Advertisement

ಪಿಲಿಕ್ಕೋಡು: ದೇಶದ ಮೊದಲ ಫಿಲಮೆಂಟ್‌ ಬಲ್ಬ್ ರಹಿತ ಪಂಚಾಯತ್‌

06:20 AM Apr 17, 2018 | Team Udayavani |

ಕಾಸರಗೋಡು: ಕಾಸರಗೋಡು ಜಿಲ್ಲೆಯ ಪಿಲಿಕ್ಕೋಡು ಗ್ರಾಮ ಪಂಚಾಯತ್‌ ಅನ್ನು ದೇಶದ ಮೊತ್ತ ಮೊದಲ ಫಿಲಮೆಂಟ್‌ ಬಲ್ಬ್ ರಹಿತ ಪಂಚಾಯತನ್ನಾಗಿ ಘೋಷಿಸಲಾಗಿದೆ.

Advertisement

ಪಿಲಿಕ್ಕೋಡು ಕಾಲಿಕ್ಕಡವ್‌ನಲ್ಲಿ  ಹಮ್ಮಿಕೊಳ್ಳಲಾಗಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಫಿಲಮೆಂಟ್‌ ಬಲ್ಬ್ ರಹಿತ ಪಂಚಾಯತ್‌ ಘೋಷಣೆ ಮಾಡಿದರು. 

ಈ ಮಹಾಸಾಧನೆಯ ಮೂಲಕ ಪಿಲಿಕ್ಕೋಡು ಪಂಚಾಯತ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಗಮನ ಸೆಳೆಯುವಲ್ಲಿ  ಯಶಸ್ವಿಯಾಗಿದೆ. ಇತರ ಪಂಚಾಯತ್‌ಗಳಿಗೆ ಈ ಯೋಜನೆ ಯನ್ನು  ಗಮನಿಸಿ ಕಾರ್ಯಗತಗೊಳಿಸಲು ಸಾಧ್ಯವಿದೆ ಎಂದು ಸಿಎಂ ಹೇಳಿದರು.

ವಿದ್ಯುತ್‌ ಸಂರಕ್ಷಣೆಗಾಗಿ ಫಿಲಮೆಂಟ್‌ ಬಲ್ಬ್ಗಳನ್ನು ಸಂಪೂರ್ಣವಾಗಿ ಹೊರತುಪಡಿಸಿದ ದೇಶದ ಮೊದಲ ಪಂಚಾಯತ್‌ ಎಂಬ ಹೆಮ್ಮೆ  ಪಿಲಿಕ್ಕೋಡಿನದ್ದಾಗಿದೆ. ಕೇರಳ ಎನರ್ಜಿ ಮೆನೇಜ್‌ಮೆಂಟ್‌ ಕೇಂದ್ರದ ಸಹಕಾರದೊಂದಿಗೆ ಜನಪರ ಒಕ್ಕೂಟದಲ್ಲಿ  ಕಾರ್ಯಗತಗೊಳಿಸಿದ “ಊರ್ಜಯಾನ’ ಎಂಬ ಯೋಜನೆಯ ಮೂಲಕ ಈ ಸಾಧನೆ ಮಾಡಲಾಗಿದೆ.

40,000 ಫಿಲಮೆಂಟ್‌ ಬಲ್ಬ್ಗಳನ್ನು  ಪಂಚಾಯತ್‌ ವ್ಯಾಪ್ತಿಯ ಮನೆಗಳು, ಅಂಗಡಿಗಳು, ಸಾರ್ವಜನಿಕ ಸಂಸ್ಥೆಗಳಿಂದ ತೆರವುಗೊಳಿಸಿ ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ. ಅನಗತ್ಯವಾಗಿ ವಿದ್ಯುತ್‌ ಪೋಲಾಗುವುದನ್ನು  ತಡೆಗಟ್ಟಲು ಪ್ರಾದೇಶಿಕವಾಗಿ ಏನು ಮಾಡಬಹುದು ಎಂಬ ಯೋಚನೆ ಈ ಯೋಜನೆಯತ್ತ ಪಂಚಾಯತ್‌ ಕಡೆ ಮುಖ ಮಾಡುವಂತೆ ಮಾಡಿದೆ.

Advertisement

ಸೋಲಾರ್‌ ಪ್ಯಾನಲ್‌ಗ‌ಳನ್ನು ಸ್ಥಾಪಿಸಲು ಸಾಧ್ಯವಾಗುವ ರೀತಿಯಲ್ಲಿರುವ ಮನೆಗಳು, ಕಟ್ಟಡಗಳು  ಕೇರಳದಲ್ಲಿ  ಧಾರಾಳ ಇವೆ. ರಾಜ್ಯಕ್ಕೆ ಅಗತ್ಯವಿರುವ ವಿದ್ಯುತ್‌ನ ಶೇಕಡಾ 70ರಷ್ಟನ್ನು  ಹೊರಗಿನಿಂದ ಖರೀದಿಸಲಾಗುತ್ತಿದೆ. ಶೇಕಡಾ 30ರಷ್ಟು  ಮಾತ್ರ ರಾಜ್ಯದಲ್ಲಿ  ಉತ್ಪಾದನೆಯಾಗುತ್ತಿದೆ. ಅದರಲ್ಲಿ ಹೆಚ್ಚಿನ ಪಾತ್ರ ಜಲವಿದ್ಯುತ್‌ ಯೋಜನೆಗಳದ್ದಾಗಿವೆ.ವಿದ್ಯುತ್‌ ವಲಯದಲ್ಲಿ ಅಭಿವೃದ್ಧಿಗೆ ಸರಕಾರವು ಹೆಚ್ಚಿನಪ್ರಾಧಾನ್ಯ ನೀಡುತ್ತಿದೆ. ಕೇರಳದ ಸಾರ್ವಜನಿಕ ಅಭಿವೃದ್ಧಿಯಲ್ಲಿ ಆಸಕ್ತಿ ಹಾಗೂ ಶ್ರದ್ಧೆ  ವಹಿಸಿ ರಾಷ್ಟ್ರಕ್ಕೇ ಮಾದರಿಯಾಗುವ ರೀತಿಯಲ್ಲಿ ಎಲ್ಲರ ಸಹಕಾರದೊಂದಿಗೆ ವಿದ್ಯುತ್‌ ಮಂಡಳಿಯನ್ನು ಅಭಿವೃದ್ಧಿಗೊಳಿಸಲು ಸರಕಾರವು ಅಗತ್ಯದ ಕ್ರಮ ಕೈಗೊಳ್ಳುತ್ತಿದೆ.

ತೃಕ್ಕರಿಪುರ ಶಾಸಕ ಎಂ. ರಾಜ ಗೋಪಾಲನ್‌ ಸಮಾರಂಭದ ಅಧ್ಯಕ್ಷತೆ ವ‌ಹಿಸಿದ್ದರು.ಕಾರ್ಯಕ್ರಮದ ಅಂಗವಾಗಿ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಕಿರೀಟ ಪಡೆದ ಕೇರಳ ತಂಡದ ತಾರೆ ಪಿಲಿಕ್ಕೋಡು ನಿವಾಸಿ ಕೆ.ವಿ. ರಾಹುಲ್‌ ಅವರನ್ನು ಮುಖ್ಯಮಂತ್ರಿ ಸ್ಮರಣಿಕೆ ನೀಡಿ ಅಭಿನಂದಿಸಿದರು. ಕಾಸರಗೋಡು ಸಂಸದ ಪಿ. ಕರುಣಾಕರನ್‌ ಮುಖ್ಯ ಅತಿಥಿಯಾಗಿದ್ದರು.
 
ಖಾದಿ ಮಂಡಳಿಯ ಉಪಾಧ್ಯಕ್ಷ  ಎಂ.ವಿ. ಬಾಲಕೃಷ್ಣನ್‌,  ನೀಲೇಶ್ವರ ಬ್ಲಾಕ್‌ ಪಂ. ಅಧ್ಯಕ್ಷೆ ವಿ.ಪಿ. ಜಾನಕಿ, ಮಾಜಿ ಶಾಸಕ ಕೆ. ಕುಂಞಿರಾಮನ್‌, ಜಿಲ್ಲಾ  ಪಂಚಾಯತ್‌ ಸದಸ್ಯೆ ಪಿ.ವಿ. ಪದ್ಮಜಾ, ಬ್ಲಾಕ್‌ ಪಂ. ಸದಸ್ಯ ಎ. ಕೃಷ್ಣನ್‌, ಟಿ.ವಿ. ಗೋವಿಂದನ್‌, ಇ. ಕುಂಞಿರಾಮನ್‌, ಕೆ.ವಿ. ಗಂಗಾಧರನ್‌, ಬಂಗಳ ಕುಂಞಿಕೃಷ್ಣನ್‌, ಟಿ.ಕೆ. ಪೂಕ್ಕೋಯ ತಂಙಳ್‌, ಎನ್‌. ಭಾಸ್ಕರನ್‌, ಟಿ.ವಿ. ಅಡಿಯೋಡಿ, ಪಿ.ವಿ. ಗೋವಿಂದನ್‌, ಅನರ್ಟ್‌ ನಿರ್ದೇಶಕ ಆರ್‌. ಹರಿಕುಮಾರ್‌ ಉಪಸ್ಥಿತರಿದ್ದರು.

ಪಿಲಿಕ್ಕೋಡು ಗ್ರಾಮ ಪಂಚಾಯತ್‌ ಅಧ್ಯಕ್ಷ  ಟಿ.ವಿ. ಶ್ರೀಧರನ್‌ ಸ್ವಾಗತಿಸಿ, ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕ ಎಂ.ಕೆ.ಹರಿದಾಸ್‌ ವಂದಿಸಿದರು. ಘೋಷಣೆ ಪೂರ್ವಭಾವಿಯಾಗಿ ಕಾಲಿಕ್ಕಡವ್‌ ಸಿಂಡಿಕೇಟ್‌ ಬ್ಯಾಂಕ್‌ನ ಸಮೀಪ ಅನರ್ಟ್‌ ಹಾಗೂ ಇಎಂಸಿ ಕೇರಳ ಇವುಗಳ ಸಹಕಾರದೊಂದಿಗೆ ಹಲವು ವಿಷಯಗಳಲ್ಲಿ  ವಿಚಾರ ಸಂಕಿರಣಗಳು ನಡೆದವು.

ಸೋಲಾರ್‌ ವಿದ್ಯುತ್‌ಗೆ ಆದ್ಯತೆ  
ಪಿಲಿಕ್ಕೋಡು ಗ್ರಾಮ ಪಂಚಾಯತ್‌ ಅನುಷ್ಠಾನಕ್ಕೆ ತಂದ ಫಿಲಮೆಂಟ್‌ ಬಲ್ಬ್  ರಹಿತ ಯೋಜನೆಯನ್ನು  ರಾಜ್ಯದಾದ್ಯಂತ ಜಾರಿಗೊಳಿಸಲು ಸಾಧ್ಯವೇ ಎಂದು ಸರಕಾರವು ಆಲೋಚಿಸುತ್ತಿದೆ. ಅಲ್ಲದೆ ಸೋಲಾರ್‌ನಿಂದ ವ್ಯಾಪಕವಾಗಿ ವಿದ್ಯುತ್‌ ಉತ್ಪಾದಿಸಲು ಸಾಧ್ಯವಾಗಲಿದೆಯೇ ಎಂಬುದರ ಕುರಿತು ಕೂಡ ಯೋಜನೆ ರೂಪಿಸಲಾಗುತ್ತಿದೆ. ಮಳೆಯ ಲಭ್ಯತೆಗೆ ಅನುಸಾರವಾಗಿ ಜಲ ವಿದ್ಯುತ್‌ನ ಉತ್ಪಾದನಾ ಪ್ರಮಾಣದಲ್ಲಿ  ಏರಿಳಿತಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ  ಇಂತಹ ವಿದ್ಯುತ್‌ ಉಪಯೋಗ ಕಡಿಮೆ ಮಾಡಿ ಸೋಲಾರ್‌ನಂತಹ ವಿದ್ಯುತ್‌ ಉತ್ಪಾದನೆಯಲ್ಲಿ ಹೆಚ್ಚಿನ ಆಸಕ್ತಿ  ವಹಿಸಬೇಕಾಗಿದೆ ಎಂದು ಪಿಣರಾಯಿ ವಿಜಯನ್‌ ಹೇಳಿದರು.

ಪಿಲಿಕ್ಕೋಡ್‌ಗೆ ವಿದ್ಯುತ್‌ ಸಂರಕ್ಷಣಾ ಪ್ರಶಸ್ತಿ
ಕೌಟುಂಬಿಕ ಬಳಕೆ ಸಹಿತ 10,000 ವಿದ್ಯುತ್‌ ಗ್ರಾಹಕರು ಪಿಲಿಕ್ಕೋಡು ಪಂಚಾಯತ್‌ನಲ್ಲಿದ್ದಾರೆ. ಯೋಜನೆಯನ್ನು ಜಾರಿಗೊಳಿಸಿರುವುದರಿಂದ ಕಳೆದ ವರ್ಷ 1,20,328 ಘಟಕ ವಿದ್ಯುತ್‌ ಲಾಭ  ಮಾಡಲು ಸಾಧ್ಯವಾಗಿರುವುದಾಗಿ ಎನರ್ಜಿ ಮೆನೇಜ್‌ಮೆಂಟ್‌ ಕೇಂದ್ರದ ಅಂಕಿ ಅಂಶಗಳು ಹೇಳುತ್ತಿವೆ. ಇದನ್ನು  ಪರಿಗಣಿಸಿ ಕಳೆದ ವರ್ಷ ರಾಜ್ಯ ವಿದ್ಯುತ್‌ ಸಂರಕ್ಷಣಾ ಪ್ರಶಸ್ತಿಯನ್ನು ಪಿಲಿಕ್ಕೋಡಿಗೆ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next