Advertisement

Kuwait ಅಗ್ನಿ ದುರಂತ; ಸಂತ್ರಸ್ತ ಕುಟುಂಬಗಳಿಗೆ ಸಂಪೂರ್ಣ ನೆರವು: NBTC MD

11:52 PM Jun 15, 2024 | Team Udayavani |

ಕೊಚ್ಚಿ: ಗಲ್ಫ್ ರಾಷ್ಟ್ರ ಕುವೈತ್ ನ ವಸತಿಗೃಹವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿರುವ ಕಾರ್ಮಿಕರ ಸಂತ್ರಸ್ತ ಕುಟುಂಬಗಳನ್ನು ಕಂಪನಿ ನೋಡಿಕೊಳ್ಳುತ್ತದೆ ಎಂದು ಎನ್‌ಬಿಟಿಸಿ ಗ್ರೂಪ್‌ನ ಎಂಡಿ ಕೆ.ಜಿ.ಅಬ್ರಹಾಂ ಅವರು ಶನಿವಾರ ಹೇಳಿದ್ದಾರೆ.

Advertisement

49 ಜನರ ಸಾವಿಗೆ ಕಾರಣವಾದ ಘೋರ ದುರಂತದ ಮೂರು ದಿನಗಳ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅಬ್ರಹಾಂ ಭಾವುಕರಾಗಿ ‘ನಮ್ಮನ್ನು ಕ್ಷಮಿಸಿ. ನಡೆದ ಘಟನೆ ದುರದೃಷ್ಟಕರ’ಎಂದರು.

“ನಾವು ತುಂಬಾ ವಿಷಾದಿಸುತ್ತೇವೆ. ನಾನು ನನ್ನ ಮನೆಯಲ್ಲಿ ಅಳುತ್ತಿದ್ದೆ. ಅವರಲ್ಲಿ ಹೆಚ್ಚಿನವರು ನನಗೆ ಗೊತ್ತು. 27 ವರ್ಷಕ್ಕೂ ಹೆಚ್ಚು ಕಾಲ ನಮ್ಮೊಂದಿಗೆ ಕೆಲಸ ಮಾಡಿದವರು ಇದ್ದರು. ನಡೆದಿರುವುದು ನಿಜಕ್ಕೂ ದುರದೃಷ್ಟಕರ” ಎಂದರು.

”ನಮ್ಮ ಕಂಪನಿಯ ನಿರ್ದೇಶಕರು ಮತ್ತು ವ್ಯವಸ್ಥಾಪಕರು ಪ್ರಸ್ತುತ ಮೃತರ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನೂ ಭೇಟಿ ಮಾಡಿ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಕಡೆಯಿಂದ ಯಾವುದೇ ತಪ್ಪಾಗಿಲ್ಲ, ಆದರೆ ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಅವರು ನಮ್ಮೊಂದಿಗಿದ್ದು ಕೆಲಸ ಮಾಡುತ್ತಿದ್ದರು. ಅವರು ಕಂಪನಿಯನ್ನು ನಿರ್ಮಿಸಿದ್ದರು. ಅವರೆಲ್ಲರೂ ನಮ್ಮ ಕುಟುಂಬ ಸದಸ್ಯರು. ಪರಿಹಾರವನ್ನು ವಿತರಿಸುವ ಪ್ರಕ್ರಿಯೆಗೆ ರಾಯಭಾರ ಕಚೇರಿಗಳೊಂದಿಗೆ ಚರ್ಚೆ ನಡೆಯುತ್ತಿದೆ” ಎಂದರು.

“ನಾವು ಶೀಘ್ರದಲ್ಲೇ ಎಂಟು ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ವಿತರಿಸುತ್ತೇವೆ. ಕಂಪನಿಯ ವಿಮಾ ಮೊತ್ತವನ್ನು ಸಹ ಪಡೆಯುತ್ತಾರೆ.ಸಂತ್ರಸ್ತರ ಕುಟುಂಬಗಳು ನಾಲ್ಕು ವರ್ಷಗಳ ಸಂಬಳದ ಮೌಲ್ಯದ ವಿಮಾ ಮೊತ್ತವನ್ನು ಪಡೆಯುತ್ತವೆ. ನಾವು ಕುಟುಂಬಗಳ ಬಗ್ಗೆ ಕಾಳಜಿ ವಹಿಸುತ್ತೇವೆ ಮತ್ತು ಅವರಿಗೆ ಬೆಂಬಲ ಮತ್ತು ಉದ್ಯೋಗಗಳನ್ನು ಒದಗಿಸುತ್ತೇವೆ, ”ಎಂದರು. ಇದೆ ವೇಳೆ ಟ್ಟಡದಲ್ಲಿ ಜನದಟ್ಟಣೆ ಹೆಚ್ಚಿತ್ತು ಎಂಬ ಆರೋಪವನ್ನೂ ಅಬ್ರಹಾಂ ತಳ್ಳಿಹಾಕಿದರು. ಗುತ್ತಿಗೆ ಪಡೆದ ಕಟ್ಟಡವು ತಲಾ ಮೂರು ಬೆಡ್ ರೂಮ್ ಗಳೊಂದಿಗೆ 24 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು, ಅಲ್ಲಿ ಸುಮಾರು 160 ಉದ್ಯೋಗಿಗಳು ಮಾತ್ರ ನೆಲೆಸಿದ್ದರು ಎಂದು ಹೇಳಿದರು.

Advertisement

‘ವರದಿಗಳ ಪ್ರಕಾರ, ನೆಲ ಮಹಡಿಯಲ್ಲಿರುವ ಭದ್ರತಾ ಸಿಬಂದಿಯ ಕೋಣೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಘಟನೆ ಸಂಭವಿಸಿದೆ. ಕೆಲವರು ಹೇಳಿಕೊಂಡಂತೆ ಯಾವುದೇ ಅನಿಲ ಸ್ಫೋಟ ಸಂಭವಿಸಿಲ್ಲ. ಕಟ್ಟಡದಲ್ಲಿ ಅಡುಗೆ ಮಾಡುತ್ತಿರಲಿಲ್ಲ” ಎಂದು ಹೇಳಿದರು.

ಸರಕಾರದಿಂದಲೂ ನೆರವು
ಮೃತರ ಕುಟುಂಬಗಳಿಗೆ ಕಂಪನಿಯ ನೆರವಿನ ಹೊರತಾಗಿ, ಕೇರಳ ಸರ್ಕಾರವು ರಾಜ್ಯದ ಮೃತ ವ್ಯಕ್ತಿಗಳ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿಗಳನ್ನು ಘೋಷಿಸಿದೆ.ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರ ಎರಡು ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದೆ.
ಪ್ರಮುಖ ವ್ಯಾಪಾರ ಸಂಸ್ಥೆಗಳು ದುಃಖಿತ ಕುಟುಂಬಗಳಿಗೆ ಆರ್ಥಿಕ ನೆರವು ಘೋಷಿಸಿವೆ.

NBTC ಕುವೈತ್‌ನ ಅತಿದೊಡ್ಡ ಕನ್ ಸ್ಟ್ರಕ್ಷನ್ ಗ್ರೂಪ್ ಆಗಿದೆ. ಅಬ್ರಹಾಂ ಅವರು ಫೈವ್ ಸ್ಟಾರ್ ಹೋಟೆಲ್ ಆಗಿರುವ ಕೊಚ್ಚಿಯ ಕ್ರೌನ್ ಪ್ಲಾಜಾದ ಅಧ್ಯಕ್ಷರಾಗಿದ್ದಾರೆ. KGA ಗ್ರೂಪ್‌ನ ಸ್ಥಾಪಕ ಮತ್ತು ಈಗಿನ ಅಧ್ಯಕ್ಷರಾಗಿದ್ದಾರೆ. ಚಲನಚಿತ್ರ ನಿರ್ಮಾಣದಲ್ಲಿಯೂ ತೊಡಗಿದ್ದಾರೆ. ಇತ್ತೀಚೆಗೆ ಮಲಯಾಳಂ ‘ಆಡುಜೀವಿತಂ’ ಸಹ-ನಿರ್ಮಾಣ ಮಾಡಿದ್ದಾರೆ, ಇದು ಗಲ್ಫ್ ರಾಷ್ಟ್ರದಲ್ಲಿ ಭಾರತೀಯ ವಲಸೆ ಕಾರ್ಮಿಕರ ಜೀವನವನ್ನು ನಿರೂಪಿಸುವ ಕಥಾ ಹಂದರ ಹೊಂದಿದೆ. 1977 ರಲ್ಲಿ ಸ್ಥಾಪಿತವಾದ NBTC ಇಂಜಿನಿಯರಿಂಗ್ ಮತ್ತು ನಿರ್ಮಾಣ, ತಯಾರಿಕೆ ಮತ್ತು ಯಂತ್ರ, ತಾಂತ್ರಿಕ ಸೇವೆಗಳು, ಭಾರೀ ಸಲಕರಣೆಗಳ ಗುತ್ತಿಗೆ, ಲಾಜಿಸ್ಟಿಕ್ಸ್, ಹೋಟೆಲ್ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ತೊಡಗಿದೆ.

Advertisement

Udayavani is now on Telegram. Click here to join our channel and stay updated with the latest news.

Next