Advertisement

Dasara: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ; ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

12:24 AM Sep 21, 2024 | Team Udayavani |

ಹರಿದ್ವಾರ: ದಕ್ಷಿಣ ಭಾರತದ ಜೀವನದಿಯಾದ ಕಾವೇರಿ ನದಿಗೂ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿಯನ್ನು ದಸರಾ ಸಂದರ್ಭದಲ್ಲೇ ಪ್ರಾಯೋಗಿಕವಾಗಿ ನಡೆಸಲು ಸರಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಕಾವೇರಿ ಆರತಿ ಸಂಚಾಲಕರೂ ಆಗಿರುವ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಉತ್ತರ ಭಾರತದಲ್ಲಿ ಎರಡು ದಿನಗಳ ಅಧ್ಯಯನ ಪ್ರವಾಸ ಕೈಗೊಂಡಿದ್ದು ಮೊದಲ ದಿನವಾದ ಶುಕ್ರವಾರ ಸಂಜೆ ಉತ್ತರಾ ಖಂಡ ರಾಜ್ಯದ ಹರಿದ್ವಾರದಲ್ಲಿ ನಡೆದ ಗಂಗಾರತಿ
ಯಲ್ಲಿ ಪಾಲ್ಗೊಂಡಿತಲ್ಲದೆ, ಗಂಗಾರತಿ ಮಹಾ ಸಭಾದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿತು.

Advertisement

ಕಾವೇರಿ ನದಿಯ ಯಾವ ಜಾಗದಲ್ಲಿ ಗಂಗಾರತಿ ಮಾದರಿಯ ಆರತಿ ಕೈಗೊಳ್ಳಬೇಕು? ಅದಕ್ಕಾಗಿ ಯಾವೆಲ್ಲ ಮೂಲಸೌಕರ್ಯ ಒದಗಿಸಬೇಕು? ಖರ್ಚು-ವೆಚ್ಚ ಇತ್ಯಾದಿಗಳನ್ನು ಅಂದಾಜಿಸುವ ಸಲುವಾಗಿ ಗಂಗಾರತಿ ಮಹಾಸಭೆಯ ಸಲಹೆಗಳನ್ನು ಪಡೆಯಲಾಯಿತು.

ಸಹಸ್ರಾರು ವರ್ಷಗಳ ಪೌರಾಣಿಕ ಹಿನ್ನೆಲೆಯುಳ್ಳ ಹರಿದ್ವಾರದ ಹರ್‌ ಕೀ ಪೌಡಿಯಲ್ಲಿ ಪ್ರತಿ ದಿನ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಗಂಗಾರತಿ ನಡೆಯುತ್ತದೆ. ನಿತ್ಯವೂ ಸಂಜೆ ನಡೆಯುವ ಆರತಿಯಲ್ಲಿ ಸಾವಿರಾರು ಜನರು ಭಾಗಿಯಾಗಿ ಕಣ್ತುಂಬಿಕೊಳ್ಳುತ್ತಾರೆ. ಇದಕ್ಕಾಗಿ ಯಾವುದೇ ಶುಲ್ಕ ಪಡೆಯುವುದಿಲ್ಲ ಎಂದು ಮಹಾಸಭಾ ಮಹಾಮಂತ್ರಿ ತನ್ಮಯ ವಸಿಷ್ಠ ವಿವರಿಸಿದರು.

ಅಷ್ಟೇ ಅಲ್ಲದೆ, ಇದರಲ್ಲಿ ಸರಕಾರದ ಯಾವುದೇ ಹಸ್ತಕ್ಷೇಪ ಇಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ ಅವರು, ಧಾರ್ಮಿಕ ಹಾಗೂ ಸಾಮಾಜಿಕ ನೆಲೆಗಟ್ಟಿನಲ್ಲಿ ಗಂಗಾರತಿ ನಡೆಯಲಿದೆ. ಗಂಗಾರತಿಗೂ ಮುನ್ನ ಗಂಗಾ ಅಭಿಷೇಕ ನೆರವೇರಿಸಿ, ನದಿ ತೀರದಲ್ಲಿ ನೆರೆದ ಸಾವಿರಾರು ಮಂದಿಯಿಂದ ಪರಿಸರ ಸಂರಕ್ಷಣೆಯ ಪ್ರತಿಜ್ಞಾ ವಿಧಿಯನ್ನು ಮಾಡಿಸಲಾಗುತ್ತದೆ. ಆಬಳಿಕ ಆರತಿ ಮಾಡಲಾಗುತ್ತದೆ ಎಂದು ನಿಯೋಗದ ಮುಂದೆ ಮಾಹಿತಿ ಹಂಚಿಕೊಂಡರು.

ಈ ವೇಳೆ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಿರ್ದೇಶನದ ಮೇರೆಗೆ ಈ ಪ್ರವಾಸ ಕೈಗೊಂಡಿದ್ದು ಮೊದಲ ದಿನ ಹರಿದ್ವಾರದಲ್ಲಿ ಗಂಗಾರತಿ ನೋಡಿದ್ದೇವೆ. ಶನಿವಾರ ವಾರಾಣಸಿಯಲ್ಲಿ ಗಂಗಾರತಿ ವೀಕ್ಷಣೆ ಮಾಡಿ, ಅಲ್ಲಿನ ವ್ಯವಸ್ಥೆಗಳ ಪರಾಮರ್ಶೆಯನ್ನೂ ಮಾಡುತ್ತೇವೆ. ಗಂಜಾಂ ನಿಮಿಷಾಂಬ ದೇವಸ್ಥಾನದ ಬಳಿ ಇರುವ ಕಾವೇರಿ ನದಿ ತೀರ, ಕೆಆರ್‌ಎಸ್‌ ಬೃಂದಾವನ ಅಥವಾ ಯಾವ ಜಾಗದಲ್ಲಿ ಮಾಡಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ನಿಯೋಗವು ವರದಿ ನೀಡಿದ ಸರ್ಕಾರ ನಿರ್ಧರಿಸಲಿದೆ ಎಂದರು.

Advertisement

ಇದಕ್ಕಾಗಿ 5 ಕೋಟಿ ರೂ. ವೆಚ್ಚವಾಗುವ ಅಂದಾಜಿದ್ದು ಒಮ್ಮೆ ಆರಂಭಿಸಿದ ಅನಂತರ ಇದನ್ನು ನಿಲ್ಲಿಸದಂತೆ ಸರಕಾರ ಆದೇಶ ಕೂಡ ಹೊರಡಿಸಲಾಗುತ್ತದೆ. ಈ ಬಾರಿಯ ದಸರಾ ಮಹೋತ್ಸವದ ಸಂದರ್ಭದಲ್ಲೇ ಪ್ರಾಯೋಗಿಕವಾಗಿ ಆಚರಿಸಬಹುದೇ ಎಂಬ ಚಿಂತನೆಯೂ ಇದೆ ಎಂದು ತಿಳಿಸಿದರು.

ನಿಯೋಗದಲ್ಲಿ ಶಾಸಕರಾದ ಪಿ.ಎಂ. ನರೇಂದ್ರಸ್ವಾಮಿ, ಮಾಗಡಿ ಬಾಲಕೃಷ್ಣ, ರವಿ ಗಣಿಗ, ದಿನೇಶ್‌ ಗೂಳಿಗೌಡ, ಶಿವಲಿಂಗೇಗೌಡ, ರಮೇಶ್‌ ಬಂಡಿಸಿದ್ದೇಗೌಡ, ಉದಯ್‌ ಗೌಡ, ದರ್ಶನ್‌ ಧ್ರುವನಾರಾಯಣ, ಹರೀಶ್‌ ಗೌಡ, ಮಂಡ್ಯ ಜಿಲ್ಲಾಧಿಕಾರಿ ಡಾ| ಕುಮಾರ್‌, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ನಿಯೋಗ ದಲ್ಲಿದ್ದರು,

ಸಾಧು ಕೋಕಿಲರಿಂದ ಕಾವೇರಿ ಹಾಡು
ಸಂಗೀತ ಸಂಯೋಜಕ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಕೂಡ ನಿಯೋಗದಲ್ಲಿದ್ದು, ಕಾವೇರಿ ಆರತಿ ಸಂಬಂಧ ಹಾಡೊಂದನ್ನು ರಚಿಸುವ ಹೊಣೆ ಹೊರಿಸಲಾಗಿದೆ. ಅಧ್ಯಯನ ಪ್ರವಾಸದ ಸಂದರ್ಭದಲ್ಲಿ ಸಿಗುವ ಪ್ರೇರಣೆಯಿಂದ ಸಾಹಿತ್ಯ ರಚಿಸಿ, ಸಂಗೀತ ಸಂಯೋಜನೆ ಮಾಡಿಕೊಡುವುದಾಗಿ ಹೇಳಿದ್ದಾರೆ.

-ಸಾಮಗ ಶೇಷಾದ್ರಿ

 

Advertisement

Udayavani is now on Telegram. Click here to join our channel and stay updated with the latest news.

Next