Advertisement

ಕೊಕ್ಕಡ-ನೆಲ್ಯಾಡಿ ಸಂಪರ್ಕ ರಸ್ತೆ ಅವ್ಯವಸ್ಥೆ 

10:26 AM Jul 12, 2018 | Team Udayavani |

ನೆಲ್ಯಾಡಿ: ಕೊಕ್ಕಡದಿಂದ ನೆಲ್ಯಾಡಿಯನ್ನು ಸಂಪರ್ಕಿಸುವ ಸಮೀಪದ ರಸ್ತೆ ಪುತ್ಯೆ ಎನ್ನುವಲ್ಲಿ ಎರಡು ಗ್ರಾಮಗಳ ಗಡಿ ಪ್ರದೇಶವಾದ ಕಾರಣ ಅವ್ಯವಸ್ಥೆಯಿಂದ ಕೂಡಿದೆ. ಪುತ್ಯೆ ಸೇತುವೆಯಿಂದ ಕೊಕ್ಕಡಕ್ಕೆ ತೆರಳುವ ರಸ್ತೆಯಲ್ಲಿ 400 ಮೀ. ಉದ್ದಕ್ಕೆ ಡಾಮರು ಕಾಮಗಾರಿಯೂ ಆಗಿಲ್ಲ. ಚರಂಡಿಗಳೂ ಮುಚ್ಚಿ ಹೋಗಿದ್ದು, ರಸ್ತೆಯಲ್ಲೇ ನೀರು ಹರಿಯುವ ಕಾರಣ ಸಂಪೂರ್ಣ ಹದಗೆಟ್ಟು ವಾಹನಗಳು ಹೂತು ಹೋಗುತ್ತಿವೆ.

Advertisement

ಕೊಕ್ಕಡದಿಂದ ನೆಲ್ಯಾಡಿಗೆ ತಲುಪಲು ಪೆರಿಯಶಾಂತಿ ಮಾರ್ಗವಾಗಿ 10 ಕಿ.ಮೀ. ದೂರ ಕ್ರಮಿಸಬೇಕಾಗುತ್ತದೆ. ಕೊಕ್ಕಡ -ಪುತ್ಯೆ- ನೆಲ್ಯಾಡಿ ರಸ್ತೆ ಕೇವಲ 3 ಕಿ.ಮೀ. ದೂರವಿದೆ. ಪೆರಿಯಶಾಂತಿ ಮಾರ್ಗವಾಗಿ ತೆರಳಿದರೆ 7 ಕಿ.ಮೀ. ದೂರ ಕಡಿಮೆಯಾಗುತ್ತದೆ. 3 ಕಿ.ಮೀ. ದೂರದ ರಸ್ತೆಯು ನೆಲ್ಯಾಡಿ, ಕೌಕ್ರಾಡಿ ಮತ್ತು ಕೊಕ್ಕಡ ಗ್ರಾ.ಪಂ. ವ್ಯಾಪ್ತಿಗೆ ಬರುತ್ತದೆ. ಹಲವು ವರ್ಷಗಳ ಹಿಂದೆ ಕೊಕ್ಕಡ-ಪುತ್ಯೆ ಹಾಗೂ ನೆಲ್ಯಾಡಿ-ಪುತ್ಯೆವರೆಗಿನ ರಸ್ತೆಗೆ ಡಾಮರು ಹಾಕಲಾಗಿದೆ. ಇನ್ನೂ 400 ಮೀ. ದೂರಕ್ಕೆ ಡಾಮರು ಕಾಮಗಾರಿ ಬಾಕಿ ಇದೆ.

ಪರ್ಯಾಯ ರಸ್ತೆಯಾಗಿ ಬಳಕೆ
ರಾ.ಹೆ. 75ರ ಪೆರಿಯ ಶಾಂತಿ- ಧರ್ಮಸ್ಥಳ ರಸ್ತೆ ಅರಣ್ಯದ ನಡುವೆ ಇದೆ. ಇಲ್ಲಿ ಮಳೆಗಾಲದಲ್ಲಿ ಮರಗಳು ಬಿದ್ದು ರಸ್ತೆ ತಡೆ ಉಂಟಾಗುತ್ತದೆ. ಈ ಸಂದರ್ಭ ಬದಲಿ ಮಾರ್ಗವಾಗಿ ಕೊಕ್ಕಡ-ಪುತ್ಯೆ-ನೆಲ್ಯಾಡಿ ರಸ್ತೆಯೇ ಸಂಪರ್ಕ ರಸ್ತೆಯಾಗಿ ಬಳಸಲ್ಪಡುತ್ತಿದೆ. ಸ್ಥಳೀಯ ವಾಹನ ಸವಾರರೇ ಈ ಮಾರ್ಗದಲ್ಲಿ ಪ್ರಯಾಸದಿಂದ ಸಂಚರಿಸುತ್ತಿದ್ದರೂ ಯಾತ್ರಾರ್ಥಿಗಳಿಗೆ ಈ ರಸ್ತೆಯ ಬಗ್ಗೆ ಅರಿವು ಇಲ್ಲದ ಕಾರಣ ಅವರ ವಾಹನಗಳು ರಸ್ತೆಯಲ್ಲೇ ಹೂತು ಹೋಗುತ್ತಿವೆ.

ಇನ್ನಾದರೂ ಗಮನ ಹರಿಸುವಿರಾ?
ಪ್ರತಿ ಮಳೆಗಾಲದ ಮೂರ್‍ನಾಲ್ಕು ತಿಂಗಳು ಅವ್ಯವಸ್ಥೆ ಎದ್ದು ಕಾಣುತ್ತದೆ. ಆದರೂ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಯವರು ಮೌನ ವಹಿಸಿ ದ್ದಾರೆ. ಇನ್ನಾದರೂ ಇತ್ತ ಅವರು ಗಮನ ಹರಿಸಬೇಕು ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

ತಡೆಗೋಡೆ ಕಾರ್ಯ ಆಮೆಗತಿ
ಪುತ್ಯೆಯಲ್ಲಿ ಕಾಲುಸಂಕ ಮಾತ್ರ ಇತ್ತು. ಕಳೆದ ವರ್ಷ ಪೂರ್ಣ ಪ್ರಮಾಣದ ಸೇತುವೆ ಕಾರ್ಯ ನಡೆದಿದ್ದು, ಸಂಚಾರಕ್ಕೆ ತೆರೆದುಕೊಂಡಿದೆ. ಸೇತುವೆ ಉದ್ಘಾಟನೆಗೊಂಡರೂ ಇಕ್ಕೆಲಗಳ ತಡೆಗೋಡೆ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ. ಮಳೆಗಾಲಕ್ಕೆ ಭಾಗಶಃ ಪೂರ್ಣಗೊಂಡಿದೆಯಷ್ಟೆ. 

Advertisement

ಗುರುಮೂರ್ತಿ ಎಸ್‌. ಕೊಕ್ಕಡ

Advertisement

Udayavani is now on Telegram. Click here to join our channel and stay updated with the latest news.

Next