಳ್ಳದೆ ಇತರರಂತೆ ಪರೀಕ್ಷೆಯನ್ನು ಎದುರಿಸಿ ತೇರ್ಗಡೆಯಾದ ಸಂಭ್ರಮವನ್ನು ಅನುಭವಿಸಿದ್ದಾರೆ.

ಇದೀಗ 2021 ನೇ ಬ್ಯಾಚ್‌ನ ಸರದಿ. ಈ ವರ್ಷದ ಪಾಠಗಳು ವೈವಿಧ್ಯಮಯವಾಗಿ ನಡೆದಿವೆ. ಆನ್‌ಲೈನ್‌, ಆಫ್ಲೈನ್‌ ಪಾಠಗಳು, ಚಂದನ ವಾಹಿನಿಯಲ್ಲಿ ಪ್ರಸಾರವಾದ ಪಾಠ -ಸಂವೇದಾ, ಯೂ ಟ್ಯೂಬ್‌ನಲ್ಲಿ ದೊರಕಿದ ಸಂಪನ್ಮೂಲ ವ್ಯಕ್ತಿಗಳ ಪಾಠಗಳು, ವಿದ್ಯಾಗಮದ ರೂಪದಲ್ಲಿ ದೊರಕಿದ ಸಹಾಯ ಹಸ್ತ.. ಈ ಹಂತಗಳನ್ನು ದಾಟಿ ಇದೀಗ ಜನವರಿ 1ರಿಂದ ಶಾಲೆ ಪುನರಾರಂಭದ ಸಂಭ್ರಮ.

ಇನ್ನು ಕೆಲವೇ ದಿನಗಳಲ್ಲಿ ಪರೀಕ್ಷಾ ವೇಳಾಪಟ್ಟಿ, ಪಬ್ಲಿಕ್‌ ಪರೀಕ್ಷೆಯ ಸಿಲೆಬಸ್‌ ಪ್ರಕಟಗೊಳ್ಳಲಿದೆ. ಅದಕ್ಕೆ ಮುಂಚಿತವಾಗಿ ಶಿಕ್ಷಕ, ವಿದ್ಯಾರ್ಥಿಗಳ ನಡುವೆ ಮುಖಾಮುಖೀ ತರಗತಿಗಳು ನಡೆಯುವ ಸದವಕಾಶ. ಆದರೆ ಈ ತರಗತಿಗಳು ಕಡ್ಡಾಯವಲ್ಲ ಎಂಬುದನ್ನು ಗಮನಿಸಬೇಕು. ಬೇರೆ ಬೇರೆ ಆರೋಗ್ಯದ ಸಮಸ್ಯೆ ಇರುವ, ಆತಂಕಗೊಂಡಿರುವ ಪೋಷಕರ, ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕಲಿಕೆಗೆ ಮುಕ್ತ ಅವಕಾಶ ಇದೆ. ಆದರೆ ಬಹುತೇಕ ವಿದ್ಯಾರ್ಥಿಗಳು ಶಾಲೆಗೆ ಹೊರಡಲು ಸಿದ್ಧರಾಗಿದ್ದಾರೆ. ಇರುವ ಅಲ್ಪ ಸ್ವಲ್ಪ ಆತಂಕವನ್ನು ಹೊಡೆದೋಡಿಸಿಕೊಂಡ ಪೋಷಕರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಸಜ್ಜಾಗಿದ್ದಾರೆ. ವಾಹನಗಳಲ್ಲಿ ದೂರದ ಶಾಲೆಗೆ ಹೋಗಲೇಬೇಕೆಂಬ ಕಡ್ಡಾಯವಿಲ್ಲ. ಬದಲಾಗಿ ಹತ್ತಿರದಲ್ಲಿರುವ ಯಾವುದೇ ಶಾಲೆಯಲ್ಲಿ ಕಲಿಯಲು ಮುಕ್ತ ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ. ಜೀವ ಮತ್ತು ಜೀವನ ಒಟ್ಟೊಟ್ಟಾಗಿ ಎಚ್ಚರದಿಂದ ಸಾಗಬೇಕಿದೆ. ಈ ಸಂದರ್ಭದಲ್ಲಿ ಎಲ್ಲರೂ ಕಟ್ಟೆಚ್ಚ ರದ ವರ್ತನೆಯಿಂದ ಈ ಪ್ರಯೋಗವನ್ನು ಯಶಸ್ವಿಗೊಳಿ ಸಬೇಕಾದ ಅಗತ್ಯವಿದೆ. ಭಯಪಡುವ ಅಗತ್ಯವಿಲ್ಲ ಆದರೆ ನಿರ್ಲಕ್ಷ್ಯ ಕೂಡ ಸಲ್ಲದು.

Advertisement

ಸ್ವಚ್ಛ ಶಾಲೆಯೇ ಸುರಕ್ಷಿತ ಶಾಲೆ
ನೈರ್ಮಲ್ಯದ ದೃಷ್ಟಿಯಿಂದ ಪ್ರತಿಯೊಂದು ಶಾಲೆಯನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಶೌಚಾಲಯ ಗಳನ್ನು ಕೂಡ ಶುಭ್ರಗೊಳಿಸಲಾಗಿದೆ. ಅದನ್ನು ಬಳಸಿದ ಪ್ರತಿಯೊಬ್ಬರೂ ಅದನ್ನು ಸ್ವಚ್ಛವಾಗಿ ಮುಂದಿನವರ ಬಳಕೆಗೆ ಯೋಗ್ಯವಾಗಿರುವಂತೆ ನೋಡಿಕೊಳ್ಳಬೇಕು.

ವಿದ್ಯಾರ್ಥಿಗಳೇ ಕೋವಿಡ್‌ ಸುರಕ್ಷತ ರಾಯಭಾರಿ ಗಳಾಗಲಿ; ಪ್ರತಿಯೊಬ್ಬ ವಿದ್ಯಾರ್ಥಿಗಳು ಕೋವಿಡ್‌ ಸುರಕ್ಷತ ಕ್ರಮಗಳ ಅಗತ್ಯವನ್ನು ಅರಿತು ಪಾಲಿಸಬೇಕು. ಸ್ನೇಹಿತರೊಂದಿಗೆ ವೈಯಕ್ತಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಶಾಲೆಗೆ ಬರುವಾಗ, ಹಿಂದಿರುಗುವಾಗ ಅಥವಾ ಶಾಲೆಯಲ್ಲಿ ಹಿಂದಿನಂತೆ ಗುಂಪು ಗುಂಪಾಗಿ ಇರಬಾರದು. ಬಟ್ಟೆಯ ಮಾಸ್ಕ್ ಸದಾ ಧರಿಸಬೇಕು. ಇತರ ವಸ್ತುಗಳನ್ನಾಗಲೀ, ಮುಖ, ಮೂಗುಗಳನ್ನು ಆಗಾಗ್ಗೆ ಮುಟ್ಟುತ್ತಿರಬಾರದು. ಆಗಾಗ್ಗೆ ಸೋಪ್‌ ಬಳಸಿ ಕೈ ತೊಳೆದುಕೊಳ್ಳಬೇಕು. ಶಾಲೆಗೆ ಬರುವಾಗ ಕುಡಿಯುವ ನೀರು (ಬಿಸಿ ನೀರು ಆದರೆ ಉತ್ತಮ) ಉಪಾಹಾರ (ಅಗತ್ಯವಿದ್ದರೆ) ತರಬೇಕು. ಇತರರೊಂದಿಗೆ ಆಹಾರ ಹಂಚಿಕೊಳ್ಳುವುದು ಬೇಡ.

ನಮಗೆ ಇತರರಿಂದ ರೋಗ ಹರಡದಂತೆ, ನಾವು ಇತರರರಿಗೆ ರೋಗ ಹರಡದಂತೆ ಜಾಗ್ರತೆಯನ್ನು ವಹಿಸಬೇಕು. ಆರಂಭದಲ್ಲಿ ದಿನಕ್ಕೆ ಕೇವಲ 3 ಅಥವಾ 4 ಅವಧಿಯ ಪಾಠಗಳು ನಡೆಯುತ್ತಿವೆ. ಅದನ್ನು ಆಸಕ್ತಿಯಿಂದ ಆಲಿಸೋಣ. ಈಗ ಆರಂಭಗೊಂಡಿ ರುವ ಶಾಲೆಯ ಚಟುವಟಿಕೆಗಳು ನಮ್ಮ ನಿರ್ಲಕ್ಷ್ಯದ ವರ್ತನೆಗಳಿಂದಾಗಿ ಮುಚ್ಚುವ ಅನಿವಾರ್ಯ ಸೃಷ್ಟಿ ಯಾಗದಂತೆ ಜಾಗ್ರತೆಯನ್ನು ವಹಿಸೋಣ.

ಸಂತಸದಾಯಕ ಕಲಿಕೆಯೇ ನಿಜವಾದ ಕಲಿಕೆಯ ಲಕ್ಷಣವಾಗಿದೆ. ಅನಾವಶ್ಯಕ ಒತ್ತಡದ ಅಗತ್ಯವಿಲ್ಲ. ಪರೀಕ್ಷೆಯ ಕುರಿತು ಭಯವೂ ಬೇಡ. ಶಿಕ್ಷಕರೂ ನಿಮ್ಮೊಡನೆ ಸಂವಹನಕ್ಕಾಗಿ ಕಾತರದಿಂದ ಕಾದಿದ್ದಾರೆ. ನಿಮ್ಮ ಉತ್ತಮ ಭವಿಷ್ಯಕ್ಕೆ ಭದ್ರ ತಳಹದಿಯನ್ನು ರೂಪಿಸುವುದು ಶಿಕ್ಷಕರು ಮತ್ತು ಪೋಷಕರ ಒತ್ತಾಸೆಯಾಗಿದೆ. ಸಮಾಜವು ಕೋವಿಡ್‌ ಸಾಂಕ್ರಾಮಿಕವನ್ನು ಓಡಿಸುವಲ್ಲಿ ರೂಪಿಸಿರುವ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ ಎಂಬುದನ್ನು ಮರೆಯದಿರೋಣ.

ಅಶೋಕ ಕಾಮತ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next