ಉಳ್ಳಾಲ: ತಲಪಾಡಿ ದಾಟಿ ಬರುವವರಿಗಾಗಿ ಕೇರಳದ ಗಡಿ ಭಾಗವಾದ ತೂಮಿನಾಡಿನಲ್ಲಿ ಸ್ಥಾಪಿಸಿದ ಕ್ವಾರಂಟೈನ್ ಪರೀಶೀಲನ ಕೇಂದ್ರ ಹಾಗೂ ಪೋಲಿಸ್ ಬ್ಯಾರಿಕೇಡ್ ಗಳನ್ನು ತೆರವುಗೊಳಿಸುವ ಮೂಲಕ ಬಿಜೆಪಿಯು ಅಂತಾರಾಜ್ಯ ಪ್ರಯಾಣ ಸೌಕರ್ಯ ಕಲ್ಪಿಸಲು ಮಂಗಳವಾರ ಪ್ರತಿಭಟನೆ ನಡೆಸಿತು.
ಅಂತರಾಜ್ಯ ಪ್ರಯಾಣಕ್ಕೆ ಯಾವುದೇ ಅನುಮತಿ ಅಗತ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ನಿರ್ದೇಶನವಿದ್ದರೂ ಕೇರಳ ಸರಕಾರ ಅದರ ವಿರುದ್ಧವಾಗಿ ಕರ್ನಾಟಕಕ್ಕೆ ಹೋಗಲು ಪಾಸ್ ಮೂಲಕ ನಿಯಂತ್ರಣ ಮಾಡುವ ಕ್ರಮದ ವಿರುದ್ಧ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ “ಪಾಸ್ ಉಲ್ಲಂಘನಾ ಆಂದೋಲನ”ವು ಇಂದು ಬೆಳಗ್ಗೆ ತಲಪಾಡಿ ಗಡಿಯಲ್ಲಿ ಜರಗಿತು.
ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ಉದ್ಘಾಟಿಸಿ ಮಾತನಾಡುತ್ತಾ ಅನಗತ್ಯ ಪಾಸು ಮತ್ತು ನಿಯಂತ್ರಣ ಹೇರುವುದರಿಂದ ನೂರಾರು ಮಂದಿ ತಮ್ಮ ಉದ್ಯೋಗ ಮತ್ತು ವ್ಯಾಪಾರ ನಡೆಸಲಾಗದೆ ಕಷ್ಟಪಡುತ್ತಿದ್ದಾರೆ. ಆದರೂ ಕರ್ನಾಟಕಕ್ಕೆ ಮುಕ್ತ ಪ್ರವೇಶ ನಿಷೇಧಿಸಿರುವ ಕೇರಳ ರಾಜ್ಯ ಸರಕಾರದ ಜನ ವಿರೋಧಿ ನೀತಿಯಾಗಿದೆ ಎಂದರು.
ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಮಣಿಕಂಠ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದರ ಅಂಗವಾಗಿ ತಲಪಾಡಿ ಕೆಳಗಿನ ಪೆಟ್ರೋಲ್ ಬಂಕ್ ಬಳಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕೆಳಗಿನ ಟೋಲ್ ಬೂತ್ ಸುತ್ತುವರಿದು ಅಂತರಾಜ್ಯ ಗಡಿ ಸಂಪರ್ಕದ ಕೇರಳ ಪೋಲಿಸ್ ಕೇಂದ್ರದ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಬಿಜೆಪಿ ನೇತಾರರಾದ ಸುರೇಶ್ ಕುಮಾರ್ ಪೂಕಟ್ಟೆ,ಸುಧಾಮ ಗೋಸಾಡ,ನ್ಯಾಯವಾದಿ ನವೀನ್ ರಾಜ್ ಕೆ.ಜೆ.,ಪದ್ಮನಾಭ ಕಡಪ್ಪರ,ಯಾದವ ಬಡಾಜೆ,ಆದರ್ಶ ಬಿ.ಎಂ,ರಾಜೇಶ್ ತೂಮಿನಾಡು,ಲೋಕೇಶ್ ಮಾಡ, ಯು.ಜಿ.ರೈ,ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಮೊದಲಾದವರು ಪ್ರತಿಭಟನೆಗೆ ನೇತೃತ್ವ ವಹಿಸಿದ್ದರು.