Advertisement

ಬಾಹುಬಲಿ ಮುಹೂರ್ತದಲ್ಲಿ ಕೆಸಿಆರ್‌ ಪ್ರಮಾಣ

08:10 AM Dec 14, 2018 | Team Udayavani |

ಹೊಸದಿಲ್ಲಿ/ಹೈದರಾಬಾದ್‌: ವಿಧಾನಸಭೆ ಚುನಾವಣೆಯಲ್ಲಿ ಅಭೂತ ಪೂರ್ವ ಜಯ ಸಾಧಿಸಿದ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕವಲಕುಂಟ್ಲ ಚಂದ್ರಶೇಖರ ರಾವ್‌ (ಕೆಸಿಆರ್‌) ಗುರುವಾರ 2ನೇ ಬಾರಿಗೆ ತೆಲಂಗಾಣದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ಮಧ್ಯಾಹ್ನ 1.24ಕ್ಕೆ ‘ಬಾಹುಬಲಿ ಮುಹೂರ್ತ’ದಲ್ಲಿ  ಕೆಸಿಆರ್‌ಗೆ ರಾಜ್ಯಪಾಲ ಇ.ಎಸ್‌.ಎಲ್‌.ನರಸಿಂಹನ್‌ ಅಧಿಕಾರ ಮತ್ತು ಗೋಪ್ಯತೆ ಪ್ರಮಾಣ ಬೋಧಿಸಿದರು.

Advertisement

ರಾವ್‌ ಜತೆ, ವಿಧಾನ ಪರಿಷತ್‌ ಸದಸ್ಯ ಮೊಹಮ್ಮದ್‌ ಮೆಹಮೂದ್‌ ಅಲಿ ಮಾತ್ರ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಡಿ.18 ರಂದು ಸಂಪುಟ ವಿಸ್ತರಣೆ ನಡೆವ ಸಾಧ್ಯತೆ ಇದೆ. ರಾವ್‌ ಅವರ ಕುಟುಂಬ ಸದಸ್ಯರು, ಟಿ ಆರ್‌ಎಸ್‌ ನಾಯಕರು ಹಾಜರಿದ್ದರು. ವಿಪಕ್ಷಗಳ ನಾಯಕರು ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಆದರೆ ಕಾಂಗ್ರೆಸ್‌ ಎಂಎಲ್‌ಎಸಿ ಪಿ.ಸುಧಾಕರ ರೆಡ್ಡಿ, ಎಂಐಎಂ ನಾಯಕ ಅಸಾದುದ್ದೀನ್‌ ಒವೈಸಿ ಆಗಮಿಸಿದ್ದರು.

ಅರ್ಚಕರು ಸೂಚಿಸಿದ ಮುಹೂರ್ತ: ಶಕುನ ಮತ್ತು ಇತರ ಧಾರ್ಮಿಕ ವಿಚಾರಗಳಲ್ಲಿ ನಂಬಿಕೆ ಇರುವ ಚಂದ್ರಶೇಖರ ರಾವ್‌ಗೆ ಬೊಂಗಿರ್‌ ಜಿಲ್ಲೆಯ ಯಾದಗಿರಿಯಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ದೇಗುಲದ ಅರ್ಚಕರು 1.24ರ ಮುಹೂರ್ತದ ಬಗ್ಗೆ ಸಲಹೆ ನೀಡಿದ್ದರು. ಯಾವುದೇ ಗ್ರಹಗತಿಗಳ ತೊಂದರೆ ಇಲ್ಲದೆ ಉತ್ತಮ ಸ್ಥಾನದಲ್ಲಿದ್ದು, ಕೆಸಿಆರ್‌ಗೆ ಒಳ್ಳೆಯ ಆಡಳಿತ ನೀಡಲು ನೆರವಾಗಲಿದೆ. ಜತೆಗೆ ಅವರಿಗೆ ‘ರಾಜಯೋಗ’ವೂ ಇರಲಿದೆ ಎಂದು ಹೇಳಿದ್ದಾರೆ. 

ನೋಟಾ ಕೊಟ್ಟ ಪೆಟ್ಟು
ಮಧ್ಯಪ್ರದೇಶದ 22 ಕ್ಷೇತ್ರಗಳಲ್ಲಿ ‘ನನ್‌ ಆಫ್ ದ ಎಬವ್‌’ (ಮೇಲ್ಕಂಡ ಯಾರೂ ಅಲ್ಲ) ಆಯ್ಕೆ ಬಿಜೆಪಿಯ ಜಯದ ಅಂತರ ತಗ್ಗಿಸಿದೆ. ಈ ಅಂಶವನ್ನು ಚುನಾವಣಾ ಆಯೋಗದ ದಾಖಲೆಗಳು ಪುಷ್ಟೀಕರಿಸಿವೆ. 5,42,295 ಮಂದಿ ಇವಿಎಂಗಳಲ್ಲಿ ನೋಟಾ ಬಟನ್‌ ಒತ್ತಿದ್ದಾರೆ. ಅದು ಚಲಾವಣೆಯಾದ ಮತಗಳ ಶೇ.1.4ರಷ್ಟಾಗುತ್ತದೆ. 2013ರ ಚುನಾವಣೆಯಲ್ಲಿ 6.43 ಲಕ್ಷ (ಶೇ.1.9) ಮಂದಿ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದರು. 22 ಕ್ಷೇತ್ರಗಳ ಪೈಕಿ 12 ಕಾಂಗ್ರೆಸ್‌, ನಾಲ್ವರು ಸಚಿವರೂ ಸೇರಿ 9 ಬಿಜೆಪಿ,  1 ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಜಯಗಳಿಸಿದ್ದಾರೆ. ಇದರ ಜತೆಗೆ ಬಿಎಸ್‌ಪಿ, ಮೇಲ್ವರ್ಗದ ಕೋಪ ಕೂಡ ಬಿಜೆಪಿಗೆ ಬರಬೇಕಾಗಿದ್ದ ಮತಗಳನ್ನು ತಪ್ಪಿಸಿತು.

ಬಿಜೆಪಿಯ ಸೋಲು ಎನ್ನುವುದು ಅನ್ಯಾಯದ ಮತ್ತು ಸುಳ್ಳಿನ ಸೋಲು. ಒಬ್ಬನ ಸೋಲಿನ ಜತೆಗೆ ಗೆಲುವನ್ನೂ ವಿನೀತವಾಗಿ ಸ್ವೀಕರಿಸುವುದೇ ನಮ್ಮ ಕ್ರಮ. 2014ರ ಚುನಾವಣೆ ಬಳಿಕ ಪದ್ಧತಿಯೇ ಬದಲಾಯಿತು. ಕಾಂಗ್ರೆಸ್‌ ಮುಕ್ತ ಭಾರತ ಎಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ ರಾಹುಲ್‌ ಗಾಂಧಿಯವರು ಬಿಜೆಪಿಯ ಭದ್ರಕೋಟೆಯಲ್ಲಿಯೇ ಜಯ ಸಾಧಿಸಿದರು.
– ಶಿವಸೇನೆ, ಮುಖವಾಣಿ ‘ಸಾಮ್ನಾ’ದಲ್ಲಿ

Advertisement

ಪಂಚರಾಜ್ಯ ಚುನಾವಣೆ ಫ‌ಲಿತಾಂಶ ಮುಂಬರಲಿರುವ ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌.ಡಿ.ಎ. ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸುತ್ತದೆ. 
– ರಾಮ್‌ವಿಲಾಸ್‌ ಪಾಸ್ವಾನ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next