Advertisement

ಕೊಂದಿರಿ, ಕೊಂದದ್ದನ್ನು ಸಂಭ್ರಮಿಸಿದಿರಿ…

08:56 AM Sep 25, 2017 | |

ಮೈಸೂರು: ವಿಶ್ವವಿಖ್ಯಾತ ದಸರಾ ಅಂಗವಾಗಿ ನಡೆದ ದಸರಾ ಕವಿಗೋಷ್ಠಿಯಲ್ಲೂ ಪತ್ರಕರ್ತೆ ಗೌರಿ ಲಂಕೇಶ್‌, ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಗಳು ಪ್ರತಿಧ್ವನಿಸಿದವು.

Advertisement

ನಗರದ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಆರಂಭವಾದ ದಸರಾ ಕವಿಗೋಷ್ಠಿಯ ಮೊದಲ ದಿನ ನಡೆದ ವಿಕಾಸ ಕವಿಗೋಷ್ಠಿಯಲ್ಲಿ 20ಕ್ಕೂ ಹೆಚ್ಚು ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ಅಖಂಡತೆ ಶೀರ್ಷಿಕೆಯಡಿಯಲ್ಲಿ ಕಾವ್ಯ ವಾಚಿಸಿದ ಕೃಷ್ಣಮೂರ್ತಿ ಚಮರಂ, “ನಾವು ಸ್ನೇಹಕ್ಕೆ ಬದ್ಧ, ಸಮರಕ್ಕೆ ವಿರುದ್ಧ, ಬಂಡಾಟ, ಪುಂಡಾಟ ಬಿಟ್ಟು, ಅಖಂಡತೆ ಕಟ್ಟಿ ಬನ್ನಿ ‘
ಎಂದು ಸಂದೇಶ ಸಾರಿದರು. ಅಲ್ಲದೆ, “ಕೊಂದಿರಿ, ಕೊಂದದ್ದನ್ನು ಸಂಭ್ರಮಿಸಿದಿರಿ. ಬಾಯಲ್ಲಿ ಶಾಂತಿ ಮಂತ್ರ, ಬಗಲಲ್ಲಿ ಚೂರಿ, ಮುಗಿದಂತಿಲ್ಲ ನಿಮ್ಮ ರಕ್ತದಾಹ, ಯುದ್ಧಕಾಂಡ, ಗಾಂಧಿಯಿಂದ, ಗೌರಿಯವರೆಗೆ ಮುಂದುವರೆಸಿದಿರಿ, ನಿಮ್ಮ ಮುಖವಾಡದ ಹತ್ಯಾಕಾಂಡ ‘ ಎಂದು ಗೌರಿ ಹತ್ಯೆಗೆ ತಮ್ಮ ಕಾವ್ಯದ ಮೂಲಕ ಖಂಡನೆ ವ್ಯಕ್ತಪಡಿಸಿದರು. ನಂತರ ಕವನ ವಾಚಿಸಿದ ಹಲವು
ಕವಿಗಳು ಹಿರಿಯ ಸಾಹಿತಿ ಕಲಬುರ್ಗಿ ಮತ್ತು ಇತ್ತೀಚಿನ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಯನ್ನು ಖಂಡಿಸಿ ಕವನ ವಾಚನ ಮಾಡಿದರು. ಕವಿ ಕೆ.ಬಿ.ಸಿದ್ದಯ್ಯ ಅವರು “ಜಾಣ-ಜಾಣೆಯರ ಗೌರಿ’ ಎಂಬ ಶೀರ್ಷಿಕೆಯಡಿ ಕವನ ವಾಚಿಸಿದರೆ, ಮಮತಾ ಅರಸೀಕೆರೆ ಅವರು, ಪ್ರಸ್ತುತ ಸಂದರ್ಭಕ್ಕೆ ಹೋಲುವ ಹಾಗೆ ಒಳ್ಳೆಯ ದಿನಗಳು ತಪ್ಪಿ ಹೋದಾವು, ಏಳಿ ಎದ್ದೇಳಿ ಶೀರ್ಷಿಕೆಯ ಕವನ
ವಾಚಿಸಿದರು. ಪಿ.ಮಹೇಶ್‌ ಕುಮಾರ್‌ ಅವರು ಭಾವಸಂತೆ ಶೀರ್ಷಿಕೆಯಡಿ ಅಸಮಾನತೆ, ಅಸಹಿಷ್ಣುತೆ, ಕಿಚ್ಚು-ರೊಚ್ಚು, ಹೀಗೂ ಉಂಟು ಆಚಾರದ ಅಬ್ಬರ, ವಿಚಾರದ ಸಾವು, ಕಲಬುರ್ಗಿ, ಗೌರಿಯ ಅಂತ್ಯದಂತೆ ಎಂಬ ಕವಿತೆಯಲ್ಲಿ ಗೌರಿ ಮತ್ತು ಕಲಬುರ್ಗಿ ಹತ್ಯೆಯಿಂದಾದ ನೋವನ್ನು ಅಭಿವ್ಯಕ್ತಿಗೊಳಿಸಿದರು. 

ವೈ.ಎಸ್‌.ಅಭಿಷೇಕ್‌ ಅವರು “ಸಾವೆಂಬುದು’ ಇದೆ ಎಂಬ ಶೀರ್ಷಿಕೆಯಡಿ ನಿನ್ನೆ ರಾತ್ರಿ ನನಗೊಂದು ಕನಸು ಬಿತ್ತು ಎಂದು ಕವನ ಆರಂಭಿಸಿ ಉಸಿರಾಡುವ ಬಂದೂಕುಗಳಿಗೂ ಸಾವು ಇದೆ ಎಂದು ಬಂದೂಕಿನಿಂದ ಆಗುತ್ತಿರುವ ಸಾವು-ನೋವುಗಳ ಬಗ್ಗೆ ಜಾಗೃತಗೊಳಿಸಿದರು. ಭೂಮಿಕಾ ಎಸ್‌.ಕಿರಣ್‌ ಅವರು “ಮುಖವಾಡ ಕಳಚಬೇಕು, ಆಗಬೇಕು ಮನ: ಪರಿವರ್ತನೆ, ಅರಳಿನಿಂತ ದಸರೆ ಹೂಗಳಂತೆ’ ಎಂಬ ಆಶಯ ವ್ಯಕ್ತಪಡಿಸಿದರೆ, ಗೋಷ್ಠಿಯಲ್ಲಿ ಭಾಗವಹಿಸಿದ್ದ 7ನೇ ತರಗತಿಯ ವಿದ್ಯಾರ್ಥಿನಿ ಎಚ್‌.ಎಂ.ಅರ್ಪಿತಾ ಅವರು, ಪ್ರಕೃತಿ, ಚಲಂ ಹಾಡ್ಲಹಳ್ಳಿ ನನ್ನ ಅಪ್ಪ, ಚಂದ್ರಗುಪ್ತ ಅವರ ನನ್ನವ್ವ ಶೀರ್ಷಿಕೆಯ ಕವಿತೆಗಳನ್ನು ಪ್ರಸ್ತುತ ಪಡಿಸಿದರು.

ಮಲ್ಟಿಫ್ಲೆಕ್ಸ್‌ನಲ್ಲಿ ದಸರಾ ಗಜಪಡೆಯ ಮಾವುತರು! 
ಇದೇ ಮೊದಲ ಬಾರಿಗೆ ನಗರದ ಮಲ್ಟಿಫ್ಲೆಕ್ಸ್‌ಗಳಾದ ಡಿಆರ್‌ಸಿ ಮತ್ತು ಐನಾಕ್ಸ್‌ ನಲ್ಲಿ ಆಯೋಜಿಸಿರುವ ದಸರಾ ಚಲನಚಿತ್ರೋತ್ಸವ ಸಿನಿ ಪ್ರಿಯರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಭಾನುವಾರ ಡಿಆರ್‌ಸಿ ಚಿತ್ರಮಂದಿರದ ಬೆಳಗಿನ ಪ್ರದರ್ಶನದಲ್ಲಿ ದಸರಾ ಗಜಪಡೆಯ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬ ವರ್ಗದವರಿಗಾಗಿ “ರಾಜಕುಮಾರ’ , ಆಪರೇಷನ್‌ ಅಲಮೇಲಮ್ಮ’ ಚಲನಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗಿನ ಪ್ರದರ್ಶನವನ್ನು 31 ಜನ ವೀಕ್ಷಿಸಿದ್ದು, ಇನ್ನುಳಿದವರನ್ನು ಉಳಿದ ಪ್ರದರ್ಶನಗಳಿಗೆ ಕರೆತಂದು ಸಿನಿಮಾ ತೋರಿಸಲಾಯಿತು.

ಚಾಮುಂಡೇಶ್ವರಿಗೆ ಸಿಎಂ ಪತ್ನಿ ವಿಶೇಷ ಪೂಜೆ
ನವರಾತ್ರಿ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಶರನ್ನವರಾತ್ರಿಯ 4ನೇ ದಿನವಾದ ಭಾನುವಾರ ಬೆಳಗ್ಗೆ 6.30ಕ್ಕೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಅವರು ಪತಿ ಸಿದ್ದರಾಮಯ್ಯ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪಾರ್ವತಿ ಅವರೊಂದಿಗೆ ಕುಟುಂಬ ಸದಸ್ಯರು ಸಹ ಭಾಗವಹಿಸಿ, ಸಿಎಂ ಸಿದ್ದರಾಮಯ್ಯ ಅವರ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ. ನವರಾತ್ರಿ ಹಿನ್ನೆಲೆಯಲ್ಲಿ ಮೊದಲ ದಿನದಿಂದಲೂ ಪಾರ್ವತಿ ಅವರು ಚಾಮುಂಡಿಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆಂದು ತಿಳಿದು ಬಂದಿದೆ. ಈ
ನಡುವೆ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪೂಜೆಸಲ್ಲಿಸಿ ದೇವಸ್ಥಾನದಿಂದ ಹೊರ ಬರುವ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲವು ಮಾಧ್ಯಮ ಪ್ರತಿನಿಧಿಗಳು ವಿಡಿಯೋ ಚಿತ್ರೀಕರಣಕ್ಕೆ ಮುಂದಾದಾಗ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next