Advertisement

ಪತ್ರಕರ್ತರು ನೈಜ-ವಸ್ತುನಿಷ್ಠ ವರದಿಗೆ ಆದ್ಯತೆ ನೀಡಲಿ

03:46 PM Jul 18, 2022 | Team Udayavani |

ಬಾಗಲಕೋಟೆ: ಸರಕಾರ ಮತ್ತು ಜನತೆಯ ಮಧ್ಯೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸಿ ಸಮಾಜದ ಓರೆ, ಕೊರೆಗಳನ್ನು ತಿದ್ದಿ ತಿಡುವ ಜೊತೆಗೆ ಸಾಧಕ- ಬಾಧಕಗಳನ್ನು ವಿಮರ್ಶಿಸಿ ಅವುಗಳನ್ನು ಜನತೆಯ ನಿರ್ಧಾರಕ್ಕೆ ಬಿಡುವ ಪತ್ರಿಕಾ ಕ್ಷೇತ್ರ ಹಾಗೂ ಪರ್ತಕರ್ತರ ಸೇವೆ ವಿಶಿಷ್ಟವಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ ಹೇಳಿದರು.

Advertisement

ಕಲಾದಗಿಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಲಾದಗಿ ಹಣ್ಣು ಬೆಳೆಗಾರರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಅಂಗವಾಗಿ ರವಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮೂರು ಅಂಗಗಳ ಜೊತೆಗೆ ನಾಲ್ಕನೇ ಅಂಗವೆಂದು ಪರಿಗಣಿಸಿರುವ ಪತ್ರಿಕಾ ರಂಗದ ಸೇವೆ ಅನನ್ಯವಾದದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಜನತೆಗೆ ಮಾಹಿತಿ ನೀಡಿ ಸ್ವಾತಂತ್ರ್ಯ ಪಡೆದುಕೊಳ್ಳುವಲ್ಲಿ, ಸ್ವಾತಂತ್ರ್ಯ ನಂತರ ಹಾಗೂ ಇಂದಿನವರೆಗೂ ಅನೇಕ ಸವಾಲುಗಳನ್ನು ಮೆಟ್ಟಿ ನಿಂತು ಜನತೆಗೆ ಮಾಹಿತಿಯ ಸೇವೆ ನೀಡುತ್ತಿರುವ ಪತ್ರಿಕಾರಂಗದ ಕಾರ್ಯ ಶ್ಲಾಘನೀಯ. ಮುಂದೆಯೂ ಸಹ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಹಾಗೂ ನಾಡಿನ ಸರ್ವತೋಮುಖ ಅಭಿವೃದ್ಧಿಗೆ, ಜನತೆಯ ವಿಶ್ವಾಸದೊಂದಿಗೆ ಸೇವೆ ಇನ್ನಷ್ಟು ವಿಸ್ತಾರಗೊಳ್ಳಲಿ. ಸತ್ಯ, ವಸ್ತುನಿಷ್ಠ ವರದಿಗಳು ಮೂಡಿಬಂದು ಸಮಾಜ ಹಾಗೂ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಲಿ ಎಂದರು.

ಸ್ವರೂಪ ಬದಲಿಸಿಕೊಂಡ ಪತ್ರಿಕಾರಂಗ: ಸ್ವಾತಂತ್ರ್ಯ ಸಂಗ್ರಾಮದಿಂದ ತನ್ನ ಪಾತ್ರ ನಿರ್ವಹಿಸುತ್ತಿರುವ ಪತ್ರಿಕಾ ರಂಗ ಬ್ರಿಟಿಷರ ದೇಶ ಬಿಟ್ಟು ತೊಲಗಲು ಪ್ರಮುಖ ಅಸ್ತ್ರವಾಗಿತ್ತು. ಇಂದು ಬದಲಾದ ಕಾಲ ಘಟ್ಟದಲ್ಲಿ ಸ್ವರೂಪ ಬದಲಿಸಿಕೊಂಡಿದೆ. ತಂತ್ರಜ್ಞಾನ ಯುಗದಲ್ಲಿ ಪೈಪೋಟಿ ನೀಡಬೇಕಿದೆ. ಯು ಟ್ಯೂಬ್‌, ಆನ್‌ಲೈನ್‌ ನ್ಯೂಸ್‌ ಪರಿಣಾಮ ಮುದ್ರಣ ಪತ್ರಿಕೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಆದರೂ ಸಹ ಪತ್ರಿಕೆಗಳಲ್ಲಿನ ಓದಿನ ಖುಷಿ, ನೆಮ್ಮದಿ, ನೆನಪಿನ ಶಕ್ತಿ ಬೇರೆ ಎಲ್ಲಿಯೂ ಸಿಗದು. ಟಿಆರ್‌ ಪಿಗಾಗಿ ಚಾನಲ್‌ಗ‌ಳಲ್ಲಿ ಬಿತ್ತರವಾಗುವ ಸುದ್ದಿಗಳಲ್ಲಿ ಮೌಲ್ಯ ಕ್ಷಿಣಿಸಿದೆ. ನಿಖರ, ವಸ್ತು ನಿಷ್ಠ ಸುದ್ದಿಗಳು ಬೇಕಿದೆ. ಮಾಧ್ಯಮ ರಂಗಕ್ಕೆ ಬಾಗಲಕೋಟೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಜುಲೈ ತಿಂಗಳು ವೈದ್ಯರ ಹಾಗೂ ಪತ್ರಿಕಾ ದಿನಾಚರಣೆ, ಈ ಎರಡು ಕ್ಷೇತ್ರದವರು ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದಾರೆ. ಜನತೆಗೆ ವೈದ್ಯರು ಉತ್ತಮ ಆರೋಗ್ಯ ನೀಡಿದರೆ, ಪತ್ರಕರ್ತರು ತಮ್ಮ ವರದಿಗಳ ಮೂಲಕ ಉತ್ತಮ ಸಮಾಜ ನಿರ್ಮಾಣದ ಸೇವೆ ನೀಡುತ್ತಾರೆ ಎಂದು ತಿಳಿಸಿದ ಪೂಜಾರ ಅವರು, ಸರಕಾರದ ತಪ್ಪುಗಳನ್ನು ಎತ್ತಿ ತೋರಿಸಿ ಎಚ್ಚರಿಸುವ ಜತೆಗೆ ಜನತೆಯ ಸಮಸ್ಯೆಗಳು, ಜ್ವಲಂತ ಸಮಸ್ಯೆಗಳ ಕುರಿತು ಸರಕಾರಕ್ಕೆ ಗಮನ ಸೆಳೆದು ಅವುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪತ್ರಕರ್ತರ ಸೇವೆ ಶ್ಲಾಘನೀಯ ಎಂದರು.

Advertisement

ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ‌, ಮಾಜಿ ಸಚಿವ ಅಜಯಕುಮಾರ ಸರನಾಯಕ ಮಾತನಾಡಿ, ಸಮಾಜದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ. ಜನತೆಗೆ ಅಗತ್ಯವಾಗಿರುವ ಸುದ್ದಿಗಳು ಇಂದು ಅಗತ್ಯವಾಗಿದೆ. ಕೇವಲ ರಾಜಕೀಯಕ್ಕಷ್ಟೆ ಸೀಮಿತವಾಗದೇ ಪ್ರತಿಯೊಂದು ಕ್ಷೇತ್ರದ ಬೆಳವಣಿಗೆಗಳ ಕುರಿತು ಮಾಹಿತಿ ನೀಡಬೇಕು. ವಸ್ತುನಿಷ್ಠ ವರದಿಗಳ ಮೂಲಕ ಈ ಕ್ಷೇತ್ರ ಜನತೆಯ ವಿಶ್ವಾಸವನ್ನು ಹೆಚ್ಚು ಗಳಿಸಿಕೊಳ್ಳಬೇಕಾಗಿದೆ ಎಂದು ಹೇಳಿ ನೈಜ ಹಾಗೂ ವಸ್ತುನಿಷ್ಠ ವರದಿ ನೀಡುವುದು ಪತ್ರಕರ್ತನ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ತಂತ್ರಜ್ಞಾನ ಯುಗಕ್ಕೆ ಮಾಧ್ಯಮ ರಂಗ ಪೈಪೋಟಿ ನೀಡುತ್ತಿದೆ. ಮಾಧ್ಯಮ ಕೆಲಸ ಸವಾಲಿನ ಕೆಲಸ. ಇಂದು ಮಾಧ್ಯಮ ಹೊಸ ದಿಕ್ಕುನಲ್ಲಿ ನವ ಸ್ವರೂಪದಲ್ಲಿ ಸಾಗುತ್ತಿದೆ. ಪತ್ರಿಕಾ ಪಾತ್ರ ದೊಡ್ಡದಿದೆ. ನಾಡು, ಸಮುದಾಯ ಕಟ್ಟಿ ಬೆಳೆಸುವಲ್ಲಿ ಮತ್ತು ಜಾಗೃತಿಗೊಳಿಸುವ ಕಾಯುಕ ಶ್ಲಾಘನೀಯ. ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಪಾತ್ರ ಮಹತ್ವದ್ದಾಗಿದೆ ಎಂದರು.

ರಾಜ್ಯ ಕಾನಿಪ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಹಿರಿಯ ಪತ್ರಕರ್ತರಾದ ಬಂಡು ಕುಲಕರ್ಣಿ, ಸಿದ್ದು ಕಾಳ್ಳೋಜಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನಿಪ ಅಧ್ಯಕÒ‌ ಆನಂದ ಧಲಬಂಜನ್‌ ಮಾತನಾಡಿ, ಪತ್ರಕರ್ತರು ಕ್ರಿಯಾಶೀಲರಾಗಿ ಸುದ್ದಿಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿ ಅದನ್ನು ಸಮಾಜಕ್ಕೆ ನೀಡಬೇಕು, ಇಂದಿನ ತಂತ್ರಜ್ಞಾನ ಯುಗಕ್ಕೆ ತಕ್ಕಂತೆ ಬದಲಾವಣೆ ಅದಕ್ಕೆ ಹೊಂದಿಕೊಂಡು ನೈಜ ಮತ್ತು ವಸ್ತುನಿಷ್ಠ ವರದಿಗಾರಿಕೆಗೆ ಮುಂದಾಗಬೇಕೆಂದರು.

ಸಾನ್ನಿಧ್ಯ ವಹಿಸಿದ್ದ ಜಮಖಂಡಿ ಓಲೇಮಠದ ಶ್ರೀ ಡಾ|ಅಭಿನವಕುಮಾರ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ದಿ. ಶರಣಬಸವರಾಜ ಜಿಗಜಿನ್ನಿ ಅವರ ಸ್ಮರಣಾರ್ಥ ಕೊಡಮಾಡುವ ಹಿರಿಯ ಪತ್ರಕರ್ತರ ಪ್ರಶಸ್ತಿಯನ್ನು ಬಾಗಲಕೋಟೆಯ ಈಶ್ವರ ಶೆಟ್ಟರ ಅವರಿಗೆ ಹಾಗೂ ದಿ| ಶ್ರೀಶೈಲ ಅಂಗಡಿ ಅವರ ಸ್ಮರಣಾರ್ಥ ಕೊಡಮಾಡುವ ಗ್ರಾಮೀಣ ಪತ್ರಕರ್ತರ ಪ್ರಶಸ್ತಿಯನ್ನು ಮಹಾಲಿಂಗಪೂರದ ಮಹೇಶ ಮನ್ನಯ್ಯನವರಮಠ ಅವರಿಗೆ ನೀಡಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶ್ರೇಯಾ ಪ್ರಾಣೇಶ ಪಾಟೀಲ, ಆಸೀಫ್‌ ಎಂ. ನದಾಫ, ಎಸ್ಸೆಸ್ಸೆಲ್ಸಿಯ ಶಿವು ವೀರಭದ್ರಯ್ಯ ಹಿರೇಮಠ, ಪ್ರಜ್ವಲ ವಿಠ್ಠಲ ಬಾಗೇವಾಡಿ, ಸೌಮ್ಯಾ ಉಮೇಶ ಭಿಕ್ಷಾವತಿಮಠ, ಕೀರ್ತಿ ಭೀಮಪ್ಪ ತಳವಾರ, ಅನುಷಾ ಕಿರಣ ಬಾಳಾಗೋಳ, ಪತ್ರಿಕಾ ವಿತರಕರಾದ ಬಸಪ್ಪ ಪಾಣಿಶೆಟ್ಟರ, ರಾಜು ಕುಂದರಗಿ, ಮುತ್ತಣ್ಣ ಪಡಸಲಕರ ಅವರನ್ನು ಸನ್ಮಾನಿಸಲಾಯಿತು.

ಹಣ್ಣು ಬೆಳೆಗಾರರ ಸಂಘದ ಉಪಾಧ್ಯಕ್ಷ‌ ಎಸ್‌.ಬಿ. ಅಂಗಡಿ, ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯ ಅಧ್ಯಕ್ಷ‌ ಕೆ.ಟಿ. ಪಾಟೀಲ, ಕಾರ್ಯದರ್ಶಿ ವಿ.ಜಿ. ದೇಶಪಾಂಡೆ, ಹಿರಿಯ ಪತ್ರಕರ್ತರಾದ ರಾಮ ಮನಗೂಳಿ, ಸುಭಾಸ ಹೊದ್ಲೂರ, ರಾಜ್ಯ ಕಾನಿಪ ಸದಸ್ಯ ಮಹೇಶ ಅಂಗಡಿ, ಚಂದ್ರಶೇಖರ ಜಿಗಜಿನ್ನಿ, ಆನಂದ ಜಿಗಜಿನ್ನಿ ಮುಂತಾದವರು ಉಪಸ್ಥಿತರಿದ್ದರು.

ಜಿಲ್ಲಾ ಕಾನಿಪ ಪ್ರಧಾನ ಕಾರ್ಯದರ್ಶಿ ಶಂಕರ ಎಸ್‌. ಕಲ್ಯಾಣಿ ಸ್ವಾಗತಿಸಿದರು. ದ.ರಾ. ಪುರೋಹಿತ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಬಾಳಕ್ಕನವರ ನಿರೂಪಿಸಿದರು. ಮೆಹಬೂಬ ನದಾಫ ವಂಂದಿಸಿದರು. ‌

ದೇಶದಲ್ಲಿ ಗೂಗಲ್ ಮತ್ತು ಫೇಸಬುಕ್‌ನ ವಾರ್ಷಿಕ ವ್ಯವಹಾರ 29 ಸಾವಿರ ಕೋಟಿ. ನಮ್ಮ ದೇಶದ 9 ಪ್ರಮುಖ ಮಾಧ್ಯಮ ಸಂಸ್ಥೆಗಳ ವಾರ್ಷಿಕ ವ್ಯವಹಾರ ಕೇವಲ 21 ಸಾವಿರ ಕೋಟಿ. ಇದರಿಂದ ಡಿಜಿಟಲ್ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವ ಎಷ್ಟೊಂದು ವಿಸ್ತಾರಗೊಂಡಿದೆ ಎಂಬುದು ತಿಳಿಯಬಹುದು. ವಿಶ್ವದ 750 ಕೋಟಿ ಜನಸಂಖ್ಯೆಯಲ್ಲಿ 550 ಕೋಟಿ ಜನಸಂಖ್ಯೆಗೆ ಇಂಟರ್‌ ನೆಟ್ ಸೇವೆ ಇದೆ. ಅದರಲ್ಲಿ ಭಾರತದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್ ಸೇವೆ ಮುಂಚೂಣಿಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಪತ್ರಿಕೆ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. -ಬಂಡು ಕುಲಕರ್ಣಿ, ಹಿರಿಯ ಪತ್ರಕರ್ತ

Advertisement

Udayavani is now on Telegram. Click here to join our channel and stay updated with the latest news.

Next