Advertisement

ಕಾಸರಗೋಡು: 10 ಮಂದಿಗೆ ಸೋಂಕು; ಕೇರಳದಲ್ಲಿ ಮತ್ತೆ ಕೋವಿಡ್ 19 ಕೇಕೆ

02:45 AM May 15, 2020 | Sriram |

ಕಾಸರಗೋಡು: ಒಂದು ಹಂತದಲ್ಲಿ ಕೋವಿಡ್ 19 ಹಾಟ್‌ಸ್ಪಾಟ್‌ ಎನಿಸಿಕೊಂಡರೂ ಶೀಘ್ರದಲ್ಲೇ ಚೇತರಿಸಿಕೊಂಡು ಕೋವಿಡ್ 19 ಮುಕ್ತ ಜಿಲ್ಲೆ ಎನಿಸಿಕೊಂಡಿದ್ದ ಕಾಸರಗೋಡಿನಲ್ಲಿ ಗುರುವಾರ ಮತ್ತೆ 10 ಮಂದಿಗೆ ಸೋಂಕು ಬಾಧಿಸಿರುವುದು ದೃಢವಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 14ಕ್ಕೇರಿದೆ.

Advertisement

ಅಂತಾರಾಜ್ಯ ಪ್ರಯಾಣಿಕರಿಂದ ಸೋಂಕು ವ್ಯಾಪಿಸುವ ಸಾಧ್ಯತೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಜಾಗ್ರತೆ ಪಾಲಿಸಬೇಕೆಂದು ಜಿಲ್ಲಾ ವೈದ್ಯಾಧಿಕಾರಿ ಡಾ| ರಾಮದಾಸ್‌, ಜಿಲ್ಲಾಧಿಕಾರಿ ಡಾ| ಸಜಿತ್‌ಬಾಬು ತಿಳಿಸಿದ್ದಾರೆ.

ಕೇರಳದಲ್ಲಿ 26 ಮಂದಿಗೆ ಸೋಂಕು
ಕೇರಳ ರಾಜ್ಯದಲ್ಲಿ ಮತ್ತೆ 26 ಮಂದಿಗೆ ಕೋವಿಡ್ 19 ಬಾಧಿಸಿದೆ. ಕಾಸರಗೋಡು-10, ಮಲಪ್ಪುರಂ-5, ಪಾಲಾಟ್‌-3, ವಯನಾಡು-3, ಕಣ್ಣೂರು-2, ಕೋಯಿಕ್ಕೋಡ್‌, ಇಡುಕ್ಕಿ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ತಲಾ ಒಬ್ಬರಲ್ಲಿ ಗುರುವಾರ ರೋಗ ದೃಢವಾಗಿದೆ. ಇವರಲ್ಲಿ 14 ಮಂದಿ ಹೊರ ರಾಜ್ಯಗಳು, ಹೊರ ದೇಶಗಳಿಂದ ಬಂದವರು.

ಇಡುಕ್ಕಿಯಲ್ಲಿ ಸರ್ವೇಲೆನ್ಸ್‌ ಪರೀಕ್ಷೆಯಲ್ಲಿ ಬೇಕರಿ ಮಾಲಕನಿಗೆ ರೋಗ ಪತ್ತೆಯಾಗಿದೆ. ಸಂಪರ್ಕದಿಂದ 11 ಮಂದಿಗೆ ರೋಗ ಬಾಧಿಸಿದೆ. ರೋಗ ಬಾಧಿತರಲ್ಲಿ ಕಾಸರಗೋಡಿನ ಇಬ್ಬರು ಆರೋಗ್ಯ ಕಾರ್ಯಕರ್ತರು ಹಾಗೂ ವಯನಾಡಿನ ಒಬ್ಬರು ಪೊಲೀಸ್‌ಗೆ ರೋಗ ಬಾಧಿಸಿದೆ. ಇದೇ ವೇಳೆ ಗುರುವಾರ ಕೊಲ್ಲಂನಲ್ಲಿ ಇಬ್ಬರು, ಕಣ್ಣೂರಿನಲ್ಲಿ ಒಬ್ಬರು ಗುಣಮುಖರಾಗಿದ್ದಾರೆ.

27 ಪ್ರಕರಣ ದಾಖಲು
ಲಾಕ್‌ಡೌನ್‌ ಉಲ್ಲಂಘನೆ ಆರೋಪದಲ್ಲಿ ಜಿಲ್ಲೆಯಲ್ಲಿ 27 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮಂಜೇಶ್ವರ ಪೊಲೀಸ್‌ ಠಾಣೆಯಲ್ಲಿ 3, ಕುಂಬಳೆ-1, ವಿದ್ಯಾನಗರ-11, ಕಾಸರಗೋಡು-2, ಬದಿಯಡ್ಕ-4, ಮೇಲ್ಪರಂಬ-4, ಬೇಕಲ, ಚೀಮೇನಿ ಠಾಣೆಗಳಲ್ಲಿ ತಲಾ 1 ಪ್ರಕರಣ ದಾಖಲಾಗಿವೆ. ಐವರನ್ನು ಬಂಧಿಸಿ ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಸೋಂಕು ಪೀಡಿತರಿವರು
ಮೇ 4ರಂದು ಮಹಾರಾಷ್ಟ್ರದಿಂದ ಬಂದ ಪೈವಳಿಕೆ ನಿವಾಸಿಯನ್ನು ತಲಪಾಡಿಯಿಂದ ಕಾರಿನಲ್ಲಿ ಕರೆದುಕೊಂಡು ಬಂದ 50 ವರ್ಷದ ವ್ಯಕ್ತಿ, ಅವರೊಂದಿಗಿದ್ದ 35ರ ಹರೆಯದ ಮಹಿಳೆಯನ್ನು ಸೋಂಕು ಬಾಧಿಸಿದೆ. ಅವರ 11 ಮತ್ತು 8 ವರ್ಷದ ಮಕ್ಕಳಿಗೂ ಸೋಂಕು ತಗಲಿದೆ. ಕಾರು ಚಾಲಕ ಮೂರು ಬಾರಿ ಕಾಂಞಂಗಾಡ್‌ ಜಿಲ್ಲಾ ಆಸ್ಪತ್ರೆಗೆ ಕ್ಯಾನ್ಸರ್‌ ರೋಗಿಯೊಂದಿಗೆ ಬಂದಿದ್ದು, ಅವರು ಆಸ್ಪತ್ರೆಯ ಕ್ಯಾನ್ಸರ್‌
ವಾರ್ಡ್‌, ಲ್ಯಾಬ್‌, ಎಕ್ಸ್‌ರೇ ಕೊಠಡಿ ಮೊದಲಾದವುಗಳಿಗೆ ಪ್ರವೇಶಿಸಿದ್ದರು. ಜಿಲ್ಲಾ ಆಸ್ಪತ್ರೆ ಮತ್ತು ಕಾಸರಗೋಡು ಜನರಲ್‌ ಆಸ್ಪತ್ರೆಯ ಇಬ್ಬರು ಆರೋಗ್ಯ ಕಾರ್ಯಕರ್ತರಲ್ಲೂ ಸೋಂಕು ದೃಢವಾಗಿದೆ. ಕಾಸರಗೋಡು ನಗರಸಭೆ ವ್ಯಾಪ್ತಿಯ 65 ವರ್ಷ ಪ್ರಾಯದ ವ್ಯಕ್ತಿ, ಬೆಂಗಳೂರಿನಿಂದ ಬಂದ 26 ವರ್ಷದ ಕಳ್ಳಾರು ಪೂಡಂಕಲ್ಲಿನ ಯುವಕ ಮತ್ತು ಮಹಾರಾಷ್ಟ್ರ ದಿಂದ ಕುಂಬಳೆಗೆ ಬಂದ 58, 31 ವರ್ಷದ ವ್ಯಕ್ತಿಗಳನ್ನು ಕೋವಿಡ್ 19 ಬಾಧಿಸಿದೆ.

ಗಡಿಗಳಲ್ಲಿ ಸಶಸ್ತ್ರ ಪೊಲೀಸರು
ಕಾಸರಗೋಡು: ಕರ್ನಾಟಕದ ಕೆಲವು ಗಡಿಗಳ ಅಡ್ಡದಾರಿಗಳ ಮೂಲಕ ಪಾಸ್‌ಗಳಿಲ್ಲದೆ ಜನರನ್ನು ಅಕ್ರಮವಾಗಿ ಜಿಲ್ಲೆಯ ಮೂಲಕ ಕೇರಳಕ್ಕೆ ಕರೆ ತರುವ ಪ್ರಕರಣಗಳು ಹೆಚ್ಚುತ್ತಿದ್ದು ಅದನ್ನು ತಡೆಯಲು ಗಡಿಗಳಲ್ಲಿ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗಿದೆ.

ತಲಪಾಡಿ ಗಡಿ ಚೆಕ್‌ಪೋಸ್ಟ್‌ ಅಲ್ಲದೆ ಮಂಜೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯ ಪ್ರದೇಶಗಳ 22 ಗಡಿ ಪ್ರದೇಶಗಳಲ್ಲಿ, ಆದೂರಿನ 9 ಗಡಿ ಪ್ರದೇಶಗಳಲ್ಲಿ, ಬದಿಯಡ್ಕದ 3 ಗಡಿ ಪ್ರದೇಶಗಳಲ್ಲಿ, ಬಂದಡ್ಕ-ಮಾಣಿಮೂಲೆ, ಪಾಣತ್ತೂರು ಪ್ರದೇಶಗಳಲ್ಲಿ ಸಶಸ್ತ್ರ ಸಿಬಂದಿ ಕಾವಲು ನಿರತರಾಗಿದ್ದಾರೆ.

ಕ್ವಾರಂಟೈನ್‌ ಉಲ್ಲಂಘನೆ: 8 ಕೇಸು
ಕ್ವಾರಂಟೈನ್‌ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಮೇ 12 ಮತ್ತು 13ರಂದು ಜಿಲ್ಲೆಯಲ್ಲಿ 8 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಆರೋಪಿಗಳನ್ನು ಸರಕಾರಿ ನಿಯಂತ್ರಣದ ನಿಗಾ ಕೇಂದ್ರಗಳಿಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next