Advertisement

ಬೆಳ್ಳಾರೆ ಹೋಬಳಿಯಾಗಲಿ; ಸುಳ್ಯದ ಒತ್ತಡ ಕಡಿಮೆಯಾಗಲಿ

05:45 PM Dec 06, 2021 | Team Udayavani |

ಸುಳ್ಯ: ಬರೋಬ್ಬರಿ 22 ಗ್ರಾಮಗಳ ವ್ಯಾಪ್ತಿ ಹೊಂದಿರುವ ಸುಳ್ಯ ಹೋಬಳಿಯಿಂದ ಬೆಳ್ಳಾರೆ ಗ್ರಾಮವನ್ನು ಕೇಂದ್ರವಾಗಿರಿಸಿ ಹೊಸ ಹೋಬಳಿಯನ್ನಾಗಿ ರೂಪಿಸಿದರೆ ಸುಳ್ಯ ಹೋಬಳಿಯ ತಲೆನೋವು ಕಡಿಮೆಯಾಗುತ್ತದೆ. ಹೊಸ ಹೋಬಳಿ ವಿವಿಧ ಆಯಾಮಗಳಲ್ಲಿ ಕೇಂದ್ರ ಸ್ಥಾನವಾಗಿ ಬೆಳೆಯುತ್ತದೆ.

Advertisement

ಈ ಲೆಕ್ಕಾಚಾರ ಆಡಳಿತಾತ್ಮಕ ಮತ್ತು ಅಭಿವೃದ್ಧಿ ನೆಲೆಯಲ್ಲಿ ಅತೀ ಆವಶ್ಯಕ ಎನ್ನುವುದು ಇಲ್ಲಿನ ವಾಸ್ತವ ಸ್ಥಿತಿ. ಸಂಚಾರ, ಸಂಪರ್ಕ ದೃಷ್ಟಿಯಿಂದಲೂ ಅನುಕೂಲಕರ. ಈ ಬಗ್ಗೆ ಆಡಳಿತ ವ್ಯವಸ್ಥೆ ಗಮನ ಹರಿಸಬೇಕು ಎನ್ನುವುದೇ ಇಲ್ಲಿನ ಪ್ರಮುಖ ಒತ್ತಾಸೆ.

22 ಗ್ರಾಮದ ಹೊರೆ
ಸುಳ್ಯ ಹೋಬಳಿಯ ಕೇಂದ್ರ ಕಚೇರಿ ನಗರದ ಅಂಬೆಟಡ್ಕ ಬಳಿ ಇದೆ. ಗ್ರಾಮ ಚಾವಡಿಗೆ ಸ್ವಂತ ಕಟ್ಟಡ ಇದ್ದರೂ 22 ಗ್ರಾಮಕ್ಕೆ ಸಾಕಾಗುವಷ್ಟು ವಿಸ್ತಾರವಾಗಿಲ್ಲ. ಕಡತಗಳನ್ನು ಇಡಲು ಜಾಗದ ಕೊರತೆ ಇದೆ. ಜತೆಗೆ ಇಲ್ಲಿಗೆ ಅಗತ್ಯದ ಕೆಲಸಕ್ಕೆ ಬರುವ ಜನರಿಗೆ ವಾಹನ ನಿಲ್ಲಿಸಲು ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ರಸ್ತೆ ಬದಿಯಲ್ಲಿಯೇ ವಾಹನ ನಿಲ್ಲಿಸಬೇಕಾದ ಅನಿವಾರ್ಯ ಇಲ್ಲಿನದು.

ಓರ್ವ ಕಂದಾಯ ನಿರೀಕ್ಷಕ, ಉಪತಹಶೀಲ್ದಾರ್‌, ಗ್ರಾಮಕರಣಿಕರು, ಗ್ರಾಮ ಸಹಾಯಕರು ಇಲ್ಲಿದ್ದು, ದಿನಂಪ್ರತಿ ಪ್ರತೀ ಗ್ರಾಮಕರಣಿಕ ಕಚೇರಿ ವ್ಯಾಪ್ತಿಯಿಂದ 20ರಿಂದ 30 ವಿವಿಧ ಅರ್ಜಿಗಳು ಬರುತ್ತಿವೆ. ಒಟ್ಟು 18 ಗ್ರಾಮಕರಣಿಕ ಕಚೇರಿಗಳು ಈ ವ್ಯಾಪ್ತಿಯಲ್ಲಿದೆ.

ಜಾಲ್ಸೂರಿನಲ್ಲಿ ಗ್ರಾಮಕರಣಿಕ,
ಪೆರುವಾಜೆಯಲ್ಲಿ ಉಗ್ರಾಣಿ ಇಲ್ಲ
ಜಾಲ್ಸೂರಿನಲ್ಲಿ ಪೂರ್ಣಕಾಲಿಕ ಗ್ರಾಮಕರಣಿಕ ಇಲ್ಲ. ಕನಕಮಜಲಿನ ಗ್ರಾಮಕರಣಿಕ ಡೆಪ್ಯುಟೇಶನ್‌ ಅಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಎರಡೂ ಗ್ರಾಮದಲ್ಲಿ ಕಡತ ವಿಲೇಗೆ ಒತ್ತಡ ಹೆಚ್ಚಿದೆ. ತುರ್ತು ಸಂದರ್ಭದಲ್ಲಿ ಎರಡೂ ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸುವ ಹೊಣೆಗಾರಿಕೆ ಉಂಟಾಗಿದೆ. ಪೆರುವಾಜೆ ಗ್ರಾಮಕರಣಿಕರ ಕಚೇರಿಯಲ್ಲಿ ಗ್ರಾಮ ಸಹಾಯಕರ ಹುದ್ದೆ ಖಾಲಿ ಇದೆ. ಪ್ರಸ್ತುತ ಮೂರು ದಿನ ಕಳಂಜ, ಮೂರು ದಿನ ಬೆಳ್ಳಾರೆಯ ಗ್ರಾಮ ಕರಣಿಕರು ಕರ್ತವ್ಯಕ್ಕೆ ಬರುತ್ತಿದ್ದಾರೆ. ಗ್ರಾಮ ಸಹಾಯಕ ಪೂರ್ಣಾವಧಿ ಹುದ್ದೆಯು ಕಳೆದ ಹಲವು ವರ್ಷಗಳಿಂದ ಖಾಲಿ ಇರುವ ಕಾರಣ ಗ್ರಾಮದಲ್ಲಿ ಭೂ ದಾಖಲೆ ಸೇರಿದಂತೆ ವಿವಿಧ ಅಗತ್ಯ ಕೆಲಸಗಳು ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ವಿ.ಎ.ಮೇಲೂ ಕೆಲಸ ಭಾರ ಹೆಚ್ಚಾಗಿದ್ದು ಎರಡೂ ಕೆಲಸ ಒಬ್ಬರ ಹೆಗಲೇರಿದೆ.

Advertisement

ಬೆಳ್ಳಾರೆ ಕೇಂದ್ರವಾಗಿಸಿ
ಹೊಸ ಹೋಬಳಿ ಕನಸು
22 ಗ್ರಾಮಗಳನ್ನು ಹೊಂದಿರುವ ಸುಳ್ಯ ಹೋಬಳಿಯ ಒಂಬತ್ತು ಗ್ರಾಮಗಳನ್ನು ಪ್ರತ್ಯೇಕಿಸಿ, ಕೆಲವು ಹೆಚ್ಚುವರಿ ಗ್ರಾಮ ಸೇರ್ಪಡೆಗೊಳಿಸಿ ಬೆಳ್ಳಾರೆ ಹೋಬಳಿ ಯನ್ನಾಗಿ ಪರಿವರ್ತಿಸುವ ಅಗತ್ಯ ಇದೆ ಎನ್ನುವುದು ಜನರ ಆಗ್ರಹ. ಪೆರುವಾಜೆ, ಕಳಂಜ, ಬೆಳ್ಳಾರೆ, ಕೊಡಿಯಾಲ, ಐವರ್ನಾಡು, ಬಾಳಿಲ, ಮುಪ್ಪೇರಿಯಾ, ಅಮರಮುಟ್ನೂರು, ಅಮರಪಟ್ನೂರು ಅನ್ನು ಬೆಳ್ಳಾರೆ ಹೋಬಳಿಯೊಳಗೆ ಪರಿಗಣಿಸಬಹುದು. ಮರ್ಕಂಜ, ಮಂಡೆಕೋಲು, ಉಬರಡ್ಕ ಮಿತ್ತೂರು, ಅಜ್ಜಾವರ, ಆಲೆಟ್ಟಿ, ನೆಲ್ಲೂರು ಕೆಮ್ರಾಜೆ, ಮಡಪ್ಪಾಡಿ, ಸಂಪಾಜೆ, ಸುಳ್ಯ, ಜಾಲ್ಸೂರು, ಕನಕಮಜಲು, ತೊಡಿಕಾನ ಗ್ರಾಮ ಗಳನ್ನು ಸುಳ್ಯ ಹೋಬಳಿಯೊಳಗೆ ಸೇರಿಸಿ ಕೊಳ್ಳಬಹುದು ಎನ್ನುವುದು ಈಗಿನ ಬೇಡಿಕೆ. ಇದರಿಂದ ಹೊಸ ಗ್ರಾಮ ಚಾವಡಿ, ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರ್‌ ಹುದ್ದೆ ಮಂಜೂರಾಗಿ ಅಗತ್ಯ ಕೆಲಸಗಳು ವೇಗವಾಗಿ ಸಾಗಿ ಜನರಿಗೆ ಅನುಕೂಲ ಆಗಲಿದೆ ಎಂಬುದು ಜನರ ನಂಬಿಕೆ.

ಸಂಚಾರ ಸಂಕಟ
ಇಲ್ಲಿ ಪ್ರಮುಖವಾಗಿರುವ ಸಮಸ್ಯೆ ಸಂಚಾರ ವ್ಯವಸ್ಥೆ ಇಲ್ಲದಿರುವುದು. ಮಡಪ್ಪಾಡಿ, ಆಲೆಟ್ಟಿ, ಮರ್ಕಂಜ, ತೊಡಿಕಾನ, ಕೊಡಿಯಾಲ ಮೊದಲಾದ ಗ್ರಾಮಗಳಲ್ಲಿ ಸರಕಾರಿ ಬಸ್‌ ಓಡಾಟ ಬೆರಳೆಣಿಕೆಯಷ್ಟಿದೆ. ನಿಗದಿತ ಒಂದು ಅಥವಾ ಎರಡು ಅವಧಿಯಲ್ಲಿ ಬಸ್‌ ಸಂಚಾರ ಇರುವುದರಿಂದ ತಾಲೂಕಿನ ಹೋಬಳಿ ಕೇಂದ್ರಕ್ಕೆ ಬರುವುದೇ ಇಲ್ಲಿನ ಜನರಿಗೆ ಇರುವ ದೊಡ್ಡ ಸವಾಲು. ಕೆಲವೊಮ್ಮೆ ಬಸ್‌ ಬಾರದೆ ಕೈ ಕೊಡುವುದೂ ಇದೆ. ಸುಳ್ಯದಲ್ಲಿ ಹೊಸ ಕೆಎಸ್‌ಆರ್‌ಟಿಸಿ ಡಿಪೋ ತೆರೆದಿದ್ದರೂ ಇನ್ನೂ ಬೇಡಿಕೆಯ ರೂಟ್‌ಗಳಲ್ಲಿ ಬಸ್‌ ಓಡಾಟ ಆರಂಭವಾಗಿಲ್ಲ.

ಪೆರುವಾಜೆಯಲ್ಲಿ ಗ್ರಾಮ ಸಹಾಯಕ ಹಾಗೂ ಜಾಲ್ಸೂರಿನಲ್ಲಿ ಗ್ರಾಮಕರಣಿಕ ಪೂರ್ಣ ಕಾಲಿಕ ಹುದ್ದೆ ಖಾಲಿ ಇದೆ. ಅಲ್ಲಿ ಬೇರೆ ಕಡೆಯಿಂದ ನಿಯೋಜನೆ ಮೇರೆಗೆ ಕರ್ತವ್ಯದಲ್ಲಿದ್ದಾರೆ.
-ಕೊರಗಪ್ಪ ಹೆಗ್ಡೆ, ಕಂದಾಯ ನಿರೀಕ್ಷಕರು

ತಾಲೂಕು, ಹೋಬಳಿ ಕೇಂದ್ರ ಒಂದೇ ಕಡೆ ಇರುವ ಬದಲು ಪ್ರತ್ಯೇ ಕಿಸಿದಾಗ ನಗರ ವಿಸ್ತರಣೆ ಸಾಧ್ಯ. ಸುಳ್ಯ ಹೋಬಳಿಯನ್ನು ವಿಭಜಿಸಿಬೆಳ್ಳಾರೆ ಹೋ ಬಳಿ ರೂಪಿಸಿದರೆ ಅನುಕೂಲವಾಗುತ್ತದೆ.
-ವೆಂಕಟರಮಣ, ಬೆಳ್ಳಾರೆ

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next