Advertisement

Kerala: ವಿದೇಶಾಂಗ ಕಾರ್ಯದರ್ಶಿ ನೇಮಕ: ಒಕ್ಕೂಟ ವ್ಯವಸ್ಥೆಗೆ ಧಕ್ಕೆ

01:10 AM Jul 22, 2024 | Team Udayavani |

ಕೇರಳ ರಾಜ್ಯ ಸರಕಾರ ಐಎಎಸ್‌ ಅಧಿಕಾರಿಯೋರ್ವರನ್ನು ರಾಜ್ಯ ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದು ದೇಶದೆಲ್ಲೆಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರಕಾರ, ವಿದೇಶಗಳಲ್ಲಿರುವ ತನ್ನ ನಾಗರಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸಮರ್ಥಿಸಿಕೊಂಡಿರುವರಾದರೂ ವಿಪಕ್ಷ ಪಾಳಯ ಸರಕಾರದ ಈ ನಡೆಯನ್ನು ಬಲವಾಗಿ ವಿರೋಧಿಸಿದೆ.

Advertisement

ವಿದೇಶಾಂಗ ವ್ಯವಹಾರ ಕೇಂದ್ರ ಸರಕಾರದ ವ್ಯಾಪ್ತಿಗೆ ಸೇರಿದ್ದು, ಯಾವುದೇ ದೇಶಗಳಲ್ಲಿನ ರಾಜತಾಂತ್ರಿಕ ಕಚೇರಿಯೊಂದಿಗೆ ಸಂಪರ್ಕ, ಸಂವಹನದ ಕಾರ್ಯ ಗಳನ್ನು ಕೇಂದ್ರ ಸರಕಾರದ ವಿದೇಶಾಂಗ ಇಲಾಖೆಯ ಮೂಲಕವೇ ನಡೆಸಬೇಕಿದೆ. ಇಂತಹ ವಿಷಯಗಳಲ್ಲಿ ರಾಜ್ಯ ಸರಕಾರ ನೇರವಾಗಿ ಕಾರ್ಯಾ­ಚರಿಸಲು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಅವಕಾಶವಿಲ್ಲ. ಹೀಗಿದ್ದರೂ ಕೇರಳ ಸರಕಾರ ಪ್ರತ್ಯೇಕವಾಗಿ ರಾಜ್ಯ ವಿದೇಶಾಂಗ ಕಾರ್ಯದರ್ಶಿ ಎಂಬ ಹುದ್ದೆಯನ್ನು ಸೃಷ್ಟಿಸಿ, ಐಎಎಸ್‌ ಅಧಿಕಾರಿಯನ್ನು ನೇಮಕ ಮಾಡಿರುವುದು ದೇಶದ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಯ ನೀತಿ ನಿಯಮಾವಳಿಗೆ ತದ್ವಿರುದ್ಧವಾದ ಕ್ರಮ.

ಕೇರಳದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಪಿಣರಾಯಿ ವಿಜಯನ್‌ ಅವರು ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ರಾಜಕೀಯ ಮತ್ತು ಸೈದ್ಧಾಂತಿಕ ಹೋರಾಟವನ್ನು ನಡೆಸುತ್ತಲೇ ಬಂದಿದ್ದಾರೆ. ಅನುದಾನ ಬಿಡುಗಡೆಯಲ್ಲಿ ತಾರತಮ್ಯ, ರಾಜ್ಯ ಸರಕಾರದ ಅಧಿಕಾರಗಳ ಮೊಟಕು, ಆಡಳಿತ, ಆರ್ಥಿಕ ಮತ್ತು ವಾಣಿಜ್ಯ ನೀತಿ ನಿರೂಪಣೆಗಳಲ್ಲಿ ವಿನಾಕಾರಣ ಹಸ್ತಕ್ಷೇಪ ಮತ್ತಿತರ ಆರೋಪಗಳನ್ನು ಕೇಂದ್ರದ ವಿರುದ್ಧ ಮಾಡುತ್ತಲೇ ಬಂದಿರುವ ಕೇರಳ ಸರಕಾರ, ರಾಜ್ಯಪಾಲದೊಂದಿಗೂ ಸೌಹಾರ್ದ ಸಂಬಂಧವನ್ನು ಹೊಂದಿಲ್ಲ.

ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾದ ಹಲವು ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕದಿರುವ ಸಂಬಂಧ ಕೇರಳ ಸರಕಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ. ಏತನ್ಮಧ್ಯೆ ಪಿಣರಾಯಿ ವಿಜಯನ್‌ ಅವರು ರಾಜ್ಯ ಸರಕಾರದ ವ್ಯಾಪ್ತಿಗೆ ಹೊರತಾದ ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದಂತೆ ಧೋರಣಾತ್ಮಕ ನಿರ್ಧಾರ ಕೈಗೊಳ್ಳುವ ಮೂಲಕ ಈ ಸಂಘರ್ಷವನ್ನು ಮತ್ತೂಂದು ಮಜಲಿಗೆ ಕೊಂಡೊಯ್ಯುವ ಪ್ರಯತ್ನಕ್ಕೆ ಕೈಹಾಕಿದಂತೆ ಭಾಸವಾಗುತ್ತಿದೆ.

ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯ ಸರಕಾರಗಳು ಸ್ವತಂತ್ರವಾಗಿದ್ದರೂ ರಕ್ಷಣೆ, ವಿದೇಶಾಂಗ ನೀತಿಯಂತಹ ಪ್ರಮುಖ ವಿಷಯಗಳಲ್ಲಿ ಯಾವುದೇ ಸ್ವತಂತ್ರ ನಿರ್ಧಾರ ಕೈಗೊಳ್ಳುವಂತಿಲ್ಲ. ಈ ವಿಷಯಗಳಲ್ಲಿ ಕೇಂದ್ರ ಸರಕಾರ ಪರಮಾಧಿಕಾರ ಹೊಂದಿದ್ದು, ಕೇಂದ್ರದ ನಿರ್ಧಾರಕ್ಕೆ ಪ್ರತೀ ರಾಜ್ಯಗಳೂ ತಲೆಬಾಗಲೇ ಬೇಕು. ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಮತಗಳೇನೇ ಇದ್ದರೂ ಅದನ್ನು ತಮ್ಮ ಅಧಿಕಾರ ಮತ್ತು ಈ ನೆಲದ ಕಾನೂನು ನಿಯಮಾವಳಿಗಳ ವ್ಯಾಪ್ತಿಯಲ್ಲಿಯೇ ಬಗೆಹರಿಸಿ ಕೊಳ್ಳಬೇಕೇ ವಿನಾ ಇಡೀ ವ್ಯವಸ್ಥೆಯ ಬುನಾದಿಯನ್ನೇ ಅಲುಗಾಡಿಸುವ ಉದ್ಧಟತನ ಮೆರೆಯುವುದು ಖಂಡನೀಯ.

Advertisement

ವಿದೇಶಗಳಲ್ಲಿ ಅದರಲ್ಲೂ ಕೊಲ್ಲಿ ರಾಷ್ಟ್ರಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕೇರಳಿಗರು ಇರುವುದು ಸಹಜವಾದರೂ ಅವರ ಹಿತರಕ್ಷಣೆ ಕೇವಲ ರಾಜ್ಯ ಸರಕಾರಕ್ಕೆ ಸೀಮಿತ ವಾಗದೆ, ಕೇಂದ್ರದ ಹೊಣೆಗಾರಿಕೆ ಹೀಗಾಗಿ ರಾಜ್ಯ ಸರಕಾರವೊಂದು ತನ್ನದೇ ಆದ ಪ್ರತ್ಯೇಕ ವಿದೇಶಾಂಗ ಕಾರ್ಯದರ್ಶಿಯನ್ನು ನೇಮಿಸಿಕೊಳ್ಳುವುದು ದೇಶದ ಸಾರ್ವಭೌಮತೆ, ಏಕತೆ ಮತ್ತು ಒಕ್ಕೂಟ ವ್ಯವಸ್ಥೆ ಮೇಲೆ ಸವಾರಿ ನಡೆಸಿದಂತೆಯೇ ಸರಿ. ಇನ್ನಾದರೂ ಕೇರಳ ಸರಕಾರ ಎಚ್ಚೆತ್ತುಕೊಂಡು ತತ್‌ಕ್ಷಣ ಈ ನೇಮಕವನ್ನು ರದ್ದುಗೊಳಿಸಿ, ತನ್ನಿಂದಾಗಿರುವ ಪ್ರಮಾದವನ್ನು ಸರಿಪಡಿಸಿಕೊಳ್ಳಬೇಕು. ಇಂತಹ ದುರಹಂಕಾ­­­ರವನ್ನು ಯಾವುದೇ ರಾಜ್ಯ ಸರಕಾರ ತೋರಿದರೆ ಕೇಂದ್ರ ಸರಕಾರದ ಶಿಫಾರಸಿನ ಮೇರೆಗೆ ರಾಜ್ಯ ಸರಕಾರವನ್ನು ವಜಾಗೊಳಿಸುವ ಪರಮಾಧಿಕಾರ ರಾಷ್ಟ್ರಪತಿಯವರಿಗೆ ಇದೆ ಎಂಬುದನ್ನು ಎಂದಿಗೂ ಮರೆಯಬಾರದು.

Advertisement

Udayavani is now on Telegram. Click here to join our channel and stay updated with the latest news.

Next