Advertisement

ನಿರ್ಗತಿಕಳಂತೆ ಇಹಲೋಕ ತ್ಯಜಿಸಿದ ರಕ್ತಸಾಕ್ಷಿ ಸಹೋದರ ಪತ್ನಿ ಪೂವಕ್ಕ!

08:36 PM Feb 09, 2018 | Karthik A |

ಕಳೆದ 50 ವರ್ಷಗಳಿಂದಲೂ ಪ್ರತಿವರ್ಷವೂ ಮೂವರು ರಕ್ತಸಾಕ್ಷಿಗಳ ಸ್ಮರಣೆಯನ್ನು ಸಾರ್ವಜನಿಕ ಸಮಾರಂಭದ ಮೂಲಕ ಅದ್ದೂರಿಯಿಂದ ಇಂದಿಗೂ ಆಚರಿಸುತ್ತಿದ್ದರೂ ಓರ್ವ ರಕ್ತಸಾಕ್ಷಿಯ ಪತ್ನಿಯಾಗಿದ್ದು ಯಾವುದೇ ಮಾನವೀಯತೆ ಇವರತ್ತ ಸುಳಿಯದಿರುವುದು ದುರಂತವೇ ಸರಿ. ಜೀವನ‌ದಲ್ಲಿ ಅಪಾರ ಕನಸನ್ನು ಹೊಂದಿದ್ದ ಪೂವಕ್ಕನವರಿಗೆ ವಿಧವಾ ಯೋಗದ ಬಳಿಕ ಬಂಧು ಬಳಗದಿಂದಲೂ ದೂರವಾಗಿ ಅಬಲೆಯಾಗಿ 50 ವರ್ಷಗಳ ಕಾಲ ಒಂಟಿ ಜೀವನ ನಡೆಸಿದ ಇವರಿಗೆ ಆಸ್ತಿಪಾಸ್ತಿಗಳಿದ್ದರೆ ಈ ಗತಿ ಬರುತ್ತಿರಲಿಲ್ಲವೇನೋ?

Advertisement

ಕುಂಬಳೆ: ಪೈವಳಿಕೆ ರಕ್ತಸಾಕ್ಷಿ ಸಹೋದರರಲ್ಲಿ ಮಡಿದ ಓರ್ವರ ಪತ್ನಿ ಎನಿಸಿಕೊಳ್ಳುತ್ತಿದ್ದ ಅನಾಥೆ ಪೂವಕ್ಕ ಅವರು ಕೊನೆಗೂ ಜ. 17ರಂದು ವೃದ್ಧಾಪ್ಯದಿಂದ ಪರವನಡ್ಕ ಸರಕಾರಿ ವೃದ್ಧ ಮಂದಿರದಲ್ಲಿ ಇಹಲೋಕ ತ್ಯಜಿಸಿದರು. 
1958ರಲ್ಲಿ ರೈತಪರ ಹೋರಾಟದಲ್ಲಿ ಮಡಿದ ಕಳಾಯಿ ರೈತ ಕುಟುಂಬದ ಮೂವರು ಸಹೋದರರೋರ್ವರ ದ್ವಿತೀಯ ಪತ್ನಿ ಎನಿಸಿಕೊಳ್ಳುತ್ತಿರುವ ಪೂವಕ್ಕ ಪತಿಯ ಮರಣದ ಬಳಿಕ ಅನಾಥವಾಗಿದ್ದರು. ಮಕ್ಕಳಿಲ್ಲದ ಇವರಿಗೆ ಉಪ್ಪಳದ ಕಾವೇರಿ ಅಮ್ಮ ಎಂಬ ಸ್ವಜಾತಿ ಮಹಿಳೆ ಹಲವಾರು ವರ್ಷಗಳ ಕಾಲ ಆಸರೆ ನೀಡಿದ್ದರು. ಪಕ್ಕದ ಮನೆಯ ಕಂದಾಯ ಅಧಿಕಾರಿ ಗುರುಪಾದ್‌ ಅವರು ಮತ್ತು ಬ್ಯಾಂಕ್‌ ಮ್ಯಾನೇಜರ್‌ ಚಂದ್ರಕಾಂತ್‌ ಮತ್ತು ಮನೆಯವರು ಇವರಿಗೆ ಸಾಂತ್ವನ, ಸಹಕಾರ ನೀಡುತ್ತಿದ್ದರು. ಹಿರಿಯ ಸಮಾಜಸೇವಕ ಬೇರಿಕೆ ರಾಮಯ್ಯ ನಾೖಕ್‌ ಇವರಿಗೆ ಸರಕಾರದಿಂದ ವೃದ್ಧಾಪ್ಯ ಪಿಂಚಣಿ ದೊರಕುವಂತೆ ಮಾಡಿದ್ದರು. ಬಳಿಕ ಪೂವಕ್ಕನವರ ವೃದ್ಧಾಪ್ಯ ಪಿಂಚಣಿ ಮೊಟಕುಗೊಂಡಾಗ 1995ರಲ್ಲಿ ಪೈವಳಿಕೆ ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿದ್ದ ಅಚ್ಯುತ ಚೇವಾರ್‌ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದು ಇದನ್ನು ಮರಳಿ ದೊರೆಯುವಂತೆ ವ್ಯವಸ್ಥೆಗೊಳಿಸಿದ್ದರು. 

2005ರಲ್ಲಿ ಕಾವೇರಿ ಅಮ್ಮನವರು ತನ್ನ ಮನೆ ಸ್ಥಳವನ್ನು ಮಾರಾಟ ಮಾಡಿದ ಕಾರಣ ಪೂವಕ್ಕನವರಿಗೆ ಎಲ್ಲಿಯಾದರೂ ಆಶ್ರಯ ನೀಡಬೇಕೆಂಬುದಾಗಿ ಚೇವಾರ್‌ ಅವರಲ್ಲಿ ವಿನಂತಿಸಿದರು. ಇದರಂತೆ ಸಮಾಜಸೇವಕ ಬಳ್ಳಂಬೆಟ್ಟು ಸಂಕಪ್ಪ ಭಂಡಾರಿ ಅವರು ಮಂಗಳೂರಿನ ಪ್ರತಿಷ್ಠಿತ ಮನೆಯೊಂದರಲ್ಲಿ ಆಶ್ರಯಕ್ಕೆ ಪೂವಕ್ಕ ಅವರನ್ನು ಕರೆದೊಯ್ದಾಗ ಪೂವಕ್ಕನವರು ಆ ಬಂಗಲೆ ಮನೆಯನ್ನು ನಿರಾಕರಿಸಿ ಭಂಡಾರಿಯವರೊಂದಿಗೆ ಮರಳಿದರು. ತಾನು ಪರರ ಆಶ್ರಯಕ್ಕೆ ಬಲಿ ಬೀಳಲಾರೆನೆಂಬ ಇವರ ಆಶಯದಂತೆ ಇವರನ್ನು 2005ರ ಆಗಸ್ಟ್‌ 30ರಂದು ಚೆಮ್ನಾಡು ಬಳಿಯ ಪರವನಡ್ಕ ಸರಕಾರಿ ವೃದ್ಧ ಮಂದಿರದಲ್ಲಿ ಅಚ್ಯುತ ಚೇವಾರ್‌ರವರು ದಾಖಲಿಸಿದರು. ಅಂದಿನಿಂದ ಜ. 17ರ ತನಕ 12 ವರ್ಷಗಳ ಕಾಲ ಪೂವಕ್ಕ ಅನಾಥಾಶ್ರಮದಲ್ಲಿದ್ದರೂ ಚೇವಾರ್‌ ಅವರು ಅಲ್ಲಿಗೆ ಆಗಾಗ ತೆರಳಿ ಇವರ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರು. ಸರಕಾರದ ವೃದ್ಧಾಪ್ಯ ಪಿಂಚಣಿ ಸಕಾಲದಲ್ಲಿ ಕೈಸೇರುವ ವ್ಯವಸ್ಥೆ ಮಾಡುತ್ತಿದ್ದರು. ಅಲ್ಲದೆ ತನ್ನ ಮನೆಗೆ ಕರೆತಂದು ಕೆಲಕಾಲ ಆಶ್ರಯ ನೀಡುತ್ತಿದ್ದರು. ಮಾತೃ ಮಮಕಾರ ತೋರುತ್ತಿದ್ದರು.

ಬಂಟ ಮನೆತನದವರಾಗಿದ್ದ ಪೂವಕ್ಕ ಓರ್ವ ಸ್ವಜಾತಿ ಸ್ವಾಮೀಜಿಯವರ ಪೂರ್ವಾಶ್ರಮದ ಬಂಧುವೆನಿಕೊಳ್ಳುತ್ತಿದ್ದ ಪೂವಕ್ಕನವರು ರಕ್ತಸಾಕ್ಷಿಗಳ ಸಹೋದರರೋರ್ವರ ದ್ವಿತೀಯ ಪತ್ನಿಯಾಗಿದ್ದುದರಿಂದ ಪೂವಕ್ಕ ಅವರಿಗೆ ಪತಿಯ ಮನೆಯಿಂದಾಗಲಿ ತನ್ನ ಸ್ವಂತ ತವರಿನಿಂದಾಗಲಿ ಬಂಧುಗಳಿಂದಾಗಲಿ ಯಾವುದೇ ಮಮ ತೆ ದೊರೆಯದೆ ವಿಧವೆಯಾಗಿ ಅವಗಣನೆಗೆ ಒಳಗಾಗುವಂತಾಯಿತು. ಪತಿ ಗುಂಡೇಟಿನಿಂದ ಮರಣ ಹೊಂದಿದ ಬಳಿಕ ಜೀವನದ ಕೊನೆತನಕ ನಿಧನದವರೆಗೆ ಬಂಧುಬಳಗದಿಂದ ದೂರವಾಗಿಯೇ ಉಳಿಯುವಂತಾಯಿತು. ವೃದ್ಧ ಮಂದಿರದಲ್ಲೇ ಜೀವನ ಕಳೆಯುವಂತಾಯಿತು. ಆದರೆ 90 ವರ್ಷ ಸಂದ ಹಿರಿಯ ನಾಗರಿಕೆ ಎಂಬುದಾಗಿ ಇವರನ್ನು ವೃದ್ಧ ಮಂದಿರದ ಸಮಾರಂಭದಲ್ಲಿ ಸಮ್ಮಾನಿಸಲಾಗಿತ್ತು.

ಪೂವಕ್ಕ ತನ್ನ ಮರಣದ ಬಳಿಕ ತನ್ನನ್ನು ಅನಾಥ ಶವವಾಗಿ ಕಾಣದೆ ಸಂಪ್ರದಾಯದಂತೆ ಸ್ಮಶಾನದ ಕಾಷ್ಠದಲ್ಲಿ ಉರಿಸಬೇಕು. ಧಾರ್ಮಿಕ ವಿಧಿವಿಧಾನಗಳೊಂದಿಗೆ ತನ್ನ ಉತ್ತರ ಕ್ರಿಯೆಯನ್ನು ನೆರವೇರಿಸಬೇಕೆಂಬ ಪೂವಕ್ಕನವರ ಬೇಡಿಕೆಯನ್ನು ಪರಿಗಣಿಸಿದ ಅಚ್ಯುತ ಚೇವಾರ್‌ರವರು ನಿಧನದಂದು ಇವರ ಶವವನ್ನು ವೃದ್ಧ ಮಂದಿರದಿಂದ ಆ್ಯಂಬುಲೆನ್ಸ್‌ ಮೂಲಕ ತಂದು ಕಾಸರಗೋಡು ನುಳ್ಳಿಪ್ಪಾಡಿ ಚೆನ್ನಿಕ್ಕರೆಯ ರುದ್ರಭೂಮಿಯಲ್ಲಿ ಮಿತ್ರರ ಸಹಕಾರದೊಂದಿಗೆ ದಹಿಸಿದರು. ಬಳಿಕ ಜ. 27ರಂದು ಉಪ್ಪಳ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಆಡಳಿತ ಮೊಕ್ತೇಸರ ಕೋಡಿಬೈಲು ನಾರಾಯಣ ಹೆಗ್ಡೆ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರೇಂ ಕುಮಾರ್‌ ಸಹಕಾರದೊಂದಿಗೆ ನಿವೃತ್ತ ಕಂದಾಯ ಅಧಿಕಾರಿ ಗುರುಪಾದ್‌, ಕಾವೇರಿ ಅಮ್ಮ ಮತ್ತು ಕಳ್ಳಿಗೆಬೀಡು ಸಚ್ಚಿದಾನಂದ ರೈ ಹಾಗೂ ಚೇವಾರ್‌ ಅವರ ಮನೆಯವರ ಉಪಸ್ಥಿತಿಯಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ಉತ್ತರಕ್ರಿಯೆಯನ್ನು ವಿಧ್ಯುಕ್ತವಾಗಿ ನೆರವೇರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next