Advertisement

ಸೌಲಭ್ಯವಿಲ್ಲದೆ ಕೊಂಪೆಯಾದ ಪ್ರಾಧಿಕಾರದ ಬಡಾವಣೆ

12:26 PM Jun 12, 2022 | Team Udayavani |

ರಾಮನಗರ: ಸರ್ಕಾರಕ್ಕೆ ಕೊಟ್ಟ ಹಣ, ಮಸಣಕ್ಕೆ ಹೋದ ಹೆಣ ಎರಡೂ ಒಂದೆ ಅಂತಾರಲ್ಲ, ಅದು ಅಕ್ಷರಶಃ ಸತ್ಯ. ಇದಕ್ಕೆ ತಾಜಾ ನಿದರ್ಶನ ಎಂಬಂತೆ ಸೂರಿಲ್ಲದವರಿಗೆ ಸೂರು ನೀಡಬೇಕೆನ್ನುವ ಸರ್ಕಾರದ ಮಹತ್ತರ ಯೋಜನೆಯೊಂದು ಹಳ್ಳ ಹಿಡಿದಿರೋದು ಸಾಕ್ಷಿಯಾಗಿದೆ. ಬಡವರ ಸೂರಿನ ಕನಸು ನನಸಾಗಲೆಂದು ಸ್ಥಳೀಯ ಪ್ರಾಧಿಕಾರಗಳ ಮೂಲಕ ನಿವೇಶನ ಹಂಚಿಕೆಗೆ ಆದ್ಯತೆ ನೀಡಲಾಗಿತ್ತು. ಪ್ರಮುಖವಾಗಿ ರಾಮನಗರ- ಚನ್ನಪಟ್ಟಣ ಪ್ರಾಧಿಕಾರದ ವತಿಯಿಂದ ರಾಮನಗರ ಮತ್ತು ಚನ್ನಪಟ್ಟಣಗಳಲ್ಲಿ ಬಡಾವಣೆಗಳನ್ನ ನಿರ್ಮಿಸಲಾಗಿತ್ತು.

Advertisement

ಒಂದುವರೆ ದಶಕದ ಹಿಂದೆ ಕೆಂಪೇಗೌಡನದೊಡ್ಡಿ ಬಳಿಯ ಜೀಗೇನಹಳ್ಳಿ ಪ್ರದೇಶದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಅರ್ಕಾವತಿ ಬಡಾವಣೆ ಹೆಸರಿನಲ್ಲಿ ಲೇಔಟ್‌ ನಿರ್ಮಿಸಿದ್ದು, ಅದರೀಗ ಅದು ಹಾಳು ಕೊಂಪೆ ಯಾಗಿದ್ದು, ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗುತ್ತಿದೆ. ಆ ಮೂಲಕ ಸ್ವಂತ ಸೂರು ಕಟ್ಟಿಕೊಳ್ಳುವ ಜನರ ಕನಸಿಗೆ ತಣ್ಣೀರು ಎರಚಿದಂತಾಗಿದೆ. ರಾಮನಗರದ ನಿವೇಶನ ರಹಿತರಿಗೆ ಕಡಿಮೆ ಖರ್ಚಿನಲ್ಲಿ ಸ್ವಂತ ಸೂರು ಒದಗಿಸುವ ಸಲುವಾಗಿ ಅಂದಿನ ರಾಮನಗರ-ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ನಗರಕ್ಕೆ ಹೊಂದಿಕೊಂಡಂತೆ ಇರುವ ಜೀಗೇನಹಳ್ಳಿಯಲ್ಲಿ ಅರ್ಕಾವತಿ ಬಡಾವಣೆಯನ್ನು ನಿರ್ಮಾಣ ಮಾಡಿತ್ತು. ಸರ್ಕಾರದ ಅಂಗ ಸಂಸ್ಥೆಯೊಂದು ರಾಮನಗರದಲ್ಲಿ ಭೂ ಮಾಲೀಕರಿಂದ ಶೇ 40, 60% ಲೆಕ್ಕಾಚಾರದಲ್ಲಿ ಎರಡನೇ ಹಂತದಲ್ಲಿ ನಿರ್ಮಿಸಿದ ಬಡಾವಣೆ ಇದಾಗಿತ್ತು.

ಸೌಲಭ್ಯ ಪಡೆಯುವಲ್ಲಿ ವಿಫಲ: ಸರ್ಕಾರದ ಅಂಗ ಸಂಸ್ಥೆ ನಿರ್ಮಿಸುತ್ತಿರುವುದರಿಂದ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ಕೊರತೆಯಾಗದೆ ಒಂದು ಒಳ್ಳೆ ಸೂರು ಕಟ್ಟಿಕೊಳ್ಳುವ ಜೊತೆಗೆ ಬದುಕಿಗೂ ಭದ್ರತೆ ಸಿಗಲಿದೆ ಎಂಬ ಆಸೆಯಿಂದ ಮುಗಿಬಿದ್ದು ಜನರು ನಿವೇಶನ ಕೊಂಡುಕೊಂಡಿದ್ದರು. ಆದರೆ, ಇದೀಗ ಒಂದುವರೆ ದಶಕ ಕಳೆದರೂ, ಈ ಬಡಾವಣೆ ಎಳ್ಳಷ್ಟೂ ಅಭಿವೃದ್ಧಿ ಕಂಡಿಲ್ಲ. ಕೆಲವರು ಕಚೇರಿಗೆ ಅಲೆದಲೆದು ಅಗತ್ಯ ಮೂಲಭೂತ ಸೌಲಭ್ಯ ಪಡೆಯುವಲ್ಲಿ ವಿಫಲವಾಗಿ ನಿವೇಶನ ಕೊಂಡವರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವುದು ಮಾತ್ರ ತಪ್ಪಿಲ್ಲ. ಸುಮಾರು 800ಕ್ಕೂ ಹೆಚ್ಚು ನಿವೇಶನಗಳಿವೆ. ಆದರೆ, 20 ಮನೆಗಳಷ್ಟೇ ನಿರ್ಮಾಣ ಆಗಿವೆ. ಇಲ್ಲಿ ಮೂಲ ಸೌಕರ್ಯ ಎಂಬುದು ಮರೀಚಿಕೆಯಾಗಿದೆ. ಕನಿಷ್ಠ ಚರಂಡಿ, ವಿದ್ಯುತ್‌, ಕುಡಿಯುವ ನೀರಿನ ಸಂಪರ್ಕ ಸಹ ಇಲ್ಲದೇ ಇರುವುದು ಇಲ್ಲಿನ ವ್ಯವಸ್ಥೆಯನ್ನು ಅಣಕಿಸುವಂತೆ ಮಾಡಿದೆ.

ಪಾಳು ಬಿದ್ದ ನೀರಿನ ಟ್ಯಾಂಕ್‌: ಬಡಾವಣೆ ನಿರ್ಮಾಣದ ಆರಂಭದಲ್ಲಿ ನಿರ್ಮಿಸಲಾದ ಬೃಹತ್‌ ನೀರಿನ ಟ್ಯಾಂಕ್‌ ಬಳಕೆಗೆ ಮುನ್ನವೇ ಶಿಥಿಲಾವಸ್ಥೆ ತಲುಪಿದೆ. ಅಲ್ಲದೆ, ಇಡೀ ಬಡಾವಣೆಗೆ ಇಂದಿಗೂ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನೇ ಮಾಡಿಲ್ಲ. ಅದು ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ. ಇದರಿಂದ ಲಕ್ಷಾಂತರ ರೂಪಾಯಿ ಸಾರ್ವಜನಿಕರ ಹಣ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ. ಬಡಾವಣೆಯಲ್ಲಿ ಅಲ್ಲೊಂದು ಇಲ್ಲೊಂದು ಮನೆ ನಿರ್ಮಾಣವಾಗಿದ್ದು, ಅಲ್ಲಿನ ಕೊಳವೆ ಬಾವಿಗೆ ಇಲ್ಲಿನ ನಿವಾಸಿಗಳೇ ಸೇರಿ ಸಂಪರ್ಕ ಕಲ್ಪಿಸಿಕೊಂಡು ಅಷ್ಟಿಷ್ಟು ನೀರು ಪಡೆದುಕೊಳ್ಳುತ್ತಿದ್ದಾರೆ. ಹೆಚ್ಚು ನೀರು ಬೇಕಾದಲ್ಲಿ ಟ್ಯಾಂಕರ್‌ಗಳ ಮೊರೆ ಹೋಗಬೇಕಾದ ಸ್ಥಿತಿ ಇದೆ.

ತಾತ್ಕಾಲಿಕ ವಿದ್ಯುತ್‌ ಸಂಪರ್ಕ: ಹಲವು ಭಾರಿ ಪ್ರತಿ ಭಟನೆ ಮಾಡಿದ್ದರಿಂದ ಎಚ್ಚೆತ್ತ ಪ್ರಾಧಿಕಾರವು ಕೆಲವು ವರ್ಷಗಳ ಹಿಂದೆ ಇಲ್ಲಿ ವಿದ್ಯುತ್‌ ಕಂಬಗಳನ್ನು ಹಾಕಿದ್ದು, ಇಂದಿಗೂ ಇಲ್ಲಿ ಸಕ್ರಮ ವಿದ್ಯುತ್‌ ಸಂಪರ್ಕ ಇಲ್ಲ. “ಇಲ್ಲಿ ವಾಸ ಇರುವವರು ಈಗಲೂ ತಾತ್ಕಾಲಿಕ ವಿದ್ಯುತ್‌ ಸಂಪರ್ಕವನ್ನೇ ಮುಂದುವರಿಸಿದ್ದೇವೆ. ಇದಕ್ಕಾಗಿ ಪ್ರತಿ 28ದಿನಕ್ಕೆ ಒಮ್ಮೆ 1,350 ದುಬಾರಿ ಶುಲ್ಕ ಪಾವತಿಸುತ್ತಿ ದ್ದೇವೆ. ಶಾಶ್ವತ ಮೀಟರ್‌ ಅಳವಡಿಸಿ ಸಂಪರ್ಕ ನೀಡಲು ಬೆಸ್ಕಾಂನವರು ಒಪ್ಪುತ್ತಿಲ್ಲ. ಕೇಳಿದರೆ ನಿಮ್ಮ ನಿವೇಶನಗಳೇ ಇನ್ನು ಅಧಿಕೃತವಾಗಿಲ್ಲ ಎಂಬ ಸಿದ್ಧ ಉತ್ತರ ಇಟ್ಟುಕೊಂಡಿದ್ದಾರೆ. ಹೆಚ್ಚಿಗೆ ಮಾತನಾಡಿದರೆ ಇರುವ ಮೀಟರ್‌ನ್ನು ಕಿತ್ತೂಯ್ಯುತ್ತೇವೆ ಎನ್ನುತ್ತಾರೆ ಎಂದು ನಿವಾಸಿ ರಮೇಶ್‌ ತಮ್ಮ ಅಳಲು ತೋಡಿಕೊಂಡಿದ್ದಾರೆ.

Advertisement

ಮೂಲಭೂತ ಸೌಲಭ್ಯ ಮರೀಚಿಕೆ: ಬಡಾವಣೆ ಅಭಿವೃದ್ಧಿ ವೇಳೆ ಉದ್ಯಾನಕ್ಕೆಂದು ಮೀಸಲಿಟ್ಟ ಜಾಗ ಇಂದು ಪಾಳು ಬಿದ್ದಿದ್ದು, ಪ್ರಾಧಿಕಾರ ಅದನ್ನು ಅಭಿವೃದ್ಧಿಪಡಿಸುವ ಗೋಜಿಗೆ ಹೋಗಿಲ್ಲ. ಅಷ್ಟೇ ಏಕೆ ಒಳಚರಂಡಿ ಸಂಪರ್ಕವಾಗಲಿ, ಒಳ ರಸ್ತೆಗಳಾಗಲಿ ಯಾವೊಂದು ಸುಸ್ಥಿತಿಯಲ್ಲಿ ಇಲ್ಲ. ರಸ್ತೆಗಳ ಪಕ್ಕ ಹಾಕಿದ ನಾಮಫಲಕಗಳು ತುಕ್ಕು ಹಿಡಿದಿದ್ದು, ಕಳೆದೊಂದು ದಶಕದಿಂದ ಈ ಬಡಾವಣೆ ಎಳ್ಳಷ್ಟೂ ಅಭಿವೃದ್ಧಿ ಕಂಡಿಲ್ಲ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿದ್ದಾರೆ.

ಅನೈತಿಕ ತಾಣವಾಗಿ ಮಾರ್ಪಟ್ಟ ಬಡಾವಣೆ: ನಿರ್ಜನ ಪ್ರದೇಶದಂತೆ ಕಾಣುವ ಬಡಾವಣೆಯಲ್ಲಿ ಹೇಳ್ಳೋರು ಕೇಳ್ಳೋರು ಯಾರು ಇಲ್ಲದಂತಾಗಿ ಇಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ರಾಶಿಗಟ್ಟಲೆ ಮದ್ಯದ ಬಾಟಲಿ ಕಾಣ ಸಿಗುತ್ತವೆ. ಇಸ್ಪೀಟ್‌ ಹಾಗೂ ಕುಡುಕರಿಗೆ ಸದ್ಯಕ್ಕೆ ಬಡಾವಣೆ ಆಶ್ರಯ ನೀಡಿದ್ದು, ಹಗಲು ಹೊತ್ತಿನಲ್ಲೇ ಇಲ್ಲಿ ಮದ್ಯ ವ್ಯಸನಿಗಳು ಬರುತ್ತಾರೆ. ಇನ್ನು ರಾತ್ರಿ ಹೊತ್ತಿನಲ್ಲಂತೂ ಹೇಳುವ ಹಾಗಿಲ್ಲ. ಬೈಕ್‌ಗಳಲ್ಲಿ ಇವರ ಓಡಾಟ ಸಾರ್ವಜನಿಕರಿಗೂ ಕಿರಿಕಿರಿ ತಂದೊಡ್ಡಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಪೊಲೀಸ್‌ ಬೀಟ್‌ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಸ್ಥಳೀಯರ ಆಗ್ರಹ.

ಹೊಸದಾಗಿ ಅಧಿಕಾರ ವಹಿಸಿಕೊಂಡು ಮೊದಲ ಹೆಜ್ಜೆಯಾಗಿ ಜಿಲ್ಲೆಯಲ್ಲಿ ನಿರ್ಮಿಸಿರುವ ಮೂರು ಲೇಔಟ್‌ಗಳ ಸುಸ್ಥಿತಿಗೆ ಅಗತ್ಯ ಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕೆಂದು ನಿರ್ಧರಿಸಿದ್ದೇವೆ. ಮೊದಲಿಗೆ ಅಲ್ಲಿ ಕಟ್ಟಲಾಗಿರುವ 20 ಮನೆಗಳಿಗೆ ವಿದ್ಯುತ್‌ ಸಂಪರ್ಕ ಸಕ್ರಿಯಗೊಳಿಸಿ ಆರ್‌ಆರ್‌ ನಂ ಕೊಡಿಸಬೇಕು. ಬಳಿಕ ಪೈಪ್‌ ಲೈನ್‌, ವಿದ್ಯುತ್‌ ಲೈನ್‌ಗಳು ಹಾಳಾಗಿವೆ. ಎಲ್ಲಕ್ಕೂ ಟೆಂಡರ್‌ ಕರೆದು ಸರಿಪಡಿಸಲಾಗುವುದು. 2000 ನಿವೇಶನ ನೋಂದಣಿ ಮಾಡಿಸಿ ಕೊಡಲು ಸಿದ್ಧತೆ ಮಾಡಿಕೊಂಡಿದ್ದೇವೆ. – ಶಿವಮಾದು, ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಬಡಾವಣೆಯಲ್ಲಿ ನಿವೇಶನ ಕೊಂಡು ಮನೆ ಕಟ್ಟುವ ಕನಸು ಕಂಡಿದ್ದೆವು ಆಗಲಿಲ್ಲ. ಹೋಗಲಿ ನಿವೇಶನ ಮಾರಿ ತಮ್ಮ ಹಣ ವಾಪಸ್‌ ಪಡೆದುಕೊಳ್ಳೋಣ ಎಂದರೂ ಅದಕ್ಕೂ ಅವಕಾಶ ಇಲ್ಲ. ಪ್ರಾಧಿಕಾರದಿಂದ 13 ವರ್ಷ ಕಳೆದರೂ, ಈ ನಿವೇಶನಗಳಿಗೆ ಇನ್ನು ಶಾಶ್ವತ ನೋಂದಣಿ ಪ್ರಮಾಣಪತ್ರ, ಸೇಲ್‌ ಡೀಡ್‌ ಯಾವುದೂ ಸಿಕ್ಕಿಲ್ಲ. ಪ್ರಾಧಿಕಾರದ ಮೇಲಿಟ್ಟಿದ್ದ ನಂಬಿಕೆ ಹುಸಿಯಾಗಿದೆ. – ನಿಂಗರಾಜು, ಸ್ಥಳೀಯ ನಿವಾಸಿ

 

– ಎಂ.ಎಚ್‌. ಪ್ರಕಾಶ್‌ ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next