Advertisement

ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌

10:55 PM Jun 14, 2019 | Lakshmi GovindaRaj |

ಬೆಂಗಳೂರು: “ಸರ್ಕಾರಿ ಕಾಲೇಜುಗಳಲ್ಲಿ ಪ್ರಥಮ ವರ್ಷದ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ನೀಡುವ ಯೋಜನೆಯನ್ನು ಮತ್ತೆ ಮುಂದುವರಿಸಲು ಸಂಪುಟ ನಿರ್ಧರಿಸಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

Advertisement

ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಥಮ ವರ್ಷದ ಸರ್ಕಾರಿ ಪದವಿ ಕಾಲೇಜುಗಳಲ್ಲಿ 1,9,9016 ಮಕ್ಕಳಿಗೆ ಲ್ಯಾಪ್‌ ಟಾಪ್‌ ನೀಡಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ. 311 ಕೋಟಿ ರೂ. ವೆಚ್ಚದ ಈ ಯೋಜನೆಗೆ 3 ವರ್ಷದ ಹಿಂದೆ ಎಲ್ಲ ವರ್ಗದ ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೂ ಲ್ಯಾಪ್‌ ಟಾಪ್‌ ನೀಡಲು ತೀರ್ಮಾನ ಮಾಡಲಾಗಿತ್ತು.

ಕಳೆದ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ನೀಡದಿರುವುದರಿಂದ ಈ ವರ್ಷ ಎರಡನೇ ವರ್ಷದಲ್ಲಿ ಓದುತ್ತಿರುವ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ನೀಡಲಾಗುವುದು. ಈ ವರ್ಷ ಮಾತ್ರ 2 ನೇ ವರ್ಷದ ಮಕ್ಕಳಿಗೆ ಲ್ಯಾಪ್‌ ಟಾಪ್‌ ನೀಡಲಾಗುತ್ತದೆ ಎಂದು ಹೇಳಿದರು.

ಇನ್ನು ಅರಣ್ಯ ಇಲಾಖೆಯಲ್ಲಿ ಕೆಳ ಹಂತದಲ್ಲಿ ಫಾರೆಸ್ಟ್‌ ವಾಚರ್ಸ್‌ಗಳ ನೇಮಕಾತಿಯಲ್ಲಿ ಶೇ 50 ರಷ್ಟು ಮೀಸಲಿಡಲಾಗಿದೆ. ಅದರಿಂದ ಅರಣ್ಯ ಪ್ರದೇಶದಲ್ಲಿ ಅಕ್ರಮ ವ್ಯವಹಾರ ತಡೆಯಲು ಸಾಧ್ಯವಾಗುತ್ತದೆ. ಅದೇ ರೀತಿ ಫಾರೆಸ್ಟ್‌ ಗಾರ್ಡ್‌ಗಳ ನೇಮಕಾತಿಯಲ್ಲಿಯೂ ಶೇ. 30 ರಷ್ಟು ಅರಣ್ಯ ವಾಸಿಗಳಿಗೆ ಮೀಸಲಾತಿ ನೀಡಲು ಸಂಪುಟದಲ್ಲಿ ನಿರ್ಧರಿಸಲಾಗಿದ್ದು, ಈ ಕುರಿತು ಕಾನೂನು ತಿದ್ದುಪಡಿ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಫಾರೆಸ್ಟ್‌ ಗಾರ್ಡ್‌ ಹುದ್ದೆಗಳಿಗೆ ನೇಮಕಗೊಳ್ಳಲು ಎಸ್‌ಎಸ್‌ಎಲ್‍ಸಿ ಪಾಸಾಗಿರಬೇಕು. ದೈಹಿಕ ಪರೀಕ್ಷೆ ಮಾತ್ರ ಇರುತ್ತದೆ. ಅರಣ್ಯಗಳಲ್ಲಿ ಬಹುತೇಕ ಎಸ್ಸಿ /ಎಸ್ಟಿ ಸಮುದಾಯ ಹೆಚ್ಚಾಗಿರುತ್ತದೆ. ಇತರ ಸಮುದಾಯದವರಿದ್ದರೂ, ಮೀಸಲಾತಿ ವ್ಯಾಪ್ತಿಯಲ್ಲಿ ಬರುತ್ತಾರೆ ಎಂದು ಹೇಳಿದರು.

Advertisement

ಗ್ರಾಮೀಣ ಸುಮಾರ್ಗ ಯೋಜನೆ: ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ಗ್ರಾಮೀಣ ಪ್ರದೇಶದ ಮುಖ್ಯ ರಸ್ತೆಗಳ ಅಭಿವೃದ್ಧಿ ಹಾಗೂ ಸುಸ್ಥಿತಿಯಲ್ಲಿಡಲು “ಮುಖ್ಯಮಂತ್ರಿ ಗ್ರಾಮೀಣ ಸುಮಾರ್ಗ ಯೋಜನೆ” ಜಾರಿಗೆ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ರಾಜ್ಯದ 185 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 56,362 ಕಿ.ಮೀ. ಗ್ರಾಮೀಣ ಡಾಂಬರ್‌ ರಸ್ತೆಗಳಿವೆ. ಕಳೆದ 15 ವರ್ಷಗಳ ಹಿಂದೆಯೇ ಹಳ್ಳಿಗಳಲ್ಲಿ ಡಾಂಬರ್‌ ರಸ್ತೆ ನಿರ್ಮಾಣ ಮಾಡಲಾಗಿದ್ದು, ದೇಶದಲ್ಲಿ ಕರ್ನಾಟಕ ಮೊದಲ 3 ನೇ ಸ್ಥಾನದಲ್ಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕೇಂದ್ರ ಸರ್ಕಾರ ಗ್ರಾಮೀಣ ಮುಖ್ಯ ರಸ್ತೆಗಳನ್ನು ಗುರುತಿಸಲು ಕೆಲವು ಮಾನದಂಡ ಅನುಸರಿಸಲು ಸೂಚಿಸಿದೆ. ವಿದ್ಯಾಕೇಂದ್ರ, ಆರೋಗ್ಯ ಕೇಂದ್ರ, ಗ್ರಾಂಪಂ ಸಂಪರ್ಕ ಕಲ್ಪಿಸುವ ಆದ್ಯತಾ ರಸ್ತೆಗಳು ರಾಜ್ಯದಲ್ಲಿ 24.240 ಸಾವಿರ ಕಿ.ಮಿ.ಇದೆ. ಅವುಗಳನ್ನು ಸುಸ್ಥಿತಿಯಲ್ಲಿ ಇಡಲು ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.

ಆದ್ಯತೆಯ 24 ಸಾವಿರ ಕಿ.ಮೀ ರಸ್ತೆಯಲ್ಲಿ 4 ಸಾವಿರ ರಸ್ತೆಗಳು ಸುಸ್ಥಿತಿಯಲ್ಲಿವೆ. ಉಳಿದ 20 ಸಾವಿರ ಕಿ.ಮಿ.ರಸ್ತೆಗಳಿಗೆ ಮರು ಡಾಂಬರೀಕರಣ, ಮೇಲುಸ್ತುವಾರಿ ಮಾಡಲು ಐದು ವರ್ಷಗಳ ಅವಧಿಗೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ 7182 ಕೋಟಿ ಅಂದಾಜು ಮಾಡಲಾಗಿದೆ. ಅದರಲ್ಲಿ ಈ ವರ್ಷ 600 ಕೋಟಿ ಹೆಚ್ಚುವರಿ ಅನುದಾನ ನೀಡಲು ತೀರ್ಮಾನ ಮಾಡಲಾಗಿದೆ. 3 ಹಂತದಲ್ಲಿ.ರಸ್ತೆಗಳ ನಿರ್ಮಾಣ ಕಾರ್ಯ ನಡೆಸಲಾಗುವುದು ಎಂದರು.

ಮುಜರಾಯಿ ದೇವಸ್ಥಾನದ ಸಿಬ್ಬಂದಿಗೆ ವೇತನ ಪರಿಷ್ಕರಣೆ: ಹಿಂದೂ ಧಾರ್ಮಿಕ ದತ್ತಿ ಕಾಯ್ದೆ ಅಡಿಯಲ್ಲಿ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ಇತರ 3500 ಸಿಬ್ಬಂದಿಗೆ ವೇತನ ಪರಿಷ್ಕರಣೆ ಮಾಡಲು ಸಂಪುಟ ತೀರ್ಮಾನಿಸಿದೆ ಎಂದು ಹೇಳಿದರು.

ಮಾನವೀಯ ದೃಷ್ಟಿಯಿಂದ ದೇವಸ್ಥಾನದ ಆದಾಯದ ಶೇ.35ರ ಅನುಪಾತಕ್ಕೆ ಒಳಪಟ್ಟು ಎ ಗ್ರೇಡ್‌ ದೇವಸ್ಥಾನಗಳಲ್ಲಿ 11,600 ಸಾವಿರದಿಂದ 24,600 ರ ವರೆಗೆ, ಬಿ ಗ್ರೇಡ್‌ 7250-17250 ರವರೆಗೆ ವೇತನ ಹೆಚ್ಚಿಸಲು ತೀರ್ಮಾನಿಸಿದೆ ಎಂದು ಹೇಳಿದರು.

ಇನ್ವೆಸ್ಟ್‌ ಕರ್ನಾಟಕ ಮುಂದಕ್ಕೆ: ರಾಜ್ಯದಲ್ಲಿ ಬಂಡವಾಳ ಹೂಡಲು 2020 ರ ಜನ‌ರಿಯಲ್ಲಿ ಇನ್ವೆಸ್ಟ್‌ ಕರ್ನಾಟಕದ ಮೂಲಕ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲು ಸರ್ಕಾರ ಆಲೋಚಿಸಿತ್ತು. ಅದಕ್ಕೆ ಸಂಪುಟದಲ್ಲಿ ಅಪಸ್ವರ ಕೇಳಿ ಬಂದಿರುವುದರಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಸೂಕ್ತ ವಾತಾವರಣ ಇಲ್ಲ. ಅಲ್ಲದೇ ಜಿಂದಾಲ್‌ಗೆ ಜಮೀನು ಮಾರಾಟ ಮಾಡಿರುವ ಪ್ರಕರಣಕ್ಕೆ ವಿರೋಧ ವ್ಯಕ್ತವಾಗಿರುವುದರಿಂದ ದೊಡ್ಡ ಪ್ರಮಾಣ ಬಂಡವಾಳದಾರರು ರಾಜ್ಯದಲ್ಲಿ ಹೂಡಿಕೆಗೆ ಹಿಂದೇಟು ಹಾಕುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವನ್ನು ಕೆಲವು ಸಚಿವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಆ ಕಾರಣಕ್ಕೆ ಇನ್ವೆಸ್ಟ್‌ ಕರ್ನಾಟಕ 2020 ಸಮಾವೇಶವನ್ನು ಮುಂದೂಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಸಂಪುಟದ ಪ್ರಮುಖ ನಿರ್ಧಾರಗಳು
* ಕೇಂದ್ರ ಸರ್ಕಾರದ ಮಾದರಿ ನವೋದ್ಯಮ ನೀತಿ ತಿದ್ದುಪಡಿಗೆ ಒಪ್ಪಿಗೆ.

* ಬಾದಾಮಿ ತಾಲೂಕು ರಾಜ್ಯ ಹೆದ್ದಾರಿ 44 ರಲ್ಲಿ 147-165 ನೇ.ಕಿ.ಮೀ.ವರೆಗೆ 35 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ತೀರ್ಮಾನ.

* ರಾಮನಗರ ರಾಜೀವ್‌ ಗಾಂಧಿ ವೈದ್ಯಕೀಯ ಕಾಲೇಜು 750+250 ಹಾಸಿಗೆಯ ಮೆಡಿಕಲ್, ಡೆಂಟಲ್, ವಿದ್ಯಾರ್ಥಿ, ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣಕ್ಕೆ 480 ಕೋಟಿ ವೆಚ್ಚದಲ್ಲಿ ಟೆಂಡರ್‌ ಕರೆಯಲು ಒಪ್ಪಿಗೆ.

* ಗೋಕಾಕ್‌ ತಾಲೂಕಿನ ಕಲ್ಲಮರಡಿ ಏತ ನೀರಾವರಿ ಯೋಜನೆಗೆ ಸಂಪುಟ.ಒಪ್ಪಿಗೆ ನೀಡಿದೆ.

* ತುಮಕೂರಿಗೆ ಹೇಮಾವತಿ ನಾಲೆ ಆಧುನೀಕರಣಕ್ಕೆ 475 ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಿಗೆ.

* ಹೇಮಾವತಿಯಿಂದ ಕುಣಿಗಲ್ಗೆ ನೇರವಾಗಿ ನೀರು ನೀಡಲು 614 ಕೋಟಿ ವೆಚ್ಚದ ಯೋಜನೆ.

* ಕನಕಪುರದಲ್ಲಿ ಹನಿ ನೀರಾವರಿ ಯೋಜನೆ ಜಾರಿಗೊಳಿಸಲು 70 ಕೋಟಿ ಯೋಜನೆಗೆ ಒಪ್ಪಿಗೆ.

* ಕನಕಪುರದಲ್ಲಿ ಇನ್‌ಫೋಸಿಸ್‌ ಫೌಂಡೇಷನ್‌ ವತಿಯಿಂದ 26 ಕೋಟಿ ವೆಚ್ಚಲ್ಲಿ ಆಸ್ಪತ್ರೆ ನಿರ್ಮಿಸಲು ಅನುಮತಿ.

* ನಿವೃತ್ತ ಐಎಎಸ್‌ ಅಧಿಕಾರಿ ಭರತ್‌ ಲಾಲ್‌ ಮೀನಾ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತರು ಮಾಡಿರುವ ಶಿಫಾರಸಿನ ಪ್ರಕಾರ ಕ್ರಮ ಕೈಗೊಳ್ಳಲು ಪುನರ್‌ ಪರಿಶೀಲಿಸಲು ತಿರ್ಮಾನ.

Advertisement

Udayavani is now on Telegram. Click here to join our channel and stay updated with the latest news.

Next