Advertisement

ಅಂಗವಿಕಲ ಮಕ್ಕಳಿಗೆ ಚಿಕಿತ್ಸಾ ಘಟಕ ಇಲ್ಲ

10:32 AM May 09, 2022 | Team Udayavani |

ಕುಂದಾಪುರ: ತಾಲೂಕಿನಲ್ಲಿರುವ ಅಂಗವಿಕಲ ಮಕ್ಕಳಿಗೆ ವಾರಕ್ಕೊಮ್ಮೆಯೋ, ಎರಡು ಬಾರಿಯೋ ಚಿಕಿತ್ಸೆ ನೀಡಲು ಕುಂದಾಪುರದಲ್ಲಿ ಸುಸಜ್ಜಿತ ಘಟಕ ಇಲ್ಲ.

Advertisement

ಸಮನ್ವಯ ಶಿಕ್ಷಣ

ಶಾಲೆಗೆ ಹೋಗುವ ಅವಧಿಯಲ್ಲಿ ದೈಹಿಕ ನ್ಯೂನತೆ ಹೊಂದಿದವರು ಶೈಕ್ಷಣಿಕವಾಗಿ ವಂಚಿತರಾಗಬಾರದು. ಎಲ್ಲರಂತೆ ಈ ಮಕ್ಕಳೂ ಭಾಗಿಯಾಗಬೇಕು ಎಂದು ಸರಕಾರ ಶಿಕ್ಷಣ ಇಲಾಖೆಯಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ವಿಭಾಗ ತೆರೆದಿದೆ. ಈ ವಿಭಾಗ ಶೈಕ್ಷಣಿಕ ವಲಯಾದ್ಯಂತ ಅಂತಹ ಮಕ್ಕಳನ್ನು ಪತ್ತೆ ಹಚ್ಚಿ ಅವರಿಗೆ ಚಿಕಿತ್ಸೆ, ಶಿಕ್ಷಣ ಇತ್ಯಾದಿಗೆ ವ್ಯವಸ್ಥೆ ಮಾಡುತ್ತದೆ. ಕೇಂದ್ರ ಸರಕಾರ ಪ್ರಾಯೋಜಿತ ಇನ್‌ಕ್ಲೂಸಿವ್‌ ಎಜುಕೇಶನ್‌ ಫಾರ್‌ ಡಿಸೆಬಲ್ಡ್‌ ಇನ್‌ ಸೆಕೆಂಡರಿ ಸ್ಟೇಜ್‌ ಯೋಜನೆ ಪ್ರೌಢಶಾಲಾ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಕೇಂದ್ರ ಅನುದಾನದಲ್ಲಿಯೇ ನಡೆಯುತ್ತದೆ. ಸಾಮಾನ್ಯ ಶಾಲೆಗಳಲ್ಲಿ ಅಂಗವಿಕಲ ಮಕ್ಕಳಿಗೆ ವಿಶೇಷ ಸೌಲಭ್ಯ ಕಲ್ಪಿಸುವುದು, ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ, ಮೆಟ್ಟಿಲುಗಳ ಬದಲು ಗಾಲಿಕುರ್ಚಿ ಏರುವಂತಹ ರ್‍ಯಾಂಪ್‌ ವ್ಯವಸ್ಥೆ, ವಿಶೇಷ ಸಂಪನ್ಮೂಲ ಶಿಕ್ಷಕರ ಆಯ್ಕೆ, ಸಂಪನ್ಮೂಲ ಕೇಂದ್ರಗಳ ಬಲವರ್ಧನೆ, ಪರಿಸರ ಸ್ನೇಹಿ ವಾತಾವರಣ ನಿರ್ಮಿಸುವುದು ಈ ಯೋಜನೆ ವ್ಯಾಪ್ತಿಯಲ್ಲಿ ಬರುತ್ತದೆ.

ಚಿಕಿತ್ಸೆ

ಕುಂದಾಪುರ ಶೈಕ್ಷಣಿಕ ವಲಯದಲ್ಲಿ 357 ಮಕ್ಕಳು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇವರಿಗೆ ವಾರಕ್ಕೊಮ್ಮೆಯೋ ಎರಡು ಬಾರಿಯೋ ವಾಕ್‌-ಶ್ರವಣ, ಫಿಸಿಯೋಥೆರಪಿ, ಮಾನಸಿಕ ಚಿಕಿತ್ಸೆ ನೀಡಲಾಗುತ್ತದೆ. ಈ ಪೈಕಿ ತೀವ್ರ ಸಮಸ್ಯೆಯಲ್ಲಿರುವ, ದೂರಕ್ಕೆ ಬರಲು ಸಮಸ್ಯೆಯಾಗುವ ಮಕ್ಕಳನ್ನು ಪಾಲಕರು ಕರೆತರುವುದಿಲ್ಲ.

Advertisement

ಉಳಿದಂತೆ ಇತರರು ಚಿಕಿತ್ಸೆಗೆ ಬರುತ್ತಾರೆ. ಹೆಚ್ಚಿನ ಚಿಕಿತ್ಸೆ, ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರೆ ಅವರಿಗೆ ಅನುದಾನವೂ ದೊರೆ‌ಯುತ್ತದೆ. ಮನೆಯಲ್ಲಿ ಮಲಗಿದಲ್ಲೇ ಇರುವ ಮಕ್ಕಳಿಗೆ ಗೃಹಾಧಾರಿತ ಶಿಕ್ಷಣ ಇರುತ್ತದೆ. ವೈದ್ಯಕೀಯ ತಪಾಸಣೆ, ಸಾಧನ ಸಲಕರಣೆಗಳ ವಿತರಣೆ, ಸಾರಿಗೆ ಹಾಗೂ ಎಸ್ಕಾರ್ಟ್‌ ಭತ್ತೆ, ಪುಸ್ತಕ ಹಾಗೂ ಇತರ ಲೇಖನ ಸಾಮಗ್ರಿಗಳು, ಹೆಣ್ಣು ಮಕ್ಕಳಿಗೆ ವಿಶೇಷ ಭತ್ತೆ, ರೀಡರ್‌ ಭತ್ತೆ ನೀಡಲು ಅವಕಾಶ ಇದೆ.

ಕೊರತೆ

ಗೃಹಾಧಾರಿತ ಶಿಕ್ಷಣಕ್ಕೆ ಮೊದಲು ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿತ್ತು. ಆದರೆ ಈಗ ಆ ಸೌಲಭ್ಯವೂ ಇಲ್ಲ. ಶಿಕ್ಷಕರೇ ಶಾಲಾ ಕೆಲಸದ ನಡುವೆ ಇದಕ್ಕಾಗಿ ಬಿಡುವು ಮಾಡಬೇಕು. ಫಿಸಿಯೋಥೆರಪಿಗೆ ಶಿಕ್ಷಣ ಇಲಾಖೆಯಿಂದಲೇ ವೇತನ ನೀಡಿ ಪ್ರತ್ಯೇಕ ಸಿಬಂದಿಯನ್ನು ನೇಮಿಸಲಾಗುತ್ತಿತ್ತು. 10 ಸಾವಿರ ರೂ. ಗೌರವಧನ ನಿಗದಿಯಾಗಿತ್ತು. 16 ದಿನಗಳ ಕೆಲಸಕ್ಕಾಗಿ 625 ರೂ. ಗಳಂತೆ ಎಂದು ನಿಗದಿಯಾಗಿದ್ದರೂ ನಿರ್ದಿಷ್ಟ ಉದ್ದೇಶಕ್ಕಾಗಿ ಮೊತ್ತ ಕಳೆದು 7,500 ರೂ. ನೀಡಲಾಗುತ್ತಿತ್ತು. ಲಕ್ಷಾಂತರ ರೂ. ಖರ್ಚು ಮಾಡಿ ಫಿಸಿಯೋಥೆರಪಿ ಕಲಿತು 7,500 ರೂ.ಗೆ ದುಡಿಯಲು ಯಾರೂ ಮುಂದೆ ಬರದ ಕಾರಣ ಈಗ ಫಿಸಿಯೊಥೆರಪಿ ಸಿಬಂದಿಯೇ ಇಲ್ಲದಂತಾಗಿದೆ. ಅನುದಾನ ಮರಳಿ ಹೋಗುತ್ತಿದೆ.

ಎರಡು ವರ್ಷದಿಂದ ಹಣವೂ ಇಲ್ಲ

ಚಿಕಿತ್ಸಾ ಶಿಬಿರಕ್ಕೆ ಬರುವ ಮಕ್ಕಳಿಗೆ ಮನೆಯಿಂದ ಶಿಬಿರಕ್ಕೆ ಹೋಗಿ ಬರುವ ವೆಚ್ಚ ಎಂದು 300 ರೂ.ಗಳಂತೆ ನೀಡಲಾಗುತ್ತದೆ. ವರ್ಷದ 10 ತಿಂಗಳಿಗೆ ಒಟ್ಟು 3 ಸಾವಿರ ರೂ.ಗಳನ್ನು ಪ್ರತೀ ವಾರ ಬಂದು ಹೋದ ಬಾಬ್ತು ನೀಡಲಾಗುತ್ತದೆ. ಆದರೆ ಎರಡು ವರ್ಷಗಳಿಂದ ಈ ಹಣ ಮಕ್ಕಳಿಗೆ ನೀಡಲು ತಾಂತ್ರಿಕ ಕಾರಣದಿಂದ ಸಾಧ್ಯವಾಗಿಲ್ಲ. ಅನುದಾನ ಬಂದಿದ್ದರೂ ಮಕ್ಕಳ ಖಾತೆಗೆ ಹಣ ಜಮೆಯಾಗಿಲ್ಲ.

3 ವರ್ಷದಿಂದ ಶಿಬಿರ ಇಲ್ಲ

ವಿಶೇಷ ಮಕ್ಕಳ ಸಾಮೂಹಿಕ ವೈದ್ಯಕೀಯ ತಪಾಸಣ ಶಿಬಿರ ನಡೆಯದೇ ಮೂರು ವರ್ಷಗಳಾದವು. ಈ ಕುರಿತು ಶಿಕ್ಷಣ ಇಲಾಖೆ ಯಾವುದೇ ಅನುದಾನವನ್ನೂ ಬಿಡುಗಡೆ ಮಾಡಿಲ್ಲ, ಶಿಬಿರ ನಡೆಸಲು ಸುತ್ತೋಲೆಯನ್ನೂ ಹೊರಡಿಸಿಲ್ಲ. ಜಿಲ್ಲಾ ಅಂಗವಿಕಲ ಪುನರ್ವಸತಿ ಕೇಂದ್ರ ಸಿಬಂದಿಯಿಂದ ತಿಂಗಳಿಗೆ 3 ಬಾರಿ ಚಿಕಿತ್ಸಾ ಶಿಬಿರ ಜಿಲ್ಲೆಯ ಎಲ್ಲ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿದೆ.

ಚಿಕಿತ್ಸಾ ಘಟಕವೇ ಇಲ್ಲ

ಉಡುಪಿಯಲ್ಲಿ ಸುಸಜ್ಜಿತವಾಗಿ 65 ಲಕ್ಷ ರೂ. ವೆಚ್ಚದಲ್ಲಿ ಚಿಕಿತ್ಸಾ ಘಟಕ ಇತ್ತೀಚೆಗೆ ನಿರ್ಮಿಸಲಾಗಿದೆ. ಆದರೆ ಕುಂದಾಪುರದಲ್ಲಿ ಇಂತಹ ಘಟಕ ಇಲ್ಲ. ಹೊಸಬಸ್‌ನಿಲ್ದಾಣ ಬಳಿಯ ಮಾದರಿ ಶಾಲೆಯ ಕೊಠಡಿಯೊಂದರಲ್ಲಿ ಆಗಮಿಸಿದ ಹತ್ತಾರು ಜನರ ಮಧ್ಯೆಯೇ ಚಿಕಿತ್ಸೆ, ಕೌನ್ಸೆಲಿಂಗ್‌ ನಡೆಯುತ್ತದೆ. ಪ್ರತ್ಯೇಕ ಘಟಕ ಇದ್ದರೆ ಚಿಕಿತ್ಸೆಗೆ ಅನುಕೂಲ. ಈ ಹಿಂದೆ 7.5 ಲಕ್ಷ ರೂ. ಅನುದಾನ ಬಂದಿದ್ದರೂ ಸ್ಥಳಾವಕಾಶ ಇಲ್ಲದ ಕಾರಣ ಅನುದಾನ ವಿನಿಯೋಗ ಆಗಿಲ್ಲ. ಈಗ ತಾ.ಪಂ. ಬಳಿ ಕಟ್ಟಡವೊಂದನ್ನು ಕೇಳಲಾಗಿದ್ದು ತಾ.ಪಂ. ಇನ್ನೂ ನೀಡಿಲ್ಲ. ಕಳೆದ ವರ್ಷವೇ ನಿರ್ಣಯ ಆಗಿದ್ದರೂ ಕಟ್ಟಡ ನೀಡಲು ತಾ.ಪಂ. ಮೀನಮೇಷ ಎಣಿಸುತ್ತಿದೆ.

ಮೀಟಿಂಗ್‌ನಲ್ಲಿ ನಿರ್ಧಾರ

ಶಿಕ್ಷಣ ಇಲಾಖೆಯಿಂದ ಸಮನ್ವಯ ಶಿಕ್ಷಣದ ಮಕ್ಕಳ ಚಿಕಿತ್ಸೆ ಘಟಕಕ್ಕೆ ಕಟ್ಟಡವೊಂದನ್ನು ಕೇಳಿದ್ದು ತಾಂತ್ರಿಕ ಕಾರಣಗಳಿಂದ ಇನ್ನೂ ನೀಡಿಲ್ಲ. ಆಡಳಿತಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ತಾ.ಪಂ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಶ್ವೇತಾ ಎನ್‌., ತಾ.ಪಂ. ಕಾರ್ಯನಿರ್ವಹಣಾಧಿಕಾರಿ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next