Advertisement

ಅಗತ್ಯ ವಸ್ತುಗಳ ಬೆಲೆ ಹೆಚ್ಚಸಿ ಜನರನ್ನು ಕಿತ್ತು ತಿನ್ನುವ ಸರಕಾರವಿದು: ಡಿ.ಕೆ.ಶಿವಕುಮಾರ್

02:29 PM Aug 29, 2021 | Team Udayavani |

ಹುಬ್ಬಳ್ಳಿ: ಕೋವಿಡ್ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರದಲ್ಲಿ ರಾಷ್ಟ್ರದಲ್ಲೇ ರಾಜ್ಯ ಸರಕಾರ ಮೊದಲ ಸ್ಥಾನದಲ್ಲಿದೆ. ಚಿಕಿತ್ಸೆ, ಔಷಧಿ, ಶವ ಸಂಸ್ಕಾರಕ್ಕೂ ಕ್ಯೂ ನಿಲ್ಲಿಸಿದರು. ಮೃತಪಟ್ಟವರಿಗೂ ಪರಿಹಾರ ನೀಡಲಿಲ್ಲ. ಕೇಂದ್ರ 20 ಲಕ್ಷ ಕೋಟಿ ರೂ. ಹಾಗೂ ರಾಜ್ಯ ಸರಕಾರದ ವಿವಿಧ ಪರಿಹಾರ ನೀಡಲಿಲ್ಲ. ಸಂಕಷ್ಟದ ಸಂದರ್ಭದಲ್ಲಿ ಆಸ್ತಿ ತೆರಿಗೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿ ಜನರನ್ನು ಕಿತ್ತು ತಿನ್ನುವ ಸರಕಾರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಾಗ್ದಾಳಿ ನಡೆಸಿದರು.

Advertisement

ಭಾನುವಾರ ಇಲ್ಲಿನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಜನರ ಬಗ್ಗೆ ಕಾಳಜಿಯಿದ್ದರೆ ಕೋವಿಡ್‌ ನಂತಹ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ದರ, ತೆರಿಗೆ ಹೆಚ್ಚಳ ಮಾಡುತ್ತಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಪ್ರತಿಯೊಂದು ಖರೀದಿಯಲ್ಲೂ ಭ್ರಷ್ಟಾಚಾರವಾಗಿದೆ. ಲಾಕ್‌ ಡೌನ್‌ನಿಂದಾಗಿ ವಿವಿಧ ಸಮಾಜ, ಕಾರ್ಮಿಕರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಪರಿಹಾರ ಘೋಷಣೆ ಮಾಡಿತು. ಇದೊಂದು ಜನಪರ ಸರಕಾರವಾಗಿದ್ದರೆ ಯಾವ ಸಮಾಜಕ್ಕೆ, ಯಾರಿಗೆ ಎಷ್ಟು ಪರಿಹಾರ ನೀಡಲಾಗಿದೆ ಎನ್ನುವ ಪಟ್ಟಿಯನ್ನು ಬಿಡುಗಡೆ ಮಾಡಲಿ. ಕೇವಲ ಭಾವನಾತ್ಮಕ ವಿಷಯಗಳ ಮೇಲೆ ಜನರಿಗೆ ವಂಚಿಸುವ ಕೆಲಸ ಮಾಡುತ್ತಿದೆ ಎಂದರು.

ಸಿಎಂ ಕಣ್ಣೀರಿಗೆ ಕಾರಣವೇನು? ರಾಜ್ಯದಲ್ಲಿ ಉತ್ತಮ ಆಡಳಿತವಿದ್ದರೆ ಎರಡೇ ವರ್ಷಕ್ಕೆ ಮುಖ್ಯಮಂತ್ರಿ ಬದಲಾವಣೆ ಮಾಡಿದ್ದು ಯಾವ ಕಾರಣಕ್ಕೆ? ಬಹಳ ಕಷ್ಟಪಟ್ಟು ಅವರಿವರಿಗೆ ಆಮಿಷವೊಡ್ಡಿ ಸರಕಾರ ರಚಿಸಿದವರಿಂದ ಯಾಕೆ ರಾಜೀನಾಮೆ ಪಡೆಯಲಾಯಿತು. ರಾಜೀನಾಮೆ ನೀಡುವ ಮೊದಲು ಮುಖ್ಯಮಂತ್ರಿಗಳು ಬಹಿರಂಗವಾಗಿ ಗಳಗಳನೇ ಅತ್ತಿದ್ದು ಯಾಕೆ ಎನ್ನುವುದನ್ನು ಪಕ್ಷದ ನಾಯಕರು ಜನರಿಗೆ ತಿಳಿಸಬೇಕು. ಮುಖ್ಯಮಂತ್ರಿ ಬದಲಾವಣೆ ಅವರ ಪಕ್ಷದ ಆಂತರಿಕವಾದರೂ ಕೋವಿಡ್ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರಕ್ಕೂ ರಾಜೀನಾಮೆ ಪಡೆದಿರುವುದಕ್ಕೂ ಏನಾದರೂ ಸಂಬಂಧವಿದೆಯಾ ಎಂದು ರಾಜ್ಯದ ಜನರು ಪ್ರಶ್ನಿಸುತ್ತಿದ್ದಾರೆ. ಕೇಂದ್ರ, ರಾಜ್ಯದಲ್ಲಿನ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಸುಳ್ಳು ಭರವಸೆಗಳಿಂದ ಜನರು ಎಚ್ಚೆತ್ತಿದ್ದಾರೆ ಎಂದರು.

ಇದನ್ನೂ ಓದಿ:ಸಿದ್ದರಾಮಯ್ಯ ಮತ್ತು ಡಿಕೆಶಿ ಕೇವಲ ಫೋಟೋ ಫ್ರೆಂಡ್ಸ್: ಶ್ರೀರಾಮುಲು ವಾಗ್ದಾಳಿ

ಶೇ.50 ರಷ್ಟು ವಿನಾಯಿತಿ: ಇತ್ತೀಚೆಗೆ ನಡೆದ ಉಪ ಚುನಾವಣೆ ಹಾಗೂ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ತೋರಿದೆ. ಬಿಜೆಪಿ ಸರಕಾರದ ಭಾವನಾತ್ಮಕ ಭಾಷಣ, ಸುಳ್ಳು ಭರವಸೆಗಳಿಂದ ಜನರು ರೋಸಿ ಹೋಗಿದ್ದಾರೆ. ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಪಕ್ಷದ ಪ್ರಣಾಳಿಕೆಯ ಶೇ.99 ರಷ್ಟು ಈಡೇರಿಸಿದ್ದೇವೆ. ಕಾಂಗ್ರೆಸ್ ಸರಕಾರ ನುಡಿದಂತೆ ನಡೆದ ಸರಕಾರ ಎಂಬುವುದು ಜನರಿಗೆ ಮನವರಿಕೆಯಾಗಿದೆ. ರಾಜ್ಯದಲ್ಲಿ ಇದೀಗ ಟ್ರೆಂಡ್ ಬದಲಾಗಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಸಂಕಷ್ಟದ ಸಂದರ್ಭದಲ್ಲಿ ಜನರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಶೇ.50 ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ಅವರು ಹೇಳಿದರು.

Advertisement

ಗಣೇಶ ಹಬ್ಬಕ್ಕೆ ನಿರ್ಬಂಧ ಸರಿಯಲ್ಲ: ಎಲ್ಲಾ ಹಬ್ಬಗಳನ್ನು ಸರಕಾರದಿಂದ ಮಾಡಲು ಸಾಧ್ಯವಿಲ್ಲ. ಗಣೇಶ ಹಬ್ಬ ದೊಡ್ಡ ಇತಿಹಾಸ ಹಾಗೂ ಸಂಪ್ರದಾಯ ಹೊಂದಿದೆ. ಹೀಗಿರುವಾಗ ಗಣೇಶ ಹಬ್ಬಕ್ಕೆ ಇಷ್ಟೊಂದು ನಿರ್ಬಂಧ ಹೇರಿ ಪೊಲೀಸರ ಮೂಲಕ ಅದನ್ನು ಜಾರಿಗೊಳಿಸಿ ಒಟ್ಟಾರೆ ಹಬ್ಬಕ್ಕೆ ಕಡಿವಾಣ ಹಾಕುವುದು ಸರಿಯಲ್ಲ. ಕೋವಿಡ್ ನಿಯಮಗಳನ್ನು ರೂಪಿಸಿ ಅವುಗಳ ಪಾಲನೆ ಮೂಲಕ ಹಬ್ಬದ ಆಚರಣೆಗೆ ಅವಕಾಶ ಕೊಡಬೇಕು ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸರಕಾರಕ್ಕೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next