Advertisement

ಭತ್ತದ ನಾಟಿಗೆ ನೀರಿನ ಕೊರತೆ

09:06 AM Jul 25, 2020 | Suhan S |

ಕುಮಟಾ: ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಮಳೆ ಸುರಿಯದ ಪರಿಣಾಮ ಭತ್ತದ ನಾಟಿ ಕಾರ್ಯಕ್ಕೆ ತೊಡಕಾಗಿದ್ದು, ನಾಟಿ ಮಾಡಿದ ಗದ್ದೆಗಳೂ ನೀರಿಲ್ಲದೇ ಕೆಂಪು ಬಣ್ಣಕ್ಕೆ ಪರಿವರ್ತನೆಯಾಗತೊಡಗಿದೆ. ಇದರಿಂದ ರೈತಾಪಿ ಸಮುದಾಯದಲ್ಲಿ ಆತಂಕ ಮನೆ ಮಾಡಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

ತಾಲೂಕಿನ ಕೂಜಳ್ಳಿ, ಕುಮಟಾ, ಗೋಕರ್ಣ ಹಾಗೂ ಮಿರ್ಜಾನ ಸೇರಿ ಒಟ್ಟೂ ನಾಲ್ಕು ಹೋಬಳಿಗಳ 2,860 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಅಘನಾಶಿನಿ, ಬಾಡ, ಕಾಗಾಲ, ಗುಡೇಅಂಗಡಿ, ಹೊಲನಗದ್ದೆ, ತೆಪ್ಪ, ಮದ್ಗುಣಿ, ಕೊಡಕಣಿ ಇನ್ನಿತರ ಭಾಗಗಳಲ್ಲಿ ಹೆಚ್ಚಾಗಿ ಜಯಾ ತಳಿ, ಗೋಕರ್ಣ ಭಾಗದಲ್ಲಿ ಪಿ.ಎ.ಸಿ 837 ಜಾತಿಯ ಹೈಬ್ರಿಡ್‌ ತಳಿ ಹಾಗೂ ಕೂಜಳ್ಳಿ ಹೊಬಳಿಯ ಧಾರೇಶ್ವರ, ಹೊಳೆಗದ್ದೆ ಭಾಗದಲ್ಲಿ ಎಮ್‌.ಓ-4 ಜಾತಿಯ ಕೆಂಪು ಅಕ್ಕಿಯ ಭತ್ತವನ್ನು ಬೆಳೆಯಲಾಗುತ್ತಿದೆ. ಕೊರೊನಾ ನಡುವೆಯೇ ಬದುಕು ಸಾಗಿಸುವ ಅನಿವಾರ್ಯತೆಯಲ್ಲಿ ಉಸಿರು ಬಿಗಿ ಹಿಡಿದು ಕೃಷಿ ಚಟುವಟಿಕೆಯತ್ತ ಮುಖ ಮಾಡಿದ ರೈತರು ಈಗಾಗಲೇ ಕೃಷಿ ಕೇಂದ್ರಗಳಿಂದ ಬಿತ್ತನೆಯ ಬೀಜ ಪಡೆದು ಶೇ. 80 ರಷ್ಟು ನಾಟಿ ಕಾರ್ಯ ಮುಗಿಸಿದ್ದಾರೆ. ಇನ್ನು ಒಂದು ವಾರದಿಂದ ಮಳೆ ಇಲ್ಲದ ಕಾರಣ ಗದ್ದೆಗಳಲ್ಲಿನ ನೀರು ಬತ್ತಿ, ಘಟ್ಟದ ತಪ್ಪಲು ಪ್ರದೇಶಗಳಲ್ಲಿ ನಾಟಿ ಕಾರ್ಯಕ್ಕೆ ತೀವ್ರ ತೊಡಕಾಗಿದೆ. ಈಗಾಗಲೇ ನಾಟಿ ಮುಗಿದ ಪ್ರದೇಶಗಳಲ್ಲೂ ನೀರಿಲ್ಲದೇ, ಭತ್ತದ ಬೆಳೆಗೆ ವಿವಿಧ ರೀತಿಯ ಬಾಧೆ ಎದುರಾಗುವಂತಾಗಿದ್ದು, ಇದರಿಂದ ಅನ್ನದಾತನಲ್ಲಿ ಆತಂಕ ಮನೆ ಮಾಡಿದೆ.

ಕೆಂಪು ಬಣ್ಣಕ್ಕೆ ತಿರುಗಿದ ಭತ್ತದ ಸಸಿ: ಈಗಾಗಲೇ ನಾಟಿ ಮುಗಿದ ಪ್ರದೇಶಗಳಲ್ಲಿನ ಗದ್ದೆಗಳಲ್ಲಿ ನೀರಿಲ್ಲದೇ, ಪೊಟ್ಯಾಷ್‌ ಪ್ರಮಾಣ ಕೊರತೆಯಾಗಿ, ಕಬ್ಬಿಣದ ಅಂಶ ಅಧಿಕವಾಗತೊಡಗಿದೆ. ಇದರಿಂದ ಭತ್ತದ ಸಸಿಗಳು (ಕಾಯಲ್‌) ಕೆಂಪು ಬಣ್ಣಕ್ಕೆ ಪರಿವರ್ತನೆಯಾಗಿ, ಬೆಂಕಿ ರೋಗದಂತೆ ಗೋಚರವಾಗತೊಡಗಿದೆ. ಈ ರೋಗದಿಂದ ಭತ್ತದ ಸಸಿಗಳು ಸಮೃದ್ಧವಾಗಿ ಬೆಳೆಯದೇ ಫಸಲೂ ಕಡಿಮೆಯಾಗಲಿದೆ ಎಂಬ ಆತಂಕ ಸಾಲ ಮಾಡಿ ಕೃಷಿಯತ್ತ ಒಲವು ತೋರಿದ ರೈತಾಪಿ ಸಮುದಾಯಕ್ಕೆ ಕಾಡತೊಡಗಿದೆ.

ಕರಾವಳಿ ಭಾಗಗಳ ನಾಟಿ ಮಾಡಿದ ಗದ್ದೆಗಳಲ್ಲಿ ನೀರಿಲ್ಲದೇ ಕಬ್ಬಿಣದ ಪ್ರಮಾಣ ಅಧಿಕಗೊಳ್ಳುತ್ತಿದೆ. ಇದರಿಂದ ಪೊಟ್ಯಾಷ್‌ ಪ್ರಮಾಣದ ಕೊರತೆಯಿಂದ ಭತ್ತದ ಏಳಿಗೆಗೆ ಕುಂಠಿತವಾಗಲಿದೆ. ಕಬ್ಬಿಣದ ಪ್ರಮಾಣ ಅಧಿಕಗೊಂಡ ಪ್ರದೇಶಗಳಲ್ಲಿ ಸುಣ್ಣದ ತಿಳಿನೀರು ಸಿಂಪಡಣೆ ಮಾಡಿ, ಪೊಟ್ಯಾಷ್‌ ಪ್ರಮಾಣವನ್ನು ಅ ಧಿ‌ಗೊಳಿಸಬೇಕು. ಇದರಿಂದ ಕೆಂಪು ಬಣ್ಣಕ್ಕೆ ತಿರುಗಿದ ಭತ್ತದ ಸಸಿಗಳು ಸಮೃದ್ಧವಾಗಿ ಬೆಳೆಯುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಂಕರ ಹೆಗಡೆ.

Advertisement

Udayavani is now on Telegram. Click here to join our channel and stay updated with the latest news.

Next