ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ಶುಕ್ರವಾರ ದಾಖಲೆ ನಿರ್ಮಾಣವಾಗಿದೆ. ಟಿ20 ಕ್ರಿಕೆಟ್ ಇತಿಹಾಸದ ಅತಿ ದೊಡ್ಡ ಚೇಸ್ ಗೆ ಕೋಲ್ಕತ್ತಾ ಸಾಕ್ಷಿಯಾಗಿದೆ. ಕೆಕೆಆರ್ ನೀಡಿದ 262 ರನ್ ಗುರಿಯನ್ನು ಪಂಜಾಬ್ ತಂಡವು ಎಂಟು ಎಸೆತ ಬಾಕಿ ಇರುವಂತೆಯೇ ಚೇಸ್ ಮಾಡಿ ದಾಖಲೆ ಬರೆದಿದೆ. ಜಾಣಿ ಬೇರ್ ಸ್ಟೋ ಅಜೇಯ ಶತಕ, ಪ್ರಭುಸಿಮ್ರನ್ ಮತ್ತು ಶಶಾಂಕ್ ಸಿಂಗ್ ಅರ್ಧಶತಕ ಹೊಡೆದು ಮಿಂಚಿದರು.
ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ಶುಕ್ರವಾರ ಪಂಜಾಬ್ ವಿರುದ್ಧ ಹೃದಯವಿದ್ರಾವಕ ಸೋಲಿನ ಹೊರತಾಗಿಯೂ ಶಾಂತವಾಗಿದ್ದರು. ಆದರೆ ಪಂದ್ಯದ ನಡುವೆ ಒಮ್ಮೆ ಮಾತ್ರ ಅಂಪೈರ್ ಜತೆ ವಾಗ್ವಾದಕ್ಕೆ ಇಳಿದಿದ್ದರು.
ಕೆಕೆಆರ್ ಇನ್ನಿಂಗ್ಸ್ ನ 14ನೇ ಓವರ್ ವೇಳೆ ಈ ಘಟನೆ ನಡೆದಿದೆ. ಪಂಜಾಬ್ ಸ್ಪಿನ್ನರ್ ರಾಹುಲ್ ಚಾಹರ್ ಎಸೆತವನ್ನು ಆಂಡ್ರೆ ರಸೆಲ್ ಕವರ್ ಮೂಲಕ ಕಟ್ ಮಾಡಿದರು. ಆದರೆ, ಅಶುತೋಷ್ ಶರ್ಮಾ ಚೆಂಡನ್ನು ಡೈವ್ ಮಾಡಿ ವೃತ್ತದೊಳಗೆ ನಿಲ್ಲಿಸಿದರು. ಅಶುತೋಷ್ ಬೇಗನೆ ಚೆಂಡನ್ನು ಕೀಪರ್ ತುದಿಗೆ ಎಸೆದರು, ಆದರೆ ಅದು ಸ್ವಲ್ಪ ದಾರಿ ತಪ್ಪಿದ ಕಾರಣ ರಸೆಲ್ ಓವರ್ ಥ್ರೋಗೆ ಓಡಿದರು. ಆದಾಗ್ಯೂ, ಆನ್-ಫೀಲ್ಡ್ ಅಂಪೈರ್ ಗಳು ಕೆಕೆಆರ್ ಓವರ್ಥ್ರೋ ರನ್ ನೀಡಲು ನಿರಾಕರಿಸಿದರು. ಅವರು ಈಗಾಗಲೇ ಓವರ್ ಅಂತ್ಯವಾಗಿದೆ ಎಂದು ಹೇಳಿದರು.
ಇದರಿಂದ ಕೋಪಗೊಂಡ ಗಂಭೀರ್ ಡಗೌಟ್ ಬಳಿ ನಿಂತಿದ್ದ ಅಂಪೈರ್ ಬಳಿ ಹೋಗಿ ಚರ್ಚೆ ನಡೆಸಿದರು. ಈ ವೇಳೆ ಸ್ಥಳದಲ್ಲಿ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಕೂಡ ಇದ್ದರು. ಗಂಭೀರ್ ಮತ್ತು ನಾಲ್ಕನೇ ಅಂಪೈರ್ ನಡುವೆ ಸ್ವಲ್ಪ ಸಮಯ ಮಾತುಕತೆ ನಡೆಯಿತು. ಬಳಿಕ ಗಂಭೀರ್ ಹಿಂದೆ ಬಂದರು. ಆದರೆ ಸಮಾಧಾನಗೊಂಡಂತೆ ಕಾಣಲಿಲ್ಲ.
ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ ಜಾನಿ ಬೇರ್ ಸ್ಟೋ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಅವರು 9 ಸಿಕ್ಸರ್ ಮತ್ತು 8 ಫೋರ್ ಗಳನ್ನು ಹೊಡೆದಿದ್ದರು.