Advertisement

“ಪುಟ್ಟಣ್ಣಯ್ಯರ ರೈತ ಹೋರಾಟ ‘ಕೊಂಡಾಡಿದ ವಿಧಾನಸಭೆ 

06:25 AM Feb 20, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಕೆ.ಎಸ್‌. ಪುಟ್ಟಣ್ಣಯ್ಯ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಿಧಾನಸಭೆಯಲ್ಲಿ ಮಾತನಾಡಿದ ಸದಸ್ಯರು “ಪುಟ್ಟಣ್ಣಯ್ಯ ಅವರು ಅಪ್ರತಿಮ ರೈತ ಹೋರಾಟಗಾರ, ಉತ್ತಮ ಸಂಸದೀಯ ಪಟು, ರೈತ ಚಳವಳಿಯಲ್ಲಿ ಸರ್ಕಾರ ಮತ್ತು ಕೃಷಿಕರ ನಡುವಿನ
ಕೊಂಡಿಯಾಗಿದ್ದ ವ್ಯಕ್ತಿ ಎಂದು ಕೊಂಡಾಡಿದರು.

Advertisement

ಕಲಾಪದ ಆರಂಭದಲ್ಲಿ ಸ್ಪೀಕರ್‌ ಕೋಳಿವಾಡ ಅವರು ಸಂತಾಪ ಸೂಚಕ ನಿರ್ಣಯ ಮಂಡಿಸಿ, ರಾಜ್ಯ ರೈತ ಸಂಘದ ಅಧ್ಯಕ್ಷರಾಗಿ, ಶಾಸಕರಾಗಿ ಸಲ್ಲಿಸಿದ ಸೇವೆ ಸ್ಮರಿಸಿದರು. ರೈತರ ಹೆಗ್ಗುರುತಾಗಿ ಸದಾ ಹಸಿರು ಶಾಲು ಧರಿಸುತ್ತಿದ್ದ ಪುಟ್ಟಣ್ಣಯ್ಯ ನಿಧನದಿಂದ ರಾಜ್ಯ ಒಬ್ಬ ರೈತ ಮುಖಂಡನನ್ನು ಕಳೆದುಕೊಂಡಂತಾಗಿದೆ ಎಂದು ಶೋಕ ವ್ಯಕ್ತಡಿಸಿದರು.

ಕಾನೂನು ಸಚಿವ ಟಿ.ಬಿ ಜಯಚಂದ್ರ ಸಂತಾಪ ಸೂಚಕ ನಿರ್ಣಯ ಪರವಾಗಿ ಮಾತನಾಡುತ್ತಾ, ನಂಜುಂಡಸ್ವಾಮಿಯ
ವರ ಬಳಿಕ ಪುಟ್ಟಣ್ಣಯ್ಯನವರು ಸದನದಲ್ಲಿ ಸಮರ್ಥವಾಗಿ ರೈತರ ಪರವಾಗಿ ದನಿಯೆತ್ತುತ್ತಿದ್ದರು. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಕಾವೇರಿ ಸಮಸ್ಯೆ ಬಗೆಹರಿಸಲು ಸಾಕಷ್ಟು ಹೋರಾಡುತ್ತಿದ್ದರು. ಪುಟ್ಟಣ್ಣಯ್ಯನವರು ಇರುವಾಗಲೇ ಕಾವೇರಿ ತೀರ್ಪು ಕರ್ನಾಟಕದ ಪರವಾಗಿ ಬಂದಿರುವುದು ಅವರಿಗೆ ಸಮಾಧಾನ ತಂದಿದೆ ಎಂದು ಹೇಳಿದರು.

ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಮಾತನಾಡಿ, ಅವರ ಹೋರಾಟ ಮಂಡ್ಯ ಜಿಲ್ಲೆಗೆ, ದಕ್ಷಿಣ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದಿಲ್ಲ, ಕಬ್ಬು ಬೆಳೆಗಾರರ ಹೋರಾಟದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಬಂದಿದ್ದನ್ನು, ಮಹದಾಯಿ ಹೋರಾಟದಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಂಡರು.

ಕೃಷಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಪುಟ್ಟಣ್ಣಯ್ಯ ರೈತ ಕುಲಕ್ಕೇ ಆಸ್ತಿಯಾಗಿದ್ದರು. ಕೃಷಿಕರ ತೊಂದರೆಗಳನ್ನು ಬಲಯುತವಾಗಿ ಪ್ರತಿಪಾದಿಸುತ್ತಿದ್ದ ಅವರು ರೈತರಿಗೆ ವೇತನ ಆಯೋಗ ಮಾಡಬೇಕೆಂದು ಹೇಳುತ್ತಿದ್ದರು ಎಂದು ಹೇಳಿದರು. ಶಾಸಕ ವೈ.ಎಸ್‌.ವಿ.ದತ್ತ, ರಾಜ್ಯ ಸರ್ಕಾರ ಪುಟ್ಟಣ್ಣಯ್ಯನವರನ್ನು ನೆನಪಿಸುವ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮ ರೂಪಿಸಬೇಕೆಂದು ಆಗ್ರಹಿಸಿದರು.

Advertisement

ಸಚಿವರಾದ ಎಚ್‌.ಕೆ.ಪಾಟೀಲ್‌, ಯು.ಟಿ.ಖಾದರ್‌, ಜೆಡಿಎಸ್‌ನ ಬಂಡಾಯ ಶಾಸಕ ಚೆಲುವರಾಯಸ್ವಾಮಿ, ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವಮೂರ್ತಿ ನಾಯಕ್‌, ಕೋನರೆಡ್ಡಿ, ಜಿ.ಟಿ ದೇವೇಗೌಡ,ಮೊಯಿದ್ದೀನ್‌ ಬಾವ,ಬಿ.ಆರ್‌. ಪಾಟೀಲ್‌,ಜಿ.ಟಿ.ಪಾಟೀಲ್‌, ಅಶೋಕ ಖೇಣಿ, ನಾರಾಯಣಗೌಡ ಪುಟ್ಟಣ್ಣಯ್ಯನವರ ವ್ಯಕ್ತಿತ್ವ ಗುಣಗಾನ ಮಾಡಿ ಮಾತನಾಡಿದರು. ಸಂತಾಪ ಸೂಚನೆ ನಂತರ ಶಾಸಕರೆಲ್ಲ ಸದನದಲ್ಲಿ ಒಂದು ನಿಮಿಷ ಮೌನಾಚರಿಸಿ ಪುಟ್ಟಣ್ಣಯ್ಯನವರ ಆತ್ಮಕ್ಕೆ ಶಾಂತಿ ಕೋರಿದರು.ನಂತರ ಮೃತರ ಗೌರವಾರ್ಥ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ವಿಧಾನಪರಿಷತ್ತಿನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಸಂತಾಪ ಸೂಚನಾ ನಿರ್ಣಯ ಮಂಡಿಸಿದರು. ಇದನ್ನು ಬೆಂಬಲಿಸಿ ಸಭಾನಾಯಕ ಎಂ.ಆರ್‌. ಸೀತಾರಾಂ ಹಾಗೂ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಮಾತನಾಡಿದರು. ಬಳಿಕ ಮೃತರ ಗೌರವಾರ್ಥ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next