Advertisement

ಕುಮಾರಧಾರೆ ಕ್ಷೀಣ: ನೀರಿಗೆ ತತ್ವಾರ!

03:17 PM Dec 21, 2017 | Team Udayavani |

ಉಪ್ಪಿನಂಗಡಿ: ಪುತ್ತೂರು ನಗರ ಸಹಿತ ತಾಲೂಕಿನ ಬಹುಭಾಗಗಳಿಗೆ ಕುಡಿಯಲು ಮತ್ತು ಕೃಷಿಗೆ ನೀರೊದಗಿಸುವ
ಕುಮಾರಧಾರಾ ನದಿಯ ಅಣೆಕಟ್ಟೆಯಲ್ಲಿ ಈ ಬಾರಿ ನೀರಿನ ಮಟ್ಟ ಕುಸಿದಿದೆ. ಇಂಟೆಕ್‌ ವೆಲ್‌ನಲ್ಲಿ ನಿಗದಿಗಿಂತ ಎರಡು ಅಡಿ ಕಡಿಮೆ ನೀರಿದ್ದು, ಈ ಬಾರಿ ಜನವರಿ ಮೊದಲ ವಾರದಲ್ಲೇ ಡ್ಯಾಂಗೆ ಹಲಗೆ (ಗೇಟು) ಅಳವಡಿಸಲು ಯೋಜಿಸಲಾಗಿದೆ. ಪ್ರತಿ ವರ್ಷಕ್ಕಿಂತ ಹದಿನೈದು ದಿವಸ ಮೊದಲೇ ಈ ಬಾರಿ ನೀರು ಸಂಗ್ರಹಿಸಲು ತೀರ್ಮಾನಿಸಿದ್ದು, ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರಿರುವುದರಿಂದ ಈ ಕ್ರಮ ಅನಿವಾರ್ಯವೆನಿಸಿದೆ. 

Advertisement

ನೀರಿನ ಮಟ್ಟ ಇಳಿಮುಖ
ಎರಡು ವರ್ಷಗಳಿಂದ ಕುಮಾರಧಾರಾ, ನೇತ್ರಾವತಿ ನದಿಗಳು ಮೇ ಸುಮಾರಿಗೆ ಬರಿದಾಗಿದ್ದವು. ನೀರಿಗಾಗಿ ನದಿ ಭಾಗವನ್ನೇ ಆಶ್ರಯಿಸುವ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಈಡಾಗಿದ್ದವು. ಕೊಳವೆಬಾವಿ ಕೊರೆಯಲು ನಿಷೇಧ ಹೇರಿದ್ದ ಪರಿಣಾಮ ಪರದಾಟ ಮತ್ತಷ್ಟು ತೀವ್ರವಾಗಿತ್ತು. ಈ ಬಾರಿ ಡಿಸೆಂಬರ್‌ ನಿಂದಲೇ ನದಿ, ತೋಡು ಬತ್ತುತ್ತಿವೆ. ಅದೇ ಸ್ಥಿತಿ ಮುಂದುವರಿಯುವ ಲಕ್ಷಣಗಳು ನದಿ ತಟದಲ್ಲಿ ಗೋಚರಿಸುತ್ತಿವೆ.

ನಗರದ ನೀರಿನ ಮೂಲ
ಕುಮಾರಧಾರಾ ಡ್ಯಾಂನಿಂದ ನೆಕ್ಕಿಲಾಡಿ ಮೂಲಕ ಪುತ್ತೂರಿಗೆ ನೀರು ಪೂರೈಕೆ ಆಗುತ್ತಿದೆ. ಇಲ್ಲಿನ ನೀರಿನ ಮೂಲವೇ ಡ್ಯಾಂ. 1991ರ ಜನಗಣತಿ ಪ್ರಕಾರ ನಗರದಲ್ಲಿ 35,879 ಇದ್ದ ಜನಸಂಖ್ಯೆ 2001ರ ಜನಗಣತಿಯಲ್ಲಿ 48,070ಕ್ಕೆ ಏರಿಕೆ ಕಂಡಿತ್ತು. 2011ರಲ್ಲಿ ಅದು 53,061ರಷ್ಟಿತ್ತು. ಆಮೇಲಿನ ಆರು ವರ್ಷಗಳಲ್ಲಿ ಒಟ್ಟು ಪ್ರಮಾಣ 60 ಸಾವಿರ ದಾಟಿರಬಹುದು. ಪುತ್ತೂರು ನಗರಕ್ಕೆ ನಿತ್ಯ 75 ಲಕ್ಷ ಲೀಟರ್‌ ನೀರು ಬೇಕು. ಈ ಪೈಕಿ 60 ಲಕ್ಷ ಲೀ. ನೀರು ಕುಮಾರಧಾರಾ ನದಿಯಿಂದ ಪೂರೈಕೆ ಆಗುತ್ತದೆ. ಪ್ರಮುಖ ಜಲಮೂಲವೇ ಬತ್ತುತ್ತಿರುವ ಹಿನ್ನೆಲೆ ಹಾಹಾಕಾರ ಉಂಟಾದೀತೆಂದು ನಿರೀಕ್ಷಿಸಲಾಗಿದೆ.

ನೀರಿನ ಪ್ರಮಾಣ
ಕುಮಾರಧಾರಾ ಕಿಂಡಿ ಅಣೆಕಟ್ಟಿನಲ್ಲಿ ನವೆಂಬರ್‌ ತಿಂಗಳಲ್ಲಿ ಹಲಗೆ ಹಾಕಿದರೆ 330 ಮಿಲಿಯನ್‌ ಕ್ಯೂಬಿಕ್‌ ಮೀಟರ್‌ ನೀರು ಸಂಗ್ರಹವಾಗುವ ಸಾಮರ್ಥ್ಯವಿದೆ. 2014 ಮೇ 15ರ ವೇಳೆಗೆ ಅಣೆಕಟ್ಟಿನಲ್ಲಿ ಇದ್ದ ನೀರಿನ ಪ್ರಮಾಣ 2015 ಎಪ್ರಿಲ್‌ ನಲ್ಲಿ ಇತ್ತು. ಕಳೆದ ಬಾರಿ ಎಪ್ರಿಲ್‌ ತಿಂಗಳಲ್ಲಿ ಕುಮಾರಧಾರೆ ತಳ ಕಂಡಿತ್ತು. ಈ ಸಲ ಅದು ಜನವರಿ ತಿಂಗಳಲ್ಲೇ ಕಾಣುವ ಭೀತಿ ಎದುರಾಗಿದೆ.

ಮಂಗಳೂರಿಗೂ ಹೊಡೆತ 
ತುಂಬೆ ಡ್ಯಾಂನಿಂದ ಮಂಗಳೂರು ನಗರಕ್ಕೆ ನೀರಿನ ಪೂರೈಕೆ ಆಗುತ್ತದೆ. ಉಪ್ಪಿನಂಗಡಿಯಲ್ಲಿ ಕುಮಾರ ಧಾರೆಯ ಸಂಗಮ ವಾಗಿ ಹರಿಯುವ ನೇತ್ರಾವತಿ ನದಿಗೆ ತುಂಬೆಯಲ್ಲಿ ಕಟ್ಟ ಲಾದ ಡ್ಯಾಂಗೂ ಇದೇ ಆಧಾರ. ಕುಮಾರಧಾರೆ, ನೇತ್ರಾ ವತಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾದರೆ, ಮಂಗಳೂರಿಗೂ ನೀರಿನ ಬರಕಾದಿದೆ ಎಂದೇ ಅರ್ಥ.

Advertisement

ಹತ್ತು ದಿನಗಳಲ್ಲಿ ಜೋಡಣೆ
ಹರಿವಿನ ಮಟ್ಟ ಕಡಿಮೆ ಆಗಿದ್ದು ಗಮನಕ್ಕೆ ಬಂದ ತತ್‌ಕ್ಷಣ ಡ್ಯಾಂ ಗೇಟು ಹಾಕಲಾಗುವುದು. ಇನ್ನು ಹತ್ತು ದಿವಸಗಳಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.
ರೂಪಾ ಶೆಟ್ಟಿ
   ಪೌರಾಯುಕ್ತೆ, ನಗರಸಭೆ, ಪುತ್ತೂರು

ಎಂ.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next