Advertisement

Kushtagi: ಪರಾರಿಯಾಗಲು ಯತ್ನಿಸಿದ ಕಳ್ಳನಿಗೆ ಸ್ಥಳೀಯರಿಂದ ಧರ್ಮದೇಟು

11:12 AM Jul 31, 2023 | Team Udayavani |

ಕುಷ್ಟಗಿ: ತಾಲೂಕಿನ ಹೂಲಗೇರಾ ಗ್ರಾಮದಲ್ಲಿ ಮನೆಯೊಂದರ ಕಳ್ಳತನ ನಡೆಸಿ ಪರಾರಿಯಾಗಲು ಯತ್ನಿಸಿದ ಖತರನಾಕ್ ಕಳ್ಳನಿಗೆ ಸ್ಥಳೀಯರು ಧರ್ಮದೇಟು ನೀಡಿ ಹಣ್ಣುಗಾಯಿ ನೀರುಗಾಯಿ ಮಾಡಿದ ಪ್ರಸಂಗ ನಡೆದಿದೆ.

Advertisement

ಹೂಲಗೇರಾ ಗ್ರಾಮದ ಕೃಷಿಕ ಶರಣಪ್ಪ ನಾಗರಾಳ ಎಂಬವರು ಹನುಮನಾಳಕ್ಕೆ ಬೀಗರ ಮನೆಗೆ ಹೋಗಿದ್ದರು. ಮನೆಯ ಉಳಿದ ಸದಸ್ಯರು ಈ ಮನೆಗೆ ಬೀಗ ಹಾಕಿ ಮೇಲಂತಸ್ತಿನ ಮನೆಯಲ್ಲಿ ಮಲಗಿದ್ದರು.

ಭಾನುವಾರ ಜು.30 ರಂದು ತಡರಾತ್ರಿ 11ರ ವೇಳೆಗೆ ಸದ್ದು ಕೇಳತೊಡಗಿದಾಗ ಎಚ್ಚರಗೊಂಡ ಮನೆಯವರು ಇಣುಕಿ ನೋಡಿದಾಗ ಮನೆಯ ಬಾಗಿಲು ತೆಗೆದಿತ್ತು. ಕೂಡಲೇ ಮನೆಯೊಳಗೆ ಹೊಕ್ಕ ಕಳ್ಳನನ್ನು ಹಿಡಿಯಲು ಬಾಗಿಲ ಬಳಿ ಕಾದು ನಿಂತಾಗ ಚಾಲಾಕಿ ಕಳ್ಳ ಕದ್ದ ಹಣ ಜೇಬಿನಲ್ಲಿ ತುರುಕಿಕೊಂಡು, ಸಿಕ್ಕಿ ಹಾಕಿಕೊಳ್ಳುವ ಸಂಕಟದಲ್ಲಿ ಹಿಂಬಾಗಿಲು ಮುರಿದು ಕತ್ತಲಿನಲ್ಲೇ ಓಟಕಿತ್ತಿದ್ದ.

ಎಚ್ಚೆತ್ತ ಸ್ಥಳೀಯರು ಬೆನ್ನತ್ತಿದರು. ಓಡುವ ಕಳ್ಳನನ್ನು ಹಿಡಿಯಲು ಸಾದ್ಯವಾಗದೇ ಇದ್ದಾಗ ಕಲ್ಲು ಬೀಸಿದರು. ಬೀಸಿದ ಕಲ್ಲಿನೇಟಿಗೆ ಕಳ್ಳ ನೆಲಕ್ಕೆ ಬಿದ್ದು ಸ್ಥಳೀಯರ ಕೈಗೆ ಸಿಕ್ಕಿ, ಆತನನ್ನು ಕಟ್ಟಿ ಹಾಕಿ ಧರ್ಮದೇಟು ನೀಡಿದ್ದಾರೆ.

ಕೂಡಲೇ ಹನುಮಸಾಗರ ಪೊಲೀಸ್ ಠಾಣೆಯ ಪಿಎಸೈ ಅಶೋಕ ಬೇವೂರು ಅವರಿಗೆ ಮಾಹಿತಿ ನೀಡಿದ್ದರಿಂದ ಕಳ್ಳನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ಕಳ್ಳತನಕ್ಕೆ ಯತ್ನಿಸಿದ್ದ‌ ಕಳ್ಳ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನವ ಎಂದು ಹೇಳಿಕೊಂಡಿದ್ದಾನೆ. ಕಳ್ಳತನದ ಕೃತ್ಯಕ್ಕೆ ಬಳಸಿದ ಬೈಕ್ ರಾಯಚೂರು ಪಾಸಿಂಗ್ ಹೊಂದಿದ್ದು, ಸಿಕ್ಕಿಬಿದ್ದ ಕಳ್ಳನ ವಿಚಾರಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next