Advertisement

ಕೋಟೆಕಾರು ಪ.ಪಂ.ಬಜೆಟ್‌ : 10.60 ಲಕ್ಷ ರೂ. ಮಿಗತೆ ಬಜೆಟ್‌ ಮಂಡನೆ

03:17 PM Mar 31, 2017 | Team Udayavani |

ಕೋಟೆಕಾರು:   ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿದ ಬಳಿಕ  ಗುರುವಾರ ತನ್ನ ಚೊಚ್ಚಲ ಬಜೆಟ್‌ ಮಂಡಿಸಿದ ಕೋಟೆಕಾರು ಪಟ್ಟಣ ಪಂಚಾಯತ್‌ 2017-18ನೇ ಸಾಲಿಗೆ 10.59 ಕೋಟಿ ಅದಾಯ ನಿರೀಕ್ಷಿಸಿದ್ದು, 10.43 ಕೋಟಿ ಖರ್ಚು ಅಂದಾಜಿಸಲಾಗಿದೆ.  10.60 ಲಕ್ಷರೂ. ಮಿಗತೆ ಬಜೆಟ್‌ಗೆ  ಸಭೆಯಲ್ಲಿ ಅನುಮೋ ದನೆಯಾಗಿದ್ದು,  ಕುಡಿಯುವ ನೀರು ಮತ್ತು ಘನತ್ಯಾಜ್ಯ ವಿಲೇವಾರಿಗೆ ಪ್ರಮುಖ ಆದ್ಯತೆ ನೀಡಲಾಗಿದೆ.

Advertisement

ಪಟ್ಟಣ ಪಂಚಾಯತ್‌ನ ಸಭಾಂಗಣ ದಲ್ಲಿ  ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ಸೊಳ್ಳೆಂಜೀರು ಅವರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್‌ ಮಂಡನ ಸಭೆಯಲ್ಲಿ ಮುಖ್ಯಾಧಿಕಾರಿ ಪೂರ್ಣಕಲಾ ಬಜೆಟ್‌ ವಿವರ ನೀಡಿದರು. ಉಪಾಧ್ಯಕ್ಷ ಅನಿಲ್‌ ಬಗಂಬಿಲ, ಸ್ಥಾಯೀ ಸಮಿತಿ ಅಧ್ಯಕ್ಷೆ ಭಾರತೀ ರಾಘವ ಉಪಸ್ಥಿತರಿದ್ದರು.

ಕೋಟೆಕಾರು ಪಟ್ಟಣ ಪಂಚಾಯತ್‌ ಸ್ವಯಂ ಘೋಷಿತ ಆಸ್ತಿ ತೆರಿಗೆ, ಪರವಾನಿಗೆ, ಜಾಹೀರಾತು ಶುಲ್ಕ, ವಾಣಿಜ್ಯ ಸಂಕೀರ್ಣ ಸಹಿತ  ವಿವಿಧ ಮೂಲಗಳಿಂದ   2.3ಕೋಟಿ ಆದಾಯ ನಿರೀಕ್ಷಿಸಿದ್ದು, ನೀರಿನ ಶುಲ್ಕ, ನಲ್ಲಿ ನೀರಿನ ಶುಲ್ಕ ದಂಡ  ಸಹಿತ 33.5 ಲಕ್ಷ ರೂ., ಘನತ್ಯಾಜ್ಯ ವಿಲೇವಾರಿ 11 ಲಕ್ಷ ರೂ. ನಗರೋತ್ಥಾನದಿಂದ 5 ಕೋಟಿ, 14ನೇ ಹಣಕಾಸು ಅನುದಾನ ಸಹಿತ ಎಂಪಿ., ಎಂಎಲ್‌ಎ ಸಹಿತ ವಿಶೇಷ ಅನುದಾನದಡಿ  1.59 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದರು.

ನೀರಿಗಾಗಿ 70 ಲಕ್ಷ ರೂ.
ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರು ಸಹಿತ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸುಮಾರು 70 ಲಕ್ಷ ರೂ. ಕುಡಿಯುವ ನೀರು, ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಕಾಯ್ದಿರಿಸಲಾಗುವುದು. ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ  5,648 ಕುಟುಂಬಗಳಿದ್ದು, 2,300 ನೀರಿನ ಅಧಿಕೃತ ಕನೆಕ್ಷನ್‌ಗಳು ಇವೆ.  ಹಲವು  ಅನಧಿಕೃತ ನೀರಿನ ಕನೆಕ್ಷನ್‌ಗಳ ಮಾಹಿತಿ ಇದ್ದು, ಜೂನ್‌ ಬಳಿಕ ಕಾರ್ಯಾಚರಣೆ ನಡೆಸಲಾಗುವುದು. 
 
ನಲ್ಲಿ ನೀರಿನ ಜೋಡಣೆ ವಾಸ್ತವ್ಯಕ್ಕೆ  1,800 ರೂ. ಹಾಗೂ ವಾಣಿಜ್ಯ ಗಳಿಗೆ 4,000 ರೂ. ನಂತೆ  ಶುಲ್ಕ ಪಾವತಿಸಲಾಗುವುದು. ಜೂನ್‌  ಬಳಿಕ ಕಡ್ಡಾಯವಾಗಿ ಮೀಟರ್‌ ಅಳವಡಿಸಲಾ ಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

ಕೋಟೆಕಾರು ವ್ಯಾಪ್ತಿಯಲ್ಲಿ  ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ  ಸದಸ್ಯ ಲೋಹಿತ್‌ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷ ಉದಯ ಕುಮಾರ್‌ ಸುಳ್ಳೆಂಜೀರು, ಕಿಂಡಿ ಅಣೆಕಟ್ಟಿಗೆ ಹೆಚ್ಚಿನ ಆದ್ಯತೆ ನೀಡಲು ಹಣ  ಮೀಸಲಿಡಲಾಗಿದೆ. ಬೋರ್‌ವೆಲ್‌ನಲ್ಲಿ ನೀರು ಶೇಖರಣೆಗೆ ಇಂಗುಗುಂಡಿ ರಚಿಸಲಾಗುವುದು ಎಂದರು. 

Advertisement

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಈ ಗ್ರಾಮವೂ ಒಳಪಡಲಿದ್ದು, ಈ ನಿಟ್ಟನಲ್ಲಿ ಇನ್ನಷ್ಟು ಒತ್ತಡ ಹಾಕುವ ಕಾರ್ಯವನ್ನು ಪಂಚಾಯತ್‌ ವತಿಯಿಂದ ಮಾಡಬೇಕು. ವಿಶೇಷ ಅನುದಾನದ ಮೂಲಕ ನೀರಿನ ಸಮಸ್ಯೆ ಬಗೆಹರಿಸಬಹುದು ಮತ್ತು ಖಾಸಗಿ ಜಾಗವನ್ನು ಪಂಚಾಯತ್‌ಗೆ ರಿಜಿಸ್ಟ್ರೇಷನ್‌ ಮಾಡಿ ಬಳಿಕ ನೀರು ತೆಗೆಯುವ ಕಾರ್ಯ ನಡೆಸಬೇಕು. ಈ ಬಾರಿ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪೂರ್ಣಕಲಾ ಅವಧಿರು ತಿಳಿಸಿದರು. 

ಘನ ತ್ಯಾಜ್ಯ ಘಟಕದ ಆವರಣಕ್ಕೆ ರೂ. 45 ಲಕ್ಷ  ಅಂದಾಜಿಸಲಾಗಿದ್ದು, ಪೂರ್ಣ ಪ್ರಮಾಣದ ಘನತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸಲಾಗುವುದು ಎಂದರು.

ಈ ಬಾರಿ  ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಮೀಸಲಿಟ್ಟ ಅನುದಾನದಡಿ 20 ಲಕ್ಷ ವೆಚ್ಚದಲ್ಲಿ ಪುಳಿತ್ತಡಿ  ಎಂಬಲ್ಲಿ ತೆರೆದ ಬಾವಿ ನಿರ್ಮಾಣ, ಮಾಡೂರು ಶ್ಮಶಾನ ಬಳಿ 1 ಲಕ್ಷ ಲೀಟರ್‌ ಸಾಮರ್ಥ್ಯದ ಓವರ್‌ಹೆಡ್‌ ಟ್ಯಾಂಕ್‌ ಹಾಗೂ ಕೊಳವೆ ಜಾಲ ಅಳವಡಿಕೆ, 25 ಲಕ್ಷ ರೂ. ವೆಚ್ಚದಲ್ಲಿ ಪನೀರು ಸೈಟ್‌ನಲ್ಲಿ ತೆರೆದಬಾವಿ ಮತ್ತು 2.50 ಲಕ್ಷ ಲೀ. ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌ , ಮಾಡೂರು ದ್ವಾರದಿಂದ ಮಿತ್ರನಗರದವರೆಗೆ ರಸ್ತೆಗೆ ರೂ. 50 ಲಕ್ಷ ವೆಚ್ಚದಲ್ಲಿ ಫೇವರ್‌ ಫಿನಿಶ್‌ ಡಾಮರು ಕಾಮಗಾರಿ, ರೂ. 15 ಲಕ್ಷ ವಚ್ಚದಲ್ಲಿ ವಿಷ್ಣುಮೂರ್ತಿ ದೇವಸ್ಥಾನದಿಂದ ಬೆನಕ ಜನರಲ್‌ ಸ್ಟೋರ್‌ನವರೆಗೆ  ರಸ್ತೆ ಕಾಂಕ್ರಿಟ್‌ ಕಾಮಗಾರಿ, ರೂ. 15 ಲಕ್ಷ ವೆಚ್ಚದಲ್ಲಿ ಶಿವಾಜಿ ನಗರದಿಂದ ಶಾಂತಿಬಾಗ್‌ ರಸ್ತೆ ಅಭಿವೃದ್ಧಿ, ನಡಾರ್‌ ಎಂಬಲ್ಲಿ 13.23 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ, ರೂ. 26.58 ಲಕ್ಷ ವೆಚ್ಚದಲ್ಲಿ ಪನೀರು ರಸ್ತೆಯ ಕೋಮರಂಗಳದಲ್ಲಿ ಮಳೆ ನೀರು ಚರಂಡಿ ಅಭಿವೃದ್ಧಿ, ರೂ. 20 ಲಕ್ಷ ವೆಚ್ಚದಲ್ಲಿ ಪಂಚಾಯತ್‌ ವ್ಯಾಪ್ತಿಯಲ್ಲಿ ಮಾರುಕಟ್ಟೆ ನಿರ್ಮಾಣ, 15.67 ಲಕ್ಷ ವೆಚ್ಚದಲ್ಲಿ  ಪಾರ್ಕ್‌ ನಿರ್ಮಾಣ, ರೂ. 10 ಲಕ್ಷ ವೆಚ್ಚದಲ್ಲಿ ವಿವಿಧೆಡೆ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣ, ರೂ. 7.50 ಲಕ್ಷ ವೆಚ್ಚದಲ್ಲಿ  10 ಕಡೆಗಳಲ್ಲಿ ರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರಚಿಸಲಾಗಿದೆ. ಎಸ್‌ಸಿ ಎಸ್‌ಟಿಗಳಿಗೆ ಆರೋಗ್ಯ ವಿಮೆಗೆ 3 ಲಕ್ಷ ರೂ.ಮೀಸಲಿಟ್ಟಿದೆ ಎಂದರು.ಪಟ್ಟಣ ಪಂಚಾಯತನ್ನು ಹೊಗೆ ಮುಕ್ತ ಮನೆ ಮತ್ತು ಪ್ಲಾಸ್ಟಿಕ್‌ ಮುಕ್ತ ಗ್ರಾಮವನ್ನಾಗಿ ಮಾಡಲು ಯೋಜನೆ ರೂಪಿಸಿದ್ದು, ಅಂಗಡಿಗಳು ಮತ್ತು ಜನರಲ್ಲಿ ಪ್ಲಾಸ್ಟಿಕ್‌ ಚೀಲಗಳ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವುದು ಎಂದರು.

ಎಂಜಿನಿಯರ್‌ ರೇಣುಕಾ, ಕಂದಾಯ ನಿರೀಕ್ಷಕ ದೇವದಾಸ್‌, ಲೆಕ್ಕಪರಿಶೋಧಕಿ ಪ್ಲಾವಿಯಾ, ಸೆಬಾಸ್ಟಿಯನ್‌ ಚಾರ್ಲ್ಸ್‌ ಡಿಲಿಮಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next