Advertisement

ಹಬ್ಬ ಆಚರಣೆ ಸೌಹಾರ್ದತೆಗೆ ಸಾಕ್ಷಿಯಾಗಲಿ

12:49 AM Aug 31, 2019 | Team Udayavani |

ಬೆಂಗಳೂರು: ಗಣೇಶ ಉತ್ಸವಕ್ಕೆ ಮುಸ್ಲಿಂ, ಕ್ರೈಸ್ತ ಸಮುದಾಯದವರನ್ನು ಕರೆದು ಸೌಹಾರ್ದತೆಯಿಂದ ಆಚರಿಸುವ ಸಂಸ್ಕೃತಿಯನ್ನು ಆಯೋಜಕರು ರೂಢಿಸಿಕೊಳ್ಳಬೇಕು ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ತಿಳಿಸಿದರು. ಗಣೇಶ ಹಾಗೂ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಪುರಭವನದಲ್ಲಿ ಶುಕ್ರವಾರ ನಡೆದ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಎಲ್ಲರ ನಡುವೆ ಪ್ರೀತಿ, ವಿಶ್ವಾಸ, ಸಾಮರಸ್ಯ ಬರಲಿ ಎಂದು ಹಬ್ಬಗಳನ್ನು ಆಚರಿಸುತ್ತೇವೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಹಬ್ಬ ಸುಗಮವಾಗುವುದಕ್ಕೆ ಸೌಹಾರ್ದತೆ ಮುಖ್ಯ. ಇದಕ್ಕಾಗಿ ಉತ್ತರ ಕರ್ನಾಟಕದ ಸಾಕಷ್ಟು ಕಡೆ ಇತರೆ ಸಮುದಾಯದವರನ್ನು ಉತ್ಸವಗಳಿಗೆ ಆಮಂತ್ರಿಸುವ, ಜತೆಗೆ ಸೇರಿಸಿಕೊಂಡು ಉತ್ಸವ ಮಾಡು ಸಂಪ್ರದಾಯವಿದೆ. ಅಲ್ಲಿನ ಮುಸ್ಲಿಂ, ಕ್ರೈಸ್ತ, ಜೈನ ಸಮುದಾಯದವರು ಸಂತಸದಿಂದ ಬಂದು ಗಣೇಶ ಹಬ್ಬದಲ್ಲಿ ಭಾಗವಹಿಸುತ್ತಾರೆ.

ಇಲ್ಲಿಯೂ ಆ ರೂಢಿ ಕೆಲವೆಡೆ ಇದ್ದು, ಹೃದಯವಂತಿಕೆಯಿಂದ ಎಲ್ಲರೂ ಅಳವಡಿಸಿಕೊಳ್ಳುವುದು ಉತ್ತಮ. ಎಲ್ಲಾ ಸಮುದಾಯ ಒಟ್ಟಾಗಿ ಹಬ್ಬ ಮಾಡುವುದರಿಂದ ಕೋಮುಗಲಭೆ ಭಯ, ಗಾಬರಿ ದೂರವಾಗುತ್ತದೆ. ಈ ಮೂಲಕ ಭಾರತ ಎಲ್ಲರದ್ದು, ಎಂಬ ಭಾವ ಮೂಡುತ್ತದೆ ಎಂದರು. ಹಿಂದೂಗಳು ಯುಗಾದಿ ಮೂಲಕ ವರ್ಷ ಪ್ರಾರಂಭಿಸಿದರೆ, ಮುಸಲ್ಮಾನರು ಮೊಹರಂ ಮೂಲಕ ಆರಂಬಿಸಿತ್ತಾರೆ.

ಅವರ ಆಚಾರ ಸಂಪ್ರದಾಯ ಗೌರವಿಸೋಣ. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇರಲಿ, ಮಾರ್ಗದರ್ಶನಕ್ಕೆ ಸೌಮ್ಯವಾಗಿ ವರ್ತಿಸುವ ಸ್ವಯಂ ಸೇವಕರಿರಲಿ. ಇನ್ನು ಟ್ರಾಫಿಕ್‌, ಶಬ್ದ ಮಾಲಿನ್ಯ, ಜನದಟ್ಟಣೆಯಂತಹ ಅನೇಕ ವಿಷಯಗಳನ್ನು ಚರ್ಚಿಸಿ ಮೆರವಣಿ ಮಾರ್ಗಗಳನ್ನು ನಿರ್ಧರಿಸಿದ್ದು, ಯಾವ ಸಮಿತಿಯೂ ಕೊನೆಯ ಗಳಿಗೆಯಲ್ಲಿ ಮಾರ್ಗ ಬದಲಿಸಬಾರದು. ಯಾವುದೇ ಸಮಸ್ಯೆ ಬಂದರೂ “100’ಕ್ಕೆ ಕರೆ ಮಾಡಿ ತರ್ತು ಸೇವೆ ಪಡೆಯಬಹುದು ಎಂದರು.

ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಮಾತನಾಡಿ, ಮೊಬೈಲ್‌ ಟ್ಯಾಂಕ್‌, ಕಲ್ಯಾಣಿ, ತಾತ್ಕಾಲಿಕ ಗುಂಡಿ ಮಾಡುವ ಮೂಲಕ ವಿಸರ್ಜನೆಗೆ ಮೂರು ತರಹದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಬೆಳಕಿನ ವ್ಯವಸ್ಥೆ ಹಾಗೂ ಸರತಿ ಸಾಲಿನಲ್ಲಿ ಬರಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇನ್ನು ನಿಷೇಧಿತ ಪಿಒಪಿ ಗಣೇಶ ಪ್ರತಿಷ್ಠಾಪನೆ ಮಾಡುವಂತಿಲ್ಲ ಎಂದು ತಿಳಿಸಿದರು.

Advertisement

ಇಂದಿನಿಂದ ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ: “ಶನಿವಾರದಿಂದ ನಗರದ ವಿವಿಧೆಡೆ ಇರುವ 63 ಉಪವಿಭಾಗಗಳದ ಸಾಹಾಯಕ ಕಾರ್ಯನಿರ್ವಹಕ ಎಂಜಿನಿಯರ್‌ (ಎಇಇ) ಕಚೇರಿಯಲ್ಲಿ àಕಗವಾಕ್ಷಿ ಅನುಮತಿಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯೇ ಪೊಲೀಸ್‌ ಇಲಾಖೆ, ಬೆಸ್ಕಾಂ, ಅಗ್ನಿಶಾಮಕ, ಬಿಬಿಎಂಪಿ ಅನುಮತಿ ಸಿಗಲಿದೆ. ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೂ ತೆರೆದಿರಲಿವೆ’ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.

ಮೊಬೈಲ್‌ ಟ್ಯಾಂಕ್‌ ಪಾರ್ಕಿಂಗ್‌ ಮಾಹಿತಿ ನೀಡಿ: “ಗಣೇಶ ವಿಸರ್ಜನೆಗೆಂದು ವಾರ್ಡ್‌ಗಳಲ್ಲಿ ನಿಲ್ಲಿಸುವ ಮೊಬೈಲ್‌ ಟ್ಯಾಂಕ್‌ಗಳನ್ನು ಎಲ್ಲಿ ನಿಲ್ಲಿಸಿರುತ್ತಾರೆ ಎಂಬ ಮಾಹಿತಿಯೇ ಇರುವುದಿಲ್ಲ. ನಿಲುಗಡೆ ಸ್ಥಳವನ್ನು ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಅಗತ್ಯ ಪ್ರಚಾರ ಮಾಡಬೇಕು’ ಎಂದು ಶ್ರೀರಾಂಪುರ ನಿವಾಸಿ ಶಿವಕುಮಾರ್‌ ಮನವಿ ಮಾಡಿದರು.

ಭಯಭೀತ ವಾತಾವರಣ ಏಕೆ?: “ಗಣೇಶ ಹಬ್ಬಕ್ಕೆ ವಿವಿಧ ನಿಯಮಗಳನ್ನು ಹಾಕುತ್ತೀರಾ? ಜತೆಗೆ ಅನಗತ್ಯವಾಗಿ ಭಯಭೀತ ವಾತಾವರಣ ಸೃಷ್ಟಿಸುತ್ತೀರಾ? ಹೊಸ ವರ್ಷ ಸಂದರ್ಭದಲ್ಲಿ ಮೋಜು, ಮಸ್ತಿ ಮಾಡುತ್ತಾರೆ, ನಿತ್ಯ ರಸ್ತೆಗಳಲ್ಲಿ ಬರ್ತ್‌ ಡೇ ಪಾರ್ಟಿ ಮಾಡುತ್ತಾರೆ ಅವುಗಳಿಗೆ ಯಾಕೆ ಕಡಿವಾಣ ಹಾಕುವುದಿಲ್ಲ ಎಂದು ರಾಜಾಜಿನಗರ ನಿವಾಸಿ ಗಜೇಂದ್ರ ಪ್ರಸಾದ್‌ ಪ್ರಶ್ನಿಸಿದರು.

ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಪ್ರತಿಕ್ರಿಯಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡುವುದರಿಂದ ಹಾಗೂ ಈ ಹಿಂದೆ ಹಬ್ಬದ ವೇಳೆ ನಡೆದ ಅಹಿತಕರ ಘಟನೆಗಳ ಅನುಭವಗಳಿಂದಾಗಿ ಎಚ್ಚರವಹಿಸಲು ಈ ನಿಯಮಗಳನ್ನು ಪಾಲಿಸಲು ಹೇಳುತ್ತೇವೆ. ಒಂದು ದಿನ ಕೂರಿಸುವವರು ಸಿಸಿ ಕ್ಯಾಮೆರಾ ಜತೆಗೆ ಅಗ್ನಿ ನಂದಿಸುವ ಉಪಕರಣ ಹಾಗೂ ಮರಳನ್ನು ಇಡಬೇಕು ಎಂದರು.

ಡಿಜೆ ಅನುಮತಿ ನೀಡಲು ಮನವಿ – ನಿರಾಕರಣೆ: “ಈಗಾಗಲೇ ಮುಂಗಡ ಹಣ ನೀಡಿದ್ದು, ಇದೊಂದು ಬಾರಿ ಡಿಜೆ ಅನುಮತಿ ನೀಡಿ. ಕಡಿಮೆ ಸೌಂಡ್‌ ಇಡುತ್ತೇವೆ’ ಎಂದು ಕೆಲ ಸಂಘಗಳಿಂದ ಬಂದ ಮನವಿಗೆ ಪ್ರತಿಕ್ರಿಯಿಸಿದ ಪೊಲೀಸ್‌ ಆಯುಕ್ತರು, ಡಿಜೆಯಿಂದ ಸಾಕಷ್ಟು ಶಬ್ದ ಮಾಲಿನ್ಯ ಉಂಟಾಗುತ್ತದೆ. ಉತ್ಸವ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮ ಮಾಡಿ, ಆರ್ಕೆಸ್ಟ್ರಾ ಕರೆಸಿ’ ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next