Advertisement

ನಿಲ್ಲಿಸಿದ್ದ ಬಸ್‌ಗಳ ಮೇಲೆ ತಡರಾತ್ರಿ ಕಲ್ಲು ತೂರಾಟ: ಮೂವರ ಬಂಧನ

01:22 AM Sep 18, 2019 | mahesh |

ಮಂಗಳೂರು : ನಿಲ್ಲಿಸಿದ್ದ ಬಸ್‌ಗಳ ಮೇಲೆ ತಡರಾತ್ರಿ ಕಲ್ಲು ತೂರಾಟ ನಡೆಸಿ ಹಾನಿಯುಂಟು ಮಾಡಿದ ಮೂವರು ಆರೋಪಿಗಳನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ನಿವಾಸಿಗಳಾದ ಸಂಶೀರ್‌ ಎಂ. ( 27 ) , ಅಬ್ದುಲ್‌ ಸತ್ತಾರ್‌ ( 21) ಹಾಗೂ ನರಿಕೊಂಬು ನೆಹರೂ ನಗರ ನಿವಾಸಿ ಮಹಮ್ಮದ್‌ ರಿಯಾಜ್‌ (28 ) ಬಂಧಿತ ಆರೋಪಿಗಳು.

Advertisement

ಸೆ.4ರಂದು ನಸುಕಿನ ವೇಳೆ ಸುಮಾರು 2 ರಿಂದ 3 ಗಂಟೆಯ ಅವಧಿಯಲ್ಲಿ ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಬಟ್ಟಕೋಡಿ ಹಾಗೂ ಕಟೀಲು ಪೆಟ್ರೋಲ್‌ಪಂಪ್‌ ಬಳಿ ನಿಲ್ಲಿಸಿದ್ದ ಒಟ್ಟು 5 ಬಸ್‌ಗಳ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕಲ್ಲೆಸೆದು ಪರಾರಿಯಾಗಿದ್ದರು. ಹಾನಿಗೈಯುವ ದೃಶ್ಯ ಕಿನ್ನಿಗೋಳಿ ಪೆಟ್ರೋಲ್‌ ಪಂಪ್‌ ಬಳಿಯ ಸಿಸಿ ಟಿವಿಯಲ್ಲಿ ದಾಖಲಾಗಿತ್ತು. ಈ ಬಗ್ಗೆ ಮೂಲ್ಕಿ ಹಾಗೂ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಸೆ.17 ರಂದು ಮೂಲ್ಕಿ ಸಮೀಪದ ಕೋಳ್ನಾಡು ಬಳಿ ಮೂವರ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಮಾರುತಿ ಆಲ್ಟೊ ಕಾರನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀನಿವಾಸ ಗೌಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್‌ ನಿರೀಕ್ಷಕ ಅನಂತ ಪದ್ಮನಾಭ, ಪೊಲೀಸ್‌ ಉಪನಿರೀಕ್ಷಕ ಶೀತಲ್‌ ಅಲಗೂರ, ಎಎಸ್‌ಐ ಚಂದ್ರಶೇಖರ್‌, ಸಿಬಂದಿ ಉಮೇಶ್‌ ,ಧರ್ಮೇದ್ರ, ಮೆಲ್ವಿನ್‌ ಪಿಂಟೋ, ಚಂದ್ರಶೇಖರ್‌, ಶಶಿಧರ, ಸುಧೀರ್‌ ವಾದಿರಾಜ್‌ , ಸುರೇಶ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next