ಮಲ್ಪೆ: ಕಳೆದ ಎರಡು ಮೂರು ದಿನಗಳಿಂದ ಸಮುದ್ರದಲ್ಲಿ ಏರುಪೇರು ಉಂಟಾಗಿದ್ದು ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿ ಪಡುಕರೆಯಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ.
ಸುಮಾರು 100 ಮೀಟರ್ಗಳಷ್ಟು ಭೂಭಾಗವು ಸಮುದ್ರ ಪಾಲಾಗಿದ್ದು, 4 ತೆಂಗಿನ ಮರಗಳು ಸಮುದ್ರಪಾಲಾಗಿವೆ. ಕುತ್ಪಾಡಿ ಬಳಿಯ ಶಾಂತಿನಿಕೇತನ ಫ್ರೆಂಡ್ಸ್ ಕಟ್ಟೆ ಮತ್ತು ಸಂಜೀವ ಸುವರ್ಣ ಮನೆಯ ಬಳಿ ಸುಮಾರು 250 ಮೀಟರ್ ಉದ್ದಕ್ಕೆ ಕೊರೆತ ಕಾಣಿಸಿಕೊಂಡಿದೆ.
ಎಡಿಬಿ ಯೋಜನೆಯಡಿ ಉದ್ಯಾವರದಿಂದ ಕುತ್ಪಾಡಿ ವರೆಗೆ ಕಡಲ್ಕೊರೆತ ಶಾಶ್ವತ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ನಡೆಯದ ಉತ್ತರ ಭಾಗದಲ್ಲೀಗ ಕೊರೆತ ಉಂಟಾಗಿದೆ.
ರವಿವಾರ ಸಂಜೆ ಶಾಸಕ ಕೆ. ರಘುಪತಿ ಭಟ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಕಡೆಕಾರು ಗ್ರಾ.ಪಂ.. ಅಧ್ಯಕ್ಷ ರಘುನಾಥ್ ಕೋಟ್ಯಾನ್ ಕೊರೆತ ಉಂಟಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊರೆತವಾದ ಭಾಗದಲ್ಲೂ ಕಾಮಗಾರಿ ನಡೆಸಲು ಅಂದಾಜು ವೆಚ್ಚವನ್ನು ತಯಾರಿಸಿಕೊಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.