Advertisement

ಬಸ್‌ನಿಂದ ಎಳೆದೊಯ್ದು ಚಿನ್ನದ ವ್ಯಾಪಾರಿಯ ಅಪಹರಣ: ನಗ- ನಗದು ಲೂಟಿ 

12:07 PM Mar 19, 2017 | Harsha Rao |

ಉಡುಪಿ: ಚಿನ್ನದಂಗಡಿಗಳಿಗೆ ತೆರಳಿ ಚಿನ್ನಾಭರಣದ ವ್ಯವಹಾರವನ್ನು ನಡೆಸುತ್ತಿದ್ದ ಕೇರಳದ ವ್ಯಕ್ತಿಯಿಂದ ಸುಮಾರು 40 ಲ.ರೂ. ಮೌಲ್ಯದ 1.5 ಕೆ.ಜಿ. ಬಂಗಾರ ಹಾಗೂ 2.57 ಲ.ರೂ. ನಗದನ್ನು ಲೂಟಿ ಮಾಡಿರುವ ಘಟನೆ ಮಾ. 17ರ ರಾತ್ರಿ 7.30ರಿಂದ 9 ಗಂಟೆಯ ಮಧ್ಯೆ ನಡೆದಿದ್ದು, ಲೂಟಿಗೊಳಗಾದ ವ್ಯಕ್ತಿ ಕೇರಳದ ದಿಲೀಪ್‌ ಟಿ.ಡಿ. ನೀಡಿದ ದೂರಿನಂತೆ ಹಿರಿಯಡಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಾಪಾರಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ 6 ಮಂದಿಯ ತಂಡ ಮಣಿಪಾಲದಲ್ಲಿ ಪೊಲೀಸರೆಂದು ಹೇಳಿಕೊಂಡು ಬಸ್ಸಿನಿಂದ ಎಳೆದೊಯ್ದು ಕಾರಿನಲ್ಲಿ ಅಪಹರಿಸಿ ಚಿನ್ನ, ನಗದು ಲೂಟಿಗೈದು ಅವರನ್ನು ಪಡುಬಿದ್ರಿ ಠಾಣಾ ವ್ಯಾಪ್ತಿಯ ನಂದಿಕೂರಿನ ಕೈಗಾರಿಕಾ ಪ್ರದೇಶದ ಬಳಿ ಕಾರಿನಿಂದ ಇಳಿಸಿ ಹೋಗಿದ್ದಾರೆ. ವ್ಯಾಪಾರಿ ದಿಲೀಪ್‌ ಅವರು ಮಾ. 17ರಂದು ಮಂಗಳೂರಿನಿಂದ ತೆರಳಿ ಮೂಡಬಿದಿರೆ, ಕಾರ್ಕಳ, ಪೆರ್ಡೂರು, ಹಿರಿಯಡಕ ಭಾಗದ ಚಿನ್ನದಂಗಡಿಗಳಲ್ಲಿ ವ್ಯವಹಾರ ನಡೆಸಿದ್ದರು. 

ಜಾಕೆಟ್‌ನಲ್ಲಿಟ್ಟು ಬಂಗಾರ ಸಾಗಾಟ
ತ್ರಿಶೂರಿನ ತಾನಿಕಲ್‌ ನಿವಾಸಿ ದೀಲಿಪ್‌ ಟಿ.ಡಿ ಅವರು ಬಂಗಾರದ ಒಡವೆಗಳನ್ನು ತ್ರಿಶೂರ್‌ನಿಂದ ತಂದು ಜುವೆಲರ್ಸ್‌ಗಳಿಗೆ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ಅದರಂತೆ ಮಾ. 16ರಂದು 2 ಕೆ.ಜಿ.ಯಷ್ಟು ಚಿನ್ನದ ಒಡವೆಗಳನ್ನು ತನ್ನ ಅಂಗಿಯ ಒಳಗಡೆ ಇದ್ದ ಜಾಕೆಟ್‌ನೊಳಗೆ ತುಂಬಿಸಿ ಬಸ್‌ನಲ್ಲಿ ಹೊರಟು ಮರುದಿನ, ಮಾ. 17ರಂದು ಮಂಗಳೂರಿಗೆ ಬಂದಿದ್ದರು. ಮಂಗಳೂರಿನ ಕೆಲವು ಜುವೆಲರ್ಸ್‌ ಶಾಪ್‌ಗ್ಳಿಗೆ 450 ಗ್ರಾಂ ಬಂಗಾರದ ಒಡವೆಗಳನ್ನು ಮಾರಾಟ ಮಾಡಿ ಬಳಿಕ ಮೂಡಬಿದಿರೆಯಲ್ಲಿ 67 ಗ್ರಾಂನಷ್ಟು ಒಡವೆ ಮಾರಾಟ ಮಾಡಿದ್ದು, ಅನಂತರ ಪೆರ್ಡೂರಿಗೆ ಬಂದು ಅಲ್ಲಿನ ಗಾಯತ್ರಿ ಜುವೆಲರ್ಸ್‌ಗೆ ಹೋಗಿ ವ್ಯವಹರಿಸಿ ಬಳಿಕ ಹಿರಿಯಡದ ನಮೃತಾ ಜುವೆಲರ್ಸ್‌ ಶಾಪ್‌ಗೆ 35 ಗ್ರಾಂ ಬಂಗಾರದ ಒಡವೆಗಳನ್ನು ಮಾರಾಟ ಮಾಡಿ ಅಲ್ಲಿಂದ ಬರಬೇಕಾಗಿದ್ದ ಹಿಂದಿನ ಹಣ ಮತ್ತು ಮಾರಾಟ ಮಾಡಿದ ಬಂಗಾರದ ಒಡವೆಗಳ ನಗದು 2,57,200 ರೂ.ಯನ್ನು ಪಡೆದುಕೊಂಡಿದ್ದರು. ಉಳಿದ ಸುಮಾರು 1.5 ಕೆ.ಜಿ.ಯಷ್ಟು ಬಂಗಾರದ ಒಡವೆ ಮತ್ತು ಎರಡೂವರೆ ಲಕ್ಷ ರೂ.ಗಳನ್ನು ಜಾಕೆಟ್‌ನೊಳಗೆ ತುಂಬಿಸಿಕೊಂಡು ಶುಕ್ರವಾರ ರಾತ್ರಿ 7.30ಕ್ಕೆ ಹಿರಿಯಡಕದಿಂದ ಉಡುಪಿ ಕಡೆಗೆ ಹೊರಟಿದ್ದರು. 

ಪೊಲೀಸರೆಂದು ಹೇಳಿ ಎಳೆದೊಯ್ದರು!
ಹಿರಿಯಡಕ ಪೇಟೆಯಲ್ಲಿ ಕಾರ್ಕಳ ಕಡೆಯಿಂದ ಬರುವ ಬಸ್ಸನ್ನು ಹತ್ತಿದ ವ್ಯಾಪಾರಿಯು ಖಾಸಗಿ ಬಸ್ಸಿನ ಮಧ್ಯಭಾಗದ ಸೀಟಿನಲ್ಲಿ ಕುಳಿತಿದ್ದರು. ಅದೇ ಬಸ್ಸಿನಲ್ಲಿ ಅಪರಿಚಿತ ಮೂವರು ವ್ಯಕ್ತಿಗಳು ಉಡುಪಿಗೆ ಟಿಕೆಟು ಮಾಡಿದ್ದರು. ಹಿರಿಯಡಕ-ಮಣಿಪಾಲ ಮಧ್ಯೆ ಈಶ್ವರನಗರದಲ್ಲಿ ದಿಲೀಪ್‌ ಅವರು ಕುಳಿತಿದ್ದ ಸೀಟಿನಲ್ಲಿಗೆ ವ್ಯಕ್ತಿಯೋರ್ವ ಬಂದು ನಾನು ಪೊಲೀಸ್‌, ನಿನ್ನಲ್ಲಿದ್ದ ಸೊತ್ತುಗಳನ್ನು ತೆಗೆ ಎಂದು ಜೋರು ಮಾಡಿದ್ದು, ಈ ವೇಳೆ ದಿಲೀಪ್‌ ಬೊಬ್ಬೆ ಹಾಕಿದ್ದರು. ಇದೇ ಸಂದರ್ಭದಲ್ಲಿ ಬಸ್ಸಿನಲ್ಲಿ ಕುಳಿತಿದ್ದ ಇತರ ಇಬ್ಬರು ವ್ಯಕ್ತಿಗಳು ಬಂದು ವ್ಯಕ್ತಿಯೊಂದಿಗೆ ಸೇರಿಕೊಂಡರು. ಅವರಲ್ಲೊಬ್ಟಾತ  ಕಾಲರ್‌ ಪಟ್ಟಿ ಹಿಡಿದೆಳೆದು ಬಲವಂತದಿಂದ ಬಸ್ಸಿನಿಂದ ಕೆಳಗಿಳಿಸಿ ಕಾರಿನ ಒಳಗೆ ದೂಡಿ ಅಪಹರಿಸಿದ್ದರು.

ಪಿಸ್ತೂಲ್‌ ತೋರಿಸಿ ಲೂಟಿ
ಮಣಿಪಾಲದಲ್ಲಿ ಕಾರಿನಲ್ಲಿ ಕುಳ್ಳಿರಿಸಿ ಕರೆದೊಯ್ದಾಗ ಒಟ್ಟು 6 ಜನ ಇದ್ದರು. ಅವರು ಪಿಸ್ತೂಲ್‌ನಂತೆ ತೋರುವ ಆಯುಧವನ್ನು ತೋರಿಸಿ ಬೆದರಿಸಿ ಜಾಕೆಟ್‌ನಲ್ಲಿ ಇಟ್ಟುಕೊಂಡಿದ್ದ ಸುಮಾರು 40 ಲ.ರೂ. ಮೌಲ್ಯದ 1.5 ಕೆ.ಜಿ. ತೂಕದ ಚಿನ್ನದ ಸರ, ನೆಕ್ಲೆಸ್‌, ಬಳೆ, ಲಾಕೆಟ್‌, ಕಿವಿಯೋಲೆ, ಉಂಗುರಗಳು ಹಾಗೂ ನಗದು 2,57,200 ರೂ. ದೋಚಿದ್ದಾರೆ ಎಂದು ದಿಲೀಪ್‌ ಪೊಲೀಸರಲ್ಲಿ ವಿವರಿಸಿದ್ದಾರೆ. ಅಷ್ಟೊಂದು ಚಿನ್ನವನ್ನು ವ್ಯಕ್ತಿಯೊಬ್ಬನೇ ಸಾಗಿಸಬಹುದೇ? ಎನ್ನುವ ಪ್ರಶ್ನೆ ಇಲ್ಲಿ ಉದ್ಭವವಾಗುತ್ತದೆ. ದಾಖಲೆ ಹಿಡಿದುಕೊಂಡು ಚಿನ್ನವನ್ನು ಸಾಗಿಸಬಹುದು. ದಾಖಲೆ ಇಲ್ಲದಿದ್ದರೆ ಮಾತ್ರ ಅಕ್ರಮ ಸಾಗಣೆಯಾಗುತ್ತದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.

Advertisement

ನಂದಿಕೂರಿನಲ್ಲಿ ಇಳಿಸಿ ಹೋದರು
ವ್ಯಾಪಾರಿಯನ್ನು ಕುಳ್ಳಿರಿಸಿಕೊಂಡು ಮಣಿಪಾಲದಿಂದ ಸರಿಸುಮಾರು 30 ಕಿ.ಮೀ. ದೂರದವರೆಗೆ ಕಾರಿನಲ್ಲಿ ಕರೆದೊಯ್ದ ಆರೋಪಿಗಳು ಹೆದರಿಸಿ ಎಲ್ಲವನ್ನೂ ದೋಚಿದ ಬಳಿಕ ಪಡುಬಿದ್ರಿ ಸಮೀಪದ ನಂದಿಕೂರಿನ ನಿರ್ಜನ ಪ್ರದೇಶದಲ್ಲಿ ಅವರನ್ನು ಕಾರಿನಿಂದ ಇಳಿಸಿ ಪರಾರಿಯಾಗಿದ್ದಾರೆ. ಅನಂತರ ದಿಲೀಪ್‌ ಅವರು ಮಂಗಳೂರಿಗೆ ತೆರಳಿ ಅಲ್ಲಿಂದ ಮರಳಿ ಬಂದು ತಡರಾತ್ರಿಯಲ್ಲಿ ಪಡುಬಿದ್ರಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು. ಘಟನೆ  ನಡೆದಿದ್ದು ಮಣಿಪಾಲ, ಹಿರಿಯಡಕ ಭಾಗದಲ್ಲಾದ ಕಾರಣ ಪಡುಬಿದ್ರಿ ಪೊಲೀಸರು ಅಲ್ಲಿಗೆ ಹೋಗಿ ದೂರು ಕೊಡಿ ಎಂದು ಹೇಳಿ ಕಳುಹಿಸಿಕೊಟ್ಟಿದ್ದರು. 

ಕಾರ್ಯಾಚರಣೆಯಲ್ಲಿ 4 ತನಿಖಾ ತಂಡ
ಡಿವೈಎಸ್‌ಪಿಯವರ ನೇತೃತ್ವದಲ್ಲಿ 4 ತನಿಖಾ ತಂಡಗಳು ತನಿಖೆಯಲ್ಲಿ ನಿರತರಾಗಿದ್ದಾರೆ ಎಂದು ಹೆಚ್ಚುವರಿ ಎಸ್‌ಪಿ ಎನ್‌. ವಿಷ್ಣುವರ್ಧನ ಅವರು ತಿಳಿಸಿದ್ದಾರೆ. ಪೊಲೀಸ್‌ ಅಧಿಕಾರಿಗಳು ಘಟನೆ ನಡೆದ ಸ್ಥಳದ ವ್ಯಾಪ್ತಿಯಲ್ಲಿ ಬರುವ ಕಟ್ಟಡ, ಅಂಗಡಿಗಳ ಸಿಸಿ ಟಿವಿ ಫ‌ೂಟೇಜ್‌ಗಳನ್ನು ಸಂಗ್ರಹಿಸಿ ತೀವ್ರ ತಪಾಸಣೆಯಲ್ಲಿ ತೊಡಗಿಕೊಂಡಿದ್ದಾರೆ.

ಗೊತ್ತಿದ್ದವರೇ ಮಾಹಿತಿ ನೀಡಿದರೇ?
ಹಿರಿಯಡಕದಲ್ಲಿ ವ್ಯಾಪಾರಿ ಬಸ್ಸು ಹತ್ತಿದಲ್ಲಿಂದ ಸುಮಾರು 10 ಕಿ.ಮೀ. ವರೆಗೆ ಲೂಟಿಕೋರರು ಹಿಂಬಾಲಿಸಿಕೊಂಡು ಬರಬೇಕಾದರೆ ಪಕ್ಕಾ ಮಾಹಿತಿ ಸಿಕ್ಕಿರಲೇಬೇಕು. ಪ್ರತಿ ವಾರ ಚಿನ್ನಾಭರಣ ವ್ಯಾಪಾರ ಮಾಡುತ್ತಿದ್ದ ಅವರು ಎಲ್ಲೆಲ್ಲಿಗೆ ಹೋಗುತ್ತಾರೆ ಎನ್ನುವ ಮಾಹಿತಿಯನ್ನು ಅವರ ವ್ಯವಹಾರಸ್ಥರಿಂದಲೇ ಪಡೆದುಕೊಂಡು ಕೃತ್ಯ ನಡೆಸಿದ್ದಿರಲೂಬಹುದು ಎನ್ನುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ನಂದಿಕೂರಿನಲ್ಲಿ ಅವರು ಬಿಟ್ಟು ಹೋಗಲು ಆರೋಪಿಗಳು ಮಣಿಪಾಲ-ಕಾರ್ಕಳವಾಗಿಯೋ, ಅಲೆವೂರು ಆಗಿಯೋ, ಆತ್ರಾಡಿ ಬೆಳ್ಮಣ್‌ ಆಗಿಯೋ ಅಥವಾ ಉಡುಪಿ-ಪಡುಬಿದ್ರಿಯಾಗಿ ಹೋಗಿ ವ್ಯಾಪಾರಿಯನ್ನು ಬಿಟ್ಟರೇ ಎನ್ನುವ ನಿಖರ ರೂಟ್‌ ಬಗೆಗಿನ ಮಾಹಿತಿಯನ್ನು ತನಿಖೆಯ ದೃಷ್ಟಿಯಿಂದ ಪೊಲೀಸರು ನೀಡಿಲ್ಲ. ಉಡುಪಿಯಾಗಿ ಬಂದರೆ ಹಲವು ಕಡೆಗಳಲ್ಲಿ ಪೊಲೀಸ್‌ ಇಲಾಖೆಯದ್ದೇ ಸಿಸಿ ಕೆಮರಾ ಇದೆ. ಮಣಿಪಾಲಕ್ಕೆ ಬಾರದೆ ಕಾರ್ಕಳ ರೂಟ್‌ ಆಗಿ ಹೋದರೂ ಖಾಸಗಿಯವರ ಸಿಸಿ ಕೆಮರಾದಲ್ಲಿ ಸೆರೆಯಾಗಲೇಬೇಕು. ಈ ನಿಟ್ಟಿನಲ್ಲಿ ಪೊಲೀಸರ ಕಾರ್ಯಾಚರಣೆ ಸಾಗಿದೆ. 

ಒಂದೇ ವಾರದಲ್ಲಿ  2 ಲೂಟಿ ಪ್ರಕರಣ
ನಾಲ್ಕೈದು ದಿನಗಳ ಹಿಂದೆಯಷ್ಟೇ ಮಣಿಪಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಮೋರ್‌ ಮಳಿಗೆಗೆ ನುಗ್ಗಿದ್ದ ಇಬ್ಬರು ವ್ಯಕ್ತಿಗಳು ಪಿಸ್ತೂಲು, ತಲವಾರು ತೋರಿಸಿ ಸರಿಸುಮಾರು 3 ಲ.ರೂ. ನಗದು ದರೋಡೆ ಮಾಡಿದ್ದರು. ಆ ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಒಂದೇ ವಾರದ ಮಧ್ಯೆ ಇನ್ನೊಂದು ಪ್ರಕರಣ ಮಣಿಪಾಲ ವ್ಯಾಪ್ತಿಯಲ್ಲಿ ನಡೆದಿದೆ. 3 ತಂಡ ತನಿಖೆಯಲ್ಲಿ ನಿರತವಾಗಿದ್ದರೂ ಆ ಪ್ರಕರಣದ ಆರೋಪಿಗಳ ಪತ್ತೆಯಾಗಿಲ್ಲ. ವ್ಯಕ್ತಿಯ ನಗದು ಸಹಿತ ಲಕ್ಷಾಂತರ ಮೌಲ್ಯದ ಚಿನ್ನ ಲೂಟಿಗೈದ ತಂಡದ ಪತ್ತೆಗೆ ಮತ್ತೆ 4 ಪೊಲೀಸ್‌ ತಂಡ ರಚನೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆ ಮಣಿಪಾಲದಲ್ಲಿ ದೂರು ದಾಖಲು ಹಿರಿಯಡಕದಲ್ಲೇಕೆ?
ಬಸ್ಸಿನಿಂದ ಎಳೆದೊಯ್ದು ಕಾರಿನಲ್ಲಿ ಹಾಕಿ ಕರೆದೊಯ್ದದ್ದು ಮಣಿಪಾಲದ ಈಶ್ವರನಗರದಲ್ಲಿ. ಬಿಟ್ಟದ್ದು ಪಡುಬಿದ್ರಿ ಪೊಲೀಸ್‌ ಠಾಣೆ ವ್ಯಾಪ್ತಿಯ ನಂದಿಕೂರು. ವ್ಯಾಪಾರಿ ಬಸ್‌ ಹತ್ತಿದ್ದು ಮಾತ್ರ ಹಿರಿಯಡಕ. ಹೀಗಿರುವಾಗ ಪ್ರಕರಣ ಯಾಕೆ ಹಿರಿಯಡಕ ಠಾಣೆಯಲ್ಲಿ ದಾಖಲಾಯಿತು? ಮಣಿಪಾಲದಲ್ಲಿ ಮೊನ್ನೆಯಷ್ಟೇ ದರೋಡೆ ನಡೆದು ಇನ್ನೊಂದು ಪ್ರಕರಣವಾದರೆ ಇಲಾಖೆಗೆ ಸಮಸ್ಯೆ ಯಾಗುವುದೇ? ಎನ್ನುವ ಪ್ರಶ್ನೆಯನ್ನು ಪೊಲೀಸರಲ್ಲಿ ಕೇಳಿದಾಗ, ದೂರುದಾರರು ರಾತ್ರಿ ಬಂದು ಹೇಳುವಾಗ ಗಡಿಬಿಡಿಯಲ್ಲಿ ಆತ್ರಾಡಿಯನ್ನು ತೋರಿಸಿದ್ದರು. ಅದರಂತೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದ ಗೊಂದಲದಿಂದಾಗಿ ಹೀಗಾಯಿತು. ನೈಜ ಸ್ಥಳವನ್ನಾಧರಿಸುವುದಾದರೆ ಮಣಿಪಾಲ ಠಾಣೆಯಲ್ಲಿಯೇ ಪ್ರಕರಣ ದಾಖಲಾಗಬೇಕು ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next