Advertisement

ನಾಗರಿಕ ಹಕ್ಕುಗಳ ಅರಿವು ಅಗತ್ಯ

07:16 AM Mar 02, 2019 | |

ದೇವನಹಳ್ಳಿ: ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು. 

Advertisement

ತಾಲೂಕಿನ ಚಪ್ಪರದಕಲ್ಲು ಸರ್ಕಲ್‌ನಲ್ಲಿರುವ ಜಿಲ್ಲಾಡಳಿತ ಭವನ, ಜಿಲ್ಲಾಧಿಕಾರಿ ಕಚೇರಿ ಆಡಿಟೋರಿಯಂದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ ವತಿಯಿಂದ ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ 1955, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ(ದೌರ್ಜನ್ಯ ಪ್ರತಿಬಂಧ)ಅಧಿನಿಯಮ 1989 ಎಸ್‌ಪಿ, ಟಿಎಸ್‌ಪಿ 2013 ಕಾಯ್ದೆ ಮತ್ತು

ಸುಳ್ಳು ಜಾತಿ ಪ್ರಮಾಣ ಪತ್ರ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಮತ್ತು ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಗಾರದಲ್ಲಿ ಭಾಗವಹಿಸಿರುವ ಎಲ್ಲಾ ಅಧಿಕಾರಿಗಳು ಈ ಕಾಯ್ದೆಗಳ ಬಗ್ಗೆ ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕೆಂದು ಹೇಳಿದರು.

ಕಾನೂನು ತಿಳಿದುಕೊಳ್ಳಿ: ಬೆಂಗಳೂರು ಸಮಾಜ ಕಲ್ಯಾಣ ಇಲಾಖೆ, ಆಯುಕ್ತರ ಕಚೇರಿಯ ಅಪರ ನಿರ್ದೇಶಕ(ಆಡಳಿತ)ಡಾ.ವಿ.ಸೌಂದರ್‌ ರಾಜ್‌ ಮಾತನಾಡಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಾನೂನು ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ(ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ)ಅಧಿನಿಯಮವನ್ನು 2013 ಮತ್ತು ನಿಯಮಗಳು 2017ರ ವಿಷಯದ ಕುರಿತು ತಿಳಿದುಕೊಳ್ಳಬೇಕು ಎಂದರು.

ಅಧಿಕಾರಿಗಳಿಗೆ ಕಾಯ್ದೆ ಅರಿವಿಲ್ಲ: ಸಮಾಜದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳು ಹಾಗೂ ಸಾಮಾನ್ಯ ವರ್ಗದವರ ನಡುವೆ ಇಂದಿಗೂ ತೀರಾ ಅಂತರವಿದೆ. ಈ ಅಂತರವನ್ನು ಕಡಿಮೆ ಮಾಡಲು ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಲೇ ಬಂದಿದೆ. ಹಾಗೆಯೇ, 2013ರ ಡಿಸೆಂಬರ್‌ನಲ್ಲಿ ಅಸ್ತಿತ್ವಕ್ಕೆ ಬಂದ ಟಿಎಸ್‌ಪಿ, ಎಸ್‌ಸಿ, ಎಸ್‌ಪಿ ಕಾಯ್ದೆಯ ಸಾಧಕ, ಬಾಧಕಗಳ ಬಗ್ಗೆ ತಿಳಿಸಿದರು. ಟಿಎಸ್‌ಪಿ, ಎಸ್‌ಸಿಎಸ್‌ಪಿ ಕಾಯ್ದೆ 1979 ರಲ್ಲೇ ಜಾರಿಗೆ ಬಂದಿದ್ದರೂ ಆ ಬಗ್ಗೆ ನಮ್ಮ ಅಧಿಕಾರಿಗಳಿಗೆ ಯಾವುದೇ ರೀತಿಯ ಮಾಹಿತಿಗಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

Advertisement

ಉಪನ್ಯಾಸ: ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆ ತಳ ಸಮುದಾಯಗಳ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಪಕ ಡಾ.ಆರ್‌.ವಿ.ಚಂದ್ರಶೇಖರ್‌ ಅವರು “ರಾಜ್ಯದಲ್ಲಿ ಮ್ಯಾನ್ಯುಯಲ್‌ ಸ್ಕಾವೆಂಜರ್, ಸಫಾಯಿ ಕರ್ಮಚಾರಿ ವೃತ್ತಿಯಲ್ಲಿ ತೊಡಗಿರುವವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಆಯೋಗದ ಪಾತ್ರ ಹಾಗೂ ಪೌರ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಉಪನ್ಯಾಸ ನೀಡಿದರು. 

ಪೊಲೀಸ್‌ ಉಪಾಧೀಕ್ಷಕ ಆರ್‌.ಜಯರಾಮ್‌, ಮೂರನೇ ಅವಧಿಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಕಾನೂನು ಬಾಹಿರವಾಗಿ ಪಡೆದು ಉದ್ಯೋಗ ಪಡೆದಿರುವವರಿಗೆ ಕಾನೂನಿನಡಿ ಶಿಕ್ಷೆಗಳು ಮತ್ತು ಅವುಗಳನ್ನು ತಡೆಗಟ್ಟುವಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಪಾತ್ರ ಹಾಗೂ ಕರ್ತವ್ಯ ಎಂಬ ವಿಷಯದ ಬಗ್ಗೆ  ಮಾತನಾಡಿದರು.

ಡೈರೆಕ್ಟರ್‌ ಆಫ್ ಪ್ರಾಷಿಕ್ಯೂಷನ್‌ನ ಉಪ ನಿರ್ದೇಶಕ ಕೆ.ರುದ್ರಸ್ವಾಮಿ, ನಾಗರಿಕರ ಹಕ್ಕು ಜಾರಿ ನಿರ್ದೇಶನಾಲಯ ಹಾಗೂ ನಾಗರಿಕ ಹಕ್ಕು ಸಂರಕ್ಷಣ ಅಧಿನಿಯಮ 1955, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ(ದೌರ್ಜನ್ಯ ಪ್ರತಿಬಂಧ) ಅಧಿನಿಯಮ 1989ಕ್ಕೆ ಸಂಬಂಧಿಸಿಂತೆ ಉಪನ್ಯಾಸ ನೀಡಿದರು. 

ಕಾರ್ಯಾಗಾರದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್‌.ಲತಾ, ಮುಖ್ಯ ಯೋಜನಾಧಿಕಾರಿ ವಿನೂತಾ ರಾಣಿ, ಪೊಲೀಸ್‌ ಅಧೀಕ್ಷರ ಕೆ.ಬಿ.ಪಿ. ಶಿವಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪ್ರೇಮನಾಥ್‌ ಮತ್ತು ಸಂಪನ್ಮೂಲ ವ್ಯಕ್ತಿಗಳು ಹಾಗೂ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next