Advertisement

Kerala ನಿಫಾ ಸೋಂಕು: ರಾಜ್ಯದಲ್ಲೂ ನಿಗಾ ಅಗತ್ಯ

08:36 AM Jul 23, 2024 | Team Udayavani |

ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಮತ್ತೆ ನಿಫಾ ವೈರಸ್‌ನ ಕಾಟ ಆರಂಭವಾಗಿದೆ. ಶನಿವಾರವಷ್ಟೇ ಮಲ್ಲಪ್ಪುರಂನ ಬಾಲಕನೊಬ್ಬನಿಗೆ ನಿಫಾ ಸೋಂಕು ದೃಢಪಟ್ಟ ತತ್‌ಕ್ಷಣ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಗಲೇ ಆತನ ದೇಹಸ್ಥಿತಿ ಬಿಗಡಾಯಿಸಿದ್ದ ಪರಿಣಾಮ ರವಿವಾರ ಬೆಳಗ್ಗೆ ಬಾಲಕ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾನೆ. ಇದರೊಂದಿಗೆ ಕೇರಳದಲ್ಲಿ ಪ್ರಸಕ್ತ ಸಾಲಿನಲ್ಲಿ ನಿಫಾ ಸೋಂಕಿಗೆ ಮೊದಲು ಸಾವು ಸಂಭವಿಸಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಿಫಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು ಜನರನ್ನು ಆತಂಕಕ್ಕೀಡು ಮಾಡಿದೆ.

Advertisement

ಕೇರಳ ಆರೋಗ್ಯ ಇಲಾಖೆ ನಿಫಾ ವೈರಸ್‌ ತಗಲಿದ್ದ ಬಾಲಕನ ಸಂಪರ್ಕಕ್ಕೆ ಬಂದಿದ್ದವರ ಪತ್ತೆ ಕಾರ್ಯ ನಡೆಸುತ್ತಿದ್ದು ರಾಜ್ಯ ಆರೋಗ್ಯ ಇಲಾಖೆಯ ಈವರೆಗಿನ ಲೆಕ್ಕಾಚಾರದ ಪ್ರಕಾರ 350 ಮಂದಿ ಆತನ ಸಂಪರ್ಕಕ್ಕೆ ಬಂದಿದ್ದಾರೆ. ಈ ಪೈಕಿ 68 ಮಂದಿ ಆರೋಗ್ಯ ಸಿಬಂದಿ ಸಹಿತ 101 ಮಂದಿಯನ್ನು ಗಂಭೀರ ಎಂದು ಗುರುತಿಸಲಾಗಿದೆ. ಸದ್ಯ ರಾಜ್ಯದಲ್ಲಿ ಆರು ಮಂದಿಗೆ ನಿಫಾ ಸೋಂಕು ತಗಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ನಿಫಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸರಕಾರ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆರೋಗ್ಯ ಮಾರ್ಗಸೂಚಿಯನ್ನು ರವಾನಿಸಿದ್ದು, ಕಟ್ಟೆಚ್ಚರ ವಹಿಸುವಂತೆ ನಿರ್ದೇಶನ ನೀಡಿದೆ. ಯಾವುದೇ ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರುವಂತೆ ವೈದ್ಯಾಧಿಕಾರಿಗಳಿಗೆ ಆರೋಗ್ಯ ಸಚಿವರು ಸೂಚನೆ ನೀಡಿದ್ದಾರೆ. ಬಾವಲಿ ತಿಂದ ಹಣ್ಣನ್ನು ಸೇವಿಸಿದ ಪರಿಣಾಮ ಬಾಲಕನಿಗೆ ನಿಫಾ ವೈರಸ್‌ ಹರಡಿರುವುದು ಪ್ರಾಥಮಿಕ ಪರಿಶೀಲನೆ ವೇಳೆ ಕಂಡುಬಂದಿದೆ. ಇಷ್ಟು ಮಾತ್ರವಲ್ಲದೆ ಬಾವಲಿ ಮತ್ತು ಹಂದಿಗಳು ಹೆಚ್ಚಿರುವ ಪ್ರದೇಶದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸರಕಾರ ಇದೇ ವೇಳೆ ಸಾರ್ವಜನಿಕರಿಗೆ ಕಿವಿಮಾತು ಹೇಳಿದೆ.

ಕೇರಳದಲ್ಲಿ 2018ರಲ್ಲಿ ಮೊದಲ ಬಾರಿಗೆ ನಿಫಾ ಸೋಂಕು ಕಾಣಿಸಿಕೊಂಡಿತ್ತು. ಈ ವೇಳೆ ಈ ಸೋಂಕಿಗೆ 17 ಮಂದಿ ಸಾವನ್ನಪ್ಪಿದರೆ, 2023ರಲ್ಲಿ ಇಬ್ಬರು ನಿಫಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದರು. ನಿಫಾ ವೈರಾಣು, ಬಾವಲಿ, ಹಂದಿ, ನಾಯಿ ಮತ್ತು ಕುದುರೆಗಳ ಮೂಲಕ ಮಾನವನಿಗೆ ಹರಡುತ್ತದೆ. ಕೇರಳದಲ್ಲಿ ಕಳೆದ ಏಳು ವರ್ಷಗಳ ಅವಧಿಯಲ್ಲಿ ಐದನೇ ಬಾರಿ ಈ ಸೋಂಕು ಕಾಣಿಸಿಕೊಂಡಿದೆ. ಮೂರು ಬಾರಿ ಸಣ್ಣ ಪ್ರಮಾಣದಲ್ಲಿ ಈ ವೈರಾಣು ಕಾಡಿದ್ದರಿಂದಾಗಿ ಜನರು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಈ ಬಾರಿ ಸೋಂಕು ಪತ್ತೆಯಾದ ಮೊದಲ ಪ್ರಕರಣದಲ್ಲಿಯೇ ಬಾಧಿತ ಸಾವನ್ನಪ್ಪಿರುವುದು ಒಂದಿಷ್ಟು ಆತಂಕಕ್ಕೆ ಕಾರಣವಾಗಿದೆ. ಅಷ್ಟು ಮಾತ್ರವಲ್ಲದೆ ಸೋಂಕು ಪತ್ತೆಯಾಗುವ ವೇಳೆ ಸಾಕಷ್ಟು ಸಮಯವಾಗಿದ್ದರಿಂದಾಗಿ ಈ ಸೋಂಕು ಹೆಚ್ಚಿನ ಸಂಖ್ಯೆಯ ಜನರಿಗೆ ಹರಡಿರುವ ಸಾಧ್ಯತೆ ಇದೆ. ಹೀಗಾಗಿ ಕೇರಳ ಸರಕಾರ ಕೂಡ ಸೋಂಕು ಮತ್ತಷ್ಟು ವ್ಯಾಪಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ನೆರೆಯ ರಾಜ್ಯದಲ್ಲಿ ಕಾಣಿಸಿಕೊಂಡಿರುವ ವೈರಾಣು ಕರ್ನಾಟಕಕ್ಕೂ ಹರಡುವ ಸಾಧ್ಯತೆಗಳಿರುವುದರಿಂದ ಸರಕಾರ ಹೆಚ್ಚಿನ ಮುಂಜಾಗರೂಕತೆ ವಹಿಸಬೇಕಿದೆ. ನಿಫಾ ವೈರಸ್‌ನ ಹರಡುವಿಕೆಗೆ ಕಾರಣವಾಗುವ ಬಾವಲಿಗಳು ಮತ್ತು ಹಂದಿಗಳು ಅಧಿಕವಾಗಿರುವ ಸ್ಥಳಗಳಲ್ಲಿ ಮತ್ತು ಹಣ್ಣುಗಳ ಸೇವನೆ ಸಂದರ್ಭದಲ್ಲಿಯೂ ಜನರು ಮುನ್ನೆಚ್ಚರಿಕೆ ವಹಿಸಬೇಕು. ಇದೇ ವೇಳೆ ರಾಜ್ಯ ಸರಕಾರ ಗಡಿ ಜಿಲ್ಲೆಗಳಲ್ಲಿ ತೀವ್ರ ನಿಗಾ ಇಡುವ ಜತೆಯಲ್ಲಿ, ಜನರ ಆರೋಗ್ಯ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ತುರ್ತು ಸ್ಥಿತಿ ಎದುರಿಸಲು ಅಗತ್ಯವಾದ ವೈದ್ಯಕೀಯ ಸಿದ್ಧತೆಗಳನ್ನು ಆರೋಗ್ಯ ಇಲಾಖೆ ಮಾಡಿಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next