Advertisement

ಕಲ್ಲು ಎತ್ತಿ ಹಾಕಿ ಸೆಕ್ಯೂರಿಟಿ ಗಾರ್ಡ್‌ ಕೊಲೆ

06:21 AM Mar 10, 2019 | Team Udayavani |

ಬೆಂಗಳೂರು: ಕೆಲ ದುಷ್ಕರ್ಮಿಗಳು ಸೆಕ್ಯೂರಿಟಿ ಗಾರ್ಡ್‌ ಮೇಲೆ ಕಲ್ಲುಗಳನ್ನು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ವ್ಯಾಪ್ತಿಯ ಹಿಂದೂ ರುದ್ರಭೂಮಿಯಲ್ಲಿ ನಡೆದಿದೆ. 

Advertisement

ಹಾಸನ ಮೂಲದ ಮಂಜುನಾಥ (48) ಕೊಲೆಯಾದ ಸೆಕ್ಯೂರಿ ಗಾರ್ಡ್‌. ಬುಧವಾರ ತಡರಾತ್ರಿ ಬೊಮ್ಮನಹಳ್ಳಿ ಹಿಂದೂ ರುದ್ರಭೂಮಿಯಲ್ಲಿ ಘಟನೆ ನಡೆದಿದ್ದು, ಗುರುವಾರ ಬೆಳಗ್ಗೆ ಶವ ನೋಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳದ ಸುತ್ತಲ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದು, ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ಕೆಲ ವರ್ಷಗಳ ಹಿಂದೆಯೇ ನಗರಕ್ಕೆ ಬಂದಿರುವ ಮಂಜುನಾಥ, ಗೋವಿಂದಶೆಟ್ಟಿ ಪಾಳ್ಯದಲ್ಲಿ ಕುಟುಂಬದ ಜತೆ ವಾಸವಿದ್ದರು. ಮೂರು ವರ್ಷಗಳ ಹಿಂದೆ ಪತ್ನಿ ಮೃತಪಟ್ಟಿದ್ದು, ಮಕ್ಕಳು ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಾರೆ. ಹೀಗಾಗಿ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಈ ಮೊದಲು ಖಾಸಗಿ ಕಂಪನಿಯಲ್ಲಿ ಲಾರಿ ಚಾಲಕರಾಗಿದ್ದ ಮಂಜುನಾಥ, ಇತ್ತೀಚೆಗೆ ಕೆಲಸ ಬಿಟ್ಟು ಸೆಕ್ಯೂರಿ ಗಾರ್ಡ್‌ ಕೆಲಸ ಮಾಡುತ್ತಿದ್ದರು.

ಕುಡಿತದ ಚಟ ಅಂಟಿಸಿಕೊಂಡಿದ್ದ ಮಂಜುನಾಥ, ನಿತ್ಯ ಮದ್ಯ ಸೇವಿಸುತ್ತಿದ್ದರು. ಬುಧವಾರ ರಾತ್ರಿಯೂ  ಮದ್ಯ ಸೇವಿಸಿದ್ದಾರೆ. ಈ ವೇಳೆ ನಾಲ್ಕೈದು ದುಷ್ಕರ್ಮಿಗಳು ಬಾರ್‌ ಮುಂಭಾಗದಲ್ಲೇ ಇರುವ ಬೊಮ್ಮನಹಳ್ಳಿಯ ಹಿಂದೂ ರುದ್ರಭೂಮಿಗೆ ಮಂಜುನಾಥನನ್ನು ಕರೆದೊಯ್ದಿದ್ದಾರೆ.

ಬಳಿಕ ಕಲ್ಲುಗಳನ್ನು ಎತ್ತಿಹಾಕಿ ಹತ್ಯೆಗೈದು ಪರಾರಿಯಾಗಿದ್ದಾರೆ. ಸ್ಮಶಾನದ ಪಕ್ಕದಲ್ಲೇ ಸುಲಭ ಶೌಚಾಲಯವಿದ್ದು, ಇಲ್ಲಿಗೆ ಹೋದ ಸಾರ್ವಜನಿಕರೊಬ್ಬರು ಗಮನಿಸಿ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸುವುದಾಗಿ ಎಚ್‌ಎಸ್‌ಆರ್‌ ಲೇಔಟ್‌ ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next