Advertisement

ಉಪನ್ಯಾಸಕಿಯರಿಗೆ ಇಷ್ಟ ಬಂದಲ್ಲಿಗೆ ವರ್ಗ

01:59 PM Jun 10, 2017 | Team Udayavani |

ಹುಣಸೂರು: ಸರ್ಕಾರಿ ಕೆಲಸ ಸಿಗುವವರೆಗೆ ಎಲ್ಲಿ ಬೇಕಾದರೂ ಕೆಲಸ ನಿರ್ವಹಿಸುತ್ತೇವೆಂದು ಕೆಲಸ ಗಿಟ್ಟಿಸಿದ ನಂತರ ರಾಜಕಾರಣಿಗಳ ಪ್ರಭಾವ ಬೀರಿ ತಮಗಿಷ್ಟ ಬಂದಲ್ಲಿಗೆ ನಿಯೋಜನೆಗೊಂಡು ಐಷಾರಾಮಿ ಜೀವನ ನಡೆಸುತ್ತಿರುವುದಕ್ಕೆ ತಾಲೂಕಿನ ರತ್ನಪುರಿ ಪದವಿ ಪೂರ್ವ ಕಾಲೇಜಿನ ಉಪ್ಯಾಸಕರಿಬ್ಬರು ತಾಜಾ ಉದಾಹರಣೆಯಾಗಿದ್ದಾರೆ.

Advertisement

ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಒತ್ತುನೀಡಿ ಸ್ಥಳೀಯರ ಮನವಿ ಮೇರೆಗೆ ಕಳೆದ 10 ವರ್ಷದ ಹಿಂದೆ ತಾಲೂಕಿನ ರತ್ನಪುರಿ ಪ.ಪೂ ಕಾಲೇಜಿಗೆ ಕಲಾ ವಿಭಾಗ, ನಾಲ್ಕು ವರ್ಷಗಳ ನಂತರ ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ವಿಜ್ಞಾನ ವಿಭಾಗ ತೆರೆಯಲಾಗಿತ್ತು.

ಪಾಠಪ್ರವಚನ ಉತ್ತಮವಾಗಿದ್ದರಿಂದ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದಾಗಿ ಉತ್ತಮ ಫ‌ಲಿತಾಂಶ ಬಂದಿತ್ತಾದರೂ ಕಳೆದನಾಲ್ಕು ವರ್ಷಗಳಿಂದ ಇಲ್ಲಿಗೆ ನೇಮಕಗೊಂಡ ಉಪನ್ಯಾಸಕರು ಮಾತ್ರ ಇಲ್ಲಿ ಸಂಬಳ ಪಡೆದು ಪ್ರಭಾವ ಬೀರಿ ಬೇರೆಡೆಗೆ ನಿಯೋಜನೆಗೊಳ್ಳುತ್ತಿದ್ದಾರೆ !.

ರತ್ನಪುರಿ ಪ. ಪೂ. ಕಾಲೇಜಿನ ಗಣಿತ ಶಾಸ್ತ್ರದ ಉಪನ್ಯಾಸಕಿ ಎ.ವೀಣಾರನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೋಮಯಾಜನಹಳ್ಳಿಯ ಕಾಲೇಜಿಗೂ, ಜೀವಶಾಸ್ತ್ರ ಉಪನ್ಯಾಸಕಿ ಬಿ.ಆರ್‌.ತ್ರಿವೇಣಿರನ್ನು ಮೈಸೂರು ನಗರದ ಲಕ್ಷ್ಮೀಪುರಂ ಕಾಲೇಜಿಗೂ ನಿಯೋಜನೆಗೊಳಿಸಿ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಕಳೆದ ಶೆಕ್ಷಣಿಕ ಸಾಲಿನಲ್ಲಿ ಪ್ರತಿಭಟನೆ, ಪತ್ರಿಕಾ ವರದಿಯಿಂದ ಎಚ್ಚೆತ್ತ ಶಾಸಕ ಮಂಜುನಾಥ್‌ ಶಿಕ್ಷಣ ಸಚಿವ ತನ್ವೀರ್‌ಸೇs…ರ ಮೇಲೆ ಒತ್ತಡ ತಂದ ಮೇರೆಗೆ ಮಾರ್ಚ್‌ನಲ್ಲಿ ನಿಯೋಜನೆ ರದ್ದುಗೊಂಡು ವಾಪಾಸ್‌ ಬಂದಿದ್ದ ಇಬ್ಬರು ಉನ್ಯಾಸಕಿಯರು ಪುನಃ ಮತ್ತೆ ತಮ್ಮ ಪ್ರಭಾವ ಬಳಸಿ ನಿಯೋಜನೆಗೊಂಡಿರುವ ವಿಷಯ ಬೆಳಕಿಗೆ ಬರುತ್ತಿದ್ದಂತೆ ಪೋಷಕರು ಆಕ್ರೋಶ ಭರಿತರಾಗಿದ್ದಾರೆ.

Advertisement

ಕಾಯಂಮಾತಿಯೇ ಆಗಿಲ್ಲ ಆಗಲೇ ನಿಯೋಜನೆ ಭಾಗ್ಯ: ಈ ಇಬ್ಬರು ಉಪನ್ಯಾಸಕಿಯರು ಕಳೆದ ನಾಲ್ಕುವರ್ಷಗಳ ಹಿಂದಷ್ಟೆ ಸೇವೆಗೆ ಸೇರಿದ್ದು, ಹುದ್ದೆಯೇ ಕಾಯಂ ಆಗಿಲ್ಲವಾದರೂ  ಪ್ರತಿ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಪ್ರಭಾವ ಬೀರಿ ತಮಗಿಷ್ಟವಾದ ಸ್ಥಳಕ್ಕೆ ನಿಯೋಜನೆ ಮೇಲೆ ತೆರಳುತ್ತಿದ್ದಾರೆ. ಮತ್ತೆ ಮಾರ್ಚ್‌ನಲ್ಲಿ ಕಾಲೇಜಿಗೆ ಬಂದು ವರದಿ ಮಾಡಿಕೊಳ್ಳುತ್ತಿದ್ದು, ಈ ಕಾಲೇಜಿನಿಂದ ಸಂಬಳ, ಸವಲತ್ತುಗಳನ್ನು ಪಡೆದು ಬೇರೆಡೆ ಕೆಲಸ ಮಾಡುವುದಾದರೂ ಏಕೆ ಅಲ್ಲಿಗೆ ವರ್ಗಮಾಡಿಸಿಕೊಂಡು ಹೋಗಲಿ, ನಮ್ಮ ಮಕ್ಕಳನ್ನು ಬೇರೆಡೆಯಾದರೂ ಓದಿಸುತ್ತೇವೆಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ನಿಯೋಜನೆಗೆ ನಿಯಮ: ನೇಮಕಗೊಂಡಿರುವ ಶಾಲಾ-ಕಾಲೇಜಿನಿಂದ 18 ಕಿ.ಮೀದೂರದ ಕಾಲೇಜಿಗೆ ಮಾತ್ರ ನಿಯೋಜನೆ ಮಾಡಬೇಕು ಹಾಗೂ ವಾರದಲ್ಲಿ ಮೂರುದಿನ ಮರಳಿ ಕಾಲೇಜಿಗೆ ಬಂದು ಪಾಠ ಮಾಡಬೇಕೆಂಬ ನಿಯಮವಿದೆ ಆದರಿಲ್ಲಿ ರಾಜಕೀಯ ಪ್ರಭಾವಬೀರಿ 400 ಕಿ.ಮೀ ದೂರದ ಶ್ರೀನಿವಾಸಪುರ ತಾಲೂಕಿಗೆ ನಿಯೋಜನೆಗೊಳಿಸಿರುವುದು ಇಲಾಖೆಯಲ್ಲೇ ಚರ್ಚಾಗ್ರಾಸವಾಗಿದೆ. ಇದೀಗ ಈ ಕಾಲೇಜಿಗೆ ಸೇರುವುದೋ ಬೇಡವೋ ಎಂಬ ಜಿಜ್ಞಾಸೆ ವಿದ್ಯಾರ್ಥಿಗಳದ್ದಾಗಿದೆ.

ನಗರದಲ್ಲೂ ಗಣಿತ ಉಪನ್ಯಾಸಕರಿಲ್ಲ: ಹುಣಸೂರು ಬಾಲಕಿಯರ ಕಾಲೇಜಿನಲ್ಲಿದ್ದ ಏಕೈಕ ಗಣಿತ ಉಪನ್ಯಾಸಕ ಮಂಜೇಗೌಡ ಸಹ ವರ್ಗಾವಣೆ ಕೋರಿದ್ದರು. ಇದೀಗ ಕಾಲೇಜು ಶಿಕ್ಷಣ ಇಲಾಖೆ ಹುದ್ದೆ ಸಹಿತ ಮೈಸೂರಿನ ಮಹಾರಾಣಿ ಕಾಲೇಜಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಈಗಾಗಲೇ  ಬಿಡುಗಡೆ ಹೊಂದಿ ಅವರು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು. ಇಲ್ಲಿನ ಕಾಲೇಜಿನಲ್ಲಿ ಗಣಿತ ವಿಷಯ ಉಪನ್ಯಾಸಕರು ಮತ್ತೆ ಆ ಹುದ್ದೆಯೊಂದಿಗೆ ಬರಬೇಕು ಅಲ್ಲಿಯವರೆಗೆ ಇಲ್ಲಿನ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ಪ್ರತಿಭಟನೆ: ಕಾಲೇಜು ಆವರಣದಲ್ಲಿ ಜಮಾವಣೆಗೊಂಡಿದ್ದ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ಹಾದಿ ಹಿಡಿಯುತ್ತಿರುವುದನ್ನು ಶಾಸಕ ಮಂಜುನಾಥ್‌ ಗಮನಕ್ಕೆ ತಂದ ವೇಳೆ ತಾವು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಅವರ ಗಮನಕ್ಕೆ ವಿಷಯ ತಂದು ಉನ್ಯಾಸಕಿಯರ ನಿಯೋಜನೆ ರದ್ದುಗೊಳಿಸುವ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಟ್ಟಿದ್ದಾರೆ.

ಶಿಕ್ಷಣ ಸಚಿವರ ತವರಲ್ಲೇ ಈ ಸ್ಥಿತಿ?: ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ತನ್ವೀರ್‌ ಸೇs…, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪರ ತವರು ಜಿಲ್ಲೆಯಲ್ಲೇ ಈ ಪರಿಸ್ಥಿತಿಯಾದರೆ ಉಳಿದೆಡೆಗಳಲ್ಲಿ ಇನ್ಯಾವ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿ ಇದ್ದರೂ ಮತ್ತಷ್ಟು ಶಾಲಾ-ಕಾಲೇಜು ತೆರೆಯಲು ಹೊರಟಿರುವ ಶಿಕ್ಷಣ ಇಲಾಖೆ ಕಾಲೇಜುಗಳನ್ನು ತೆರೆಯುವ ಮೊದಲು ಸಮರ್ಪಕ ಮೂಲಭೂತ ಸೌಲಭ್ಯ ಕಲ್ಪಿಸಿ ನಂತರವೇ ಕಾಲೇಜುಗಳನ್ನು ತೆರೆಯುವಂತಾಗಲಿ ಎಂಬುದು ಪೋಷಕರ ಆಶಯವಾಗಿದೆ.

ಕಾಯಂ ಉಪನ್ಯಾಸಕರ ನೇಮಕವಾಗುವವರೆಗೆ ಕಾಲೇಜಿನ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಬೇರೆ ಕಾಲೇಜಿನ ಉಪನ್ಯಾಸಕರನ್ನು ವಾರಕ್ಕೆ ಮೂರುದಿನ ನಿಯೋಜನೆ ಮಾಡಲು ಕೋರಲಾಗುವುದು ಅಥವಾ ಸಿಡಿಸಿ ಸಮಿತಿ ವತಿಯಿಂದ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುವುದು.
-ಚೆಲುವಯ್ಯ, ಪ್ರಾಚಾರ್ಯ ಬಾಲಕಿಯರ ಪಪೂ ಕಾಲೇಜು

* ಸಂಪತ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next