Advertisement

ಬದುಕು-ಸಂಸ್ಕೃತಿ ರಾಜಧಾನಿಯಲ್ಲಿ ಕುಂದಕನ್ನಡ ಕಂಪು

11:34 PM Jul 22, 2023 | Team Udayavani |

ಬೆಂಗಳೂರು: ಸುಮಾರು 8 ದಶಕಗಳ ಹಿಂದೆ ಬದುಕಿನ ಬಂಡಿ ಸಾಗಿಸಲು ಬೆಂಗಳೂರಿಗೆ ಬಂದ ವರು. ಇಂದು ನಗರಾದ್ಯಂತ ಬೃಹತ್‌ ಹೋಟೆಲ್‌ ಉದ್ಯಮ, ಶಿಕ್ಷಣ, ಸಾಹಿತ್ಯ, ಕಲೆ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆಗೈಯುತ್ತಾ, ಊರಿನ ಭಾಷೆಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವವರೇ ಈ ಕುಂದಕನ್ನಡಿಗರು.

Advertisement

ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಳಿಕ ಬರುವ ಕುಂದಾಪುರ, ಬೈಂದೂರು ತಾಲೂಕು ಹಾಗೂ ಶಿರೂರಿನಲ್ಲಿ ಕುಂದ ಕನ್ನಡವನ್ನು ಮಾತನಾಡುವವರು ಹೆಚ್ಚಾಗಿ ಕಾಣಸಿಗುತ್ತಾರೆ. ಇವರೆಲ್ಲರ ಮಾತೃ ಭಾಷೆ ಬೇರೆ ಬೇರೆಯಿದ್ದರೂ, ಅವರೆಲ್ಲ ಒಂದೆಡೆ ಸೇರಿದಾಗ ಕುಂದ ಕನ್ನಡವೇ ಭಾಷೆ. ಹಾಗಾಗಿ ಇವರು ಕುಂದಕನ್ನಡಿಗರು. ಇದು 1950ರ ದಶಕದಲ್ಲಿ ಬಹಳ ಹಿಂದುಳಿದ ಪ್ರದೇಶವಾಗಿತ್ತು. ಕೃಷಿ ಇವರ ಬದುಕಿನ ಮೂಲ ಆಧಾರವಾಗಿತ್ತು. ಅವಿಭಕ್ತ ಕುಟುಂ ಬದವರಿಗೆ ಕೃಷಿ ಕೆಲಸದಲ್ಲಿ ಬದುಕು ಕಟ್ಟಿಕೊಳ್ಳಲಾಗದೇ ಉದ್ಯೋಗ ಅರಸಿ ಬೇರೆಡೆಗೆ ತೆರಳತೊಡಗಿದರು. ಅವರಲ್ಲಿ ಬಹಳಷ್ಟು ಮಂದಿ ಬೆಂಗಳೂರಿನಲ್ಲಿ ನೆಲೆ ನಿಂತರು.

ಸುಮಾರು 1970ರಲ್ಲಿ ಕುಂದಾಪುರದಿಂದ ಬಂದ ಕುಂದ ಕನ್ನಡದವರಲ್ಲಿ ಶಿಕ್ಷಣ ಹಾಗೂ ವೃತ್ತಿ ಕೌಶಲ್ಯ ಕೊರತೆ ಇತ್ತು. ಇದರಿಂದಾಗಿ ಅನಿವಾರ್ಯ ವಾಗಿ ಹೋಟೆಲ್‌ಗ‌ಳಲ್ಲಿ ವಿವಿಧ ಕೆಲಸಗಳಿಗೆ ಸೇರಿದರು. ಒಂದಿಷ್ಟು ಶಿಕ್ಷಣ ಪಡೆದವರು ಕೆಲವು ಕಂಪೆನಿಗಳಿಗೆ ಸೇರಲು ಪ್ರಯತ್ನಿಸಿದರು. ಎಲ್ಲರಿಗೂ ಅವಕಾಶ ಸಿಗದಿದ್ದಾಗ ಸ್ವ ಉದ್ಯಮದತ್ತ ಮುಖ ಮಾಡುವ ಅನಿವಾರ್ಯತೆ ಎದುರಾಯಿತು. ಹೊಸ ಸವಾಲುಗಳನ್ನು ಸ್ವೀಕರಿಸಿ ತಮ್ಮ ಪರಿಶ್ರಮವನ್ನು ಒತ್ತೆಗಿಟ್ಟು ದುಡಿಯತೊಡಗಿದರು. ಅದು ಕೈ ಹಿಡಿಯಿತು.

1980ರ ಬಳಿಕ ಹೋಟೆಲ್‌ ಉದ್ಯಮದಲ್ಲಿ ಕುಂದಕನ್ನಡಿಗರು ವಿಶೇಷ ಛಾಪು ಮೂಡಿಸಿದ್ದರು. ಕುಂದಾಪುರ ಸೇರದಂತೆ ವಿವಿಧ ಕಡೆಗಳಿಂದ ಹೋಟೆಲ್‌ ಕೆಲಸಕ್ಕೆ ಬರುವವರಿಗೆ ಕೆಲಸ ಮಾಡಲು ಶಿಫಾರಸು ಪತ್ರದ ಅಗತ್ಯವಿತ್ತು. 1985ರ ಬಳಿಕ ಗ್ರಾಮೀಣ ಹಾಗೂ ನಗರ ಭಾಗ ಕುಂದಕನ್ನಡಿಗರು ಉದ್ಯೋಗ ಅರಸಿಕೊಂಡು ಬರುವವರ ಪ್ರಮಾಣ ಹೆಚ್ಚಾಯಿತು. ಜಾಗತೀಕರಣ ಪ್ರಾರಂಭಗೊಂಡ ಬಳಿಕ ಬೇರೆ ಉದ್ಯೋಗಾವಕಾಶಗಳ ಜತೆ-ಜತೆಗೆ ಶಿಕ್ಷಣಕ್ಕಾಗಿ ಕುಂದಕನ್ನಡಿಗರು ಬೆಂಗಳೂರಿಗೆ ಕಾಲಿಟ್ಟಿದ್ದಾರೆ. ಹಾಗೆಂದು ಸ್ವಂತ ಊರನ್ನು ಮರೆತಿಲ್ಲ. ಊರು ಉತ್ಸವ, ಜಾತ್ರೆಗೆ ಊರಿಗೆ ಬರುತ್ತಾ, ಸಂಭ್ರಮದಲ್ಲಿ ಪಾಲ್ಗೊಳ್ಳುವುದನ್ನು ತೊರೆದಿಲ್ಲ. ಕುಂದಾಪ್ರ ಪ್ರದೇಶ ಹಾಗೂ ಭಾಷೆಯನ್ನು ಮರೆಯದೇ, ಬೆಂಗಳೂರಿನಲ್ಲಿಯೂ ಒಗ್ಗಿಕೊಳ್ಳುತ್ತಾ ಬದುಕು ರೂಪಿಸಿಕೊಂಡದ್ದು ಕುಂದ ಕನ್ನಡಿಗರ ವಿಶೇಷತೆ.

ಊರೊಂದೇ-ಹಲವು ಉದ್ಯಮ
ಬದುಕನ್ನು ಕಟ್ಟಿಕೊಳ್ಳಲು ಬಂದವರಲ್ಲಿ ಅನೇಕ ಇಂದು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಕುಂದಾಪುರದ ಮೂಲದವರಿಗೆ ಉದ್ಯಮ ಶೀಲತೆಯೇ ಉಸಿರು, ಮಾತೃ ಭಾಷೆಯೇ ಜೀವಾಳ. ಉದ್ಯೋಗವನ್ನು ತೊರೆದು ಸ್ವ ಉದ್ಯೋಗ ಪ್ರಾರಂಭಿಸಿದವರ ಪೈಕಿ ಹೆಚ್ಚಿನವರು ಯಶಸ್ಸು ಸಾಧಿಸಿದ್ದಾರೆ. ಕುಂದಕನ್ನಡಿಗರ ಪಾಕಶಾಲೆ, ಶಾಂತಿ ಸಾಗರ್‌, ಕೇಕ್‌ವಾಲಾ, ಊರ್‌ ತಿಂಡಿ ಸಹಿತ ವಿವಿಧ ಹೋಟೆಲ್‌ಗ‌ಳು ಬೆಂಗಳೂರು ಜನರ ಜನಮಾನಸದಲ್ಲಿ ಬೆರತು ಹೋಗಿವೆ. ಎಂಟಿಆರ್‌ ಹಾಗೂ ಮಯ್ಯ ಬ್ರ್ಯಾಂಡ್‌ ಇಂದಿಗೂ ವಿಶೇಷವಾಗಿ ಬೆಂಗಳೂರಿನವರ ಅಡುಗೆ ಮನೆಯಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಇನ್ನೂ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಕುಂದಕನ್ನಡಿಗರ ಪ್ರಗತಿ, ಸುಗಮ, ದುರ್ಗಾಂಬಾ ಬಸ್‌ಗಳು ಕರಾವಳಿಯಿಂದ ಬೆಂಗ ಳೂರಿಗೆ ಮಾತ್ರವಲ್ಲದೇ ವಿವಿಧ ರಾಜ್ಯಗಳಿಗೂ ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ. ಉದ್ಯೋಗದ ಬಗ್ಗೆ ನೂರಾರು ಆಸೆ ಹೊತ್ತು ಬರುವವರಿಗೆ ಅಂಬಾರಿಯಾಗಿ ಕುಂದಾಪುರದ ಸಾರಿಗೆ ವ್ಯವಸ್ಥೆ ಕೆಲಸ ಮಾಡುತ್ತಿದೆ.

Advertisement

ಸರಕಾರಿ ಹಾಗೂ ಇತರೆ ಖಾಸಗಿ ಬಸ್‌ಗಳು ಇನ್ನೂ ಕುಂದಾಪುರ ಭಾಗದ ಅತೀ ಗ್ರಾಮೀಣ ಭಾಗದಲ್ಲಿ ಸೇವೆ ನೀಡುತ್ತಿಲ್ಲ. ಆದರೆ ಕುಂದಾಪುರದವರು ಪ್ರಾರಂಭಿ ಸಿದ ಸಾರಿಗೆ ಸಂಸ್ಥೆಗಳು ಸಾಧ್ಯವಾದಷ್ಟು ಬಸ್ಸುಗಳನ್ನು ಬೆಂಗಳೂರಿನಿಂದ ಕುಂದಾಪುರ ಮಾರ್ಗವಾಗಿ ಗ್ರಾಮೀಣ ಭಾಗಕ್ಕೆ ಸೇವೆ ನೀಡುವಲ್ಲಿ ಯಶಸ್ವಿಯಾಗಿದೆ.

ಸಮಯ ಕಳೆದಂತೆ ಹೋಟೆಲ್‌, ಕ್ಯಾಟರಿಂಗ್‌ ಹೊರತು ಪಡಿಸಿ ಟ್ರೇಡ್‌, ಐಟಿ ವಿಭಾಗ, ವೈದ್ಯಕೀಯ ಸೇರದಂತೆ ವಿವಿಧ ಉದ್ಯಮಗಳಲ್ಲಿ ಕೈ ಹಾಕಿ ಯಶಸ್ಸು ಸಾಧಿಸಿದ್ದಾರೆ. ಪ್ರಸ್ತುತ ಸಿನಿಮಾ ರಂಗದಲ್ಲಿ ಕುಂದಕನ್ನಡದವರು ಬಹಳಷ್ಟು ಸೇರ್ಪಡೆಯಾಗುತ್ತಿದ್ದಾರೆ.

ಕಾಂತಾರ ಚಿತ್ರದ ನಟ ರಿಷಬ್‌ ಶೆಟ್ಟಿ, ಕೆಜಿಎಫ್ ಸಂಗೀತ ನಿರ್ದೇಶನ ಖ್ಯಾತಿ ರವಿಬಸ್ರೂರು ಸೇರಿದಂತೆ ಹಿರಿಯ ಹಾಗೂ ಕಿರು ತೆರೆಯಲ್ಲಿ ಅನೇಕ ಕಲಾವಿದವರು ವಿಶೇಷ ಸಾಧನೆ ಮಾಡಿದ್ದಾರೆ.

ಕುಂದಾಪ್ರ ಕ್ರೀಡೆಗಳು
ಕರಾವಳಿ ಅಪರೂಪದ ಕ್ರೀಡೆಗಳಾ ಹಗ್ಗ ಜಗ್ಗಾಟ, ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆ, ಮಕ್ಕಳಿಗೆ ಹೂವಾಡಗಿತ್ತಿ, ಸೈಕಲ್‌ ಟೈರ್‌ ಓಟ, ಹಣೆಬೊಂಡ ಓಟ, ಗಿರ್ಗಿಟ್ಲೆ, ಚಿತ್ರಕಲೆ, ಮಹಿಳೆಯರಿಗೆ ಹಲಸಿನ ಕೊಟ್ಟೆ ಕೊಟ್ಟುವುದು, ಮಡ್ಲ್ ನೆಯ್ಯುವುದು ಸೇರಿದಂತೆ ಇತರೆ ಮನೋರಂಜನೆಯ ಸ್ಪರ್ಧೆಗಳು ನಡೆಯಲಿದೆ.

ನಮ್ಮೂರು ಊಟ!
ನುರಿತ ಬಾಣಸಿಗರಿಂದ ಸ್ಥಳದಲ್ಲಿ ಹಾಲುಬಾಯಿ, ಕೊಟ್ಟೆ ಕಡಬು, ಗೋಲಿಬಜೆ, ಬನ್ಸ್‌, ಎಳ್‌ ಬಾಯ್‌Å, ಹೆಸ್ರು ಬಾಯ್‌Å ವಿವಿಧ ಪಾನಕ, ಹಬ್ಬದೂಟ, ಇಡ್ಲಿ ಕುಂದಾಪ್ರ ಕೋಳಿ ಸುಕ್ಕ, ಬಿರಿಯಾನಿ, ಚಟ್ನಿ ಸಾರು ಹಾಗೂ ಖಾದ್ಯಗಳು
ಇರಲಿವೆ.

ಬೆಂಗಳೂರಿನಲ್ಲಿ 5 ಲಕ್ಷಕ್ಕೂ ಅಧಿಕ ಕುಂದಕನ್ನಡಿಗರು
ಪ್ರಸ್ತುತ ಬೆಂಗಳೂರಿನಲ್ಲಿ 5 ಲಕ್ಷಕ್ಕೂ ಅಧಿಕ ಕುಂದಕನ್ನಡಿಗರು ಉದ್ಯೋಗ, ಶಿಕ್ಷಣ ಹಾಗೂ ವ್ಯವಹಾರವನ್ನು ಸ್ಥಾಪಿಸಿ ಶಾಶ್ವತ ನೆಲೆ ಕಂಡುಕೊಂಡಿದ್ದಾರೆ. ತಮ್ಮ ಭಾಷೆಯ ಮೇಲಿನ ಅಭಿಮಾನದಿಂದ ಕಳೆದ ಹಲವು ವರ್ಷಗಳಿಂದ ವಿಶ್ವ ಕುಂದಾಪ್ರಕನ್ನಡ ದಿನವನ್ನು ಆಚರಿಸುತ್ತಿದ್ದಾರೆ.
ಇಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಇಡೀ ದಿನ ಅತ್ತಿಗುಪ್ಪೆ ಬಂಟರ ಭವನದ‌ಲ್ಲಿ ವಿಶ್ವ ಕುಂದಾಪ್ರಕನ್ನಡ ದಿನಾಚರಣೆಯ ಅಂಗವಾಗಿ ನಾಟಕ, ಸಂಗೀತ,ನೃತ್ಯ, ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಕುಂದಗನ್ನಡ ಕಾವ್ಯದ ಮಟ್ಟ ವೇ ಬೇರೆ. ತಂದೆ - ತಾಯಿ ಕುಂದಾಪ್ರ ದವರು. ಅಲ್ಲಿನ ಭಾಷೆ ಯನ್ನು ಬೆಳೆಸುವುದರ ಜತೆಗೆ ಪ್ರತಿಯೊಬ್ಬರ ಮನೆಯಲ್ಲಿ ಬಳಸಬೇಕು. ಯುವಪೀಳಿಗೆಗೆ ಕಲಿಸಬೇಕು. ಯೋಗರಾಜ್‌ ಭಟ್‌, ಚಿತ್ರ ನಿರ್ದೇಶಕ

ಬೈಂದೂರಿನ ಒಂದು ಪ್ರದೇಶ ದಲ್ಲಿ ಪ್ರಾರಂಭವಾದ ಕುಂದಾಪ್ರ ಕನ್ನಡ ದಿನ ಇಂದು ವಿಶ್ವಾದ್ಯಂತ ಸಂಭ್ರಮಿಸುತ್ತಿರು ವುದು ಶ್ಲಾಘನೀಯ.

ಜಯಪ್ರಕಾಶ ಹೆಗ್ಡೆ,ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗ

ಲಕ್ಷಾಂತರ ಕುಂದಕನ್ನಡಿಗರ ಅಪರೂಪದ ವೇದಿಕೆಯಾಗಿ ಈ ಸಮ್ಮೇಳನ ರೂಪುಗೊಳ್ಳಲಿದೆ. ಇದು ನಮ್ಮೆಲ್ಲರ ಹೆಮ್ಮೆಯ ಹಬ್ಬ.
ದೀಪಕ್‌ ಶೆಟ್ಟಿ, ಅಧ್ಯಕ್ಷ, ಕುಂದಾಪ್ರ ಕನ್ನಡ ಪ್ರತಿಷ್ಠಾನೆ

ಕುಂದಾಪುರ ಭಾಗದ ಜನರ ಉಡುಗೆ, ಅಡುಗೆ, ಸಂಪ್ರದಾಯ ಸೇರಿದಂತೆ ವೈವಿಧ್ಯವನ್ನು ಜಗತ್ತಿಗೆ ಪರಿಚಯಿಸಲು ವಿಶ್ವಕುಂದಾಪ್ರ ಕನ್ನಡ ದಿನವನ್ನು ಆಚರಿಸಲಾಗುತ್ತಿದೆ.
ರಾಘವೇಂದ್ರ ಕಾಂಚನ್‌, ಕಾರ್ಯದರ್ಶಿ, ಕುಂದಾಪ್ರ ಕನ್ನಡ ಪ್ರತಿಷ್ಠಾನ

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next