Advertisement

ವಿಘ್ನದಾಯಕ, ನೇತ್ಯಾತ್ಮಕ ಪ್ರಿಯ ಅರವಿಂದ ಕೇಜ್ರಿವಾಲ್‌

09:35 AM May 10, 2017 | Team Udayavani |

ಆಪ್‌ನ‌ ಉಚ್ರ್ಯಾಯ-ಅವನತಿಯ ಬಗ್ಗೆ ರಾಜಕೀಯ ವಕ್ತಾರರು ಮಾತಾಡುತ್ತಿದ್ದಾರೆ ಮತ್ತು ಬರೆಯುತ್ತಿದ್ದಾರೆ. ಆದರೂ ಆಮ್‌ ಆದ್ಮಿ ಪಕ್ಷದ ಅವನತಿಯಾಯಿತು ಎಂದು ಹೇಳುವುದು ಅವಸರದ ತೀರ್ಮಾನ ಆದೀತು. ಆದರೆ, ಒಂದು ವಿಭಿನ್ನ ಪಕ್ಷವಾಗಿ ಮೂಡಿಬರುವಲ್ಲಿ ಅದು ವಿಫ‌ಲವಾಗಿದೆ.

Advertisement

ತನ್ನ ಮೇಲೆ ಇರಿಸಿದ ಅತ್ಯುನ್ನತ ನಿರೀಕ್ಷೆಗಳನ್ನು ಹುಸಿಗೊಳಿಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರಂತೆ ನಿರಾಶೆ ಮೂಡಿಸಿದ ಇನ್ನೊಬ್ಬ ರಾಜಕಾರಣಿ ಪ್ರಾಯಃ ನಮಗೆ ಸಿಗಲಾರರು. ತಾನೊಬ್ಬ ಆಡಳಿತಗಾರನಿಗಿಂತಲೂ ಹೆಚ್ಚಾಗಿ ಒಬ್ಬ ವಿಘ್ನದಾಯಕ ಮತ್ತು ನಕಾರಾತ್ಮಕತೆಯನ್ನೇ ಆಚರಿಸುವವನು ಎಂಬುದನ್ನು ಕೇಜ್ರಿವಾಲ್‌ ಸ್ಪಷ್ಟವಾಗಿ ಸಾಬೀತುಪಡಿಸಿದ್ದಾರೆ.

ದಿಲ್ಲಿಯಲ್ಲಿ ಕೇಜ್ರಿವಾಲ್‌ ಅವರ ಮಾಜಿ ಸಂಪುಟ ಸಹೋದ್ಯೋಗಿ ಕಪಿಲ್‌ ಮಿಶ್ರಾ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ. ಆಪಾದನೆ ಹೊರಿಸುವುದಕ್ಕೆ ಕೇವಲ ಒಂದು ದಿನ ಮುನ್ನ ದಿಲ್ಲಿ ಪ್ರವಾಸೋದ್ಯಮ ಸಚಿವ ಸ್ಥಾನದಿಂದ ಕಪಿಲ್‌ ಮಿಶ್ರಾರನ್ನು ಹೊರತಳ್ಳಲಾಗಿತ್ತು. ಕಪಿಲ್‌ ತಮ್ಮ ಆರೋಪವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ ಹಾಗೂ ಕೇಜ್ರಿವಾಲ್‌ ತಮಗಿಂತ ಹಿಂದೆ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸಿನ ಶೀಲಾ ದೀಕ್ಷಿತ್‌ ಅವರನ್ನು ರಕ್ಷಿಸುತ್ತಿದ್ದಾರೆಂದೂ ಆಪಾದಿಸಿದ್ದಾರೆ. ಮಿಶ್ರಾ ಅವರು ಮಾಡಿರುವುದು ಆರೋಪಗಳನ್ನಷ್ಟೇ ಎಂದು ವಾದಿಸಬಹುದು; ಆದರೆ ಭ್ರಷ್ಟಾಚಾರದ ಕಿಂಚಿತ್‌ ಕಳಂಕವೂ ತಟ್ಟದಂತೆ ಅಧಿಕಾರ ನಿಭಾಯಿಸಿದ ಘನಸ್ಥಿಕೆಯ ರಾಜಕಾರಣಿಗಳ ಸಾಲಿನಲ್ಲಿ ಸೇರಿಕೊಳ್ಳಲು ಕೇಜ್ರಿವಾಲ್‌ ಈಗಾಗಲೇ ವಿಫ‌ಲರಾಗಿದ್ದಾರೆ. ಅಂತಹ ಘನತೆವೆತ್ತ ರಾಜಕಾರಣಿಗಳು 1950 ಕಾಲಘಟ್ಟದಲ್ಲಿ ರಾಷ್ಟ್ರ ಅಥವಾ ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರು. ಕರ್ನಾಟಕವನ್ನೇ ಗಮನಿಸುವುದಾದರೆ, ರಾಜ್ಯ ಏಕೀಕರಣದ ಪೂರ್ವದಲ್ಲಿ ಅಲ್ಪಕಾಲ ಮೈಸೂರು ಮುಖ್ಯಮಂತ್ರಿಯಾಗಿದ್ದ ಕಡಿದಾಳ್‌ ಮಂಜಪ್ಪನವರು ಭ್ರಷ್ಟಾಚಾರದ ಲೇಶವೂ ಸೋಕದಂತೆ ಆಡಳಿತ ನಡೆಸಿದ್ದರು. ಮೈಸೂರಿನ ಮೊದಲ ಮುಖ್ಯಮಂತ್ರಿಯಾಗಿದ್ದ ಕೆ.ಸಿ. ರೆಡ್ಡಿಯವರ ಮೇಲೆ ಭ್ರಷ್ಟಾಚಾರ, ಪ್ರತೀಕಾರ ಸಾಧನೆಯಂತಹ ಹಲವು ಆರೋಪಗಳಿದ್ದವು. 

ಕೇಜ್ರಿವಾಲ್‌ ಬಗೆಗೆ ಮಾಜಿ ಕೇಂದ್ರ ಸಂಪುಟ ಕಾರ್ಯದರ್ಶಿ ಟಿ.ಎಸ್‌.ಆರ್‌. ಸುಬ್ರಹ್ಮಣಿಯನ್‌ ಅವರ ವಿಶ್ಲೇಷಣೆ ಚೆನ್ನಾಗಿದೆ. ಅವರ ಮಾತುಗಳಲ್ಲಿ ಹೇಳುವುದಾದರೆ, “”ಕೇಜ್ರಿವಾಲ್‌ ಅವರೀಗ ಒಬ್ಬ ನಕಲಿ ಮಹಾತ್ಮನಂತೆ, ಅಧಿಕಾರದಾಹಿ ನಕಲಿಶ್ಯಾಮನಂತೆ, ಏನಕೇನ ಪ್ರಕಾರೇಣ ತನ್ನ ವೈಯಕ್ತಿಕ ಅಧಿಕಾರ ಮತ್ತು ಅಂತಸ್ತನ್ನು ಉಳಿಸಿಕೊಳ್ಳಲು ಹಂಬಲಿಸುವ ಹಾಗೂ ಅಧಿಕಾರಸೂತ್ರವನ್ನು ತನ್ನ ಸ್ವಾರ್ಥಪರ ಉದ್ದೇಶಗಳಿಗೆ ಉಪಯೋಗಿಸುವ ತತ್ವ- ಸಿದ್ಧಾಂತ ವಿರಹಿತ ಆಡಳಿತಗಾರನಂತೆ ಕಾಣಿಸುತ್ತಾರೆ”. ತಣ್ತೀ -ಸಿದ್ಧಾಂತನಿಷ್ಠ ರಾಜಕಾರಣಿಯಾಗಿ ರಾಮಕೃಷ್ಣ ಹೆಗಡೆ ಅವರ ನಿರ್ವಹಣೆ ಕೇಜ್ರಿವಾಲ್‌ಗಿಂತ ಎಷ್ಟೋ ಚೆನ್ನಾಗಿದೆ; ಜಸ್ಟೀಸ್‌ ಕುಲದೀಪ್‌ ಸಿಂಗ್‌ ಆಯೋಗ ಎರಡು ಭೂಹಗರಣಗಳಲ್ಲಿ ಹೆಗಡೆ ಅವರನ್ನು ದೋಷಿಯಾಗಿಸಿದ್ದರೂ ಕೂಡ.

ಕೇಂದ್ರದ ಜತೆಗೆ ಅಕಾರಣ ಕಲಹ: ಕೇಜ್ರಿವಾಲ್‌ರ ಮುಖ್ಯಮಂತ್ರಿಗಿರಿ ಹೆಚ್ಚು ಪ್ರಸಿದ್ಧವಾಗಿರುವುದು ಕೇಂದ್ರ ಸರಕಾರದ ಜತೆಗಿನ ನಿಷ್ಕಾರಣ ಕಲಹಕ್ಕೆ. ದಿಲ್ಲಿಯ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ಜತೆಗೆ ಕಾನೂನು ತನಗೆ ಕೊಡಮಾಡದ ಅಧಿಕಾರಗಳಿಗಾಗಿ ಕೇಜ್ರಿವಾಲ್‌ ದೀರ್ಘ‌ಕಾಲ ತಿಕ್ಕಾಟ ನಡೆಸಿದರು. ಸಾರ್ವಜನಿಕ ಹಣವನ್ನು ಜಾಹೀರಾತುಗಳಿಗಾಗಿ ಪೋಲು ಮಾಡಿರುವುದು ಸ್ವವೈಭವೀ ಕರಣದ ಮೇಲಿರುವ ಅವರ ಆಸೆಯನ್ನು ಬಿಂಬಿಸುತ್ತದೆ. ಈ ವಿಚಾರದಲ್ಲಿ ಮಾಜಿ ಮಹಾಲೆಕ್ಕಪರಿಶೋಧಕ ಶಿಂಗು ಅವರು ಕೇಜ್ರಿವಾಲ್‌ ಅವರ ದೋಷವನ್ನು ಸಾಬೀತುಪಡಿಸಿದ್ದಾರೆ. ಭಾರತೀಯ ಕಂದಾಯ ಸೇವೆಯ ಈ ಮಾಜಿ ಅಧಿಕಾರಿ ಕೇಜ್ರಿವಾಲ್‌ ಆರಂಭದಿಂದಲೇ ತಾನೊಬ್ಬ ಅತಿ ಮಹತ್ವಾಕಾಂಕ್ಷೆಯ ವ್ಯಕ್ತಿ ಎಂಬುದನ್ನು ಶ್ರುತಪಡಿಸುತ್ತ ಬಂದವರು. ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ರಾಜಕೀಯ ರಹಿತವಾಗಿಯೇ ಇರಿಸುವ ಅಣ್ಣಾ ಹಜಾರೆಯವರ ಸಲಹೆಗಳಿಗೆ ಕೇಜ್ರಿವಾಲ್‌ ಕಿವಿಗೊಡಲಿಲ್ಲ. ಭ್ರಷ್ಟಾಚಾರ ವಿಷಯದಲ್ಲಿ ತಾನು ಯಾರ ವಿರುದ್ಧ ಹೋರಾಟ ನಡೆಸಿದ್ದೆನೋ ಅದೇ ಕಾಂಗ್ರೆಸ್‌ ಬೆಂಬಲದಿಂದ ಮೊತ್ತಮೊದಲಿಗೆ ಅವರು ದಿಲ್ಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದರು. ಏಳು ವಾರಗಳ ಅಚ್ಚರಿ ಎಂಬುದನ್ನು ಸಾಬೀತುಪಡಿಸಿದ ಆ ಸರಕಾರ 49 ದಿನಗಳಷ್ಟೇ ಉಳಿಯಿತು. ಕೇಂದ್ರ ಲೋಕಪಾಲ ಮತ್ತು ಲೋಕಾಯುಕ್ತ ಕಾಯಿದೆ 2013ನ್ನು ಜಾರಿಗೊಳಿಸದೆ ಇದ್ದುದನ್ನು ವಿರೋಧಿಸಿ ಕೇಜ್ರಿವಾಲ್‌ 2014ರ ಫೆಬ್ರವರಿಯಲ್ಲಿ ರಾಜೀನಾಮೆ ನೀಡಿದರು. ಕುತೂಹಲವೆಂದರೆ, ಅವರದೇ ಸರಕಾರ 2015ರಲ್ಲಿ ಅಂಗೀಕರಿಸಿದ ದಿಲ್ಲಿ ಲೋಕಪಾಲ ಮಸೂದೆಯು ಅವರ ಪಕ್ಷ ಚಳುವಳಿ ನಡೆಸಿದ ಲೋಕಪಾಲ ಮಸೂದೆಯ ಬಲಹೀನ ಆವೃತ್ತಿಯಾಗಿದೆ. ಮೋದಿ ಸರಕಾರ ಅದನ್ನಿನ್ನೂ ಅಂಗೀಕರಿಸಿಲ್ಲ. ಇವೆಲ್ಲದರ ನಡುವೆ ದಿಲ್ಲಿಯಲ್ಲಿ ಲೋಕಾಯುಕ್ತರಿದ್ದಾರೆ ಹಾಗೂ ದಿಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ರೇವಾ ಕ್ಷೇತ್ರಪಾಲ ಈಗ ಈ ಅಧಿಕಾರದಲ್ಲಿ ದ್ದಾರೆ. 2013ರ ಕೇಂದ್ರ ಕಾಯಿದೆಯ ಅನ್ವಯ ನೇಮಕ ಗೊಂಡಿರುವ ಲೋಕಾಯುಕ್ತರಾಗಿ ನೇಮಕಗೊಂಡಿರುವ ಆಕೆ ಕೇಜ್ರಿವಾಲ್‌ ವಿರುದ್ಧದ ಭ್ರಷ್ಟಾಚಾರ ಆಪಾದನೆಗಳ ವಿಚಾರಣೆ ನಡೆಸಬೇಕಾಗಬಹುದು.  

Advertisement

ದಿಲ್ಲಿ ಮುಖ್ಯಮಂತ್ರಿಯಾದ್ದರಿಂದಷ್ಟೇ ತೃಪ್ತಿಗೊಳ್ಳದ ಅರವಿಂದ ಕೇಜ್ರಿವಾಲ್‌ ಈಗ ರಾಷ್ಟ್ರ ರಾಜಕಾರಣದ ಮೇಲೂ ಕಣ್ಣಿಟ್ಟಿದ್ದಾರೆ. ಪಂಜಾಬ್‌ನಲ್ಲಿ ಅಧಿಕಾರಕ್ಕೇರಲು ವಿಫ‌ಲವಾದ ಬಳಿಕ ಮತ್ತು ಗೋವಾದಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಕೇಜ್ರಿವಾಲ್‌ ಅದಕ್ಕಾಗಿ ವಿದ್ಯುನ್ಮಾನ ಮತಯಂತ್ರಗಳನ್ನು ದೂರಿದರು. ಅದೇ ಮತಯಂತ್ರಗಳನ್ನು ಉಪಯೋಗಿಸಿ ನಡೆದ ಚುನಾವಣೆಗಳಲ್ಲಿಯೇ ತಾನು ದಿಲ್ಲಿಯಲ್ಲಿ ಒಂದಲ್ಲ, ಎರಡು ಬಾರಿ ಅಧಿಕಾರಿಕ್ಕೇರಿದ್ದನ್ನು ಮರೆತ ಮಹಾಶಯ ಇವರು. 

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ಕೇಜ್ರಿವಾಲ್‌ ಬಗೆಗೆ ತೋರುತ್ತಿರುವ, “ದ್ವೇಷ’ ಎಂದು ಕೆಲವರು ಬಣ್ಣಿಸುವ ವರ್ತನೆಗೆ ಸ್ವತಃ ಕೇಜ್ರಿವಾಲ್‌ ಅವರೇ ಹೊಣೆ, ಕಾರಣ. ಅವರ ಮಾಜಿ ಕಾರ್ಯದರ್ಶಿಯನ್ನು ಸಿಬಿಐ ಭ್ರಷ್ಟಾಚಾರದ ಆರೋಪದ ಮೇರೆಗೆ ಬಂಧಿಸಿದೆ. ರಾಷ್ಟ್ರ ರಾಜಧಾನಿಯಲ್ಲೇ ಮುಖ್ಯಮಂತ್ರಿಯಾಗಿ ಕುಳಿತಿರುವ ಕೇಜ್ರಿವಾಲ್‌ ಅವರಂತಹ ಮಗ್ಗುಲ ಮುಳ್ಳನ್ನು ಪ್ರಾಯಃ ಈ ಸರಕಾರದಂತೆ ಇನ್ನಾéವ ಸರಕಾರವೂ ಸಹಿಸಿಕೊಳ್ಳದು. ಇಂದಿರಾರಂತಹ ದ್ವೇಷ ಸಾಧನೆಯ ಪ್ರಧಾನಿ ಇದ್ದಿದ್ದರೆ ಕೇಜ್ರಿವಾಲ್‌ ಎಂದೋ ಗಂಟುಮೂಟೆ ಕಟ್ಟಬೇಕಾಗಿತ್ತು. ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರಕಾರಗಳನ್ನು ಅಮಾನತುಗೊಳಿಸುವುದು ಮತ್ತು ರಾಜ್ಯ ವಿಧಾನಮಂಡಲಗಳನ್ನು ವಿಸರ್ಜಿಸುವುದು ದೊಡ್ಡ ಸಂಖ್ಯೆಯಲ್ಲಿ ನಡೆಯುತ್ತಿದ್ದ; 1994ರ ಎಸ್‌. ಆರ್‌. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತಡೆ ಹಾಕುವುದಕ್ಕೂ ಮುನ್ನಿನ ಕಾಲಘಟ್ಟದಲ್ಲಿ ಅಧಿಕಾರ ನಡೆಸಿದವರು ಇಂದಿರಾ.  ಆಪ್‌ನ‌ ಉಚ್ಛಾ†ಯ ಮತ್ತು ಅವನತಿಯ ಬಗ್ಗೆ ರಾಜಕೀಯ ವಕ್ತಾರರು ಮಾತಾಡುತ್ತಿದ್ದಾರೆ, ಬರೆಯುತ್ತಿದ್ದಾರೆ. ಆದರೂ ಅದರ ಅವನತಿಯಾಯಿತು ಎಂದು ಹೇಳುವುದು ಅವಸರದ ತೀರ್ಮಾನವಾದೀತು. ಪಂಜಾಬ್‌ನ ಸ್ಥಳೀಯ ನಾಯಕರ ಶ್ರಮದಿಂದಾಗಿ ಅಲ್ಲಿ ಆಪ್‌ ಪ್ರಧಾನ ವಿಪಕ್ಷವಾಗಿ ಮೂಡಿಬರಲು ಸಾಧ್ಯವಾಗಿದೆ. ಆದರೆ, ಒಂದು ವಿಭಿನ್ನ ಪಕ್ಷವಾಗಿ ಮೂಡಿಬರುವುಲ್ಲಿ ವಿಫ‌ಲವಾಗಿದೆ.

ಸ್ವಾತಂತ್ರಾéನಂತರದ ವರ್ಷಗಳಲ್ಲಿ ಕಾಂಗ್ರೆಸ್‌ ನಡೆದುಬಂದ ದಾರಿಯಲ್ಲಿಯೇ ಆಪ್‌ ಈಗ ಹಳಸಲಾರಂಭಿಸಿದೆ. ಬ್ರಿಟಿಶರು ಭಾರತವನ್ನು ತೊರೆದ ಬಳಿಕ ಅನೇಕ ರಾಜ್ಯಗಳಲ್ಲಿ ಅವಕಾಶ ವಾದಿಗಳು ಮತ್ತು ಭ್ರಷ್ಟ ರಾಜಕಾರಣಿಗಳು ಕಾಂಗ್ರೆಸ್‌ಚುಕ್ಕಾಣಿ ಹಿಡಿದರು. ಕೆಲವು ಮಹಾಭ್ರಷ್ಟ ಕಾಂಗ್ರೆಸಿಗರು ಜೈಲಿನಲಿದ್ದಾಗಲೂ ಭ್ರಷ್ಟ ವ್ಯವಹಾರಗಳಲ್ಲಿ ನಿರತರಾಗಿದ್ದರು ಎಂಬುದೀಗ ಬಹಿರಂಗವಾಗುತ್ತಿದೆ. ಇಂತಹುದೇ ನಿರಾಶೆಯನ್ನು ಜೆಪಿ ಚಳವಳಿ ಕೂಡ ಉಂಟು ಮಾಡಿತು. ಜನತಾ ಪಕ್ಷ 1978ರ ಚುನಾವಣೆಯಲ್ಲಿ ಕರ್ನಾಟಕದ ಜನತೆಯ ಮೇಲೆ ಪ್ರಭಾವ ಬೀರಲು ವಿಫ‌ಲವಾದ ಹಾಗೆಯೇ ಜೆಪಿ ಚಳವಳಿಯ ಪ್ರಭಾವ ಕೂಡ ರಾಜ್ಯದಲ್ಲಿ ಶೂನ್ಯವಾಯಿತು. ಲಾಲೂ, ಓಂ ಪ್ರಕಾಶ್‌ ಚೌತಾಲಾರಂತಹ ರಾಜಕಾರಣಿಗಳನ್ನು ಪ್ರವರ್ಧಮಾನಕ್ಕೆ ತಂದ ಚಳವಳಿಯ ಬಗ್ಗೆ ಇನ್ನೇನು ಹೇಳಬಹುದು? ಚೌತಾಲಾ ಹತ್ತು ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತ ಜೈಲಿನಲ್ಲಿದ್ದಾರೆ, ಬಿಹಾರದ ಯಾದವ ನಾಯಕ ಮೇವು ಹಗರಣದಲ್ಲಿ ಅಂತಿಮ ತೀರ್ಪಿನ ನಿರೀಕ್ಷೆಯಲ್ಲಿದ್ದಾರೆ. ಮೊರಾರ್ಜಿ ದೇಸಾಯಿ ಅವರನ್ನು ಪಕ್ಕಕ್ಕೆ ತಳ್ಳಿ ತಾನು ಪ್ರಧಾನಿಯಾಗಬೇಕು ಎನ್ನುವ ಚರಣ್‌ ಸಿಂಗ್‌ರ ಅಸೂಯೆ ಕೇಂದ್ರದಲ್ಲಿ ಜನತಾ ಪಕ್ಷ‌ವನ್ನು ವಿಚ್ಛಿನ್ನಗೊಳಿಸಿತು. 
ದಿಲ್ಲಿಯ ಫ್ರೀಡಮ್‌ ಪಾರ್ಕ್‌ಗೆ ಲಕ್ಷಾಂತರ ಸಂಖ್ಯೆ ಮುನ್ನುಗ್ಗುತ್ತಿದ್ದ ಯುವಸಮೂಹದ ನೆನಪಾಗುತ್ತಿದೆ; ಕೇಜ್ರಿವಾಲ್‌ ಅವರನ್ನೆಲ್ಲ ನಿರಾಶೆಗೊಳಿಸಿದ್ದಾರೆ.

ಕಿವಿಯೋಲೆಗಳು ಆಭರಣಗಳೇ ಆಯುಧಗಳೇ?: ನೀಟ್‌ ಬರೆಯುವ ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ವಿಧಿಸಿದ ಅಧಿಕಾರಿಗಳ ವಿರುದ್ಧ ಭಾರತ ಸರಕಾರ ಕಠಿನ ಕ್ರಮವನ್ನು ತೆಗೆದುಕೊಳ್ಳಲೇಬೇಕು. ಈ ಪರೀಕ್ಷೆ ಬರೆಯುವಾಗ ವಿದ್ಯಾರ್ಥಿನಿಯರು ಕಿವಿಯೋಲೆಗಳನ್ನು ತೆಗೆದಿಡಬೇಕೆಂದು ವಿಧಿಸಿರು ವುದು ವಿವೇಚನಾರಹಿತ. ಕಿವಿಯೋಲೆ ಧರಿಸಿದ ಮಾತ್ರಕ್ಕೆ ವಿದ್ಯಾರ್ಥಿನಿ ನಕಲು ಹೊಡೆಯುತ್ತಾಳೆ ಅಥವಾ ಭದ್ರತೆಗೆ ಅಪಾಯಕಾರಿಯಾಗುತ್ತಾಳೆ ಎಂದು ಸಾಮಾನ್ಯ ಜ್ಞಾನ ಇರುವ ಯಾರಾದರೂ ಅನುಮಾನಿಸಬಹುದೇ? ಕಿವಿಯೋಲೆಗಳು ಕಾಶ್ಮೀರ ಕಣಿವೆಯಲ್ಲಿ ಸಶಸ್ತ್ರ ಸೈನಿಕರ ವಿರುದ್ಧ ಪಾಕಿಸ್ಥಾನ ಪರ ವಿದ್ಯಾರ್ಥಿನಿಯರು ಎಸೆಯುವ ಕಲ್ಲುಗಳಷ್ಟು ಮಾರಕವೇ?!

ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next