Advertisement

ಗ್ರಂಥಾಲಯಗಳಲ್ಲಿ ಸೌಲಭ್ಯಗಳ ಕೊರತೆ; ಓದುಗರಿಗೆ ನಿರಾಸೆ

01:57 PM Jun 25, 2020 | mahesh |

ಉಡುಪಿ: ಪುಸ್ತಕ ಅಭಿರುಚಿ ಮೂಡಿಸಲು ಅಸ್ತಿತ್ವಕ್ಕೆ ಬಂದ ಗ್ರಾಮೀಣ ಗ್ರಂಥಾಲಯಗಳು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಜಿಲ್ಲೆಯಲ್ಲಿ ಗ್ರಾ.ಪಂ.ಗೆ ಒಂದರಂತೆ ಸುಮಾರು 147 ಗ್ರಾಮೀಣ ಗ್ರಂಥಾಲಯ ಗಳಿದ್ದು, ಅವುಗಳಿಗೆ ಸ್ವಂತ ಕಟ್ಟಡಗಳಿಲ್ಲ. ಗ್ರಾ. ಪಂ. ಕಚೇರಿಗಳ ಪಕ್ಕದ ಕೊಠಡಿಗಳಲ್ಲಿ, ಖಾಲಿ ಇರುವ ಕಟ್ಟಡಗಳು, ಶಾಲೆಗಳ ಕೊಠಡಿ ಮುಂತಾದೆಡೆ ಕಿರಿದಾದ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

Advertisement

8 ಸ್ವಂತ ಕಟ್ಟಡಗಳಿಗೆ ಪ್ರಸ್ತಾವನೆ ಸಲ್ಲಿಕೆ
ಗ್ರಂಥಾಲಯ ಇಲಾಖೆಗೆ ಸೇರಿದ ನಲ್ಲೂರು ಮತ್ತು ಹೆಬ್ರಿ ಗ್ರಂಥಾಲಯಗಳು ಮಾತ್ರ ಸ್ವಂತ ಭೂಮಿ ಮತ್ತು ಕಟ್ಟಡ ಹೊಂದಿವೆ. ಉಳಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ 8 ಕಡೆಗಳಲ್ಲಿ ಸ್ವಂತ ಕಟ್ಟಡಕ್ಕೆ ನಿವೇಶನ ನೀಡುವಂತೆ ಈ ಹಿಂದೆಯೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇನ್ನೂ ಅನುಮೋದನೆ ಮಾತ್ರ ಸಿಕ್ಕಿಲ್ಲ.

ಪೀಠೊಪಕರಣಗಳೂ ಇಲ್ಲ
ಜಿಲ್ಲೆಯ ಗ್ರಂಥಾಲಯಗಳಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದ್ದಂತೆ ಭಾಸವಾಗುತ್ತಿದೆ. ಆದರೆ ಬಹುತೇಕ ಗ್ರಂಥಾಲಯಗಳಲ್ಲಿ ಆವಶ್ಯಕ ಪುಸ್ತಕಗಳಿಲ್ಲ, ಇದ್ದವೂ ಸುರಕ್ಷಿತವಾಗಿಲ್ಲ. ಜತೆಗೆ ಇತರ ಹಲವು ಕೊರತೆಗಳೂ ಕಾಡುತ್ತಿವೆ. ಸರಿಯಾದ ಗಾಳಿ-ಬೆಳಕು, ಕಟ್ಟಡಗಳಲ್ಲಿ ಓದುಗರಿಗೆ ಅಗತ್ಯ ಕುರ್ಚಿ, ಟೇಬಲ್‌ಗ‌ಳೂ ಇಲ್ಲ. ಬಳಕೆಯಾಗದ ಕಂಪ್ಯೂಟರ್‌ ಕೆಲವು ಗ್ರಂಥಾಲಯಗಳಲ್ಲಿ ಕಂಪ್ಯೂಟರ್‌ಗಳಿದ್ದರೂ ಅದನ್ನು ಬಳಸುವ ತರಬೇತಿ ಪಡೆದ ಸಿಬಂದಿ ಕೊರತೆಯಿಂದ ನಿಷ್ಪ್ರಯೋಜಕವಾಗಿವೆ.

ಅನ್ಯಇಲಾಖೆಗೆ ವರ್ಗಾವಣೆ
ಗ್ರಾ.ಪಂ. ಗ್ರಂಥಾಲಯಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ವ್ಯಾಪ್ತಿಗೆ ವರ್ಗಾಯಿಸಿ 2019ರ ಮಾರ್ಚ್‌ನಲ್ಲಿ ಸರಕಾರ ಆದೇಶ ನೀಡಿದೆ. ರಾಜ್ಯದಲ್ಲಿ ಒಟ್ಟು 5,766 ಗ್ರಾ.ಪಂ. ಗ್ರಂಥಾಲಯಗಳು ಕಾರ್ಯ ರ್ವಹಿಸುತ್ತಿವೆ. ಈ ಗ್ರಂಥಾಲಯಗಳಲ್ಲಿ ಗೌರವಧನ ಆಧಾರದ ಮೇಲೆ ಒಟ್ಟು
5,639 ಮೇಲ್ವಿಚಾರಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 5,766 ಗ್ರಾ.ಪಂ. ಗ್ರಂಥಾಲಯಗಳಲ್ಲಿ ಪಟ್ಟಣ ಪಂಚಾಯತ್‌,
ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳಲ್ಲಿನ ಒಟ್ಟು 133 ಗ್ರಂಥಾಲಯ ಹಾಗೂ ಮೇಲ್ವಿಚಾರಕರನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿಯೇ ಉಳಿಸಿಕೊಳ್ಳಲಾಗಿತ್ತು. 5,633 ಗ್ರಾ.ಪಂ. ಗ್ರಂಥಾಲಯಗಳನ್ನು ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಮೂಲಕ ಗ್ರಾ.ಪಂ.ಗಳಿಗೆ ವರ್ಗಾಯಿಸಿದೆ.

ಲಾಕ್‌ಡೌನ್‌ ಬಳಿಕ ತೆರೆದಿಲ್ಲ
ಲಾಕ್‌ಡೌನ್‌ ತೆರವಿನ ಬಳಿಕ ರಾಜ್ಯದಲ್ಲಿ ಬಹುತೇಕ ಎಲ್ಲ ಸಾರ್ವಜನಿಕರ ಸೇವೆಗಳು ಆರಂಭವಾಗಿದ್ದರೂ ಗ್ರಂಥಾಲಯಗಳು ಇನ್ನೂ ಮುಚ್ಚಿವೆ. ಎಲ್ಲ
ಸೇವೆಗಳಿಗೆ ಅವಕಾಶ ನೀಡಿರುವಾಗ ಲೈಬ್ರೆರಿಗಳಿಗೆ ಮಾತ್ರ ಯಾಕಿಲ್ಲ ಎನ್ನುವುದು ಓದುಗರ ಪ್ರಶ್ನೆ.

Advertisement

ಅನುಮೋದನೆಗೆ ಬಾಕಿ
ಜಿಲ್ಲೆಯಲ್ಲಿ ಗ್ರಂಥಾಲಯ ಇಲಾಖೆ ವ್ಯಾಪ್ತಿಗೊಳಪಟ್ಟ 8 ಕಡೆಗಳಲ್ಲಿ ಸ್ವಂತ ಕಟ್ಟಡಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ಸಿಗಬೇಕಿದೆ.
– ನಳಿನಿ ಜಿ.ಐ., ಮುಖ್ಯ ಗ್ರಂಥಾಲಯಾಧಿಕಾರಿ,
ಜಿಲ್ಲಾ ಕೇಂದ್ರ ಗ್ರಂಥಾಲಯ , ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next