Advertisement

ನೆಲಗಡಲೆ ಕೊಯ್ಯಲು ಬಂತು ಯಂತ್ರ; ಹೆಚ್ಚು ಕೆಲಸ ಕಡಿಮೆ ಖರ್ಚು

12:45 PM Mar 13, 2017 | |

ಕೃಷಿ ಚಟುವಟಿಕೆಯಲ್ಲಿ ಈಗ ಯಂತ್ರಗಳದ್ದೇ ಕಾರುಬಾರು. ಭತ್ತದ ಸಸಿ ನೆಡಲು ನಾಟಿ ಯಂತ್ರ, ಭತ್ತ ಕೊಯ್ಲು ಮಾಡಲು ಕಟಾವು ಯಂತ್ರವಾದರೆ ನೆಲಗಡಲೆ ಕೊಯ್ಯಲು ಕೂಡ ರೈತ ಯಂತ್ರಗಳ ಮೊರೆ ಹೋಗುವಂತಾಗಿದೆ. ಕೃಷಿ ಕೆಲಸ ಮಾಡಲು ಕೂಲಿ ಆಳುಗಳು ಸಿಗುವುದಿಲ್ಲ ಎಂಬ ಕೂಗಿಗೆ ಯಂತ್ರಗಳು ರೈತನ ಕೈ ಹಿಡಿಯುತ್ತಿರುವುದು ಕೃಷಿ ಕ್ಷೇತ್ರದ ಬೆಳವಣಿಗೆಗೆ ಆಶಾದಾಯಕವಾಗಿ ಪರಿಣಮಿಸುತ್ತಿದೆ.

Advertisement

ಕರಾವಳಿಯ ಮರವಂತೆ ಸಮೀಪದ ಬಿಜೂರು, ಉಪ್ಪುಂದ, ಖಂಬದಕೋಣೆ, ನಾಗೂರು, ಕಿರಿಮಂಜೇಶ್ವರ ಮುಂತಾದ ಭಾಗಗಳಲ್ಲಿ ಈಗ ನೆಲಗಡಲೆ ಬೆಳೆ ಕೊಯ್ಲು ಸಮಯವಾಗಿದ್ದು, ಈ ಹಿಂದಿನಂತೆ ರೈತರು ಗದ್ದೆಗಳಲ್ಲಿ ನೆಲಗಡಲೆ ಗಿಡಗಳನ್ನು ಕಿತ್ತು ದಿನಗಟ್ಟಲೆ ಗದ್ದೆಗಳಲ್ಲಿ ಕುಳಿತು ಕೊಯ್ಯುವ (ಗಿಡದಿಂದ ಬೇರ್ಪಡಿಸುವ) ಕಾರ್ಯದಲ್ಲಿ ನಿರತವಾಗುವ ಅಗತ್ಯವಿಲ್ಲ, ಅನಿವಾರ್ಯವೂ ಅಲ್ಲ.  ಈಗ ಗದ್ದೆಗಳಲ್ಲಿ ನೆಲಗಡಲೆ ಫಸಲನ್ನು ಗಿಡದಿಂದ ಬೇರ್ಪಡಿಸುವ ಯಂತ್ರಗಳ ಸದ್ದು ಜೋರಾಗಿಯೇ ಕೇಳಿಬರುತ್ತಿದೆ.

ಕರಾವಳಿಗೆ ಕಾಲಿಟ್ಟ ನೆಲಗಡಲೆ ಒಕ್ಕರಣೆ ಯಂತ್ರ
ಈಗಾಗಲೇ ಬೇರೆ ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಗಿಡದಿಂದ ನಲೆಗಡಲೆ ಫಸಲನ್ನು ಬೇರ್ಪಡಿಸುವ ಒಕ್ಕರಣೆ ಯಂತ್ರವನ್ನು ಕೃಷಿಕ ನಾಗರಾಜ ದೇವಾಡಿಗ ಅವರು ಮೊದಲ ಬಾರಿಗೆ ಪರಿಚಯಿಸಿದ್ದು, ಕೃಷಿ ಕೆಲಸದ ಬಗ್ಗೆ ಜನರ ನಿರಾಸಕ್ತಿ, ಕೂಲಿ ಆಳುಗಳ ಕೊರತೆ, ದಿನದಿಂದ ದಿನಕ್ಕೆ ಏರುತ್ತಿರುವ ಸಂಬಳ ಇವುಗಳನ್ನೆಲ್ಲ ಮನಗಂಡ ಇವರು ಹೊರ ಜಿಲ್ಲೆಗಳಲ್ಲಿ ಸುತ್ತಾಡಿ ಯಂತ್ರದ ಕುರಿತು ಸಂಪೂರ್ಣ ತಿಳಿದುಕೊಂಡು ಎರಡು ವರ್ಷಗಳ ಹಿಂದೆ ಯಂತ್ರವನ್ನು ಈ ಭಾಗಕ್ಕೆ ತಂದು ಬಳಕೆ ಮಾಡಿದಾಗ ಇದರಲ್ಲಿ ಯಶಸ್ಸು ದೊರಕಿತು.  ಇತರೆ ರೈತರು ಉಪಯೋಗ ಮಾಡಿದಾಗ ಕೂಲಿಗಳಿಗೆ ತಗುಲುವ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಹಾಕಿದಾಗ ಗಣನೀಯ ವ್ಯತ್ಯಾಸ ಕಂಡುಬಂದಿರುವುದರಿಂದ ರೈತರಿಗೆ ಇದು ಒಂದು ರೀತಿಯಲ್ಲಿ ವರದಾನವಾಗಿ ಕಂಡಿತು.

ಕಡಿಮೆ ಖರ್ಚು ಹೆಚ್ಚು ಕೆಲಸ
ಒಂದು ಕೂಲಿ ಆಳು ದಿನಕ್ಕೆ ಒಂದರಿಂದ ಎರಡು ಚೀಲ ನೆಲಗಡಲೆ ಕೊಯ್ದರೆ ಯಂತ್ರವು ಒಂದು ಗಂಟೆಗೆ ಸುಮಾರು 20 ರಿಂದ 25 ಚೀಲದಷ್ಟು ನೆಲಗಡಲೆಯನ್ನು ಗಿಡದಿಂದ ಬೇರ್ಪಡಿಸುತ್ತದೆ. ಎರಡು ಗಂಟೆಗೆ ಒಂದು ಎಕರೆಯಷ್ಟು ಗಿಡಗಳನ್ನು ಕಟಾವು ಮಾಡುತ್ತದೆ ಎಂದು ಹೇಳುತ್ತಾರೆ. ಒಂದು ದಿನಕ್ಕೆ  ಒಬ್ಬರಿಗೆ (ಮಹಿಳೆಯರಿಗೆ) 300 ರೂ. ವೇತನವಾದರೆ, ಯಂತ್ರದ ಒಂದು ಗಂಟೆ ಬಾಡಿಗೆ 800 ರೂ. ಮಾತ್ರ. ಇದರ ಜತೆಗೆ ಗಿಡಗಳನ್ನು ಸಣ್ಣದಾಗಿ ಕಟಾವು ಮಾಡುವುದರಿಂದ ಜಾನುವಾರುಗಳಿಗೆ ತಿನ್ನಲು ಮಳೆಗಾಲದ ಆಹಾರಕ್ಕಾಗಿ  ಮತ್ತೂಮ್ಮೆ ಸಿದ್ಧಪಡಿಸುವ ಅಗತ್ಯವಿರುವುದಿಲ್ಲ, ಅದಕ್ಕೆ ತಗಲುವ ಇತರೆ ಖರ್ಚು ಉಳಿತಾಯ ಸಾಧ್ಯವಾಗಿದೆ.

ದುಬಾರಿ ಸಂಬಳ ಜತೆಗೆ, ಕೂಲಿ ಆಳುಗಳ ಕೊರತೆಯಿಂದ ರೋಸಿ ಹೋಗಿರುವ ರೈತರಿಗೆ ಯಂತ್ರದ ಆಗಮನದಿಂದಾಗಿ ಕೃಷಿ ಚಟುವಟಿಕೆಗೆ ಮಾಡುವ ವೆಚ್ಚಗಳಲ್ಲಿ ಒಂದಿಷ್ಟು ಕಡಿಮೆಯಾಗಿರುವುದು ರೈತರ ಸಂತೋಷಕ್ಕೆ ಕಾರಣವಾಗಿದೆ. ದಿನದಿಂದ ದಿನಕ್ಕೆ ಕೃಷಿಗಳಲ್ಲಿ ಹೊಸ ಯಂತ್ರಗಳ ಬಳಕೆ ಹೆಚ್ಚುತ್ತಿರುವುದು ಕೃಷಿ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ.

Advertisement

ಕಡಿಮೆ ಹಣ 
ವರ್ಷದಿಂದ ವರ್ಷಕ್ಕೆ ಕೂಲಿ ಆಳುಗಳ ಕೊರತೆ ಏರುತ್ತಿರುವ ಸಂಬಳದಿಂದಾಗಿ ಹೆಚ್ಚು  ಖರ್ಚು ವೆಚ್ಚಗಳಿಂದಾಗಿ ಕೃಷಿಯಲ್ಲಿ ಲಾಭಾಂಶ ಕಾಣಲು ಸಾಧ್ಯವಾಗುತ್ತಿಲ್ಲ. ಇಂದು ಹಣ ಕೊಟ್ಟರೂ ಕೂಲಿ ಆಳುಗಳು ಸಿಗುತ್ತಿಲ್ಲವಾದ್ದರಿಂದ ಯಂತ್ರದ ಬಳಕೆ ಉಪಯುಕ್ತ ವಾಗಿದೆ. ನೆಲಗಡಲೆ ಕೈಯಿಂದ ಕೊಯ್ಯಲು ಕೆಲವು ದಿನಗಳು ಬೇಕಾಗುತ್ತದೆ, ಸಾವಿರಾರು ರೂಪಾಯಿ ಅಗತ್ಯವಿದೆ. ಆದರೆ ಈ ಯಂತ್ರದಿಂದ ಕಡಿಮೆ ಹಣದಲ್ಲಿ 
ಕೆಲಸವು ಒಂದೆರಡು ಗಂಟೆಗಳಲ್ಲಿ ಮುಗಿಯುತ್ತದೆ. 

– ನಾಗರಾಜ ದೇವಾಡಿಗ, ಕೃಷಿಕರು

– ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next