Advertisement

ಕೆಂಪೇಗೌಡ ಜಯಂತಿ ದಿನ ಸರ್ಕಾರಿ ರಜೆಗೆ ಆಗ್ರಹ

11:12 AM Jun 28, 2018 | |

ಹೊಳೆನರಸೀಪುರ: ನಾಡಿನ ಹಲವು ಮಹಾನ್‌  ನಾಯಕರ ಮತ್ತು ದಾರ್ಶನಿಕರ ಜಯಂತಿಗಳಿಗೆ ರಾಜ್ಯ ಸರ್ಕಾರ ಸರ್ಕಾರಿ ರಜೆ ನೀಡುತ್ತಿದ್ದು ಅದರಂತೆ ನಾಡ ಪ್ರಭು ಕೆಂಪೇಗೌಡ ಅವರ ಜಯಂತಿ ದಿನದಂದು ಸಹ ಸರ್ಕಾರಿ ರಜೆ ಘೋಷಿಸುವಂತಾಗಬೇಕು ಎಂದು ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ ಒತ್ತಾಯಿಸಿದರು.

Advertisement

ತಾಲೂಕು ಆಡಳಿತ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಬಗ್ಗೆ ತಾವು ಸಚಿವ ರೇವಣ್ಣ ಅವರಲ್ಲಿ ಮಾತನಾಡಿದ್ದು ಈ ರಜೆ ತರುವ ಸಲುವಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಾಸ್ತಾಪಿಸಿ ಮುಂದಿನ ವರ್ಷದಿಂದ ಸರ್ಕಾರಿ ರಜೆ ಅನುಷ್ಠಾನಕ್ಕೆ ಬರುವಂತೆ ಮಾಡಲು ಮನವಿ ಮಾಡಿರುವುದಾಗಿ ತಿಳಿಸಿದ್ದು ನಮ್ಮ ಪ್ರಸ್ತಾವನೆಗೆ ರೇವಣ್ಣ ಸ್ಪಂದಿಸಿದ್ದಾರೆ ಎಂದರು.

ಬೆಂಗಳೂರನ್ನು ಕಟ್ಟಿದ ಕೆಂಪೇಗೌಡ ಅವರಿಗೆ ಸ್ವಾರ್ಥ ಎಂಬುದು ಇರಲಿಲ್ಲ ಎಂಬುದಕ್ಕೆ ಬೆಂಗಳೂರಿನಲ್ಲಿ ಎಲ್ಲ ವರ್ಗದವರಿಗೂ ಒಂದೊಂದು ಪ್ರದೇಶವನ್ನು ಕಲ್ಪಿಸಿ ಅಲ್ಲಿಗೆ ಆಯಾ ವರ್ಗದವರ ಪ್ರದೇಶವೆಂದು ಗುರುತಿಸಿದ್ದರು. ಆದರೆ ಕೆಂಪೇಗೌಡ ಅವರು ಬೆಂಗಳೂರಿನಲ್ಲಿ ಎಲ್ಲಿಯೂ ಗೌಡರ ನಗರ, ವಕ್ಕಲಿಗರ ಪಾಳ್ಯ ಎಂಬುದನ್ನು ಗುರುತಿಸದೆ ಇರುವುದೇ ಸಾಕ್ಷಿಯಾಗಿದೆ ಎಂದರು.

ನಾಡ ಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಮತ್ತಷ್ಟು ಆರ್ಥಗರ್ಭಿತವಾಗಿ ಆಚರಿಸುವಂತಾಗಬೇಕು, ಅದಕ್ಕಾಗಿ ಮುಂದಿನ ವರ್ಷ 2019 ರ ಜೂನ್‌ 27 ಅವರ ಜಯಂತಿ ಆಚರಣೆಗೆ ಮೊದಲು ತಮಗೂ ಮಾಹಿತಿ ದೊರೆತಲ್ಲಿ ತಾವುಗಳು ಸಹಕಾರದ ಹಸ್ತ ನೀಡುವುದಾಗಿ ಭರವಸೆ ನೀಡಿದರು.

ಹಾಸನದ ಎವಿಕೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಚ್‌.ಎಲ್‌.ಮಲ್ಲೇಶಗೌಡ ಮಾತನಾಡಿ, ನಾಡಪ್ರಭು ಎಂಬುದನ್ನು ಪಡೆಯುವುದು ಸಾಧಾರಣ ವಿಷಯವಲ್ಲ ಏಕೆಂದರೆ ಈ ನಾಡಪ್ರಭು ಎಂಬುದು ಸಮಾಜದಲ್ಲಿನ ಎಲ್ಲರನ್ನು ಸಮನಾಗಿ ಕಾಣುವವರಿಗೆ ಮಾತ್ರ ಈ ಹೆಗ್ಗಳಿಗೆ ಹೆಸರು ಬರಲು ಸಾಧ್ಯ ಎಂದರು. ತಹಶೀಲ್ದಾರ್‌ ಎಸ್‌.ಕೆ.ರಾಜು ಮಾತನಾಡಿ, ಕೆಂಪೇಗೌಡ ಅವರಿಗೆ ದೂರದೃಷ್ಟಿ ಇದಿದ್ದರಿಂದ ಇಂದು ಬೆಂಗಳೂರು ವಿಶ್ವದ ಗಮನ ಸೆಳೆಯಲು ಕಾರಣವಾಯಿತು. ಕೆಂಪೇಗೌಡ ಅವರು ಒಂದು ಸಮಾಜದ ವ್ಯಕ್ತಿಯಾಗಿ ಗುರುತಿಸಿಕೊಂಡಿರಲಿಲ್ಲ, ಅವರು ಸಹ ಕೃಷಿಕರಾಗಿದ್ದು ಕೊಂಡೆ ಬೆಂಗಳೂರನ್ನು ಕಟ್ಟಲು ಕಾರಣರಾದರು ಎಂದು ತಿಳಿಸಿದರು.

Advertisement

ವೇದಿಕೆ ಕಾರ್ಯಕ್ರಮ ಆರಂಭಕ್ಕೆ ಮೊದಲು ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಇರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಲಾರಿ ಮಾಲೀಕ ಕುಮಾರ್‌ ಅವರು ನಾಡಪ್ರಭು ಕೆಂಪೇಗೌಡ ವೇಷ ಧರಿಸಿ ಕುದುರೆಯೇರಿ ಮೆರವಣಿಗೆಯಲ್ಲಿ ಹೊರಟದ್ದು ಸಾರ್ವಜನಿಕರ ಗಮನ ಸೆಳೆದರು.. ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ, ಉಪಾಧ್ಯಕ್ಷ ಶಿವಣ್ಣ, ಪುರಸಭೆ ಅಧ್ಯಕ್ಷ ಕೆ.ಆರ್‌.ಸುಬ್ರಮಣ್ಯ, ಮುಖ್ಯಾಧಿಕಾರಿ ಬಿ.ಸಿ.ಬಸವರಾಜು, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಆರ್‌.ರವಿಕುಮಾರ್‌, ತಾಲೂಕು ಪಂಚಾಯಿತಿ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಹಾಗು ಜಿಲ್ಲಾ ಪಂಚಾಯಿತಿ ಎಕ್ಯುಕಿಟಿಫ್ ಇಂಜಿನಿಯರ್‌ ಪ್ರಭು, ಬಿಇಒ ಎಂ.ಶಿವರಾಜು, ಹಾಗು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಮಾರಯ್ಯ, ಪೌರಕಾರ್ಮಿಕ ಚಲುವ, ಸಮಾಜ ಸೇವೆಯಲ್ಲಿ ಕೆ.ಎ.ಲೊಕೇಶ್‌, ಕ್ರೀಡಾಕ್ಷೇತ್ರದ ತರುಣ್‌ ಕುಮಾರ್‌, ಯೋಗಕ್ಷೇತ್ರದ ಕೆ.ಜಿ.ಗಣೇಶ್‌ಭಾಬು ಅವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next