Advertisement

ರಸ್ತೆಯಂಚಿನಲ್ಲಿ ರಾಶಿಬಿದ್ದ ತ್ಯಾಜ್ಯ: ಸಾಂಕ್ರಾಮಿಕ ರೋಗ ಭೀತಿ 

06:05 AM May 19, 2018 | |

ಕೋಟೇಶ್ವರ: ಇಲ್ಲಿನ ರಾ.ಹೆದ್ದಾರಿಯ ಪಕ್ಕದಲ್ಲಿರುವ ರುದ್ರಭೂಮಿಯ ಸನಿಹ ಹಾಗೂ ಪೇಟೆ ಸಂಪರ್ಕಿಸುವ ಮುಖ್ಯರಸ್ತೆಯಲ್ಲಿ ಕಳೆದೆರಡು ತಿಂಗಳಿಂದ ವಿಲೇವಾರಿಯಾಗದೇ ಮೂಟೆಗಟ್ಟಲೆ ತ್ಯಾಜ್ಯ ರಾಶಿಬಿದ್ದಿದ್ದು, ಸಾಂಕ್ರಾಮಿಕ ರೋಗಭೀತಿ ಹುಟ್ಟಿಸಿದೆ. ಪೇಟೆ ಮಾರ್ಗದ ಒಂದು ಬದಿಯಲ್ಲಿ ತ್ಯಾಜ್ಯ ಎಸೆಯಲಾಗಿದ್ದು, ಮಳೆಯಿಂದಾಗಿ ತ್ಯಾಜ್ಯ ಕೊಳೆತು ದುರ್ನಾತ ಹೇಳತೀರದಾಗಿದೆ. ಜತೆಗೆ ತ್ಯಾಜ್ಯದಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು ಸಮಸ್ಯೆ ಸೃಷಿಸಿದೆ.  
ಕದ್ದುಮುಚ್ಚಿ  ತ್ಯಾಜ್ಯ ಎಸೆತ!
ಈ ಭಾಗದಲ್ಲಿ ಜನ ಓಡಾಟ ಅಷ್ಟಾಗಿ ಇಲ್ಲದ್ದರಿಂದ ಕತ್ತಲಾದ ಮೇಲೆ ಇಲ್ಲಿ ಹೊಟೇಲ್‌, ಮೀನು ಮಾಂಸದಂಗಡಿ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಬೀದಿ ದೀಪಗಳ ಕೊರತೆಯೂ ಇಲ್ಲಿದ್ದು ಇದು ತ್ಯಾಜ್ಯ ಅಕ್ರಮವಾಗಿ 
ಎಸೆಯುವವರಿಗೆ ವರದಾನವಾಗಿದೆ. ಮುಂದಿನ ಮಳೆಗಾಲದೊಳಗೆ ತ್ಯಾಜ್ಯಕ್ಕೆ, ಶುಚಿತ್ವಕ್ಕೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಡೆಂಗ್ಯೂ, ಮಲೇರಿಯಾ, ಮುಂತಾದ ಸಾಂಕ್ರಾಮಿಕ ರೋಗಗಳು ಗ್ರಾಮವನ್ನು ವ್ಯಾಪಿಸುವ ಭೀತಿ ಇದೆ.

Advertisement

ವಿಲೇವಾರಿ ಆಗುತ್ತಿಲ್ಲ 
ತ್ಯಾಜ್ಯ ವಿಲೇವಾರಿಗೆ ಇಲ್ಲಿ ಸರಕಾರಿ ಸ್ವಾಮ್ಯದ ಜಾಗವಿದ್ದರೂ, ಇಲ್ಲಿ ತ್ಯಾಜ್ಯವನ್ನು ಸುಡಲಾಗುತ್ತಿತ್ತು. ಇದರಿಂದ ಸ್ಥಳೀಯರಿಗೆ ತೊಂದರೆಯಾದ್ದರಿಂದ ವಿರೋಧ ವ್ಯಕ್ತಪಡಿಸಿದರು. ಇದರಿಂದ ಸ್ಥಳೀಯಾಡಳಿತ ಸದ್ಯ ಮಗುಮ್ಮಾಗಿ ಕೂತಿದೆ.  ಪರ್ಯಾಯವಾಗಿ ಇಲ್ಲಿ ವ್ಯವಸ್ಥಿತ, ಆಧುನಿಕ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಬೇಕಾಗಿದೆ. ಇನ್ನು ಕುಂದಾಪುರ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಈ ಭಾಗದ ತ್ಯಾಜ್ಯವನ್ನು ಒಯ್ಯಲು ಅಲ್ಲಿನ ಆಡಳಿತ ವ್ಯವಸ್ಥೆ ಅನುಮತಿ ನೀಡದಿರುವುದು ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ.

ತಾತ್ಕಾಲಿಕ ಪರಿಹಾರ ಸಾಧ್ಯತೆ
ಸದ್ಯದ ಪರಿಸ್ಥಿತಿಯಲ್ಲಿ ಕುಂದಾಪುರ ಪುರಸಭೆ ಕೋಟೇಶ್ವರ ಗ್ರಾಮ ಪಂಚಾಯತ್‌ನೊಡನೆ ಕೈ ಜೋಡಿಸಿದಲ್ಲಿ ಈ ಭಾಗದ ತ್ಯಾಜ್ಯಗಳ ವಿಲೇವಾರಿಗೆ ತಾತ್ಕಾಲಿಕ ಪರಿಹಾರ ಸಿಗಲಿದೆ.

– ಜಾನಕಿ ಬಿಲ್ಲವ, ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ

ಆಧುನಿಕ ತಾಂತ್ರಿಕತೆ ಅಳವಡಿಸಲಿ
ಕೋಟೇಶ್ವರ ಪರಿಸರದ ತ್ಯಾಜ್ಯ ವಿಲೇವಾರಿಗೆ ಜನವಿರಳ ಸರಕಾರಿ ಜಾಗವನ್ನು ಆಯ್ದು ಘಟಕ ನಿರ್ಮಾಣ ಮಾಡುವುದರಲ್ಲಿ ನಮ್ಮ ವಿರೋಧವಿಲ್ಲ. ಆದರೆ ಅಲ್ಲಿನ ದುರ್ವಾಸನೆ ಹೊರಹೋಗದಂತೆ ಆಧುನಿಕ ತಾಂತ್ರಿಕತೆಯನ್ನು ಅಳವಡಿಸಲು ಪಂಚಾಯತ್‌ ಶ್ರಮಿಸಬೇಕು.

– ಸುಬ್ರಹ್ಮಣ್ಯ ಶೆಟ್ಟಿಗಾರ, ಗ್ರಾಮಸ್ಥರು

– ಡಾ| ಸುಧಾಕರ ನಂಬಿಯಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next