Advertisement

ಕಾಶ್ಮೀರ ಸಮಸ್ಯೆ ಕಾರ್ಯಾಚರಣೆ ನಿರ್ಣಾಯಕವಾಗಿರಲಿ

03:23 PM Jun 25, 2018 | Harsha Rao |

ಜಮ್ಮು-ಕಾಶ್ಮೀರದಲ್ಲಿ ಚುನಾಯಿತ ಸರಕಾರ ಪತನಗೊಂಡು ರಾಜ್ಯಪಾಲರ ಆಡಳಿತ ಜಾರಿಗೆ ಬಂದ ಬೆನ್ನಿಗೆ ಉಗ್ರ ದಮನ ಕಾರ್ಯಾಚರಣೆ ಬಿರುಸಿನಿಂದ ಪ್ರಾರಂಭವಾಗಿದೆ. ಕಾಶ್ಮೀರವನ್ನು ಸಹಜ ಸ್ಥಿತಿಗೆ ತರಲು ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡಿದೆ. ಇದರ ಹೊರತಾಗಿಯೂ ಉಗ್ರರ ಉಪಟಳ ಮತ್ತು ಹಿಂಸಾಚಾರ ನಿಯಂತ್ರಣಕ್ಕೆ ಬಾರದಿರುವುದರಿಂದ ಅಂತಿಮವಾಗಿ ಸೇನಾ ಕಾರ್ಯಾಚರಣೆಯೇ ಉಳಿದಿರುವ ಮಾರ್ಗ.ಈ ಸಲ ಕಾರ್ಯಾಚರಣೆಗೆ ಕಮಾಂಡೊ ಪಡೆಯನ್ನು ಕೂಡಾ ಬಳಸಿಕೊಳ್ಳಲಾಗಿದ್ದು, ಜತೆಗೆ 4ಡಿ ಎಂಬ ಹೊಸ ಕಾರ್ಯತಂತ್ರವನ್ನೂ ರೂಪಿಸಿದ್ದು, ಇವೆಲ್ಲ ಕೇಂದ್ರ ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟ ಹಾಕಲು ನಿರ್ಣಾಯಕ ಹೆಜ್ಜೆಯಿಟ್ಟಿರುವುದನ್ನು ಸೂಚಿಸುತ್ತದೆ.

Advertisement

ಉಗ್ರ ಬುರ್ಹಾನ್‌ ವಾನಿಯ ಹತ್ಯೆಯ ಬಳಿಕ ಕುದಿಯಲಾರಂಭಿಸಿರುವ ಕಾಶ್ಮೀರ ಇನ್ನೂ ತಣ್ಣಗಾಗಿಲ್ಲ ಹಾಗೂ ತಣಿಸಲು ಮಾಡುತ್ತಿರುವ ಪ್ರಯತ್ನಗಳೂ ಫ‌ಲ ನೀಡುತ್ತಿಲ್ಲ. ಪ್ರತ್ಯೇಕವಾದಿಗಳೂ ಸೇರಿದಂತೆ ಕಣಿವೆ ಯಲ್ಲಿ ಶಾಂತಿ ನೆಲೆಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದಾದವರ ಜತೆಗೆ ಮಾತುಕತೆ ನಡೆಸಲು ಸಂಧಾನಕಾರರನ್ನೂ ನೇಮಿಸಿದ್ದು ಸೇರಿದಂತೆ ಕೇಂದ್ರ ಶಾಂತಿ ಸ್ಥಾಪನೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಉಗ್ರ ಚಟುವಟಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ. ರಂಜಾನ್‌ ಹಬ್ಬದ ಸಂದರ್ಭದಲ್ಲಿ ಮಾನವೀಯತೆಯ ದೃಷ್ಟಿಯಿಂದ ಕದನ ವಿರಾಮ ಘೋಷಿಸಿದರೂ ಇದೇ ಸಂದರ್ಭದಲ್ಲಿ ಉಗ್ರ ಚಟುವಟಿಕೆ ಪರಾಕಾಷ್ಠೆಗೆ ತಲುಪಿದ ಬಳಿಕ ಸೇನಾ ಕಾರ್ಯಾಚರಣೆಯೊಂದೇ ಪರಿಹಾರವಾಗಿತ್ತು. ಇದಕ್ಕೆ ಅಡ್ಡಿಯಾಗಿದ್ದ ರಾಜಕೀಯ ಮೈತ್ರಿಯನ್ನು ಮುರಿದುಕೊಂಡು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.

ಕಳೆದ ವರ್ಷವೂ ಉಗ್ರರನ್ನು ಮಟ್ಟ ಹಾಕುವ ಸಲುವಾಗಿ ಸೇನೆ ಆಪರೇಷನ್‌ ಆಲ್‌ಔಟ್‌ ಕಾರ್ಯಾಚರಣೆ ನಡೆಸಿ 250ಕ್ಕೂ ಹೆಚ್ಚು ಉಗ್ರರನ್ನು ಸಾಯಿಸಿತ್ತು. ಈ ಕಾರ್ಯಾಚರಣೆಯ ಹೊರತಾಗಿಯೂ ಉಗ್ರರ ಉಪಟಳ ಕಡಿಮೆಯಾಗದಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಸಲ ಕಾರ್ಯಾಚರಣೆಗೆ ರಣತಂತ್ರ ರೂಪಿಸಬೇಕಾಗಿದೆ. ಕಾಶ್ಮೀರದಲ್ಲಿ ಎರಡು ರೀತಿಯ ಉಗ್ರರನ್ನು ಭದ್ರತಾ ಪಡೆಗಳು ಎದುರಿಸಬೇಕಾಗಿದೆ. ಪಾಕಿಸ್ತಾನದಿಂದ ಗಡಿದಾಟಿ ಬರುವ ಉಗ್ರರು ಒಂದೆಡೆಯಾದರೆ , ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗುತ್ತಿರುವ ಸ್ಥಳೀಯರು ಇನ್ನೊಂದೆಡೆ.

ಶುಕ್ರವಾರ ನಡೆದ ಕಾರ್ಯಾಚರಣೆಯಲ್ಲಿ ಬಲಿಯಾಗಿರುವ ನಾಲ್ವರು ಉಗ್ರರು ಐಸಿಸ್‌ ಜತೆಗೆ ಸಂಪರ್ಕ ಹೊಂದಿದ್ದರು ಎನ್ನುವುದು ಕಾಶ್ಮೀರದಲ್ಲಿ ಈಗ ಎದ್ದಿರುವ ಹಿಂಸಾಚಾರದ ಅಲೆಯ ಹಿಂದಿನ ಉದ್ದೇಶ ಸ್ವಾತಂತ್ರ್ಯ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಯುವಕರ ಬ್ರೈನ್‌ವಾಶ್‌ ಮಾಡುವ ಕಾರ್ಯ ಕಣಿವೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಜತೆಗೆ ಅವ್ಯಾಹತ ವಾಗಿ ಹಣದ ನೆರವು ಹರಿದು ಬರುತ್ತಿದೆ. ಪ್ರತಿಯೊಬ್ಬ ಕಲ್ಲು ತೂರುವವನಿಗೆ ನಿತ್ಯ 500 ರೂ. ಸಂಭಾವನೆ ಪಾವತಿಯಾಗುತ್ತಿರುವುದನ್ನು ಗುಪ್ತಚರ ಪಡೆಗಳು ಪತ್ತೆ ಹಚ್ಚಿವೆ. ಉಗ್ರರನ್ನು ಮಟ್ಟ ಹಾಕುವ ಜತೆಗೆ ಇಂಥ ಚಟುವಟಿಕೆಗಳನ್ನು ಹತ್ತಿಕ್ಕುವ ಅಗತ್ಯವೂ ಇದೆ. ಕಾಶ್ಮೀರದಲ್ಲಿ ಐಸಿಸ್‌ನ ಮಹಿಳಾ ಘಟಕವೂ ಸ್ಥಾಪನೆಯಾಗಿದೆ ಎಂಬ ವರದಿಯಿದ್ದು, ಇವೆಲ್ಲ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರಗಳು.

ನಿರ್ದಿಷ್ಟವಾಗಿ ಕಾರ್ಯಾಚರಣೆಯಲ್ಲಿ ಸತ್ತ ಉಗ್ರರ ಅಂತ್ಯ ಸಂಸ್ಕಾರದ ವೇಳೆ ಪ್ರಚೋದನಕಾರಿ ಭಾಷಣ ಮಾಡಿ ಯುವಕರನ್ನು ಕೆರಳಿಸಿ ಉಗ್ರ ಚಟುವಟಿಕೆಗಳಿಗೆ ಸೆಳೆಯಲಾಗುತ್ತಿದೆ. ಅಂತೆಯೇ ಸಾಮಾಜಿಕ ಮಾಧ್ಯಮಗಳಲ್ಲೂ ವ್ಯವಸ್ಥಿತವಾಗಿ ದ್ವೇಷವನ್ನು ಹರಡಲಾಗುತ್ತಿದೆ. ಇದರ ಜತೆಗೆ ಕೆಲವು ಮುಖ್ಯವಾಹಿನಿ ಮಾಧ್ಯಮಗಳು ಕೂಡಾ ಉಗ್ರರ ಪರ ವಹಿಸಿ ಕೊಂಡಿರುವ ಅಪಾಯಕಾರಿ ಸ್ಥಿತಿಯನ್ನು ನಾವಿಂದು ಕಾಣುತ್ತಿದ್ದೇವೆ.

Advertisement

ಈ ಸಂದರ್ಭದಲ್ಲಿ ಕೆಲವು ರಾಜಕೀಯ ಮುಖಂಡರು ನೀಡುತ್ತಿರುವ ಬೇಜವಾಬ್ದಾರಿ ಹೇಳಿಕೆಗಳು ಪರಿಸ್ಥಿತಿ ಇನ್ನಷ್ಟು ವಿಷಮಿಸುವಂತೆ ಮಾಡುತ್ತಿವೆ. ಭದ್ರತಾ ಪಡೆಗಳು ಉಗ್ರರಿಗಿಂತ ಹೆಚ್ಚು ನಾಗರಿಕರನ್ನು ಸಾಯಿಸುತ್ತಿವೆ. ಕಾಶ್ಮೀರಕ್ಕೆ ಬೇಕಾಗಿರುವುದು ಸ್ವಾತಂತ್ರ್ಯ ಎಂಬಿತ್ಯಾದಿ ಹೇಳಿಕೆಗಳು ಭದ್ರತಾ ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುವುದು ಮಾತ್ರವಲ್ಲದೆ ಪರೋಕ್ಷವಾಗಿ ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟು ವಟಿಕೆಗಳನ್ನು ಸಮರ್ಥಿಸುವ ದಾಟಿಯಲ್ಲಿವೆ.

ಕಾಶ್ಮೀರ ನಿತ್ಯ ಹೊತ್ತಿ ಉರಿಯುತ್ತಿರಬೇಕೆಂದು ಬಯಸುವ ಹುರಿಯತ್‌ ನಾಯಕರು, ದ್ವೇಷ ಬೋಧನೆ ಮಾಡುವವರು ಸೇರಿದಂತೆ ಎಲ್ಲರಿಗೂ ತಕ್ಕ ಪಾಠ ಕಲಿಸಿದರೆ ಮಾತ್ರ ಅಲ್ಲಿ ಶಾಂತಿ ನೆಲೆಯಾದೀತು. ಇಂಥವರನ್ನೆಲ್ಲ ಕಣಿವೆಯ ವ್ಯವಹಾರಗಳಿಂದ ದೂರವಿಡಬೇಕು. ಮತಾಂಧ ಯುವಕರನ್ನು ದಾರಿ ತಪ್ಪಿದ ಯುವಕರು ಎಂದು ವಿನಾಯಿತಿ ತೋರಿಸುವ ಅಗತ್ಯವಿಲ್ಲ. ಇದೇ ವೇಳೆ ಇನ್ನೊಂದೆಡೆಯಿಂದ ಮಾತುಕತೆಯ ದಾರಿಯನ್ನೂ ಮುಕ್ತವಾಗಿಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next