Advertisement

ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಬೀಳಲಿ ಕಡಿವಾಣ

02:08 AM Apr 27, 2022 | Team Udayavani |

ರಾಜ್ಯದಲ್ಲಿ ವಿವಿಧ ಸರಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಪರೀಕ್ಷೆಗಳಲ್ಲಿನ ಅಕ್ರಮಗಳು ಈಗ ಒಂದೊಂದಾಗಿ ಬಯಲಾಗತೊಡಗಿವೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಅದರಲ್ಲಿ ತೇರ್ಗಡೆಯಾದವರನ್ನು ಅರ್ಹತೆಯ ಮಾನದಂಡದ ಆಧಾರದಲ್ಲಿ ಹುದ್ದೆಗಳಿಗೆ ನೇಮಿಸಿಕೊಳ್ಳುವ ವಿಧಾನವನ್ನು ಸರಕಾರ ಈ ಹಿಂದಿನಿಂದಲೂ ಅನುಸರಿಸುತ್ತ ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರೀ ಗೋಲ್‌ಮಾಲ್‌ ನಡೆಯುತ್ತಿರುವುದು ವಿದ್ಯಾವಂತ ನಿರುದ್ಯೋಗಿಗಳನ್ನು ತೀವ್ರ ಹತಾಶರನ್ನಾಗಿಸಿದೆ.

Advertisement

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತಿರುವ ಬಗೆಗೆ ಈ ಹಿಂದಿನಿಂದಲೂ ಆರೋಪಗಳು ಕೇಳಿ ಬರುತ್ತಿದ್ದವಾದರೂ ಈಗ ಏಕಾಏಕಿ ಅಕ್ರಮಗಳ ಸರಣಿಯೇ ಬಯಲಾಗತೊಡಗಿದೆ. ಸರಕಾರಿ ಉದ್ಯೋಗ ಗಳಲ್ಲಿ ಅರ್ಹ ಮತ್ತು ಪ್ರತಿಭಾವಂತರಿಗೆ ಅವಕಾಶ ಲಭಿಸುವುದನ್ನು ಖಾತರಿಪಡಿಸುವ ದೃಷ್ಟಿಯಿಂದ ಅತ್ಯಂತ ಪಾರದರ್ಶಕ ರೀತಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಬೇಕೆಂಬ ಉದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತ ಬರಲಾಗಿದೆ. ಆದರೆ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ರಾಜಾರೋಷವಾಗಿ ನಡೆಯುತ್ತಿದ್ದು, ಈ ಪರೀಕ್ಷೆಗಳ ನೈಜ ಉದ್ದೇಶವನ್ನೇ ಬುಡಮೇಲು ಮಾಡಿವೆ. ಆಡಳಿತ ವ್ಯವಸ್ಥೆ, ರಾಜಕೀಯ ನಾಯಕರು, ಉನ್ನತ ಅಧಿಕಾರಿಗಳೂ ಈ ಅಕ್ರಮಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗಿಗಳಾಗುತ್ತಿರುವುದು ವಿಪರ್ಯಾಸ.

ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮ ಬೆಳಕಿಗೆ ಬರುತ್ತಿದ್ದಂತೆಯೇ ಈ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಚಾತನ ಬಟಾಬಯಲಾಗತೊಡಗಿದೆ. ಇದು ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ. ಮಾತ್ರವಲ್ಲದೆ ಇಡೀ ಅಕ್ರಮದ ಒಂದೊಂದೇ ಒಳಸುಳಿ ಬಿಚ್ಚಿಕೊಳ್ಳತೊಡಗಿದ್ದು, ರಾಜಕೀಯ ನಾಯಕರು, ಉನ್ನತಾಧಿಕಾರಿಗಳ ಮುಖವಾಡ ಕಳಚಲಾರಂಭಿಸಿದೆ.

ಈಗ ಅಕ್ರಮ ಸರಣಿಗೆ ಹೊಸ ಸೇರ್ಪಡೆ, ರಾಜ್ಯ ಸರಕಾರಿ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ. ಇದೇ ಮಾರ್ಚ್‌ನಲ್ಲಿ ನಡೆದ ಈ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ನೀಡಿದ ದೂರು ಆಧರಿಸಿ ಬೆಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸರ್ಕಾರಿ ಹುದ್ದೆಗೆ ಆಯ್ಕೆಗೊಳ್ಳುವುದು ಪ್ರತಿಯೊಬ್ಬ ವಿದ್ಯಾವಂತ ನಿರುದ್ಯೋಗಿಯ ಕನಸಾಗಿರುತ್ತದೆ. ಇದನ್ನು ನನಸಾಗಿಸಲು ಈ ವಿದ್ಯಾವಂತರು, ಹುದ್ದೆಗಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದರೂ ಸಹಸ್ರಾರು ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸು ತ್ತಾರೆ. ಆದರೆ, ಈ ಪರೀಕ್ಷೆಗಳಲ್ಲಿಯೇ ಇಷ್ಟೊಂದು ಅಕ್ರಮಗಳು ನಡೆದಲ್ಲಿ ಈ ನಿರುದ್ಯೋಗಿಗಳ ಕನಸಿಗೆ ತಣ್ಣೀರೆರಚಿದಂತೆ ಮಾತ್ರವಲ್ಲದೆ ಅನ್ಯಾಯ ಎಸಗಿದಂತೆಯೇ ಸರಿ. ಸ್ಪರ್ಧಾತ್ಮಕ ಪರೀಕ್ಷೆ ನ್ಯಾಯಯುತವಾಗಿ ನಡೆಸಲು ಸರಕಾರ ಕ್ರಮ ಕೈಗೊಳ್ಳಲೇಬೇಕು. ಹುದ್ದೆ ಯಾವುದೇ ಇರಲಿ, ಕಾನೂನು ನಿಯಮಾವಳಿಗಳಿಗೆ ಅನುಸಾರ ನೇಮಕಾತಿ ಪ್ರಕ್ರಿಯೆ ನಡೆದಲ್ಲಿ ಅದಕ್ಕೊಂದು ಘನತೆ, ಗೌರವ. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರು ಎಷ್ಟೇ ಪ್ರಭಾವಶಾಲಿಯಾಗಿರಲಿ, ಅವರಿಗೆ ಕಠಿನ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಈ ವಿಚಾರದಲ್ಲಿ ಸರಕಾರ ತನ್ನ ಬದ್ಧತೆ ಮತ್ತು ಇಚ್ಚಾಶಕ್ತಿ ಪ್ರದರ್ಶಿಸಬೇಕು. ಇಲ್ಲೂ ಹೊಂದಾಣಿಕೆ ರಾಜಕೀಯಕ್ಕೆ ಮಣೆ ಹಾಕಿದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಕೇವಲ ಬಾಯಿಮಾತಿಗೇ ಸೀಮಿತವಾಗಿ ಉಳಿಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next