Advertisement

ಪ್ರಧಾನಿ ಜನ್ಮದಿನದಂದು ವೃಕ್ಷೋತ್ಸವಕ್ಕೆ ಚಾಲನೆ

12:56 AM Sep 18, 2019 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಎಚ್‌ಎಸ್‌ಆರ್‌ ಲೇಔಟ್‌ನ ಅಗರ ಕೆರೆ ಆವರಣದಲ್ಲಿ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಶೋಕ ಸಸಿ ನೆಡುವ ಮೂಲಕ “ವೃಕ್ಷೋತ್ಸವ- 2019′ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

ವೃಕ್ಷೋತ್ಸವ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಯಡಿಯೂರಪ್ಪ, ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನ ವೃಕ್ಷೋತ್ಸವ- 2019ಕ್ಕೆ ಚಾಲನೆ ನೀಡಿರುವುದು ಹೆಮ್ಮೆ ಎನಿಸಿದೆ. ಸಸಿಗಳನ್ನು ನೆಟ್ಟು ಪೋಷಿಸಿ ಮಾನವ ಕುಲದ ಏಳಿಗೆಗೆ ಶ್ರಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಹವಾಮಾನ ಬದಲಾವಣೆಯಂತಹ ಜಾಗತಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸಲು ರಾಷ್ಟ್ರ ಕೈಗೊಳ್ಳುವ ಪ್ರಯತ್ನಗಳಿಗೆ ರಾಜ್ಯವೂ ಬೆಂಬಲಿಸುತ್ತಿದೆ. ರಾಜ್ಯದ ವೃಕ್ಷ ಹೊದಿಗೆ 1,100 ಚ.ಕಿ.ಮೀ.ಗೆ ಹೆಚ್ಚಳವಾಗಿರುವುದು ಸಂತಸದ ಸಂಗತಿ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ “ಕಾಂಪಾ’ ಯೋಜನೆಯಡಿ 1,350 ಕೋಟಿ ರೂ.ಬಿಡುಗಡೆ ಮಾಡಿರುವುದು ಈ ರೀತಿಯ ಪ್ರಯತ್ನಗಳಿಗೆ ಆನೆ ಬಲ ಬಂದಂತಾಗಿದೆ ಎಂದು ತಿಳಿಸಿದರು.

ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಜರು ಮರಗಿಡಗಳನ್ನು ಆರಾಧಿಸಿ, ಪೂಜಿಸಿ, ಬಳಸುತ್ತಾ ಉತ್ತಮ ಆರೋಗ್ಯ ಪಡೆದುಕೊಳ್ಳುತ್ತಿದ್ದರು ಎಂದರು. ಏಕಬಳಕೆ ಪ್ಲಾಸ್ಟಿಕ್‌ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಾಗೂ ಪ್ಲಾಸ್ಟಿಕ್‌ ಬದಲಿಗೆ ಪರ್ಯಾಯ ವಸ್ತುಗಳನ್ನು ತರಲು ಸರ್ಕಾರ ಬದ್ಧ.

ವೃಕ್ಷೋದ್ಯಾನಗಳನ್ನು ರಾಜ್ಯದೆಲ್ಲೆಡೆ ಬೆಳೆಸಿ ರಾಜ್ಯದ ಪರಿಸರ ಸಮತೋಲನ, ವಾಯು ಮಾಲಿನ್ಯ ನಿಯಂತ್ರಣ, ಜೀವ ಸಂಕುಲಗಳ ಬೆಳವಣಿಗೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡಲು ಎಲ್ಲರೂ ಕೈಜೋಡಿಸೋಣ ಎಂದು ಮನವಿ ಮಾಡಿದರು.

Advertisement

ಹೆಕ್ಟೇರ್‌ಗೆ 50,000 ರೂ. ಸಹಾಯಧನ: ವಿಶ್ವ ಬಿದಿರು ದಿನದ ಅಂಗವಾಗಿ ರೈತರ 2,500 ಹೆಕ್ಟೇರ್‌ ಜಮೀನಿನಲ್ಲಿ ಬಿದಿರು ಬೆಳೆಯುವ ಗುರಿ ಹೊಂದಲಾಗಿದೆ. ಇದಕ್ಕಾಗಿ ರೈತರಿಗೆ ಪ್ರತಿ ಹೆಕ್ಟೇರ್‌ಗೆ 50,000 ರೂ. ಸಹಾಯಧನ ನೀಡಲು ತೀರ್ಮಾನಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್‌ಮಾತನಾಡಿದರು. ಸಂಸದ ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಶಾಸಕ ಸತೀಶ್‌ ರೆಡ್ಡಿ, ಹಲವು ಪಾಲಿಕೆ ಸದಸ್ಯರು ಇತರರು ಉಪಸ್ಥಿತರಿದ್ದರು.

ನಗರ ಸುತ್ತಮುತ್ತ 15,000 ಎಕರೆ ಅರಣ್ಯ ಭೂಮಿ ಒತ್ತುವರಿ
ಬೆಂಗಳೂರು: ನಗರ ಹಾಗೂ ಸುತ್ತಮುತ್ತ 15,000 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಬಾಕಿ ಉಳಿದಿರುವ 15,000 ಎಕರೆ ಅರಣ್ಯ ಪ್ರದೇಶವನ್ನಾದರೂ ಸಂರಕ್ಷಿಸಿ ಪರಿಸರಕ್ಕೆ ಪೂರಕವಾಗಿ ರೂಪಿಸಲು ಪ್ರಯತ್ನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಹೇಳಿದರು.

“ವೃಕ್ಷೋತ್ಸವ- 2019’ಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒತ್ತುವರಿದಾರರು ಅರಣ್ಯ ಭೂಮಿ ಜಾಗವನ್ನೂ ಬಿಡುವುದಿಲ್ಲ. ಆ ಜಾಗದಲ್ಲಿ ಹಲವರು ಮನೆ ಕಟ್ಟಿಕೊಂಡು ಬದುಕುತ್ತಿದ್ದು, ಆ ಬಗ್ಗೆ ಮಾತನಾಡಲು ಮುಜುಗರವಾಗುತ್ತದೆ. ಹಾಗಾಗಿ ಒತ್ತುವರಿಯಾಗದ ಪ್ರದೇಶವನ್ನು ಹೇಗೆ ಅಭಿವೃದ್ಧಿಪಡಿಸಿ ಹಸಿರು ವಿಸ್ತರಿಸಬೇಕು ಎಂಬ ಬಗ್ಗೆ ಚಿಂತಿಸಲಾಗುವುದು ಎಂದು ತಿಳಿಸಿದರು.

ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ ಮಾದರಿಯಲ್ಲಿ ನಗರದ ಸುತ್ತಮುತ್ತ ಅರಣ್ಯ ಪ್ರದೇಶವನ್ನು ಉದ್ಯಾನವಾಗಿ ಅಭಿವೃದ್ಧಿಪಡಿಸುವತ್ತ ಚಿಂತಿಸಲಾಗಿದೆ. ನಗರದ ಎಲ್ಲ ಭಾಗದ ಜನ ಲಾಲ್‌ಬಾಗ್‌ಗೆ ಹೋಗುವ ಬದಲಿಗೆ ತಮ್ಮ ಸುತ್ತಮುತ್ತಲ ಪ್ರದೇಶಕ್ಕೆ ಹೋಗಿ ಕಾಲ ಕಳೆಯುವಂತಹ ವಾತಾವರಣ ನಿರ್ಮಿಸಬೇಕಿದೆ. ಬಿಬಿಎಂಪಿ, ಅರಣ್ಯ ಇಲಾಖೆ ಸಹಯೋಗದಲ್ಲಿ ಯೋಜನೆ ರೂಪಿಸಿ ವಿವರ ನೀಡಲಾಗುವುದು ಎಂದು ತಿಳಿಸಿದರು.

ನಗರ ವ್ಯಾಪ್ತಿಯಲ್ಲಿ 400 ಕೆರೆಗಳಿದ್ದು, ಅವುಗಳ ಸಂರಕ್ಷಣೆ, ಪುನರುಜ್ಜೀವನದ ಜತೆಗೆ ಗುಣಮಟ್ಟದ ನೀರಿನ ಸಂಗ್ರಹಕ್ಕೆ ಒತ್ತು ನೀಡಬೇಕಿದೆ. ಅಗರ ಕೆರೆಯಲ್ಲಿ ಜಲಮಂಡಳಿಯು ಕೊಳಚೆ ನೀರು ಸಂಸ್ಕರಣಾ ಘಟಕ ಅಳವಡಿಸಿದ್ದರೂ ನೀರಿನ ಗುಣಮಟ್ಟ ಉತ್ತಮವಾಗಿಲ್ಲ ಎಂದು ಶಾಸಕ ಸತೀಶ್‌ ರೆಡ್ಡಿ ಅವರು ಹೇಳಿದ್ದಾರೆ. ಹಾಗಾಗಿ ಗುಣಮಟ್ಟ ಹೆಚ್ಚಿಸುವ ಜತೆಗೆ ಸಾಮರ್ಥಯ ಹೆಚ್ಚಿಸಿ, ಇಸ್ರೇಲ್‌ ತಂತ್ರಜ್ಞಾನ ಅಳವಡಿಕೆ ಸಂಬಂಧ ಒತ್ತಡ ಹೇರಲಾಗುವುದು ಎಂದು ಹೇಳಿದರು.

ಪ್ರಾಣಿ, ಪಕ್ಷಿಗಳಿಗೆ ಓಟಿಲ್ಲ. ಮನುಷ್ಯರಿಗೆ ಓಟು ಇರುವುದರಿಂದ ನಮ್ಮನ್ನೇ ಆಧಾರಿತವಾಗಿಟ್ಟುಕೊಂಡು ಸಮಾಜ ಕಟ್ಟುತ್ತಿದ್ದೇವೆ. ಮನುಷ್ಯರಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದು, ಪ್ರಕೃತಿಗೆ ಪೂರಕವಾಗಿ ಕೆಲಸ ಮಾಡದಿದ್ದರೆ ಏನೆಲ್ಲಾ ಅಪಾಯವಾಗಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿಯವರು ಜಲ ಸಂರಕ್ಷಣೆ ಕಾರ್ಯಕ್ಕೆ 1.5 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದಾರೆ. ಪ್ರಧಾನಿಯವರು ಸ್ವತ್ಛತೆಗೂ ಒತ್ತು ನೀಡುತ್ತಿದ್ದಾರೆ. ಭೂಮಿಗೆ ಹಗುರವಾಗಿ ಪರಿಸರಕ್ಕೆ ಪೂರಕವಾಗಿ ಬದುಕಬೇಕಿದೆ. ಮಾಲಿನ್ಯ ಮಾಡುವ ವ್ಯಕ್ತಿಗಳಾಗದೆ ಮಾಲಿನ್ಯ ತಡೆಯುವ ವ್ಯಕ್ತಿಗಳಾಗಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೇವಾ ಸಪ್ತಾಹ ಆಚರಿಸಲಾಗುತ್ತಿದ್ದು, ಬೆಂಗಳೂರನ್ನು ಮಾಲಿನ್ಯರಹಿತ ಇಲ್ಲವೇ ಮಾಲಿನ್ಯ ನಿಯಂತ್ರಿತ ನಗರವಾಗಿ ರೂಪಿಸಲು ಪ್ರಯತ್ನಿಸೋಣ ಎಂದು ಆಶಿಸಿದರು.

ಅರಣ್ಯಗಳು ಜಲಸಂರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸಿವೆ. ನೀರು ಮತ್ತು ಮರಗಳ ನಡುವೆ ಅವಿನಾಭಾವ ಸಂಬಂಧವಿದ್ದು, ನೀರಿಗಾಗಿ ಅರಣ್ಯಗಳನ್ನು ಸಂರಕ್ಷಿಸಿ ಪೋಷಿಸಬೇಕಿದೆ. ಈ ನಿಟ್ಟಿನಲ್ಲಿ ಜಗದ್ಗುರು ಜಗ್ಗಿ ವಾಸುದೇವ್‌ ಅವರ “ಕಾವೇರಿ ಕೂಗು’ ಆಂದೋಲನಕ್ಕೆ ಅರಣ್ಯ ಇಲಾಖೆ ವತಿಯಿಂದ 2 ಕೋಟಿ ಸಸಿಗಳನ್ನು ಕಾವೇರಿ ನದಿ ಪಾತ್ರದಲ್ಲಿ ಮುಂದಿನ ಮಳೆಗಾಲದಲ್ಲಿ ನೆಡಲು ನೀಡಲಾಗುವುದು.
-ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next